ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ, ಮಾದಕ ವ್ಯಸನ ತಡೆ ಸಮಿತಿ, ಯುವ ರೆಡ್ ಕ್ರಾಸ್ ಘಟಕ ಹಾಗೂ ಲಯನ್ಸ್ ಉಡುಪಿ ಅಮೃತ್ ಡಿಸ್ಟ್ರಿಕ್ಟ್ 317 ಸಿ ಸಂಯುಕ್ತ ಆಶಯದಲ್ಲಿ ನಡೆಸಲಾದ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ. ಭಂಡಾರಿ ವಿದ್ಯಾರ್ಥಿಗಳನ್ನೂದ್ದೇಶಿಸಿ ಮಾತನಾಡುತ್ತಾ "ಆರಂಭದಲ್ಲಿ ಒತ್ತಡ, ಆತಂಕ, ನಿರಾಶೆ, ಏಕತಾನತೆ ಮತ್ತು ಮನೋರಂಜನೆಗಾಗಿ ಆರಂಭವಾಗುವ ಮಾದಕವ್ಯಸನ ಕ್ರಮೇಣ ದುಶ್ಚಟವಾಗಿ ವ್ಯಕ್ತಿಯ ಘನತೆ, ಸಾಮಾಜಿಕ ಸ್ಥಾನಮಾನ, ಕೌಟುಂಬಿಕ ಸಂಬಂಧಗಳು, ಉದ್ಯೋಗ ಕಿತ್ತುಕೊಳ್ಳುತ್ತಾ ಕೊನೆಗೆ ಜೀವವನ್ನೇ ಬಲಿಪಡೆದು ಕೌಟುಂಬಿಕ ಅಶಾಂತಿಯನ್ನು ಸೃಷ್ಟಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯ ರೂಪಿಸಬೇಕಾದ ಯುವಜನತೆಯೇ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ. ಆದ್ದರಿಂದ ಯುವ ಜನತೆ ತಾವು ಎಚ್ಚೆತ್ತುಕೊಂಡು ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ. ಇದರಲ್ಲಿ ಯುವ ಜನತೆ ಜೊತೆಗೆ ವಿದ್ಯಾಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು-ನಾಗರಿಕ ಸಮಾಜ ಮತ್ತು ಪ್ರಭುತ್ವ ಎಲ್ಲರೂ ಜೊತೆಯಾಗಿ ಶ್ರಮಿಸಬೇಕಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳು, ಅದರಿಂದಾಗುವ ದುಷ್ಪರಿಣಾಮಗಳು, ಕಾನೂನಿನ ಶಿಕ್ಷೆ ಮತ್ತು ಮಾದಕ ವ್ಯಸನದಿಂದ ಮುಕ್ತರಾಗುವ ಮಾರ್ಗೋಪಾಯಗಳ ಕುರಿತಾಗಿಯೂ ಡಾ.ಭಂಡಾರಿಯವರು ವಿವರವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕಾರ್ ಯುವಜನತೆ ಸಾಮಾಜಿಕ ಅಪರಾಧಗಳಿಗೆ ಬಲಿಯಾಗದೆ ಒಳ್ಳೆಯ ವಿದ್ಯೆ- ನಡತೆ ರೂಪಿಸಿಕೊಂಡು ತಮ್ಮ ಬದುಕು ಬೆಳಗಿಸಿ ಸಮಾಜವನ್ನು ಬೆಳಗುವಂತಾಗಬೇಕೆಂದು ಹಾರೈಸಿದರು. ಲಯನ್ಸ್ ಅಮೃತ್ ಉಡುಪಿಯ ಅಧ್ಯಕ್ಷರಾದ ಲಯನ್ ಗೋಪಾಲ್ ಅಂಚನ್, ಐಕ್ಯೂ ಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಬೋಧಕ - ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಮಾದಕ ವ್ಯಸನ ತಡೆ ಸಮಿತಿ ಸಂಚಾಲಕರಾದ ಡಾ.ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಸಂಖ್ಯಾಶಾಸ್ತ್ರ ಸಹ ಪ್ರಾಧ್ಯಾಪಕರಾದ ಉಮೇಶ್.ಪೈ ವಂದನಾರ್ಪಣೆಗೈದರು. ಯುವ ರೆಡ್ ಕ್ರಾಸ್ ಸಂಚಾಲಕರಾದ ಪ್ರಶಾಂತ್ ನೀಲಾವರ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ