ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ದುಂದುವೆಚ್ಚ | ಹಾಲಿ ನ್ಯಾಯಾಧಿಶರಿಂದ ನ್ಯಾಯಾಂಗ ತನಿಖೆಗೆ ಆಗ್ರಹ
ಮಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಯುಟಿ ಖಾದರ್ ಅವರ ನೇತೃತ್ವದಲ್ಲಿ ವಿಧಾನಸಭೆಯ ಆಡಳಿತವು ಆಡಳಿತಾತ್ಮಕ ಸುಧಾರಣೆ ಹೆಸರಿನಲ್ಲಿ ಭಾರೀ ಅವ್ಯವಹಾರಗಳನ್ನು ನಡೆಸಿದೆ ಎಂಬ ಸಂಶಯಗಳು ಮತ್ತು ಗಂಭೀರ ಆರೋಪಗಳು ಕೇಳಿಬಂದಿವೆ. ಸದನದ ಹಿರಿಮೆ ಗರಿಮೆಯನ್ನು ಕಾಪಾಡಬೇಕಾದ ಸಭಾಧ್ಯಕ್ಷರ ಕಚೇರಿಯೇ ಇಂದು ಭ್ರಷ್ಟಾಚಾರದ ಆರೋಪಗಳ ಮಸಿ ಮೆತ್ತಿಕೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಭಾಧ್ಯಕ್ಷ ಸ್ಥಾನದ ಗೌರವಕ್ಕೂ ತೀವ್ರ ಧಕ್ಕೆಯುಂಟು ಮಾಡಿದೆ ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು, ಅನವಶ್ಯಕ ದುಂದು ವೆಚ್ಚಗಳಿಗೆ ಸರಕಾರ ಹಣ ಖರ್ಚು ಮಾಡುತ್ತಿದ್ದು, ಜನೋಪಯೋಗಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ಮಾಡಿದ್ದೂ ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಸಂಶಯವಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆಲಂಕಾರಿಕ ಮರದ ಬಾಗಿಲು ಮತ್ತು ಅನಗತ್ಯವಾದ ನೆಲಹಾಸು ಅಳವಡಿಕೆ, ವಿಧಾನಸೌಧದ ಆವರಣದಲ್ಲಿ ದುಂದುವೆಚ್ಚದ ಪುಸ್ತಕ ಮೇಳ, ವಿಧಾನಸಭೆಯ ಸಭಾಂಗಣದ ಒಳಗೆ ಎಐ ಕ್ಯಾಮೆರಾ ಅಳವಡಿಕೆ ಮತ್ತು ಹೊಸದಾಗಿ ಟಿವಿಗಳ ಅಳವಡಿಕೆಗಾಗಿ ಬೇಕಾಬಿಟ್ಟೆ ಖರೀದಿ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದರು.
ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಪೇನ್ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ಗಳ ಖರೀದಿಯಲ್ಲೂ ಸಹ ಮಾರುಕಟ್ಟೆ ದರಕ್ಕೂ ಮತ್ತು ಸಚಿವಾಲಯದ ದರಕ್ಕೂ ಭಾರೀ ವ್ಯತ್ಯಾಸ ಕಂಡುಬರುತ್ತಿದೆ. ಈ ಎಲ್ಲಾ ಖರೀದಿಗಳ ಗುತ್ತಿಗೆಯನ್ನು ಅನುಮಾನಾಸ್ಪದವಾಗಿ ಮಂಗಳೂರು ಮೂಲದ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪವಿದೆ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದರು.
ಯಾವುದೇ ವಸ್ತು ಖರೀದಿಸಲು ಹಣಕಾಸು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮಗಳು ಪಾಲನೆಯಾಗಬೇಕು, ಆದರೆ, ಇಲ್ಲಿ ಹಲವು ವಸ್ತುಗಳ ಖರೀದಿಗೆ ಯಾವುದೇ ನಿಯಮ ಪಾಲನೆಯಾಗಿಲ್ಲ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಎಲ್ಲಾ ವಸ್ತುಗಳಿಗೂ ಎರಡು-ಮೂರು ಪಟ್ಟು ಹೆಚ್ಚು ಖರ್ಚು ತೋರಿಸಿದ್ದು, ಹಣಕಾಸು ಇಲಾಖೆಯು ಅನುಮತಿ ನೀಡದಿದ್ದರೂ ಮುಖ್ಯಮಂತ್ರಿಗಳ ಮೌಖಿಕ ಓತ್ತಡದಿಂದ ಹಣಕಾಸು ಇಲಾಖೆ ತುರ್ತಾಗಿ ಮಾಡಬೇಕಾದ ಕೆಲಸವೆಂದು 4ಜಿ ವಿನಾಯಿತಿ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ. ಇದರ ಜೊತೆಗೆ, ಬಿಜೆಪಿ ಶಾಸಕರನ್ನು ದುರ್ಬಲ ಕಾರಣಗಳಿಗಾಗಿ ಎರಡು ಬಾರಿ ಅಮಾನತುಗೊಳಿಸಿರುವ ಸಭಾಧ್ಯಕ್ಷರ ಪಕ್ಷಪಾತಿ ನಿರ್ಣಯವೂ ಸಹ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲದ ಈ ಸಂದರ್ಭದಲ್ಲಿ ಇಷ್ಟೊಂದು ದುಂದುವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಈ ಕಾಂಗ್ರೆಸ್ ಸರ್ಕಾರಕ್ಕೆ ಹಗರಣ ಮಾಡಲು ಇರುವಷ್ಟು ತರಾತುರಿ ಅಭಿವೃದ್ಧಿ ಕಾರ್ಯಗಳಲ್ಲಿ ಕಂಡುಬರುತ್ತಿಲ್ಲ. ಆದ್ದರಿಂದ, ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆಯಾಗಬೇಕು ಮತ್ತು ಸಭಾಧ್ಯಕ್ಷರ ಕಚೇರಿಯ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಪಾರದರ್ಶಕತೆಗಾಗಿ ಮಾಹಿತಿ ಹಕ್ಕು ಕಾಯಿದೆ (RTI) ವ್ಯಾಪ್ತಿಗೆ ಬರಬೇಕು ಎಂದು ಡಾ. ಭರತ್ ಶೆಟ್ಟಿ ಒತ್ತಾಯಿಸಿದರು.
ಸಭಾಧ್ಯಕ್ಷರ ಪೀಠ ಗೌರವ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿ ವರದಿ ಪಡೆದು ಸ್ಪೀಕರ್ ಅವರು ಆರೋಪ ಮುಕ್ತರಾಗಬೇಕೆಂದು ಅವರು ಆಗ್ರಹಿಸಿದರು.
ಸಭಾಧ್ಯಕ್ಷ ಸ್ಥಾನವೂ ಲಾಭದಾಯಕ ಹುದ್ದೆ ಎಂದು ತೋರಿಸಿ ಕೊಟ್ಟ ಅಪಕೀರ್ತಿ ಖಾದರ್ ರವರದ್ದು. ಹೀಗಾಗಿ ಅವರು ಕೂಡಲೇ ರಾಜಿನಾಮೆ ನೀಡಬೇಕು. ಇವರ ತಮ್ಮನ ವ್ಯವಹಾರವೂ ತನಿಖೆಯ ವ್ಯಾಪ್ತಿಗೆ ಬರಬೇಕು ಎಂದು ಶಾಸಕರು ಒತ್ತಾಯಿಸಿದರು.


