ವಿಶ್ವ ಪರಿಸರ ದಿನದ ಶುಭಾಶಯಗಳು...
ಮೊನ್ನೆ ಕೊಡಚಾದ್ರಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಹಸಿರು ಹುಲ್ಲು ಹೊದ್ದ ಸುಂದರವಾದ ಪರ್ವತ ಶ್ರೇಣಿ ನೋಡಿದಾಗ ನನಗೆ 1982 ರ ಕಾಲದಲ್ಲಿ ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿದ್ದ ನಮ್ಮ ಅಂಬುತೀರ್ಥದ ಪರ್ವತ ಶ್ರೇಣಿ ಜ್ಞಾಪಕವಾಯಿತು.
ನನ್ನ ತಂದೆಯವರು ಹೇಳುವಂತೆ ಅಂಬುತೀರ್ಥದ ಈ ಹಸಿರು ಹುಲ್ಲಿನ ಗುಡ್ಡದಿಂದ ಕರಡ ಯಾನೆ ಹುಲ್ಲನ್ನು ಕೊಯ್ದು ಎತ್ತಿನ ಗಾಡಿಯಲ್ಲಿ ಮನೆಗೆ ತಂದು ಸಂಗ್ರಹಿಸಿಟ್ಟು ಮಳೆಗಾಲದ ಸಂಧರ್ಭದಲ್ಲಿ ಜಾನುವಾರುಗಳ ಕಾಲಡಿ ಹಾಸುತ್ತಿದ್ದರಂತೆ.
ನಮ್ಮ ಜಾನುವಾರುಗಳಿಗೆ ಈ ಹಸಿರು ಹುಲ್ಲಿನ ಗುಡ್ಡ ಸಮೃದ್ಧ ಮೇವು ನೀಡುತ್ತಿತ್ತು. ಕಾಡುಕೋಣ, ಕಡವೆಗಳು ಈ ಹಸಿರು ಹುಲ್ಲಿನ ಬೆಟ್ಟ ದಾಟಿ ಎಂದೂ ಕೃಷಿಕರ ಜಮೀನಿಗೆ ಬರುತ್ತಿರಲಿಲ್ಲ.
ಆಗಿನ ಕಾಲದ ಅವಿವೇಕಿ ಅಧಿಕಾರಸ್ಥರಿಗೆ ಈ ಅಮೂಲ್ಯ ಹಸಿರು ಹುಲ್ಲು ತುಂಬಿದ ಬೆಟ್ಟಗಳು ಸ್ಪಾಂಜಿನಂತೆ ಮಳೆಗಾಲದ ನೀರನ್ನು ಹೀರಿ ನದಿ ಕೆರೆಗಳನ್ನು ವರ್ಷ ಪೂರ್ತಿ ಜೀವಂತವಾಗಿಡುತ್ತವೆ. ಇವು ದೊಡ್ಡ ಮರಗಳಿರುವ ಅರಣ್ಯದಷ್ಟೇ ಸೂಕ್ಷ್ಮ ಪ್ರದೇಶ ಎಂಬ ಅರಿವಿರಲಿಲ್ಲ. ಈ ಗುಡ್ಡಗಳನ್ನು ದೊಡ್ಡ ದೊಡ್ಡ ಬುಲ್ಡೋಜರ್ ಗಳಿಂದ ಹೂಡಿ ನಮ್ಮದಲ್ಲದ ಅಕೇಶಿಯ, ನೀಲಗಿರಿ ನೆಟ್ಟು ಹುಲ್ಲುಗಾವಲನ್ನು ನಾಶ ಮಾಡಿದರು. ಇದಲ್ಲದೆ ಪ್ರತಿ ಕಟಾವಿನ ನಂತರ ಈ ಗುಡ್ಡಗಳಿಗೆ ಬೆಂಕಿ ಇಟ್ಟು ಸುಟ್ಟರು.
ನಲವತ್ತು ಐವತ್ತು ವರ್ಷಗಳ ಕಾಲ ನಿರಂತರವಾಗಿ ನಡೆದ ಈ ಪರಿಸರ ದೌರ್ಜನ್ಯದ ದುಷ್ಪರಿಣಾಮ ಇವತ್ತಿನ ನಮ್ಮ ಮಲೆನಾಡಿನಲ್ಲಿ ಪ್ರತಿಕೂಲ ವಾತಾವರಣ ಉಂಟಾಗಿದೆ. ಅಂತರ್ಜಲ ಪಾತಾಳಕ್ಕೆ ನೂಕಲ್ಪಟ್ಟಿದೆ. ಮಲೆನಾಡು ಮರುಭೂಮಿಯಾಗುವತ್ತ ಸಾಗಿದೆ.
ಈ ಸಂದರ್ಭದಲ್ಲಿ "ಭ್ರಷ್ಟಾಚಾರ ಮತ್ತು ದುರಾಡಳಿತ"ದ ಮೂಲಕ ಎಂಪಿಎಂ ಎಂಬ ಭಸ್ಮಾಸುರನನ್ನು ನಿಲ್ಲಿಸಿದ ಭ್ರಷ್ಟರಿಗೆ ಪರಿಸರದ ಪರವಾಗಿ ಕೃತಜ್ಞತೆಗಳು.
ಎಂಪಿಎಂ ಕಾರ್ಖಾನೆ ಸ್ಥಗಿತವಾಗಿದ್ದರೂ ಅವರು ನೆಟ್ಟ ರಾಕ್ಷಸ ವೃಕ್ಷಗಳಿನ್ನೂ ನಮ್ಮ ಗುಡ್ಡದ ಮೇಲೆ ಉಳಿದಿದೆ. ಈ ಕಾಸಿಲ್ಲದ ಸರ್ಕಾರಗಳು, ಬದ್ದತೆ ನಿಷ್ಠೆ ಇಲ್ಲದ ಅಧಿಕಾರಿ ವರ್ಗದವರು ಈ ರಾಕ್ಷಸವೃಕ್ಷ ಸಂತತಿಯನ್ನು ಬುಡ ಸಮೇತ ಕಿತ್ತೊಗೆಯುತ್ತಾರ..?
ಅದ್ಯಾರೋ ಪರಿಸರ ಕಾಳಜಿ ಇರುವ ಅಧಿಕಾರಿಗಳು ಬರುತ್ತಾರೆ. ಈ ನಿಸರ್ಗವನ್ನು ರಕ್ಷಸ ಕಳೆಯ ಗುಡ್ಡವನ್ನು ಮರಳಿ ಹಸಿರಾಗಿಸುತ್ತಾರೋ ಎಂಬ ಆಸೆಯಲ್ಲಿ ನಮ್ಮಂಥ ಪರಿಸರ ಪರರು ಕಾಯುತ್ತಿರುವೆವು.
ಪರಿಸರ ಮರು ಪೂರಣವಾಗಿ ನೆಲ ಜಲ ಸಮೃದ್ದವಾಗಲಿ...
-ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ