ಉಜಿರೆ: ನಮ್ಮ ಪರಿಸರದಲ್ಲಿರುವ ಅಮೂಲ್ಯ ಸಸ್ಯ ಸಂಪತ್ತು, ಅದರಲ್ಲಿಯೂ ವಿಶೇಷವಾಗಿ ಅಪರೂಪದ ಗಿಡಮೂಲಿಕೆಗಳು ಆಯುರ್ವೇದ ವಿಜ್ಞಾನದ ಮೂಲ ಸಂಪತ್ತು, ಈ ಸಂಪತ್ತನ್ನು ಬೆಳೆಸಿ, ಸಂರಕ್ಷಿಸಿ ಮುಂದಿನ ತಲೆಮಾರಿಗೆ ಬಿಟ್ಟು ಕೊಡಬೇಕಾಗಿರುವಂತದ್ದು ನಮ್ಮೆಲ್ಲರ ಮುಖ್ಯ ಜವಾಬ್ದಾರಿ ಎಂದು ಆಳ್ವಾಸ್ ಆಯುರ್ವೇದ ಕಾಲೇಜು, ಮೂಡಬಿದ್ರೆ ಇಲ್ಲಿಯ ದ್ರವ್ಯ ಗುಣವಿಜ್ಞಾನ ವಿಭಾಗದ ಮುಖ್ಯಸ್ಥರು, ಸಂಶೋಧನಾ ನಿರ್ದೇಶಕರು ಆಗಿರುವ ಡಾ. ಸುಬ್ರಮಣ್ಯ ಪದ್ಯಾಣ ಅವರು ಅಭಿಪ್ರಾಯ ಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಜರಗಿದ ಆಯುರ್ವೇದ ದಿನಾಚರಣೆ 2025 ಈ ಕಾರ್ಯಕ್ರಮದಲ್ಲಿ ತಜ್ಞ ಉಪನ್ಯಾಸವನ್ನು ನೀಡಿ ಅವರು ಮಾತನಾಡುತ್ತಿದ್ದರು.
ವೃಕ್ಷ ಆಯುರ್ವೇದದಲ್ಲಿ ಉಲ್ಲೇಖವಾಗಿರುವ ವಿವಿಧ ಜಾತಿಯ ಗಿಡಮೂಲಿಕೆಗಳು, ಮನುಷ್ಯ ಹಾಗೂ ಪ್ರಕೃತಿಯ ಆರೋಗ್ಯ ಸಂರಕ್ಷಣೆಯಲ್ಲಿ ಅವು ನಿರ್ವಹಿಸುತ್ತಿರುವ ಪಾತ್ರದ ಕುರಿತಾಗಿ ಅವರು ಬೆಳಕು ಚೆಲ್ಲಿದರು.
ವೈವಿಧ್ಯಮಯ ವನಸ್ಪತಿಗಳು, ಅವುಗಳ ವಿವಿಧ ಭಾಗಗಳಿಂದ ತಯಾರಿಸಲ್ಪಡುವ ಔಷಧಿಗಳು ಮತ್ತು ಅವುಗಳ ಬಳಕೆಯ ಕುರಿತಾಗಿ ವಿಸ್ತೃತವಾಗಿ ಮಾಹಿತಿ ನೀಡಿದ ಅವರು, ಆಯುರ್ವೇದ ವಿಜ್ಞಾನದ ಪರಿಜ್ಞಾನವನ್ನು ವಿಸ್ತರಿಸುವಂತೆ ಕರೆ ನೀಡಿದರು.
ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಮನುಷ್ಯ ಹಾಗೂ ಸಸ್ಯವರ್ಗಗಳ ನಡುವಿನ ನಿಕಟ ಸಂಬಂಧ, ಪ್ರಾಚೀನ ಕಾಲದಿಂದ ನಡೆಸಿದ ಸಂಶೋಧನಗಳು ಹಾಗೂ ಅದರ ಫಲಶ್ರುತಿಯಾಗಿ ಅಭಿವೃದ್ಧಿ ಹೊಂದಿದ ನಾಟಿ ವೈದ್ಯ ಹಾಗೂ ಜನಪದ ವೈದ್ಯದ ಕುರಿತಾಗಿ ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಆಯುರ್ವೇದದ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಸಂಪಾದಿಸಿದ ವಿಶೇಷ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮವನ್ನು ಯೋಜಿಸಿ, ಸಂಯೋಜಿಸಿದ ಸಸ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ.ಎಸ್. ನಿರ್ವಹಿಸಿ ಭವ್ಯ ನಾಯಕ್ ಅವರು ವಂದಿಸಿದರು. ವಿಭಾಗದ ಮುಖ್ಯಸ್ಥೆ ಕು. ಶಕುಂತಲಾ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಕ್ಷೇತ್ರ ಬೇಟಿ ಮಾಡಿ ಯಶೋವನ ಸಸ್ಯೋದ್ಯಾನದಲ್ಲಿ ವಿದ್ಯಾರ್ಥಿಗಳಿಗೆ ಸಸ್ಯಗಳ ವೈವಿಧ್ಯ, ಮಹತ್ವ ಹಾಗೂ ಸಂರಕ್ಷಣೆಯ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


