ಪ್ರತಿ ವರ್ಷ ಕೂಡ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತೇವೆ. ಆದರೂ ಪ್ರತಿ ಸಾರಿ ಕೃಷ್ಣ ನಮ್ಮ ಮನಸ್ಸಿಗೆ ಹತ್ತಿರ ಆಗುತ್ತಾನೆ. ಲೋಕವೆಲ್ಲ ಅವನನ್ನು ದೇವಾಂಶ ಸಂಭೂತ ಎಂದು ಪರಿಗಣಿಸಿದರೂ, ಅವನು ತನ್ನದೇ ಆದ ವೈಶಿಷ್ಟ್ಯ ಹೊಂದಿ ಮನಸ್ಸನ್ನು ತಟ್ಟುತ್ತಾನೆ.
ಹುಟ್ಟಿದ ಕೂಡಲೇ ಮಥುರಾ ನಗರವನ್ನು ಬಿಟ್ಟು ಗೋಕುಲ ಪ್ರವೇಶಿಸಿದ ಕೃಷ್ಣ ಮಕ್ಕಳಲ್ಲಿ ಮಾಣಿಕ್ಯ ಎಂದೇ ಪರಿಗಣಿಸ ಬಹುದು. ಗೋ ಸಂತತಿಯ ಮಹತ್ವವನ್ನು ಮೊಟ್ಟ ಮೊದಲಿಗೆ ತೋರಿಸಿದ ವ್ಯಕ್ತಿ ಕೃಷ್ಣ. ನಾವೀಗ ಹೇಳುವ Down to earth ಮೊದಲಿಗೆ ಕೃಷ್ಣ ತೋರಿಸಿ ಕೊಟ್ಟಿದ್ದಾನೆ.
ತಂದೆಯನ್ನು ಕಳೆದು ಕೊಂಡು ಅಲೆದಾಡುತ್ತಿದ್ದ ಪಾಂಡವರಿಗೆ ದಿಕ್ಕಾದವನು ಕೃಷ್ಣ. "ಅನಾಥೋ ದೈವ ರಕ್ಷಕ" ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟನು. ಬಹು ಪತ್ನಿತ್ವ ಸಾಮಾನ್ಯವಾಗಿ ಇದ್ದ ಕಾಲದಲ್ಲಿ ದ್ರೌಪದಿಯ ಬಹು ಪತಿತ್ವವನ್ನು ಲೋಕ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡಿದಾಗ ದ್ರೌಪದಿಗೆ ನೈತಿಕ ಬೆಂಬಲವಾಗಿ ನಿಂತನು. ಅವಳಿಗೆ ಸಖಿ ಎಂದು ಕರೆದು ಸ್ನೇಹ ಮತ್ತು ಅಣ್ಣನ ಪ್ರೀತಿ ಕೊಟ್ಟು ಜಗತ್ತಿಗೆ ಅಣ್ಣನ ಆದರ್ಶವಾಗಿ ನಿಂತನು.
ತಾನು ಚಿಕ್ಕವನಾಗಿದ್ದಾಗ ಕದ್ದು ಬೆಣ್ಣೆ ತಿಂದ ಪಾಪವನ್ನು ಪಾಂಡವರ ರಾಜಸೂಯ ಯಾಗದಲ್ಲಿ ಉಂಡ ಎಂಜಲೆಲೆ ತೆಗೆದು ಕಳೆದು ಕೊಂಡನೆಂದು ಹೇಳುತ್ತಾರೆ. ದುರ್ಯೋಧನನ ಮಗಳು ಲಕ್ಷಣೆ ಯನ್ನು ತನ್ನ ಮಗ ಸಾಂಬನಿಗೆ ಕೊಟ್ಟು ಮದುವೆ ಮಾಡಿ ಪಕ್ಷಾತೀತವಾಗಿ ನಡೆದುಕೊಂಡು ತೋರಿಸಿ ಕೊಟ್ಟನು.
ಭಗವದ್ಗೀತೆಯಲ್ಲಿ ಉಪದೇಶಿಸಿದ ಸ್ಥಿತಪ್ರಜ್ಞ ಮಾದರಿಯನ್ನು ಅಕ್ಷರಶಃ ಪಾಲಿಸಿ ತೋರಿಸಿದ ಸ್ವಯಂ ಮಾದರಿ ಕೃಷ್ಣ. ತಾನು ಪ್ರೀತಿಸಿದ ರಾಧೆಯನ್ನು ಸಹ ಜನರು ಪೂಜಿಸುವಂತೆ ಮಾಡಿದ ಕೃಷ್ಣ ಎಲ್ಲರಿಗೂ ಅವರ ಮೌಲ್ಯ ತಿಳಿಸಿ ಕೊಟ್ಟ ಅದ್ವಿತೀಯ ನಮ್ಮ ಕೃಷ್ಣ.
16,108 ಜನ ಪತ್ನಿಯರಿಗೂ ಸಮಾನವಾದ ಗೌರವ ಕೊಟ್ಟ ಕೃಷ್ಣ ರಾಧೆ ಅಗಲಿದಾಗ ಕೊಳಲು ಒಗೆದು ತನ್ನ ಪ್ರೀತಿ ಎಲ್ಲರಿಗೂ ಲಭ್ಯ ಎಂದೂ. ತೋರಿಸಿ ಕೊಟ್ಟ ಕೃಷ್ಣ.
16,108 ಜನ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಇದ್ದರೂ ಎಲ್ಲವನ್ನೂ ಬಿಟ್ಟು ಕಾಡಿನಲ್ಲಿ ಬೇಡನ ಬಾಣಕ್ಕೆ ತನ್ನ ಕೊನೆ ಉಸಿರನ್ನು ಬಿಟ್ಟು ಬರುವಾಗ ಒಬ್ಬರೇ, ಹೋಗುವಾಗ ಒಬ್ಬರೇ ಎಂದು ಕಟು ಸತ್ಯ ಜನರಿಗೆ ಅರ್ಥ ಮಾಡಿಸಿದ ಕೃಷ್ಣ.
ಸುಧಾಮನ ಸ್ನೇಹಕ್ಕೆ ತನ್ನ ರಾಜ್ಯವನ್ನೇ ಕೊಡಲು ತಯಾರಾದ ಕೃಷ್ಣ ಸ್ನೇಹದ ಉತ್ತುಂಗ ಮುಟ್ಟಿ ತೋರಿಸಿದ. ಬನ್ನಿ, ಗೀತಾಚಾರ್ಯನ ಆದರ್ಶಗಳನ್ನು ಪಾಲಿಸಿ ಜೀವನವನ್ನು ಸಾರ್ಥಕಗೊಳಿಸಿ ನಡೆಯೋಣ.
ಹೌದಲ್ವಾ? ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

