ಬಳ್ಳಾರಿ: ಸಣ್ಣ ಅವಕಾಶ ಸಹಕಾರವನ್ನೇ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದುಕೊಳ್ಳಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರಿಗೆ ಪೇಶ್ವೆ ಅವರು ಮಾಡಿದ ಸಹಾಯದಿಂದ ಈ ದೇಶದ ಸಂವಿಧಾನ ರಚನೆಯ ಮಹಾನ್ ವ್ಯಕ್ತಿಯಾದರು. ನಾನು ಸಹ ಕೂಲಿ ಮಾಡಿಕೊಂಡು ಬದುಕಿದಾತ, ನಮ್ಮೂರಿನ ಬಸವೇಗೌಡ ಅವರು ನೀಡಿದ ಆರ್ಥಿಕ ಸಹಕಾರದಿಂದ ನಾನು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಲು ಸಹಕಾರಿಯಾಯ್ತು. ವಿದ್ಯೆಯ ಸಂದರ್ಭದಲ್ಲಿ ದೊರೆಯುವ ಚಿಕ್ಕ ಮೊತ್ತವೂ ಪ್ರೋತ್ಸಾಹದಾಯಕವಾದುದು ಎಂದು ಅರಿತು ಮತ್ತಷ್ಟು ನಿಮ್ಮ ಸಾಧನೆಗೆ ಮುಂದಾಗಿ ಎಂದು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂತಹ ಕಾರ್ಯ ಮಾಡಿದ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದ ಅವರು, ಸಣ್ಣ ಮೆಟ್ಟಿಲು ಏರುತ್ತಲೇ ದೊಡ್ಡ ಸ್ಥಾನಕ್ಕೆ ಹೋಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜಾತೀಯತೆ ಮಾಡಿ, ಅಂದರೆ ನಿಮ್ಮದೇ ಜಾತಿಯ ಬಡಜನರ ವಿದ್ಯಾಭ್ಯಾಸಕ್ಕೆ ಸಹಕಾರ ಮಾಡಿ ಎಂದರು.
ಜೆ.ಕೆ. ಟ್ರಸ್ಟ್ ಮುಖ್ಯಸ್ಥ ಜೋಳದರಾಶಿ ತಿಮ್ಮಪ್ಪ ಮಾತನಾಡಿ, ದುಡ್ಡಿಗೆ ದೊಡ್ಡಪ್ಪ ವಿದ್ಯೆ, ಕಳ್ಳತನ ಮಾಡದ್ದು ವಿದ್ಯೆ, ಅದಕ್ಕಾಗಿ ವಿದ್ಯಾರ್ಥಿಗಳ ಪುಸ್ಕಾರವೂ ಅವರ ಭವಿಷ್ಯಕ್ಕೆ ಸಹಕಾರಿಯಾಗಲಿ. ನಮ್ಮ ಟ್ರಸ್ಟ್ ನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ಪೆನ್ನು ಪ್ಯಾಡ್ ನೀಡಿ ಸಹಕರಿಸುವ ಕಾರ್ಯಮಾಡುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ನಮ್ಮ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸವನಗನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡುತ್ತಿದೆ. ರಾಜ್ಯಮಟ್ಟದ ಕಾರ್ಯಕ್ರಮ ಈ ತಿಂಗಳ 21 ರಂದು ಚಾಮರಾಜನಗರದ ಮಲೆ ಮಾದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ನಡೆಯಲಿದೆಂದು ತಿಳಿಸಿದರು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ಅಡಾಕ್ ಸಮಿತಿ ಸದಸ್ಯ ಕೆ.ಮಲ್ಲಯ್ಯ ಇದ್ದರು. ವಿದ್ಯಾರ್ಥಿಗಳಾದ ಪಿ. ದಿವ್ಯಶ್ರೀ, ಕೆ.ಎಂ.ಕಾಂಚನಾ, ನಾಗಾಂಬಿಕ ಹೆಚ್.ಎಂ., ಪಿ. ಅಸ್ಮಿತ ಚೌದರಿ ಸಂಡೂರಿನ ಕಾರ್ತಿಕ್ ಬಿ, ಸಂಜನಾ ಬಿ.ಬಿ, ಬಿ.ಹೇಮಂತಕುಮಾರ್, ಎಂ.ಯಶವಂತಕುಮಾರ್, ಕೆ.ಸಹನಾ ತೆಕ್ಕಲಕೋಟೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮತ್ತೋರ್ವ ಸದಸ್ಯ ವೆಂಕೋಬಿ ಸಂಗನಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯ ಪತ್ರಕರ್ತರು, ವಿದ್ಯಾರ್ಥಿಗಳ ಪಾಲಕ ಪೋಷಕರು ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ