ಶರಪಂಜರದಲ್ಲಿ ಶರಾವತಿ: ಪ್ರಕೃತಿ ಉಳಿಯಲಿ, ವಿಕೃತಿ ಅಳಿಯಲಿ

Upayuktha
0

ಶರಾವತಿ ಯೋಜನೆ: ಜೀವವೈವಿಧ್ಯಕ್ಕೆ ಆಪತ್ತು- ಮನುಕುಲಕ್ಕೆ ವಿಪತ್ತು




ಶ್ರೀರಾಘವೇಶ್ವರಭಾರತೀಸ್ವಾಮೀಜಿ


ಲ್ಲ ದೇಶ, ಭಾಷೆ, ಸಂಸ್ಕೃತಿಗಳಲ್ಲೂ ಪ್ರಕೃತಿಗೆ ವಿಶೇಷ ಸ್ಥಾನವಿದೆ. ಸನಾತನ ಸಂಸ್ಕೃತಿಯಂತೂ ಪ್ರಕೃತಿಯನ್ನು ದೇವರೆಂದೇ ಪೂಜಿಸುತ್ತಾ ಬಂದಿದೆ. ಪ್ರಕೃತಿಗೆ ವಿರುದ್ಧವಾದ ಯಾವ ಯೋಜನೆಯೂ ಸುಸ್ಥಿರವಲ್ಲ ಎನ್ನುವುದು ನಮ್ಮ ಅಚಲ ನಿಲುವು. ಜಗತ್ತಿನ ನಾಗರೀಕತೆ ಬೆಳೆದು ಬಂದಿರುವುದೇ ಪ್ರಕೃತಿಮಾತೆಯ ಕರುಣೆಯಿಂದ. ಸಕಲ ಜೀವಜಂತುಗಳ ಬದುಕು ಪ್ರಕೃತಿ ನೀಡಿದ ಭಿಕ್ಷೆ. ಪರಿಸರಕ್ಕೆ ವಿರುದ್ಧವಾಗಿ ಬದುಕುವ ಪ್ರಯತ್ನ ಮಾಡಿದರೆ ಪ್ರಕೃತಿ ತಕ್ಕ ಪಾಠ ಕಲಿಸುತ್ತದೆ ಎನ್ನುವುದಕ್ಕೆ ಅಸಂಖ್ಯಾತ ನಿದರ್ಶನಗಳು ಇತಿಹಾಸದಲ್ಲಿ ಸಿಗುತ್ತವೆ.


ಪಶ್ಚಿಮಘಟ್ಟ ಪ್ರದೇಶ ಇಡೀ ವಿಶ್ವದಲ್ಲೇ ಜೀವವೈವಿಧ್ಯ ಸೂಕ್ಷ್ಮ ಪ್ರದೇಶ. ವಿನಾಶದ ಅಂಚಿನಲ್ಲಿರುವ ಸಾವಿರಾರು ಸಸ್ಯ- ಪ್ರಾಣಿ ಪ್ರಬೇಧಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಈಗಾಗಲೇ ನಾವು ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಮಾತೆಯ ಒಡಲಿಗೆ ಕನ್ನ ಹಾಕಿದ್ದೇವೆ. 2.89 ಲಕ್ಷ ಜೀವ ಬಲಿ ಪಡೆದ 2004ರ ಭೂಕಂಪ- ಸುನಾಮಿಯಿಂದ ಹಿಡಿದು ಕಳೆದ ವರ್ಷ ಶಿರೂರಿನಲ್ಲಿ ಸಂಭವಿಸಿದ ಗುಡ್ಡಕುಸಿತದ ವರೆಗೆ ಪ್ರಾಕೃತಿಕ ವಿಕೋಪಗಳ ರೂಪದಲ್ಲಿ ಇದರ ಪರಿಣಾಮವೂ ನಮಗೆ ಮೇಲಿಂದ ಮೇಲೆ ಗೋಚರವಾಗುತ್ತಲೇ ಇದೆ.


ಇದೀಗ ಶರಾವತಿ ಕೊಳ್ಳಪ್ರದೇಶದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಮತ್ತೊಂದು ಯೋಜನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಮೊನ್ನೆ ಗೇರುಸೊಪ್ಪೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಯೋಜನೆಯನ್ನು ವಿರೋಧಿಸಿ ಸಲ್ಲಿಕೆಯಾಗಿರುವುದು ವಿರೋಧದ ತೀವ್ರತೆಯನ್ನು ಸೂಚಿಸುತ್ತದೆ. ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಿ ಸರ್ಕಾರ ಇನ್ನಾದರೂ ಯೋಜನೆಯ ಮರು ಪರಿಶೀಲನೆ ಮಾಡದಿದ್ದರೆ ನಮ್ಮ ಸಾವನ್ನು ನಾವೇ ಆಹ್ವಾನಿಸಿಕೊಂಡಂತಾಗುತ್ತದೆ.


ಏನು ಯೋಜನೆ?

ಪಶ್ಚಿಮ ಘಟ್ಟದ 930 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ಹೊಸ ಯೋಜನೆಗೆ ಸರ್ಕಾರ ಮುಂದಾಗಿದೆ. ಜಲವಿದ್ಯುತ್ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ರೇಚಕ ಯಂತ್ರಗಳ ಮೂಲಕ ಹರಿಸಿ ಸಂಗ್ರಹಿಸಿ ಗುರುತ್ವಾಕರ್ಷಣ ಶಕ್ತಿ ಮೂಲಕ ಮತ್ತೆ ಅದನ್ನು ವಿದ್ಯುತ್ ಉತ್ಪಾದನೆಗೆ ಬಳಸುವುದು ಯೋಜನೆಯ ಉದ್ದೇಶ. ಅಭಯಾರಣ್ಯದ ಮಧ್ಯಭಾಗದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ರೇಚಕ ಯಂತ್ರದ ಮೂಲಕ ಮೇಲೆತ್ತಿ ಹಿಂದಕ್ಕೆ ಒಯ್ದು ಎಂಟು ಜನ ವಿದ್ಯುತ್ ಉತ್ಪಾದನಾ ಘಟಕಗಳಿಂದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ.


ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಹಾಗೂ ಇತರ ಇಲಾಖೆಗಳ ಅನುಮತಿ ಕಡ್ಡಾಯ. ಆದರೆ ರಾಜ್ಯ ಸರ್ಕಾರ ಇದರ ಪರಿಣಾಮಗಳನ್ನು ವಿಶ್ಲೇಷಿಸಿದೇ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಸರ್ಕಾರದ ಆತುರ ಸಹಜವಾಗಿಯೇ ಮಲೆನಾಡಿನ ಜನತೆಯಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದೆ.


ಇಂಥ ಯೋಜನೆಗಳಿಗೆ ವಿರೋಧ ವ್ಯಕ್ತವಾದಾಗಲೆಲ್ಲ ಹೋರಾಟಗಾರರನ್ನು ಅಭಿವೃದ್ಧಿ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟುವುದು ಸರ್ಕಾರಗಳ ತಂತ್ರ. ಆದರೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ರೂಪಿಸುವ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯಸಾಧು, ಪರಿಸರದ ಮೇಲೆ ಇದರಿಂದಾಗುವ ಪರಿಣಾಮ ಏನು, ಯೋಜನೆಯಿಂದ ಎಷ್ಟು ಲಾಭವಾಗುತ್ತದೆ ಎಂಬ ವಿಶ್ಲೇಷಣೆಗಳು ನಡೆಯದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯ ಎಂದೇ ಹೇಳಬೇಕು.


2024ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯ ವಿಸ್ತøತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಒಪ್ಪಿಗೆ ನೀಡಿತ್ತು. ಕಳೆದ ಜುಲೈನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಕೂಡಾ ತಾತ್ವಿಕ ಅನುಮೋದನೆ ನೀಡಿದೆ. ಖಾಸಗಿ ಕಂಪನಿ ಡಿಪಿಆರ್ ಸಿದ್ಧಪಡಿಸಿದೆ. ಆದರೆ ಸಮಗ್ರ ಯೋಜನಾ ವಿವರ ಬಹಿರಂಗಪಡಿಸದಿರುವುದು ಆತಂಕಕ್ಕೆ ಮುಖ್ಯ ಕಾರಣ.


ಜೀವವೈವಿಧ್ಯಕ್ಕೆ ಧಕ್ಕೆ

ವಿನಾಶದ ಅಂಚಿನಲ್ಲಿರುವ ಸಹಸ್ರಾರು ಪ್ರಾಣಿ ಹಾಗೂ ಸಸ್ಯ ವೈವಿಧ್ಯಗಳಿಗೆ ಪಶ್ಚಿಮಘಟ್ಟ ಆವಾಸಸ್ಥಾನ. ವಿಶ್ವ ಪರಿಸರ ಮಂಡಳಿ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಇಂಥ ಜೀವವೈವಿಧ್ಯಗಳ ಅಸ್ತಿತ್ವಕ್ಕೆ ಧಕ್ಕೆ ತರುವ  ಯಾವುದೇ ಯೋಜನೆಗಳನ್ನು ಕೈಗೊಳ್ಳುವಾಗ ಸಂಬಂಧಪಟ್ಟ ಎಲ್ಲರ ಜತೆ ಚರ್ಚಿಸಿಯೇ ನಿರ್ಧಾರಕ್ಕೆ ಬರುವುದು ಅವಶ್ಯ. ಉದಾಹರಣೆಗೆ ವಿಶ್ವದಲ್ಲಿ 2500 ಸಿಂಹ ಬಾಲದ ಸಿಂಗಳೀಕಗಳಿವೆ. ಈ ಪೈಕಿ 730 ಶರಾವತಿ ಅಭಯಾರಣ್ಯದಲ್ಲೇ ಇದೆ. ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಇದು ಈ ಅಪರೂಪದ ಪ್ರಬೇಧದ ವಿನಾಶಕ್ಕೆ ನಾವೇ ಎಡೆಮಾಡಿಕೊಟ್ಟಂತೆ.


ಸಾಮಾನ್ಯವಾಗಿ ಸಿಂಗಳೀಕಗಳು ನೆಲಕ್ಕೆ ಇಳಿಯುವುದಿಲ್ಲ; ಮರಗಳ ಮೇಲ್ಭಾಗ ಅಂದರೆ ಕೆನೋಪಿ ವಲಯದಲ್ಲಿ ವಾಸ. ಇಲ್ಲಿ ರಸ್ತೆ, ಸುರಂಗ ನಿರ್ಮಾಣದಿಂದ ಸಾವಿರಾರು ಮರಗಳ ಹನನವಾಗಲಿದ್ದು, ಸುರಂಗ ನಿರ್ಮಾಣಕ್ಕೆ ಬಳಸುವ ಸ್ಫೋಟಕ ಕೂಡಾ ಪ್ರಾಣಿಸಂಕುಲಕ್ಕೆ ಮಾರಕ. ಸಿಂಗಳೀಕಗಳ ಅಸ್ತಿತ್ವಕ್ಕೇ ಸಂಚಕಾರ ಬರುವ ಅಪಾಯವೂ ಇದೆ. ಇದರ ಜತೆಗೆ ಪಾಂಗೋಲಿನ್,  ನಾಗರಹಾವು, ಕಾಳಿಂಗ ಸರ್ಪದಂಥ ಅಪರೂಪದ ಪ್ರಾಣಿಪ್ರಬೇಧಕ್ಕೂ ಧಕ್ಕೆ ಉಂಟಾಗಲಿದೆ.


ವಿರೋಧ ಏಕೆ?

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಿದ್ಯುತ್ ಯೋಜನೆ ಜಾರಿಗೊಳಿಸಬೇಕಾದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ಕೇಂದ್ರ ವಿದ್ಯುತ್ ಪ್ರಾಧಿಕಾರದ ನಿರಾಕ್ಷೇಪಣಾ ಅನುಮತಿ ಕಡ್ಡಾಯ. ಆದರೆ ಸರ್ಕಾರ ಯಾವುದೇ ಅನುಮತಿ ಪಡೆಯದೇ ಯೋಜನೆ ಜಾರಿಗೆ ಮುಂದಾಗದೆ. ಪ್ರಾಧಿಕಾರದಿಂದ ಅನುಮತಿ ಪಡೆದರೆ ಸಾರ್ವಜನಿಕರು ಅದನ್ನು ನ್ಯಾಯಾಲಯಲ್ಲಿ ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕೆ ಸರ್ಕಾರ ಈ ಕುಟಿಲ ತಂತ್ರವನ್ನು ಸರ್ಕಾರ ಅನುಸರಿಸಿದೆ.


ಹೋರಾಟಗಾರರು ಮುಂದಿಟ್ಟಿರುವ ಇನ್ನೊಂದು ಪ್ರಶ್ನೆ. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಈ ಯೋಜನೆಗೆ ಬಳಸಿದ ನೀರನ್ನು ರೇಚಕ ಯಂತ್ರದ ಮೂಲಕ ಮೇಲೆತ್ತಿ ಮತ್ತೆ ಹರಿಸಲು 2500 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ ಎಂಬ ವಾದ ಪರಿಸರತಜ್ಞರದ್ದು. ಇದರ ಸತ್ಯಾಸತ್ಯತೆ ಬಗ್ಗೆ ಸರ್ಕಾರ ಏಕೆ ಮೌನ ವಹಿಸಿದೆ?


ತvಜ್ಞರ ಪ್ರಕಾರ, 30 ಅಡಿ ವ್ಯಾಸದ 14 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ 18 ಸಾವಿರ ಟನ್ ಸ್ಫೋಟಕ ಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಬಳಸುವುದು ಈಗಾಗಲೇ ಕುಸಿತದ ಘಟನೆಗಳಿಂದ ಕಂಗೆಟ್ಟಿರುವ ಪಶ್ಚಿಮ ಘಟ್ಟಕ್ಕೆ ಮತ್ತೊಂದು ಅಪಾಯ ಒಡ್ಡುವುದು ಖಚಿತ. ವಿದ್ಯುತ್ ವಿತರಣಾ ವ್ಯವಸ್ಥೆಗಾಗಿ ಮತ್ತೆ 145 ಎಕರೆಯಲ್ಲಿ 12 ಸಾವಿರ ಮರಗಳನ್ನು ಕಡಿಯುವುದು ಕೂಡಾ ವಿಪತ್ತಿಗೆ ಆಹ್ವಾನ ನೀಡಿದಂತೆ.

2017ರಲ್ಲಿ 4005 ಕೋಟಿ ಇದ್ದ ಯೋಜನಾ ವೆಚ್ಚ ಇದೀಗ 8004 ಕೋಟಿಗೆ ಏರಿದೆ. 2025ನೇ ಸಾಲಿನ ಬಜೆಟ್‌ನಲ್ಲಿ 10240 ಕೋಟಿ ರೂಪಾಯಿ ಇದಕ್ಕೆ ಮೀಸಲಿಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಯೋಜನೆಗಳಿಗೆ ಈ ಮೊತ್ತ ಬಳಸಿದರೂ, ಇಷ್ಟೇ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಸಾಧ್ಯ ಎನ್ನುವುದು ತಜ್ಞರ ಅಭಿಮತ.


ಉತ್ತರ ಕನ್ನಡ ಜಿಲ್ಲೆಯ ಬೇಗೋಡಿಯಲಿ 45 ಹಾಗೂ ಶಿವಮೊಗ್ಗ ಜಿಲ್ಲೆ ಮರಾಠಿ ಕ್ಯಾಂಪಿನ 8 ಮನೆಗಳು ಯೋಜನೆಗಾಗಿ ಸ್ಥಳಾಂತರಗೊಳ್ಳಲಿವೆ. ತಲೆ ತಲಾಂತರಗಳಿಂದ ಬಂದ ಭೂಮಿಯ ನಂಟನ್ನು ಈ ಜನ ಕಳೆದುಕೊಳ್ಳಬೇಕಾಗುತ್ತದೆ. ಹಿಂದೆ ಶರಾವತಿ ಯೋಜನೆಗೆ ಭೂಮಿ ನೀಡಿ ನಿರಾಶ್ರಿತರಾಗಿದ್ದ ಕುಟುಂಬಗಳು ಮತ್ತೆ ಸಂಕಷ್ಟದಲ್ಲಿವೆ.


ಪ್ರಜಾಪ್ರಭುತ್ವದಲ್ಲಿ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಪರಿಸರಕ್ಕೆ ಹಾನಿ ಮಾಡಿ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವುದೇನು? ಪ್ರಕೃತಿಯ ಸಮತೋಲನ ತಪ್ಪಿದರೆ ಅದರಿಂದಾಗುವ ಪರಿಣಾಮ ತಡೆಯಲು ನಮ್ಮ ವಿಜ್ಞಾನ ಸಮರ್ಥವೇ? ಮನುಷ್ಯನಂತೆ ಎಲ್ಲ ಜೀವಜಂತುಗಳಿಗೂ ಪ್ರಕೃತಿಯಲ್ಲಿ ಬದುಕುವ ಹಕ್ಕು ಇಲ್ಲವೇ? ಮುಂತಾದ ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದಡಿ ಇಡಬೇಕಾದ್ದು ಇಂದಿನ ತುರ್ತು ಅಗತ್ಯ. ಪ್ರಕೃತಿ ಮನುಷ್ಯನ ಆಸೆಗಳನ್ನಷ್ಟೇ ಪೂರೈಸಬಲ್ಲದು; ದುರಾಸೆಗಳನ್ನಲ್ಲ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top