ರಕ್ತದಾನವೇ ಶ್ರೇಷ್ಠದಾನ: ಗೀತಾದೇವಿ ಚೂಂತಾರು

Upayuktha
0


ಮಂಗಳೂರು: ರಕ್ತದಾನದಷ್ಟು ಪವಿತ್ರವಾದ ಮತ್ತು ಶ್ರೇಷ್ಠವಾದ ದಾನ ಇನ್ನೊಂದಿಲ್ಲ. ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ 4 ಜನರ ಜೀವ ಉಳಿಸುವ ಶಕ್ತಿ ಇದೆ. ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ರೋಗಿಯ ಜೀವ ಉಳಿಸಲು ಬೇಕಾದ ರಕ್ತವನ್ನು ದಾನಿಗಳಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಹೆಚ್ಚು ಹೆಚ್ಚು ಯುವ ಜನರು ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ವೃದ್ಧಿಸುತ್ತದೆ ಮತ್ತು ಇನ್ನೊಬ್ಬರ ಜೀವ ಉಳಿಸಿದ ಸಾರ್ಥಕತೆ ದೊರಕುತ್ತದೆ ಎಂದು ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಗೀತಾ ದೇವಿ ಚೂಂತಾರು ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನುಡಿದರು.


ದಿನಾಂಕ 03-08-2025ನೇ ಭಾನುವಾರ ಶ್ರೀ ಭಾರತೀ ಕಾಲೇಜು ನಂತೂರು ಇಲ್ಲಿ ತೇಜಸ್ವಿನಿ ಆಸ್ಪತ್ರೆ ಇದರ ಸಹಕಾರದೊಂದಿಗೆ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ರಿ  ಮಂಗಳೂರು, ಹವ್ಯಕ ಸಭಾ ಮಂಗಳೂರು, ಶ್ರೀ ಭಾರತೀ ಕಾಲೇಜು ನಂತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರುಗಿತು. ಶ್ರೀ ಭಾರತೀ ಕಾಲೇಜು ನಂತೂರು ಮಂಗಳೂರು ಇದರ ಸಂಚಾಲಕರಾದ ಶ್ರೀಕೃಷ್ಣ ನೀರಮೂಲೆ, ಚೂಂತಾರು ಪ್ರತಿಷ್ಟಾನದ ಡಾ. ಮುರಲೀ ಮೋಹನ್ ಚೂಂತಾರು, ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್, ತೇಜಸ್ವಿನಿ ಆಸ್ಪತ್ರೆಯ ಡಾ. ರಶ್ಮಿ, ಪೋಲಿಸ್ ಇಲಾಖೆಯ ಬಾಲಕೃಷ್ಣ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಇನ್ನೋರ್ವ ಅತಿಥಿ ಡಾ. ಕೇಶವ ರಾಜ್ ಮಾತನಾಡಿ ಅವರು ಮಾತನಾಡಿ ರಕ್ತದಾನ ನಿರಂತರವಾಗಿ ನಡೆಯುತ್ತಲೇ ಇರಬೇಕು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ ಮತ್ತು ರೋಗಿಯ ಜೀವ ಕೂಡಾ ಉಳಿಯುತ್ತದೆ. ಈ ಹಿನ್ನಲೆಯಲ್ಲಿ ಎಲ್ಲರೂ ರಕ್ತದಾನಕ್ಕೆ ಮುಂದಾಗಲೇಬೇಕು ಎಂದು ಕರೆ ನೀಡಿದರು. ಶ್ರೀಕೃಷ್ಣ ನೀರಮೂಲೆ ಸ್ವಾಗತಿಸಿದರು. ಡಾ.ಚೂಂತಾರು ವಂದಿಸಿದರು. ಬಾಲಕೃಷ್ಣ ಭಟ್ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಸುಮಾರು 20 ಮಂದಿ ರಕ್ತದಾನ ಮಾಡಿದರು. ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಮತ್ತು ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top