ಮಂಗಳೂರು: ಅಂತರಾಷ್ಟ್ರೀಯ ಓಝೋನ್ ದಿನಾಚರಣೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಡಾ ಲಕ್ಷ್ಮಿಕಾಂತ್ ಹೆಚ್ ಮಾತನಾಡಿ, ಓಝೋನ್ ಪದರ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವುದರ ಜೊತೆಗೆ ಭೂಮಂಡಲದಲ್ಲಿರುವ ಜೀವ ಸಂಕುಲವನ್ನು ರಕ್ಷಣೆ ಮಾಡುವ ಪದರವಾಗಿ ಕಾರ್ಯ ನಿರ್ವಹಿಸುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆದು ಮಣ್ಣು, ಸಸ್ಯಕಾಶಿ, ಜೀವರಾಶಿಗಳನ್ನು ಸಂರಕ್ಷಣೆ ಮಾಡುತ್ತದೆ. ಮನುಕುಲವು ಪ್ರಕೃತಿಗೆ ಮಾಡುತ್ತಿರುವ ಹಾನಿಕಾರಕ ಚಟುವಟಿಕೆಗಳಿಂದ ಓಝೋನ್ ಮಹಾಪದರ ನಾಶ ಆಗುತ್ತಿದೆ. ಮನುಷ್ಯ ಬಳಸುತ್ತಿರುವ ರೆಫ್ರಿಜರೇಟರ್, ಹವಾನಿಯಂತ್ರಕಗಳು ಸಾಕಷ್ಟು ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಮನುಷ್ಯ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಪ್ರಕೃತಿಯನ್ನು ಬೆಳೆಸಿಕೊಂಡು ಓಝೋನ್ ಪದರವನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಣೆ ಮಾಡುವಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನ ವಿದ್ಯಾರ್ಥಿನಿಯರಿಗೆ ತಾರಾಲಯದಲ್ಲಿ ಪ್ರದರ್ಶನ ಏರ್ಪಡಿಸಲಾಯಿತು. ಇನ್ನೊವೇಶನ್ ಹಬ್ನ ಮೆಂಟರ್ ಆದರ್ಶ್ ಇನ್ನೊವೇಶನ್ ಹಬ್ನ ಇಲೆಕ್ಟ್ರಾನಿಕ್ಸ್, ಭೌತಶಾಸ್ತ್ರ, ರೋಬೋಟಿಕ್ಸ್ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳ ಬಗ್ಗೆ ವಿವರಿಸಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟ್ ಮಾಡಲು ಕೇಂದ್ರದಲ್ಲಿ ವ್ಯವಸ್ಥೆಗಳಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿಯರಾದ ವಂದನಾ ಗೌರಿ ಹಾಗೂ ಅಭಿಲಾಷ ಪಿ.ಕೆ ಉಪಸ್ಥಿತರಿದ್ದರು. ಕೇಂದ್ರದ ಕ್ಯುರೇಟರ್ ಜಗನ್ನಾಥ ನಿರೂಪಿಸಿ, ಶೈಕ್ಷಣಿಕ ಸಹಾಯಕಿ ರಶ್ಮಿ ಸ್ವಾಗತಿಸಿದರು. ಕಮ್ಯೂನಿಟಿ ಮೊಬಿಲೈಸರ್ ಶಿವರಾಮ್ ಎಂ. ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

