ಸಿರಿಬಾಗಿಲು (ಕಾಸರಗೋಡು): "ಪ್ರಾಚೀನ ಕಾವ್ಯಗಳ ವಾಚನ-ವ್ಯಾಖ್ಯಾನಗಳೆಂದರೆ ನಿಜವಾದ ಸರಸ್ವತಿಯ ಆರಾಧನೆ. ಗಮಕ ಕಲೆಯೆಂದರೂ ಇದುವೇ ಆಗಿದೆ. ಇದರಲ್ಲಿ ಸಾಹಿತ್ಯದ ರಸಪಾಕವೇ ಅಡಗಿದೆ" ಎಂದು ಸಾಹಿತಿ, ಶಿಕ್ಷಣತಜ್ಞ ವಿ.ಬಿ. ಕುಳಮರ್ವ ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವೇದಿಕೆಯಲ್ಲಿ ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗಮಕ ಶ್ರಾವಣದ ಸರಣಿ ಕಾರ್ಯಕ್ರಮದ ಸಮಗ್ರ ಪ್ರಸ್ತಾವನೆಯಲ್ಲಿ ಹೇಳಿದರು.
ಭಾಗವತ ಪರಂಪರೆಯಲ್ಲಿಯೇ ಬೆಳೆದುಬಂದ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಗಮಕ ಕಲೆಯ ಮಹತ್ವವನ್ನು ವಿವರಿಸಿದರು. ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಳಮರ್ವ ಶಂಕರ ಶರ್ಮಾ ವಿರಚಿತ "ಉತ್ತರಕಾಂಡ ಕಾವ್ಯಧಾರಾ" ಎಂಬ ಮಹಾಕಾವ್ಯದಿಂದಾಯ್ದ ಭಾಗವನ್ನು ಗಾಯಕಿ ಶ್ರೀಮತಿ ಯಶೋದಾ ಭಟ್ ಉಪ್ಪಂಗಳ ಅವರು ಸುಶ್ರಾವ್ಯವಾಗಿ ವಾಚಿಸಿದರು. ಗಮಕಿ ಗುರುಮೂರ್ತಿ ನಾಯಿಕ್ಕಾಪು ಅವರು ವ್ಯಾಖ್ಯಾನ ಗೈದರು.
ಜಗದೀಶ ಕೂಡ್ಳು ಸ್ವಾಗತಿಸಿದರು. ಶ್ರೀಮತಿ ಜಯಲಕ್ಷ್ಮಿ ಹೊಳ್ಳ ಅವರು ನಿರ್ವಹಣೆಗೈದು ವಂದಿಸಿದರು. ವಿ.ಬಿ. ಕುಳಮರ್ವ ವಿರಚಿತ ಗಮಕ ಗೀತೆಯನ್ನು ಶ್ರೀಮತಿ ಯಶೋದಾ ಭಟ್ ಪ್ರಾರ್ಥನೆಯ ರೂಪದಲ್ಲಿ ಹಾಡಿದರು. ಉತ್ತರಕಾಂಡ ಕಾವ್ಯಧಾರಾ ಮಹಾಕಾವ್ಯದ ಕರ್ತೃ ಕುಳಮರ್ವ ಶಂಕರ ಶರ್ಮಾ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಶಾಲು ಹೊದೆಸಿ ಗೌರವಿಸಿದರು.
ವಿ.ಬಿ. ಕುಳಮರ್ವ ಅವರ ಮುತ್ತಾತ ದಿ| ಕುಳಮರ್ವ ವೆಂಕಪ್ಪ ಭಟ್ಟರು 200 ವರ್ಷಗಳ ಹಿಂದೆ ತಾಳೆಗರಿಯಲ್ಲಿ ಕಬ್ಬಿಣದ ಕಂಠದ ಮೂಲಕ ಬರೆದ ಬೃಹತ್ ತೊರವೆ ರಾಮಾಯಣ ಗ್ರಂಥವು ವೇದಿಕೆಯಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ