ಮಂಗಳೂರು: ಇಂದು ಜನತೆ ರಾಸಾಯನಿಕ ಮುಕ್ತ ಮತ್ತು ಸಾವಯವ ಕೃಷಿ ಪದ್ಧತಿಯಿಂದ ಬೆಳೆಯ ಪೌಷ್ಟಿಕ ಆಹಾರ ಸೇವಿಸುವತ್ತ ಮುಖ ಮಾಡುತ್ತಿದ್ದಾರೆ. ಇದರಂತೆ ಅನಾದಿ ಕಾಲದಿಂದ ಅನುಸರಿಸುತ್ತಿದ್ದ ಆಯುರ್ವೇದ ಪದ್ಧತಿಯನ್ನು ನಾವೆಲ್ಲರೂ ಚಿಕಿತ್ಸಾ ವಿಧಾನವಾಗಿ ಬಳಸಿಕೊಳ್ಳುವ ಬಗ್ಗೆ ಚಿಂತಿಸಿದಲ್ಲಿ ಸುಸ್ಥಿರ ಆರೋಗ್ಯ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಆಯುಷ್ ಇಲಾಖೆ ಸೀನಿಯರ್ ಕನ್ಸಲ್ಟೆಂಟ್ ಡಾ। ಅಜಿತ್ ಹೇಳಿದರು.
ಶ್ರೀ ವೇದಮಾಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಸಾವಯವ ಕೃಷಿಕ-ಗ್ರಾಹಕ ಬಳಗ (ರಿ) ಮಂಗಳೂರು ಮತ್ತು ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಯೆಯ್ಯಾಡಿ ಶ್ರೀ ವೇದಮಾಯು ಆಯುರ್ವೆದ ಆಸ್ಪತ್ರೆಯಲ್ಲಿ ಅಕ್ಟೋಬರ್ 22 ರಂದು ಆಯೋಜಿಸಲಾಗಿದ್ದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಾವಯವ ಕೃಷಿಕ ಮತ್ತು ಗ್ರಾಹಕ ಬಳಗ ಕಾರ್ಯದರ್ಶಿ ರತ್ನಾಕರ ಕುಳಾಯಿ ಅವರು ಮಾತನಾಡಿ, ನಮ್ಮ ಬಳಗ ಕಳೆದ 10 ವರ್ಷಗಳಿಂದ 'ಮನೆ ಮದ್ದು ಶಿಬಿರ' ಆಯೋಜಿಸುತ್ತಿದೆ. ಇದಕ್ಕಿಂತಲೂ ಮಿಗಿಲಾಗಿ ವೇದಮಾಯು ಆಸ್ಪತ್ರೆ ಮುಖ್ಯಸ್ಥರಾದ ಡಾ| ಕೇಶವರಾಜ್ ಅವರು ಪಾದರಸದ ರೀತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಉನ್ನತಿಗೆ ಶ್ರಮ ವಹಿಸುತ್ತಿದ್ದು, ಅವರ ಕಾಳಜಿಗೆ ನಮ್ಮ ಬಳಗ ಸದಾ ಬೆಂಬಲ ನೀಡಲಿದೆ ಎಂದರು.
ಪ್ರಖ್ಯಾತ ಆಯುರ್ವೇದ ಸರ್ಜನ್ ಡಾ| ಸುರೇಶ್ ನಗಳಗುಳಿ ಅವರು ಮಾತನಾಡಿ, ವೇದಮಾಯು ಆಸ್ಪತ್ರೆ ಕಳೆದ 10 ವರ್ಷಗಳಿಂದ ನೀಡುತ್ತಿರುವ ಆರೋಗ್ಯ ಸೇವೆ ಮತ್ತು ಜನಹಿತ ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ನಾನು ಗಮನಿಸಿದ್ದೇನೆ. ನಮ್ಮ ದೇಶದ ಪುರಾತನ ಚಿಕಿತ್ಸಾ ವಿಧಾನ ಜನಮಾನಸದಲ್ಲಿ ಮತ್ತೆ ವಿಜೃಂಬಿಸಬೇಕು ಎನ್ನುವ ಸದಾಶಯದೊಂದಿಗೆ ಡಾ| ಕೇಶವ ರಾಜ್ ಅವರು, ಚಳುವಳಿ ಮಾದರಿಯಲ್ಲಿ ಕಾರ್ಯತತ್ಪರರಾಗಿರುವುದು ಪ್ರಶಂಸಾರ್ಹವಾಗಿದೆ ಎಂದರಲ್ಲದೆ, ಇಂದು ಉಚಿತವಾಗಿ ಇಲ್ಲಿ ದೊರೆಯುವ ಸೇವೆಗಳನ್ನು ಜನತೆ ಸದುಪಯೋಗಿಸಿಕೊಂಡು ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆ ಮುಖ್ಯಸ್ಥರಾದ ಡಾ|ಕೇಶವ ರಾಜ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ನಮ್ಮ ಆಸ್ಪತ್ರೆ ಆಯುರ್ವೇದ ವೈದ್ಯ ಪದ್ಧತಿ ಮೂಲಕ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಮಾತ್ರವಲ್ಲದೆ ಸಮಾಜ ಮುಖಿ ಸಂಘಟನೆಗಳ ಸಹಯೋಗದೊಂದಿಗೆ ಹತ್ತು-ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಭಾಗವಾಗಿ ಇಂದು ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ ಎಂದರು.
ಪ್ರಣವ ಸೌಹಾರ್ಧ ಸಹಕಾರಿ ಸಂಘ ನಿಯಮಿತ ನಿರ್ದೇಶಕರಾದ ಸೋಮಪ್ಪ ನ್ಯಾಕ್ ವೇದಿಕೆಯಲ್ಲಿದ್ದರು. ಮಂಗಳೂರು ಮಹಾನಗರಪಾಲಿಕೆ ಕದ್ರಿ ಉತ್ತರ ಕ್ಷೇತ್ರ ನಿಕಟಪೂರ್ವ ಸದಸ್ಯರಾದ ಶಕಿಲಾ ಕಾವ ಸೇರಿದಂತೆ ಪ್ರಮುಖರು ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಡಾ| ನಿಶಿತಾ ಪ್ರಾರ್ಥಿಸಿದರು. ಬಾಲಕೃಷ್ಣ ಪಚ್ಚನಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


