ಅಡಿಕೆ ತೋಟ ಇಬ್ರ ಕೈಲಿ- ಹೈ ಕಮಾಂಡ್ ಮಳೆಯದೇ ತೀರ್ಮಾನ- ರೈತ ಹೈರಾಣ..!

Upayuktha
0


 


ವರದಿಗಾರನು ಬಂದು ಅಡಿಕೆ ತೋಟದಿ ನಿಂದು 

ಹೈಕಮಾಂಡ್ ವರುಣನಿಗೆ ಪ್ರಶ್ನೆಯಿಟ್ಟ/

ತೋಟದಲಿ ನಡೆಯುತಿಹ ಭಿನ್ನಮತ ಯುದ್ಧಕ್ಕೆ 

ಈ ಬಾರಿಯಾದರೂ ಉತ್ರವುಂಟಾ?//1//


ಭಿನ್ನಮತ ವಾರ್ತೆಯೇ? ಒಳಜಗಳವೇನಿಲ್ಲ

ಕಟ್ಟುಕತೆ ನಂಬದಿರಿ ಸುದ್ಧಿಗಳನು/

ಹೊಟ್ಟೆಯುರಿ ತಾಳದೆಯೆ ಎದುರಾಳಿ ರೋಗಗಳು

ಸರಮಾಲೆ ಮಾಡುವರು ಸುಳ್ಳುಗಳನು//2//


ಅಷ್ಟಕ್ಕು ಏನುಂಟು ಸುದ್ಧಿಗಳ ಒಳಸಾರ

ಬಿನ್ನಮತ ಕಾರಣವ? ತಿಳಿಸಿಯದನು/

ಸದ್ದದನು ಅಡಗಿಸುತ, ಒಟ್ಟಾಗಿ ನೆಡೆವಂತೆ

ತಿಳಿಸಿ ಸರಿಪಡಿಸಲೀಗ ಬಂದಿರುವೆನು//3//


ಹಿಂದಾದ ಒಪ್ಪಂದ ಮೂರ್ವರ್ಷ ಅಧಿಕಾರ

ಮೊದಲಿಲ್ಲಿ ಎಲೆಚುಕ್ಕಿ ಮುನ್ನೆಡೆಯಲಿ/

ಮಾತುಕತೆ ನೆಡೆದಿತ್ತು ಕೊಳೆರೋಗ ಒಪ್ಪಿತ್ತು 

ತೋಟಸಭೆ ನೆಡೆದಾಗ ಸನ್ನಿಧಿಯಲಿ//4//


ಮೂರ್ವರ್ಷ ಆಧಿಕಾರ ಮುಗಿದಾಯ್ತು ಆಗಸ್ಟ್‌ಗೆ

ಎಲೆಚುಕ್ಕಿ ಮರದಿಂದ ಇಳಿಯೊದಿಲ್ವಾ?/

ಕೊಳೆರೋಗ ಕೈಗಳಿಗೆ ಅಧಿಕಾರ ಧಾಟಿಸಲು

ಎಲೆಚುಕ್ಕಿ ಫಂಗಸ್‌ಗೆ ಮನಸೆ ಇಲ್ವಾ?//5//


ಈ ಸುದ್ಧಿ ಹರಡಿಹುದು ತೋಟದಾ ತುಂಬೆಲ್ಲ

ಏಪ್ರಿಲ್ಲು ತಿಂಗ್ಳಿಂದ ತೋಟದೊಳಗೆ/

ಇದಕೇನು ಔಷಧವು ಹುಡುಕಾಟ ನೆಡೆದಿಹುದು

ಸಿಗುತಿಲ್ಲ ಪರಿಹಾರ ಚಿಂತೆಯೊಳಗೆ//6//


ಕೊಳೆರೋಗ ಮೌನದಲಿ ಅಧಿಕಾರದಾಸೆಯಲಿ

ಅಡಿಕೆಮರ ತೋಟದೆಡೆ ಬರುತಿರುವನು/

ಅಲ್ಲಲ್ಲಿ ಬೆಂಬಲಿಗರನ್ನೆಲ್ಲ ಮುಂದಿಟ್ಟು

ಪ್ರತಿದಿನವು ಹೊಸದಾಳ ಉರುಳಿಸಿಹನು//7//


ಈ ಸುದ್ದಿ ಕಿವಿಯಾರೆ ಕೇಳಿದಾ ಎಲೆಚುಕ್ಕಿ

ವರಸೆಯನು ಬದಲಿಸುತ ನುಡಿಯಿತಂತೆ/

ಮೂರಲ್ಲ ಇನ್ನಾರು ವರ್ಷಗಳೆ ನಾನಿರುವೆ

ಎನ್ನುತ್ತ ವರದಿಗಗೆ ಟಗರಿನಂತೆ//8//


ಆಲಿಸುತ ಮಳೆರಾಯ ತೀರ್ಮಾನ ಹೇಳಿದನು

ಇಬ್ಬರಿಗು ಅಧಿಕಾರ ನೆಡೆಸಿರೆಂದು/

ಹಸ್ತಲಾಘವ ಮಾಡಿ ಎಲೆಚುಕ್ಕಿ, ಕೊಳೆರೋಗ 

ಒಪ್ಪಿದರು ಈ ಮಾತು ಒಟ್ಟಿಗಿಂದು//9//


ಆರು ತಿಂಗಳ ಕಾಲ ಮಳೆರಾಯ ಇಲ್ಲಿದ್ದು 

ಬೆಳವಣಿಗೆ ನೋಡುವನು ಗಮನಿಸುತಲಿ/

ಕೊಳೆರೋಗ ಎಲೆಚುಕ್ಕಿ ಅಧಿಕಾರ ನೆಡೆಸುವರು

ಮಲೆನಾಡ ತೋಟವನು ಒಮ್ಮತದಲಿ//10//


ತೋಟದಲಿ ಈ ವರ್ಷ ಇಬ್ಬರದು ಅಧಿಕಾರ

ಮಲೆನಾಡ ಅಡಿಕೆಗೇ ಬದುಕೆ ಇಲ್ವಾ?/

ಅಡಿಕೆಯನು ನಂಬಿರುವ ಮಲೆನಾಡ ಜನಗಳಿಗೆ

ಮಂದೇನು ಎಂಬುದೇ ಚಿಂತೆಯಲ್ವಾ?//11//


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top