ಯಕ್ಷಗಾನವಿಂದು ಜಾಗತಿಕ ಕಲೆ: ಡಾ.ಎಂ. ಪ್ರಭಾಕರ ಜೋಶಿ

Upayuktha
0

ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ




ಮುಂಬಯಿ: 'ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು- ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ' ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಹೇಳಿದರು.


ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 


ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ ಅವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024- 25 ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ಟರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ವಹಿಸಿದ್ದರು. 


ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ತಂಡದ ಪ್ರಮುಖ ಅರ್ಥಧಾರಿ, ವಿಮರ್ಶಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿ, ವಂದಿಸಿದರು. ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.


ತಾಳಮದ್ದಳೆ 'ಕುರುಕ್ಷೇತ್ರದಲ್ಲಿ ಕೌರವ':

ಉದ್ಘಾಟನಾ ಸಮಾರಂಭದ ಬಳಿಕ ಊರಿನ ಪ್ರಸಿದ್ಧ ಕಲಾವಿದರಿಂದ 'ಕುರುಕ್ಷೇತ್ರದಲ್ಲಿ ಕೌರವ' ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು.


ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಚೆಂಡೆ- ಮದ್ದಳೆ ನುಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top