ಲೇಖಾ ಲೋಕ-44: ಬಹುಮುಖಿ ಸಾಹಿತಿ ಡಾ. ಜಯಂತಿ ಮನೋಹರ್

Upayuktha
0



ಸಾಹಿತ್ಯ, ವೇದಾಧ್ಯಯನ, ರಂಗಕಲೆ, ಸಾಕ್ಷ್ಯಚಿತ್ರ, ನಿಮಾ೯ಣ, ಚಿತ್ರಕಥೆ, ಸಹನಿದೇ೯ಶನ, ಭಾಷಾ ಬೋಧನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತ ಆಗಿರುವ ಜಯಂತಿ ಮನೋಹರ್ ನಾಡಿನ ಪ್ರಸಿಧ್ಧ ಲೇಖಕಿ. ನಂಜನಗೂಡಿನಲ್ಲಿ 2-10-1951 ರಂದು ಎಂ ನಾಗರಾಜ್ ಮತ್ತು ಶ್ರೀಮತಿ ಆರ್ ಅಮೃತಾ ಬಾಯಿಯವರ ಪುತ್ರಿಯಾಗಿ ಜನಿಸಿದರು. ಇವರ ತಂದೆ ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಸೆರೆಮನೆ ವಾಸ ಅನುಭವಿಸಿದವರು. ಇವರ ತಾಯಿ ಅಮೃತಾಬಾಯಿ ಅವರು ಆಗಿನ ಕಾಲದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ 50ರ ದಶಕದಲ್ಲೇ ಬಿ.ಎ. ಪಾಸು ಮಾಡಿದರು. ಸಮಾಜ ಕಲ್ಯಾಣ ಸಲಹಾ ಮಂಡಳಿಯಲ್ಲಿ ಮುಖ್ಯ ಆಯೋಜಕರಾಗಿ, ಹಲವಾರು ವರ್ಷಗಳು ಗ್ರಾಮಗಳಲ್ಲಿ ಸೇವೆ ಮಾಡಿದರು. ನಂತರ ರಾಮನಗರದ ಸಂಸ್ಕೃತ ವಿದ್ಯಾ ಪೀಠದಲ್ಲಿ ಮುಖ್ಯ ಉಪಾಧ್ಯಾಯಿನಿ ವೃತ್ತಿ ಆರಂಭಿಸಿ ಹೆಸರು ಗಳಿಸಿದರು.


ಬಾಲ್ಯದಲ್ಲೇ ಜಯಂತಿ ಮನೋಹರ್ ತಮ್ಮ ತಂದೆಯ ಸೋದರಮಾವ ಎಚ್. ಎಲ್ .ಎನ್. ಸಿಂಹ ಅವರ ಮನೆಯಲ್ಲಿ ಜರುಗುತ್ತಿದ್ದ ಪುರಾಣ ಕಥೆಗಳನ್ನು, ಹರಿಕಥಾ ಕಾಲಕ್ಷೇಪಗಳನ್ನು ಕೇಳಿ ಆಧ್ಯಾತ್ಮಿಕ ವಾತಾವರಣದಲ್ಲಿ ಬೆಳೆದರು. ಸಂಗೀತ, ನಾಟಕ, ಅನೇಕ ಜಾತ್ರೆಗಳ ಕಾರ್ಯಕ್ರಮಗಳು, ಹರಿಕಥೆ, ಸಾಂಸ್ಕೃತಿಕ ಕಾಯ೯ಕ್ರಮಗಳು ರಾಮನಗರದಲ್ಲಿ ಆಗ ಬಹುತೇಕ ಕಡೆ ಜರುಗುತ್ತಿದ್ದವು. ಅಲ್ಲಿನ ವಾತಾವರಣ ಇವರ ಮೇಲೆ ಅಗಾಧ ಪರಿಣಾಮ ಬೀರಿತು. ಕಾಲೇಜಿನಲ್ಲಿ ಇವರು ಓದುವ ಸಮಯದಲ್ಲಿ, ಕಥೆ, ಕಾದಂಬರಿ ಓದಿ ಸ್ನೇಹಿತರಿಗೆ ಕಥೆಯ ಸಾರಾಂಶ ತಿಳಿಸಿ, ಕಥೆ ಹೇಳುವ ಗುಣವನ್ನು ಪಡೆದರು. ಸಾಹಿತ್ಯದ ಅಧ್ಯಯನ ಇವರಿಗೆ ಪ್ರಬುದ್ಧ ಬರಹಗಳು, ಅಧ್ಯಾತ್ಮ ಕೃತಿಗಳನ್ನು ರಚಿಸಲು ಪ್ರೇರಣೆ ನೀಡಿತು. ಸ್ನಾತಕೋತ್ತರ ಪದವಿ ಪಡೆದು, ಭಾರತೀಯ ಸ್ಟೇಟ್‌ಬ್ಯಾಂಕ್ ನಲ್ಲಿ ಆಫೀಸರ್ ಆಗಿ, ಕಾರ್ಯ ನಿರ್ವವಹಿಸಿ ಜೊತೆಗೆ ಬ್ಯಾಂಕಿನ ಕನ್ನಡ ಸಂಘದಲ್ಲಿ ಸಕ್ರಿಯ ಪಾತ್ರ ವಹಿಸಿ, ಅದರ ಕನ್ನಡ ಪತ್ರಿಕೆ "ಕೊಲೀಗ್" ಗೆ ಹಲವಾರು ಲೇಖನಗಳನ್ನು ಬರೆದರು. ಕನ್ನಡೇತರ ಸಿಬ್ಬಂದಿಗಳಿಗೆ ಕನ್ನಡ ಭಾಷೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಹ್ವಾನದ ಮೇರೆಗೆ ಬೋಧಿಸಿದರು. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಭಾಷಾ ವಿಭಾಗದ ಮುಖ್ಯಸ್ಥೆಯಾಗಿ, ಕನ್ನಡ ಭಾಷೆ ಅನ್ಯ ಭಾಷಿಕರಿಗೆ ಹೇಳಿ ಕನ್ನಡದಲ್ಲಿ ವ್ಯವಹರಿಸುವ ಇಚ್ಛೆ ಬರುವಂತೆ ಪ್ರಯತ್ನಿಸಿ ಸಫಲರಾದರು.


ಡಾ॥ ಜಯಂತಿ ಮನೋಹರ್ ಅವರು 1987 ರಲ್ಲಿ ಇಂಗ್ಲೆಂಡ್‌ಗೆ ಹೋಗಿ ಅನುಭವಾತ್ಮಕ ಕಲಿಕೆಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದರು. ಜರ್ಮನಿಯ ಹೈಡಲ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಶಿಕ್ಷಣ ಪದ್ದತಿಯ ಬಗ್ಗೆ ಮತ್ತು ಕ್ಷಿಪ್ರ ಕನ್ನಡ ಕಲಿಕಾ ಸಹ ವಿಚಾರದ ಪ್ರಬಂಧ ಮಂಡಿಸಿದರು. 1994ರಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿ, ಬೈಬಲ್ ಮತ್ತು ಋಗ್ವೇದ ಸೂತ್ರದ ಸಮನ್ವಯದೊಂದಿಗೆ ತುಲನಾತ್ಮಕ ಪ್ರಬಂಧ ಮಂಡಿಸಿ, ಮೆಚ್ಚುಗೆಗೆ ಪಾತ್ರರಾದ ಲೇಖಕಿ. ರಂಗಭೂಮಿಯಲ್ಲೂ, ಸಕ್ರಿಯ ಪಾತ್ರ ವಹಿಸಿ ಸಿನಿಮಾ ಮತ್ತು ರಂಗಭೂಮಿಯ ಬಗ್ಗೆ ಒಲವು 70ರ ದಶಕದಲ್ಲಿ ಸಹಜವಾಗಿ ಇವರಿಗೆ ರಕ್ತಸಂಬಂಧಿಗಳ ಬಳುವಳಿಯಾಗಿ ಬಂದಿದ್ದು ವಿಶೇಷ.


ಕುವೆಂಪುರವರ "ರಾಮಾಯಣ ದಶ೯ನಂ" ಓದಿ ಪ್ರಭಾವಿತರಾಗಿ, ದಶಾನನ ಸ್ವಪ್ನ ಸಿದ್ದಿ ಆಧ್ಯಾಯ ಓದಿ, ತಾವು ಸಹ "ರಾವಣಾಸುರನ ಕನಸು ಎಂಬ ನಾಟಕವನ್ನು ರಚಿಸಿದರು. ಇದು ಹಲವಾರು ಬಾರಿ ನಾಟಕ ಪ್ರದರ್ಶನಗೊಂಡು ಜನಪ್ರಿಯವಾಯಿತು. ನಂತರ ಈ ವಸ್ತು ಕಾದಂಬರಿ ರೂಪದಲ್ಲಿ ಪ್ರಕಟವಾಯಿತು. ಸಂಗಾತಿ ಮನೋಹರ್ ಇವರಿಗೆ ಅನೇಕ ರೀತಿಯಿಂದ ಪ್ರೋತ್ಸಾಹ ನೀಡಿ ರಂಗಭೂಮಿ, ಕಿರುತೆರೆ ಧಾರಾವಾಹಿಗೆ, ಅಭಿನಯ, ಸಂಭಾಷಣೆ ರಚನೆ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ರಂಗದ ವಿಷಯದ ಮೇಲೆ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲು ಸಹಕರಿಸಿದರು.


ಬೆಂಗಳೂರಿನ ಕಳ್ಳಭಟ್ಟಿ ದುರಂತ, ವೀನಸ್ ಸರ್ಕಸ್ ನಲ್ಲಿ ಜರುಗಿದ ಮಕ್ಕಳ ಸಾವು, ಗೋಕಾಕ್ ಚಳುವಳಿ, ಶ್ರವಣಬೆಳಗೊಳದ ಮಹಾಮಜ್ಜನ, ಹೀಗೆ 16 ಸಾಕ್ಷ್ಯ ಚಿತ್ರಗಳನ್ನು ಪತಿಯೊಂದಿಗೆ ನಿರ್ಮಿಸಿ ನಾಡಿಗೆ ನೀಡಿದ್ದಾರೆ. ಅನೇಕ ಕನ್ನಡ ಕಿರುತೆರೆ ಧಾರಾವಾಹಿಯ ಸಂಭಾಷಣೆಗಳನ್ನು ಬರೆದಿದ್ದಾರೆ. ವೇದ ಮಂತ್ರದ ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿ, ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಋಗ್ವೇದದ ಅಗ್ನಿ ಮಂತ್ರಗಳು, ಮನೋವೈಜ್ಞಾನಿಕ ತತ್ವಗಳು, ಸೀತಾರಾಮ ಸಮಾಗಮಕ್ಕೆ ರಾವಣನ ದೌತ್ಯ, ಅದಲ್ಲದೇ, ಥಾಯ್ಲೆಂಡ್ ಮತ್ತು ಕಾಂಬೋಡಿಯಾದಲ್ಲಿ ಹರಡಿರುವ ಭಾರತೀಯ ಸಂಸ್ಕೃತಿ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ವೇದಮಂತ್ರಗಳಲ್ಲಿ ಆಧ್ಯಾತ್ಮಿಕ ಮತ್ತು ಮನೋ ವೈಜ್ಞಾನಿಕ ಅಂತರಾಥ೯ದ ಅಧ್ಯಯನ ಮಾಡಿದ್ದಾರೆ. ಧರ್ಮಕೂತಂ ಗ್ರಂಥದ ಆಂಗ್ಲ ಅನುವಾದ ಮಾಡಿ ಅದರ ವಿಶೇಷಾಧ್ಯಯನದಲ್ಲಿ ತಾವೇ ತೊಡಗಿಸಿಕೊಂಡಿದ್ದಾರೆ.


ಡಾ॥ ಜಯಂತಿ ಮನೋಹರ್ ಅವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಟಿ ವಿ ಕಪಾಲಿ ಶಾಸ್ತ್ರೀ ಪುರಸ್ಕಾರ, ಎಂ ಜಿ ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ, ಅಜಂತಾ ರಾಷ್ಟ್ರರತ್ನ ಪ್ರಶಸ್ತಿ, ಫ್ರೋ ಹಿರಿಯಣ್ಣ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪುರಸೃತರು. ಸದಾ ಅಧ್ಯಯನದಲ್ಲಿ ನಿರತರಾಗಿರುವ ಡಾ॥ಜಯಂತಿ ಮನೋಹರ್ ಅವರು ಇತ್ತೀಚೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಇವರ ಸಾಹಿತ್ಯಾಭಿಮಾನಿಗಳು ಶುಭಾಶಯ ಕೋರಿ ತಮ್ಮ ಗೌರವವನ್ನು ಅರ್ಪಿಸಿ ಸಂತೋಷಪಟ್ಟಿದ್ದಾರೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top