"ಗಮಕ ಶ್ರಾವಣ"ದ ಸರಣಿ ಕಾರ್ಯಕ್ರಮಗಳ ಉದ್ಘಾಟನೆ
ಎಡನೀರು: "ಕಲೆ ಮತ್ತು ಸಾಹಿತ್ಯಗಳು ಭಾರತೀಯ ಸಂಸ್ಕೃತಿಯ ಜೀವಾಳ. ಅವುಗಳಲ್ಲಿ ಗಮಕ ಕಲೆಗೆ ಪ್ರತ್ಯೇಕ ಮಹತ್ವವಿದೆ. ಅದರಲ್ಲಿ ಕಾವ್ಯವಿದೆ, ಸಂಗೀತವಿದೆ, ಮಾಧುರ್ಯವಿದೆ, ಕಥೆ, ಇತಿಹಾಸ ಎಲ್ಲವೂ ಇದೆ. ಪ್ರಾಚೀನ ಗಮಕ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.
ಅವರು ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶ್ರೀ ಮಠದಲ್ಲಿ ಹಮ್ಮಿಕೊಂಡ "ಗಮಕ ಶ್ರಾವಣ"ದ ಸರಣಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನವಿತ್ತರು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶಿಕ್ಷಣತಜ್ಞ ಶ್ರೀ ವಿ.ಬಿ. ಕುಳಮರ್ವ ಅವರು ಅಧ್ಯಕ್ಷತೆ ವಹಿಸಿ "ಗಮಕ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿ ಯವಕರಲ್ಲಿ ಆ ಬಗ್ಗೆ ಆಸಕ್ತಿ ಹುಟ್ಟುವಂತೆ ಹಿರಿಯರು ಪ್ರಯತ್ನಿಸ ಬೇಕು" ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಂಶುಪಾಲ ಶ್ರೀ ರಾಜೇಂದ್ರ ಕಲ್ಲೂರಾಯ ಅವರು "ಗಮಕ ಕಲೆ ಅಚ್ಚ ಕನ್ನಡದ ಕಲೆ. ಅದನ್ನು ಉತ್ತುಂಗಕ್ಕೊಯ್ಯುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಹೌದು" ಎಂದರು.
ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದ ಆಯ್ದಭಾಗದ ವಾಚನ- ವ್ಯಾಖ್ಯಾನಗಳನ್ನು ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಹಾಗೂ ಶ್ರೀ ಶ್ರೀಕರ ಭಟ್ ಮುಂಡಾಜೆ ನೆರವೇರಿಸಿದರು.
ಶ್ರೀಮತಿ ಯಶೋದಾ ಭಟ್ ಉಪ್ಪಂಗಳ ಗಮಕ ಪ್ರಾರ್ಥನೆ ಮಾಡಿದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀ ವೇಣುಗೋಪಾಲ ಎಡನೀರು ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಶ್ರೀ ಹರೀಶ ಮಾಸ್ಟರ್ ಧನ್ಯವಾದವಿತ್ತರು. ನಿವೃತ್ತ ಶಿಕ್ಷಕ ಶ್ರೀ ಸೂರ್ಯನಾರಾಯಣ ಭಟ್ ನಿರ್ವಹಣೆಗೈದರು. ಖ್ಯಾತ ವ್ಯಂಗ್ಯಚಿತ್ರಕಾರ ಶ್ರೀ ವೆಂಕಟ ಭಟ್ ಎಡನೀರು ಅವರ ಸಹಕಾರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ