ಉಜಿರೆ: “ದೈಹಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ” ಎಂದು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ಹೇಳಿದರು.
ಉಜಿರೆ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು (ಆ.6) ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು. ಅದಕ್ಕಾಗಿ ಉತ್ತಮ ಗೆಳೆಯರ ಬಳಗ ಅಗತ್ಯ. ಸಮಾಜದ ಸ್ವಾಸ್ಥ್ಯವನ್ನು ಯಾರೇ ಹಾಳು ಮಾಡುವ ಪ್ರಯತ್ನ ಮಾಡಿದಾಗ ಅಥವಾ ಅದಕ್ಕೆ ನಾವು ಪ್ರೇರಣೆ ನೀಡಿದಾಗ ಅದು ನಮ್ಮ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು” ಎಂದರು.
ಯಾವುದೇ ಅಹಿತಕರ ಘಟನೆ ಕುರಿತು ಮಾತನಾಡುವ ಮೊದಲು ಹಲವು ಬಾರಿ ಯೋಚಿಸಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ತಿಳಿಯಾದ ನೀರಿನಂತೆ ಇರಬೇಕು. ಸಾಧ್ಯವಾದಷ್ಟು ಓದುವ ಹವ್ಯಾಸ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಬದುಕನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಬದುಕು ನಮಗೆ ಹೆತ್ತವರು ನೀಡಿದ ಕೊಡುಗೆ. ಬದುಕು ಸಾರ್ಥಕವಾಗಬೇಕಾದರೆ ನಾವು ಏನನ್ನಾದರೂ ಸಾಧಿಸಬೇಕು. ಬದುಕು ಸಾರ್ಥಕವಾಗಬೇಕಾದರೆ ನಿರ್ದಿಷ್ಟ ಗುರಿ ಇರಬೇಕು. ಗುರಿ ತಲುಪಲು ಅಚಲವಾದ ಆತ್ಮವಿಶ್ವಾಸ ಅತೀ ಅಗತ್ಯ. ಜಗತ್ತಿನ ಶ್ರೇಷ್ಠ ಸಂಪತ್ತು ನಮ್ಮ ವ್ಯಕ್ತಿತ್ವದಲ್ಲಿ ಅಡಗಿದೆ.
- ಬಿ. ಸೋಮಶೇಖರ ಶೆಟ್ಟಿ
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಶಿಸ್ತು, ಸ್ವಚ್ಛತೆ ಪಾಲನೆ ಮಾಡುವ ಕುರಿತು ಹಾಗೂ ದುಶ್ಚಟಗಳಿಂದ ದೂರ ಇರುವುದಾಗಿ ಪ್ರಮಾಣ ವಚನ ಬೋಧಿಸಿದರು.
ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ