ಶ್ರೀ ಪುರಂದರದಾಸ ವಿರಚಿತ ‘ಯಕ್ಷಗಾನ ಅನಸೂಯಾಚರಿತ್ರೆ’ ಅ.18ರಂದು ಬಿಡುಗಡೆ

Chandrashekhara Kulamarva
0


ಕಾಸರಗೋಡು: ‘ಕರ್ನಾಟಕ ಸಂಗೀತ ಪಿತಾಮಹ’ರೆನಿಸಿದ ಶ್ರೀಪುರಂದರದಾಸರು (1485-1565) ‘ಅನಸೂಯಾಚರಿತ್ರೆ’ ಎಂಬ ಯಕ್ಷಗಾನವನ್ನು ರಚಿಸಿದ್ದರೆಂಬ ಉಲ್ಲೇಖವಿದೆಯಾದರೂ ಇದುವರೆಗೆ ಅದು ನಮಗೆ ದೊರೆತಿರಲಿಲ್ಲ. ಈಗ ಅದನ್ನು ಯಕ್ಷಗಾನದ ಹಿರಿಯ ಸಂಶೋಧಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಸಂಶೋಧಿಸಿದ್ದು, ಕಾಸರಗೋಡಿನ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ವು ಪ್ರಕಟಿಸುತ್ತಿದೆ.


ದಿನಾಂಕ 18.10.2025ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕೃತಿಬಿಡುಗಡೆಯ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಕೃತಿಯ ಪ್ರಾಚೀನ ಪ್ರತಿಯೊಂದು ಶಿರಸಿಯ ಡಾ. ವಿಜಯ ನಳಿನಿ ರಮೇಶ್ ಅವರ ಮನೆಯಲ್ಲಿ ದೊರೆತಿದ್ದು ತುಂಬಾ ಜೀರ್ಣಸ್ಥಿತಿಯಲ್ಲಿದೆ. ಇದರಲ್ಲಿ ಒಂದು ನೂರು ಪದ್ಯಗಳಿದ್ದು, ಹತ್ತೊಂಬತ್ತು ರಾಗಗಳನ್ನು ಸೂಚಿಸಲಾಗಿದೆ. ಕಂದಪದ್ಯ ಮತ್ತು ವಚನಗಳು ಹೆಚ್ಚಾಗಿದ್ದು ಅನಸೂಯೆಯ ಕುರಿತಾದ ಪೌರಾಣಿಕ ಕಥಾವಸ್ತುವಿನಲ್ಲಿ ಜನಪದ ಸಂಗತಿಗಳು ಮಿಶ್ರಣಗೊಂಡಿರುವುದು ಇದರ ವಿಶೇಷ. ಪ್ರತಿಯೊಂದು ಪದ್ಯಗುಚ್ಛಗಳ ಕೊನೆಯಲ್ಲಿ ಕೀರ್ತನೆಗಳಂತೆ ‘ಪುರಂದರವಿಠಲ’ ಎಂಬ ಅಂಕಿತವಿರುವುದು ಇದರ ಇನ್ನೊಂದು ವಿಶೇಷತೆ. 


ಪ್ರಸಂಗದ ಆರಂಭದಲ್ಲಿಯೇ ‘ಪುರಂದರದಾಸರಾಯರು ಪೇಳಿದ ಸಂಭ್ರಮವನ್ನು ಕೇಳಿ’ ಎಂಬ ವಾಕ್ಯವಿರುವುದರಿಂದ ಈ ಕೃತಿಯನ್ನು ರಚಿಸುವ ಹೊತ್ತಿಗಾಗಲೇ ಅವರಿಗೆ ದಾಸದೀಕ್ಷೆಯಾಗಿತ್ತು ಎಂದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೃತಿರಚನಾಕಾಲವನ್ನು ಸು. ಕ್ರಿ.ಶ.1520 ಎಂದು ತರ್ಕಿಸಬಹುದು. ಅಲ್ಲದೆ ಶ್ರೀ ಧರ್ಮಸ್ಥಳದ ಗ್ರಂಥಾಲಯದಲ್ಲಿರುವ ‘ಗುರುರಾಮವಿಠಲ’ರು (1850-1915) ರಚಿಸಿದ ಇನ್ನೊಂದು ‘ಅನಸೂಯಾಚರಿತ್ರೆ’ಯ ಕೊನೆಯಲ್ಲಿ “ಸೂತಪುರಾಣಿಕನು ನೈಮಿಷಾರಣ್ಯದೋಳ್ ಶೌನಕಾದಿ ಮುನಿಗಳಿಗೆ ನಾರದೀಯ ಪುರಾಣದೋಳ್ ಪೇಳಿದನೆಂಬರ್ಥವಂ ಪುರಂದರದಾಸರಿಂದ ಯಕ್ಷಗಾನದೋಳ್ ರಚಿಸಿರುವ ಚರಿತ್ರೆಯನ್ನನುಸರಿಸಿ ಗುರುರಾಮವಿಠಲ ಪೇಳಿಸಿದಂತೆ ಹಿರಿಯರನುಗ್ರಹದಿಂದ ನಾ ಪೇಳಿದೆಂ” ಎಂಬ ವಾಕ್ಯವಿರುವುದರಿಂದ ಪುರಂದರದಾಸರು ಹಿಂದೆಯೇ ಯಕ್ಷಗಾನವನ್ನು ರಚಿಸಿರುವುದು ಮತ್ತು ಗುರುರಾಮವಿಠಲರು ಅದನ್ನು ಅನುಸರಿಸಿ ಬರೆದಿರುವುದು ಸ್ಪಷ್ಟವಾಗುತ್ತದೆ. 


ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಸಂಪಾದಿಸಿರುವ ಈ ಕೃತಿಯಲ್ಲಿ ಅನಸೂಯಾಚರಿತ್ರೆಯ ಕಥಾವಸ್ತುವಿಕಾಸ, ಕಾವ್ಯದ ಚೆಲುವು, ಭಾಷಾಶೈಲಿ ಮತ್ತು ಅನುಬಂಧದಲ್ಲಿ ನೀಡಲಾದ ಪುರಂದರದಾಸರ ದೇಶಕಾಲ ವಿಚಾರ ಇತ್ಯಾದಿಗಳು ಗಮನ ಸೆಳೆಯುತ್ತವೆ. ಯಕ್ಷಗಾನ ಪ್ರಸಂಗೇತಿಹಾಸದ ಪ್ರಾಚೀನತೆಗೆ ಇದು ಮುಖ್ಯ ಆಕರವಾಗಿದ್ದು, ಪುರಂದರದಾಸರ ಜನ್ಮಸ್ಥಳದ ಕುರಿತಾಗಿರುವ ಅಸ್ಪಷ್ಟತೆ, ಅವರ ಮೇಲೆ ಯಕ್ಷಗಾನದ ಪ್ರಭಾವ ಮುಂತಾದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದಲ್ಲಿಯೂ ಇದು ಪ್ರಮುಖ ಸಂಶೋಧನೆಯೆನಿಸಿದೆ. ಈ ಮಹಾತ್ಕಾರ್ಯ ಸಿರಿಬಾಗಿಲು ಪ್ರತಿಷ್ಠಾನದ ಯೋಗ ಭಾಗ್ಯವೇ ಸರಿ.   ಪಾರ್ತಿಸುಬ್ಬನ ಯಕ್ಷಗಾನ ಕೃತಿಗಳನ್ನು ಸಂಗ್ರಹಿಸಿದ ಗಡಿನಾಡು ಕಾಸರಗೋಡಿನ ಲೇಖಕರು, ಸಂಶೋಧಕರಾದ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯ ನವರಿಗೆ ಈ ಕೃತಿಯನ್ನು ಸಮರ್ಪಿಸುತ್ತಿದ್ದೇವೆ.



- ರಾಮಕೃಷ್ಣ ಮಯ್ಯ ಸಿರಿಬಾಗಿಲು

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ)

ಯಕ್ಷಾನುಗ್ರಹ, ಅಂಚೆ ಸಿರಿಬಾಗಿಲು

ಕಾಸರಗೋಡು- 671124


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top