ವಿರಾಟ್ ನಿಷ್ಠೆಯ ಕೊಹ್ಲಿ: 'ಈ ಬಾರಿ ಕಪ್ ನಮ್ದೇ' ಘೋಷಣೆಯನ್ನು ನಿಜವಾಗಿಸಿದ ಕ್ರೆಡಿಟ್ ನಿಮ್ದೇ ಕೊಹ್ಲಿ

Upayuktha
0


2025 ಜೂನ್ 3 ನೇ ತಾರೀಕು ರಾತ್ರಿ 11ಘಂಟೆ 20 ನಿಮಿಷ. ಐಪಿಎಲ್ 2025 ರ ಪಂದ್ಯಾವಳಿಯ ಕೊನೆಯ ಪಂದ್ಯದ ಕೊನೆಯ ಓವರ್ ಮಾಡಲು ಮಾತ್ರ ಬಾಕಿ. ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಅಂತಿಮ ಕಾದಾಟದ ಕೊನೆಯ ಆರು ಎಸೆತಗಳನ್ನು ಎಸೆಯಲು ಆರ್.ಸಿ.ಬಿ ಕಡೆಯಿಂದ ಜೋಶ ಹಾಝಲ್‌ವುಡ್ ತಯಾರು. ಎದುರಿಗೆ ಪಂಜಾಬ್‌ನ ಶಶಾಂಕ್ ಸಿಂಗ್. 6 ಎಸೆತಗಳಲ್ಲಿ 29 ರನ್ ಬೇಕು ಪಂಜಾಬ್ ತಂಡಕ್ಕೆ ಐಪಿಎಲ್ 2025 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು. ಶಶಾಂಕ್ ಹೊಡಬಡಿಯ ಆಟಗಾರ. ಉತ್ತಮ ದೇಹದಾರ್ಢ್ಯ ಒಮ್ಮೆ ಬೀಸಿದರೆ ಬ್ಯಾಟಿಗೆ ಚೆಂಡು ತಾಗಿದರೆ ಬೌಂಡರಿ ಲೈನಿಂದ ಆಚೆಗೆ ಸಿಕ್ಸರ್ ಗ್ಯಾರಂಟೀ. ಆದರೆ ಆರು ಎಸೆತಗಳಲ್ಲಿ ಐದು ಎಸೆತಗಳನ್ನು ಹೀಗೆ ಕುಟ್ಟಬಲ್ಲನೇ ಶಶಾಂಕ್?


ಹೀಗೆ ಯೋಚಿಸುತ್ತ ಚೆಂಡನ್ನು ತಡೆಯಲು ಸಿದ್ದನಾಗಿ ನಿಂತವನು ಎಸ್. ವಿರಾಟ್ ಕೊಹ್ಲಿ. ಅಂತಾರಾಷ್ಟ್ರೀಯ ಕ್ರಿಕೆಟಿನ ದಂತಕಥೆ. ಕೊಹ್ಲಿಗೆ ಈಗ 36 ವರ್ಷ. ಒಬ್ಬ ದಾಂಡಿಗನಾಗಿ ಕಪ್ತಾನನಾಗಿ ಎತ್ತರದ ಹೆಸರು ಮಾಡಿದವನು. ಒಬ್ಬ ತಂಡದ ಸದಸ್ಯನಾಗಿ ತನ್ನ ಜೊತೆ ಆಟಗಾರರ ಮನೋ ಸ್ಥೈರ್ಯವನ್ನು ತನ್ನ ಆಕ್ರಮಣಕಾರಿ ನಿಲುವು ನಡವಳಿಕೆಗಳಿಂದ ಕಿಚ್ಚೆಬ್ಬಿಸುತ್ತ ಆಡಿದವನು. ದಾಂಡಿಗನಾಗಿ, ಕ್ಷೇತ್ರಪಾಲಕನಾಗಿ, ಮತ್ತು ಅಪರೂಪಕ್ಕೊಮ್ಮೆ ಎಂಬಂತೆ ಚೆಂಡೆಸೆತದ ಬೌಲರ್ ಆಗಿಯೂ ತನ್ನ ಸಾಮರ್ಥ್ಯವನ್ನೂ, ಕೌಶಲ್ಯವನ್ನೂ ಜಗತ್ತಿಗೆ ತೋರಿಸುತ್ತಿರುವವನು. ಈಗಾಗಲೇ ಕ್ರಿಕೆಟ್‌ನ ಅತ್ಯುನ್ನತ ಪ್ರಶಸ್ತಿಗಳಾದ ಏಕದಿನ ವಿಶ್ವಕಪ್, ಟಿ-ಟ್ವೆಂಟಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮುಂತಾದ ಪ್ರಶಸ್ತಿಗಳನ್ನು ಗೆದ್ದ ಭಾರತೀಯ ತಂಡದ ಪ್ರಮುಖ ಸದಸ್ಯನಾಗಿದ್ದವನು. ಆಟದ ಮೈದಾನದಲ್ಲಿ ಎಗ್ಗಿಲ್ಲದೆ ತನ್ನ ಎದುರಾಳಿಗಳಿಗೆ ಸೋಲುಣಿಸಿದವನು.


ತನ್ನ ಆಟದಿಂದ ದೇಶಕ್ಕೆ ದೊರಕಿಸಿಕೊಟ್ಟಿರುವ ಗೆಲುವುಗಳಿಂದ ಕೋಟ್ಯಂತರ ಅಭಿಮಾನಿಗಳನ್ನಾತ ಹೊಂದಿದ್ದಾನೆ. ಸಂಸಾರದಲ್ಲಿಯೂ ಸುಖಿ. ಹಣಕ್ಕೇನೂ ಕೊರತೆಯಿಲ್ಲದ ಕೋಟ್ಯಾಧೀಶ್ವರ. ಆದರೂ ನಿತ್ಯವೂ ಕಸರತ್ತು ಮಾಡುತ್ತ ತನ್ನ ದೇಹವನ್ನು ಹುರಿಗೊಳಿಸಿ 20 ರ ತರುಣರನ್ನೂ ನಾಚಿಸುವಷ್ಟು ದೈಹಿಕ ಸಾಮರ್ಥ್ಯ ಉಳ್ಳವನು. ಬ್ಯಾಟಿಂಗಿಗೆ ನಿಂತರೆ ಬೌಲರ್ ಗಳಿಗೆ ಮಾತ್ರವಲ್ಲ, ಜೊತೆಗಾರ ದಾಂಡಿಗರಿಗೂ ನಡುಕ. ಯಾಕೆಂದರೆ ಅವನು ಸದಾ ಓಡಲು ಸಿದ್ಧನಿರಬೇಕು. ವಿಕೆಟುಗಳ ನಡುವೆ ಓಡಿ ರನ್ ಕದಿಯಲು. ಯಾಕೆಂದರೆ ಕೊಹ್ಲಿ ವಿಕೆಟುಗಳ ನಡುವೆ ಹಾಗೆ ಓಡುತ್ತಾನೆ. ಒಂದು ರನ್ ಬರುವಲ್ಲಿ ಅವನು ಎರಡು ರನ್ ಗಳಿಸುತ್ತಾನೆ ಮತ್ತು ಯಾವುದೇ ಆಯಾಸವಿಲ್ಲದೆ ಮತ್ತೆ ಬ್ಯಾಟ್ ಮಾಡುತ್ತಾನೆ. ಅವನು 50 ಕ್ಕಿಂತ ಹೆಚ್ಚು ರನ್ ಮಾಡಿದಾನೆ ಅಂದರೆ ಅವನ ತಂಡ ಚುಟುಕು ಕ್ರಿಕೆಟ್ ನಲ್ಲಿ ಗೆಲ್ಲುವುದು ಗ್ಯಾರಂಟಿ ಎಂಬುದು ಪ್ರತೀತಿ. ಚುಟುಕು ಕ್ರಿಕೆಟ್‌ನಲ್ಲಿ ಆಡುವುದು ಕೇವಲ 20 ಓವರ್ ಗಳಾದರೂ ಅದರಲ್ಲಿಯೂ ತನ್ನ ಆಟದ ಇನ್ನಿಂಗ್ಸ್ ಅನ್ನು ಕಟ್ಟಬಲ್ಲ ಚಾಣಾಕ್ಷ. ಪ್ರತಿ ಬಾಲಿಗೂ ಅವನಲ್ಲಿ ಆಕರ್ಷಕ ಹೊಡೆತಗಳಿವೆ. ಅವನ ಆಟವನ್ನು ನೋಡಲೆಂದೇ ಅವನ ಅಭಿಮಾನಿಗಳು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಬರುತ್ತಾರೆ. ಇನ್ನು ಕೊಹ್ಲಿ ಕ್ಷೇತ್ರ ರಕ್ಷಣೆಗೆ ನಿಂತನೆಂದರೆ ಅವನನ್ನು ಹಿಂದೆ ಹಾಕಿ ಚೆಂಡು ಹೋದ ಸಂದರ್ಭಗಳನ್ನು ಯಾರೂ ಕಂಡಿರಲಿಕ್ಕಿಲ್ಲ. ತಾನು ನಿಂತಿದ್ದ ಸ್ಥಾನದಿಂದ 30 ಮೀಟರ್ ಹಿಂದೆ ಮುಂದೆ, ಎಡ ಬಲ ಯಾವುದೇ ಚೆಂಡು ಸುಳಿಯುವಂತಿಲ್ಲ. ಅಂತಹ  ಅಮೋಘ ಕ್ಷೇತ್ರ ರಕ್ಷಕ. ತನ್ನ ತಂಡದ ಯಾರೇ ಒಬ್ಬರು ಏನೇ ಸಾಧನೆ ಮಾಡಲಿ ಅದಕ್ಕಾಗಿ ಕುಣಿದು ಕುಪ್ಪಳಿಸುವ ಉತ್ಸಾಹಿ ಆಟಗಾರ. ಜಗತ್ತಿನ ಕ್ರಿಕೆಟಿನ ದಂತಕಥೆ ಎಂಬ ಹಮ್ಮು ಅವನನ್ನು ಕಾಡಿಯೇ ಇಲ್ಲ.


ಹೀಗಿಪ್ಪ ವಿರಾಟ್ ಕೊಹ್ಲಿ 3 ರ ರಾತ್ರಿ ಅಹ್ಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ರಾತ್ರಿ ಹನ್ನೊಂದು ಇಪ್ಪತ್ತಕ್ಕೆ  ತನ್ನ ತಂಡದ  ಹ್ಯಾಝೆಲ್ ವುಡ್ ಕೊನೆಯ ಆರು ಎಸೆತಗಳನ್ನು ಎಸೆಯಲು ಸಿದ್ಧನಾದಾಗ ದಾಂಡಿಗ ಶಶಾಂಕ್ ಸಿಂಗ್ ನಿಂದ 60 ಮೀಟರ್ ದೂರದಲ್ಲಿ ಡೀಪ್ ಮಿಡ್ ವಿಕೆಟ್ ನಲ್ಲಿ ತನ್ನ ಜೀವನದ ಕೊನೆಯ ಆಟವೇನೋ ಎಂಬಷ್ಟರ  ಮಟ್ಟಿಗೆ ಗಂಭೀರನಾಗಿ ಕ್ಷೇತ್ರರಕ್ಷಣೆಗೆ ನಿಂತಿದ್ದ. ಆ ಕ್ಷಣದಲ್ಲಿ ಅವನಿಗೆ ಇಡೀ ಅಟದ ಮೈದಾನದಲ್ಲಿ ಬೇರೆ ಯಾರೂ  ಕಾಣುತ್ತಿರಲಿಲ್ಲ. ಶಶಾಂಕ್ ಸಿಂಗ್ ಐದು ಸಿಕ್ಸರ್ ಹೊಡೆಯಬಾರದು. ಆರು ಚೆಂಡುಗಳಲ್ಲಿ ಐದನ್ನು ಬೌಂಡರಿಯಾಚೆಗೆ ಅಟ್ಟುವುದು ಕನಸಿನ ಮಾತು ಎಂದು ಕೊಹಿಲಿಗೂ ಗೊತ್ತು. ಆದರೂ ತನ್ನ ದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ಇಂತಹ ಕನಸುಗಳನ್ನು ಹಲವು ಬಾರಿ ತಾನೇ ನನಸು ಮಾಡಿಲ್ಲವೇ?

  

ಮೊದಲನೇ ಚೆಂಡನ್ನೇ ಬೀಸಿ ಬಾರಿಸುವ ಶಶಾಂಕ್ ಸಿಕ್ಸರ್ ಗಿಟ್ಟಿಸಿಕೊಳ್ಳುತ್ತಾನೆ. ಎರಡನೇ ಚೆಂಡು ಮಿಡ್ ವಿಕೆಟ್ ಕಡೆಗೆ. ಕೊಹ್ಲಿಯಿಂದ 30 ಮೀಟರ್ ದೂರ. ಚಿರತೆಯಂತೆ ಓಡುವ ಕೊಹ್ಲಿ ಚೆಂಡು ಬೌಂಡರಿ ಗೆರೆ ದಾಟುವ ಮೊದಲೇ ನಿಲ್ಲಿಸುತ್ತಾನೆ. ಇನ್ನಿರುವ ನಾಲ್ಕೂ ಚೆಂಡುಗಳನ್ನು ಸಿಕ್ಸರ್ ಮಾಡಿದರಷ್ಟೇ ಅವಕಾಶ. ಮೂರನೇ ಬಾರಿಗೆ ಚೆಂಡು ಗೆರೆಯನ್ನೇನೋ ದಾಟುತ್ತದೆ ಆದರೆ ನೆಲದ ಮೇಲೆ ಜಾರಿಕೊಂಡು. ಇದು ಸಿಕ್ಸ್ ಅಲ್ಲ. ನಾಲ್ಕು. ಅಲ್ಲಿಗೆ ಆರ್.ಸಿ.ಬಿ ಗೆಲುವು ಖಾತ್ರಿಯಾಗುತ್ತದೆ.


ಆದರೂ ಇನ್ನೂ ಮೂರು ಚೆಂಡು ಎಸೆಯಲು ಬಾಕಿ ಇದ್ದರೂ ಮೈದಾನದಲ್ಲಿ ಆಟವನ್ನು ಚಿತ್ರೀಕರಿಸುತ್ತಿದ್ದ ಎಲ್ಲ ಕಾಮೆರಾಗಳೂ ಡೀಪ್ ಮಿಡ್ ವಿಕೆಟ್ ಕಡೆಗೆ ತಿರುಗುತ್ತವೆ. ಕೊಹ್ಲಿಯ ಮುಖದ ಮೇಲೆ.



ಕೊಹಿಲಿ  ಕಣ್ಣುಗಳಲ್ಲಿ ಕಣ್ಣೇರಿನ ಕೊಳ. ಕಣ್ಣಾಲಿಯ ಸುತ್ತಲೂ ತಡೆದಷ್ಟೂ ಧಾರಾಕಾರವಾಗಿ ಕಣ್ಣೀರಿನ ಸುರಿಮಳೆ. ಇನ್ನುಳಿದಿರುವ ಮೂರು  ಎಸೆತಗಳ ಕ್ಷೇತ್ರ ರಕ್ಷಣೆ ಮಾಡಲು ಸಾಧ್ಯವಾಗದಂತೆ. ಶಶಾಂಕ್ ಮುಂದಿನ ಚೆಂಡನ್ನೂ ಬೌಂಡರಿಯಾಚೆಗೆ ಅಟ್ಟುತ್ತಾನೆ. ನಂತರದ ಚೆಂಡು ಮಾತ್ರ ಸಾಗದೆ  ನಿಂತರೂ  ಕೊನೆಯ ಚೆಂಡನ್ನು ಮತ್ತೆ ಬೌಂಡರಿಯಾಚೆಗೆ ಅಟ್ಟಿ ಬಾಲನ್ನು ದೃಷ್ಟಿಸುವ ಕಷ್ಟವನ್ನು ಕೊಹ್ಲಿಯಿಂದ ತಪ್ಪಿಸುತ್ತಾನೆ ಶಶಾಂಕ್. ಪಂಜಾಬ್ ತಂಡ ಆರು ರನ್ನುಗಳಿಂದ ಸೋತು 2025 ರ ಐಪಿಎಲ್ ಪಟ್ಟವನ್ನು ಆರ್.ಸಿ.ಬಿಗೆ ಒಪ್ಪಿಸುತ್ತದೆ.


ಇಲ್ಲಿ ಮಿಡ್ ವಿಕೆಟ್‌ನಲ್ಲಿ ಕೊಹ್ಲಿ ಧರಾಶಾಯಿಯಾಗಿ ಭೂಮಿಗೆ ಮುಖ ಕೊಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.


ಅವನ ಹದಿನೆಂಟು ವರುಷಗಳ ಕನಸು. ತನ್ನ ಕೋಟ್ಯಂತರ ಆರ್.ಸಿ.ಬಿ ಅಭಿಮಾನಿಗಳಿಗೆ ಐಪಿಎಲ್ ಟ್ರೋಫಿಯನ್ನು ಗೆದ್ಫು ಕೊಡುವ ಸಂಕಲ್ಪ ಸಾಕಾರವಾದ ಘಳಿಗೆಯಲ್ಲಿ ಜಗತ್ತಿನ ಕ್ರಿಕೆಟ್ ದೊರೆ ಮಗುವಿನಂತೆ ಬಿಕ್ಕುತ್ತಿದ್ದಾನೆ.


ಜಗತ್ತಿನ ಐಪಿಎಲ್ ಇತಿಹಾಸದಲ್ಲಿ ಯಾವುದೇ ಒಬ್ಬ ಆಟಗಾರ ಪಂದ್ಯಾವಳಿ ಪ್ರಾರಂಭವಾದಂದಿನಿಂದ ಒಂದೇ ತಂಡದಲ್ಲಿ ಆಡಲಿಲ್ಲ. ಕೊಹ್ಲಿಯನ್ನು ಬಿಟ್ಟು. ವಿಕೆಟ್ ಕೀಪರ್ ಮಾಂತ್ರಿಕ "ತಾಲಾ" ಎಂದು ತಮಿಳರಿಂದ ಪೂಜಿಸಲ್ಪಡುವ ಎಂ.ಎಸ್ ದೋಣಿಯೂ ಹದಿನೆಂಟು ವರ್ಷ ಒಂದೇ ತಂಡದಲ್ಲಿ ಆಡಲಿಲ್ಲ. ಅವನ ಸಿಎಸ್‌ಕೆ ತಂಡ 2017 ಮತ್ತು 2018 ರಲ್ಲಿ ಐಪಿಎಲ್ ಪಂದ್ಯಾವಳಿಯಿಂದಲೇ ಹೊರಗುಳಿಯಬೇಕಾಗಿತ್ತು. ಆರೋಪ ಹೊತ್ತು. 


2007 ರಲ್ಲಿ ಪ್ರಾರಂಭಗೊಂಡ ಐಪಿಎಲ್ ಪ್ರಥಮ ಪಂದ್ಯಾವಳಿಯಿಂದಲೂ ಕೊಹ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಿಷ್ಠಾವಂತ ಆಟಗಾರನಾಗಿ ಉಳಿದ. ಬೆಂಗಳೂರನ್ನು ತನ್ನ ಮನೆ ಮಾಡಿಕೊಂಡ. ಬೆಂಗಳೂರಿನವರೇ ಆದ ತನ್ನ ಜೊತೆಗಾರರು ಇತರ ತಂಡಗಳನ್ನು ಅರಸಿಕೊಂಡು ಹೋದರೂ 18 ವರ್ಷಗಳ ಕಾಲ ತನ್ನ ಆರ್ ಸಿ ಬಿ ನಿಷ್ಠೆಯನ್ನು ಅವನು ಬದಲಿಸಲಿಲ್ಲ. ತಮಾಷೆ ಎಂದರೆ ಈ ಅವಧಿಯಲ್ಲಿ ಆರ್ ಸಿ ಬಿ ತಂಡದ  ಮಾಲಕರೇ ಎರಡು ಬಾರಿ ಬದಲಾದರು. ಆದರೆ ಕೊಹ್ಲಿ ಮಾತ್ರ ತಂಡ ಬಿಡಲಿಲ್ಲ. ಬೆಂಗಳೂರಿನ ಕ್ರಿಕೆಟ್ ಪ್ರಿಯರು ಕೊಹ್ಲಿಯ ಈ ನಿಷ್ಠೆಯನ್ನು ಎಷ್ಟು ಹಚ್ಚಿಕೊಂಡರೆಂದರೆ ಪ್ರತಿ ವರುಷವೂ ಅವರು ಕೊಹ್ಲಿಗಾಗಿ ಆರ್ ಸಿ ಬಿ, ಐಪಿಎಲ್ ಗೆಲ್ಲಬೇಕೆಂದು ಹಾರೈಸುತ್ತಿದ್ದರು, ಪ್ರಾರ್ಥನೆ ಮಾಡುತ್ತಿದ್ದರು ಮತ್ತು  ಕ್ರೀಡಾ ಮೈದಾನಕ್ಕೆ ಬಂದು ಅವರು ಕೊಹ್ಲಿಯನ್ನು ಉತ್ತೇಜಿಸುತ್ತಿದ್ದರು.


ಪ್ರತಿ ವರುಷ ಕೊಹಿಲಿ ಪ್ರಯತ್ನ ಮಾಡುತ್ತಿದ್ದ. ತಂಡದ ಪ್ರಮುಖ ಆಟಗಾರನಾಗಿ ಐಪಿಎಲ್ ಪಂದ್ಯ ಶ್ರೇಣಿಯಲ್ಲಿ ನಾಲ್ಕು ವರುಷ ಅತಿ ಹೆಚ್ಚು ರನ್ ಗಳಿಸಿ ಕಿತ್ತಳೆ ಟೋಪಿಯನ್ನು ಶಿರದಲ್ಲಿ ಧರಿಸಿದ. ತನ್ನೊಡನೆ ದಿಗ್ಗಜ ಆಟಗಾರ ರಾದ ರಾಹುಲ್ ದ್ರಾವಿಡ್, ಕ್ರೈಸ್ ಗೇಲ್, ಎ ಬಿ ಡೆವಿಲಿರ್ಸ್, ಅನಿಲ್ ಕುಂಬ್ಳೆ ಮುಂತಾದವರಿಗೆ ಸಾಥ್ ನೀಡಿದ. ಪ್ರಶಸ್ತಿ ಮಾತ್ರ ಕನಸಾಗಿಯೇ ಉಳಿದಿತ್ತು. 


2025. ಕೊಹ್ಲಿ ಜಗತ್ತಿನ ಎಲ್ಲ ಕ್ರಿಕೆಟ್ ಮೈದಾನಗಳಲ್ಲಿ ತನ್ನ ಪ್ರೌಢಿಮೆ ತೋರಿಸಿದ್ದ. ಆದರೆ ಇತರ ಎಲ್ಲ ಆಟಗಾರರೂ ಬಿಟ್ಟು ಹೋದ, ಆದರೆ ಅಭಿಮಾನಿಗಳನ್ನು ಮಾತ್ರ ಹೊಂದಿದ್ದ ರಾಯಲ್ ಚಾಲೆಂಜರ್ ಬೆಂಗಳೂರಿಗೆ ನ್ಯಾಯ ಒದಗಿಸುವುದು ಮಾತ್ರ ಸಾಧ್ಯವಾಗಿರಲಿಲ್ಲ. ಕೊಹಿಲಿಯ ಜರ್ಸಿ  ನಂಬರ್ 18. ಇಸವಿ 2025, ಐಪಿಎಲ್ ಇತಿಹಾಸದ 18 ನೇ ವರ್ಷ. ಕೊಹ್ಲಿ ಮತ್ತೊಮ್ಮೆ ಕಣಕ್ಕಿಳಿದ. ತನ್ನ ತಂಡದ ಅತಿ ಹೆಚ್ಚು ರನ್ ಗಳಿಸಿದ. 36 ವರ್ಷ ವಯಸ್ಸಿನಲ್ಲಿಯೂ ಆಡಿದ 16ಪಂದ್ಯಗಳಲ್ಲಿಯೂ (ಒಂದು ಮಳೆ ಬಂದು ರದ್ದಾಯಿತು) ಒಮ್ಮೆಯೂ ಮೈದಾನವನ್ನು ಅರೆಕ್ಷಣಕ್ಕೂ  ಬಿಟ್ಟಗಲಲಿಲ್ಲ.


ಕೊನೆಗೂ ಜಯಲಕ್ಷ್ಮಿ ಆರ್.ಸಿ.ಬಿ ತಂಡಕ್ಕೆ ಮಾಲೆ ಹಾಕಿದಳು. ಈ ಮಾಲೆ ಐಪಿಎಲ್ ಪಂದ್ಯಾವಳಿ ಪ್ರಾರಂಭದಿಂದ ಇಂದಿನವರೆಗೂ ಒಂದೇ ತಂಡಕ್ಕೆ ಅಂಟಿಕೊಂಡು ಆಡಿದ ಕೊಹ್ಲಿಗೆ ಹಾಕಿದ ಜಯ ಮಾಲೆಯಾಗಿತ್ತು.


ಎಷ್ಟು ಟ್ರೋಫಿಗಳನ್ನು ಗೆದ್ದಿದ್ದರೂ ಎಷ್ಟು ಹೆಸರು ಗಳಿಸಿದರೂ, ತನ್ನನ್ನು ಪ್ರೀತಿಸಿದ ಅಭಿಮಾನಿಗಳಿಗಾಗಿ ಕೊಹ್ಲಿ ತ್ರಿಕರಣಪೂರ್ವಕವಾಗಿ ದುಡಿದ. ಅವನ ಪಾಲಿಗೆ ಆರ್ ಸಿ ಬಿ ಎಂದರೆ ಸಹ ಆಟಗಾರರು ಮಾತ್ರ ಆಗಿರಲಿಲ್ಲ. ಏಕೆಂದರೆ ಎಲ್ಲ ಸಹ ಆಟಗಾರರು ತಂಡ ಬದಲಿಸಿದ್ದರು. ಈಗಿರುವವರು  ಬೇರೆ ತಂಡಗಳಿಂದ ಬಂದವರಾಗಿದ್ದರು. ಅವನಿಗೆ ಆರ್.ಸಿ.ಬಿ ಎಂದರೆ ಪ್ರತಿವರ್ಷ "ಈ ವರ್ಷ ಕಪ್ ನಮ್ದೇ" ಎಂದು ಘೋಷಿಸುವ ಅಭಿಮಾನಿಗಳ  ಬಳಗವಾಗಿತ್ತು. ಯಾರು ಎಲ್ಲೇ ಹೋದರೂ ಆರ್.ಸಿ.ಬಿ ಅಭಿಮಾನಿಗಳು ಮಾತ್ರ ನಿಷ್ಠೆ ಬದಲಿಸಿರಲಿಲ್ಲ. ಅವರ ಮುಖವಾಣಿಯಾಗಿದ್ದ ಕೊಹಿಲಿಯೂ ನಿಷ್ಠೆ ಬದಲಿಸಲಿಲ್ಲ. ಆದ್ದರಿಂದಲೇ ಪಂದ್ಯ ಗೆದ್ದಾಗ ಅದು ಕೊಹಿಲಿಯ ವಿಜಯವಾಗಿತ್ತು.


ಕೊಹಿಲಿ ಎಂಬ ಕ್ರಿಕೆಟ್ ಆಟಗಾರ ತನ್ನ ನಿಷ್ಠೆಯಿಂದ ಮತ್ತೊಮ್ಮೆ ದಂತ ಕಥೆಯಾದ. ಇತರರಿಗೆ ಮಾದರಿ ಯಾದ. ಜೂನ್ 3, 2025 ರ ರಾತ್ರಿ ದೇಶದಲ್ಲಿ ಕೊಹ್ಲಿಯ ದಿನವಾಗಿತ್ತು ಮತ್ತು ನಿಷ್ಠೆಗೆ ಅದ್ಭುತ ಉದಾಹರಣೆಯಾಗಿ ಇತಿಹಾಸದ ಪುಟಗಳಲ್ಲಿ ಸೇರಿಹೋಯಿತು.




- ಡಾ ಎಲ್ ಎಚ್ ಮಂಜುನಾಥ್, 

lh.manjunath@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top