ಚರಿತ್ರೆಯ ಪುಟದಲ್ಲಿ ರಾವಿ ನದಿ

Upayuktha
0


ಪುರಾತನ ಕಾಲದಿಂದಲೂ ನದಿಗಳನ್ನು ದೇವಿ ಸ್ವರೂಪವೆಂದು ಆರಾಧಿಸುತ್ತಾ ಬಂದ ಸಂಸ್ಕೃತಿಯು ಭಾರತೀಯ ಸಂಸ್ಕೃತಿ. ಇದರ ಅಂಗವೆಂಬಂತೆ ವೇದಗಳ ಉದ್ದಕ್ಕೂ ಸಪ್ತ ಸಿಂಧೂ ನದಿಗಳ ಉಲ್ಲೇಖವು ಸರ್ವೇಸಾಮಾನ್ಯವಾಗಿದೆ. ಹಾಗೂ ಈ ನದಿಗಳ ಆರಾಧನೆಯನ್ನು ಅಲ್ಲಿ ಕಾಣಬಹುದು. ಇತ್ತೀಚಿನ ಭಾರತ ಪಾಕಿಸ್ತಾನ ಜಲ ಒಪ್ಪಂದದಲ್ಲಿಯೂ (1960) ಇದೇ ಸಪ್ತ ಸಿಂಧೂ ನದಿಗಳು ಪಾತ್ರವಹಿಸಿವೆ. ಆದರೆ ಇಂದು ಭಾರತದಾದ್ಯಂತ ಸಿಂಧೂ ನದಿಯ ಕುರಿತು ಒಂದಷ್ಟು ಅರಿವಿದೆ, ಆದರೆ ಸಪ್ತ ಸಿಂಧೂ ನದಿಗಳ ಅವಿಭಾಜ್ಯ ಅಂಗವೆನಿಸಿದ ಇನ್ನು ಆರು ನದಿಗಳ ಕುರಿತು ಮಾಹಿತಿ ಕಡಿಮೆ. ಅಂತಹ ಆರು ನದಿಗಳಲ್ಲಿ ರಾವಿ ನದಿಯು ಒಂದು.


ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉಗಮಿಸಿ ಪಶ್ಚಿಮಭಿಮುಖವಾಗಿ  ಪ್ರವಹಿಸುವ ನದಿರತ್ನಗಳಲ್ಲಿ ರಾವಿ ನದಿಯು ಪ್ರಧಾನ ಪಾತ್ರ ವಹಿಸುತ್ತದೆ. ಪಂಚ ನದಿಗಳ ಬೀಡಾದ ಪಂಜಾಬಿನಲ್ಲಿ ಹರಿದು ಪಾಕಿಸ್ತಾನವನ್ನು ಈ ನದಿ ಸೇರುತ್ತದೆ. ಬಳಿಕ "ರತ್ನಾಕರ" ಎಂದೇ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಅರಬ್ಬೀ ಸಮುದ್ರವನ್ನು ಈ ನದಿಯು ಆಶ್ರಯಿಸುತ್ತದೆ.


ಹರಪ್ಪ ನಾಗರಿಕತೆಯು ಭಾರತದ ಅತ್ಯಂತ ಪುರಾತನ ನಾಗರಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂದಿಗೂ ಭಾರತೀಯರು ಹೆಮ್ಮೆಯಿಂದ ಹೇಳುವ ನಾಗರಿಕತೆ. ಈ ನಾಗರಿಕತೆಯ ಅವಿಭಾಜ್ಯ ಅಂಗವೇ ರಾವಿ ನದಿ. ಅಲ್ಲದೆ ಹರಪ್ಪ ಪೂರ್ವಕಾಲದ ಮೆಹರ್ಗರ್ ಸಂಸ್ಕೃತಿ ಹಾಗೂ ಬರ್ಸ್ಹೂಂ ಸಂಸ್ಕೃತಿಗಳು ಇದೇ ನದಿಯ ಕಿನಾರೆಯ ಮೇಲೆ ತಲೆಯೆತ್ತಿದ್ದವು.


ಹರಪ್ಪ ನಾಗರಿಕತೆಯ ಅತಿ ಮುಖ್ಯ ನಗರವಾಗಿರುವ ಹರಪ್ಪ ನಗರವು ಇದೇ ನದಿಯ ದಂಡೆಯ ಮೇಲೆ ತಲೆ ಎತ್ತಿದುದು. ಅಂದು ರಾವಿ ನದಿಯು ಆ ಕಾಲದ ಜನರ ದೈನಂದಿನ ಬೇಡಿಕೆಗಳನ್ನು ಈಡೇರಿಸುವ ಅಕ್ಷಯ ಪಾತ್ರೆಯಂತಿತ್ತಲ್ಲದೆ ನೀರಾವರಿ ಸೌಲಭ್ಯ ಹಾಗೂ ಜಲ ಸಾರಿಗೆಗೂ ಅವಶ್ಯಕವೆನಿಸಿತ್ತು. ಅನೇಕ ಔಷಧಿ ಗಿಡಗಳ ಆಗರ ಇದರ ದಂಡೆಯಾಗಿತ್ತು. ಆ ಕಾಲದ ಜನರ ಸರ್ವಸ್ವವೂ ಈ ನದಿಯಾಗಿತ್ತು ಎಂಬುದು ಚಿಂತನಾರ್ಹ ಸಂಗತಿ.


ವೇದಗಳಲ್ಲಿ ಹಲವೆಡೆ ಈ ನದಿಯ ಉಲ್ಲೇಖವಿದೆ. ಈ ನದಿಯನ್ನು "ಪುರುಷ್ಣೀ" ಎಂಬ ಹೆಸರಿನಿಂದ ವೇದಗಳಲ್ಲಿ ಕರೆಯಲಾಗುತ್ತಿತ್ತು. ಇಲ್ಲಿ "ಪುರುಷ್" ಎಂದರೆ "ಶಿಲೆ" ಎಂದರ್ಥ. ಈ ನದಿಯು  ಶಿಲೆಗಳಿಂದ ಕೂಡಿದ್ದು ಅತ್ಯಂತ ಕಡಿದಾದ ಪ್ರದೇಶಗಳನ್ನೂ ಒಳಗೊಂಡಿರುವುದರಿಂದ ಈ ಹೆಸರನ್ನು ನೀಡಿರಬಹುದು. ಅಲ್ಲದೆ ವೇದಗಳಲ್ಲಿ ಈ ನದಿಯನ್ನು "ಇರಾವತಿ" ಎಂದೂ ಉಲ್ಲೇಖಿಸಿದ್ದಾರೆ. ಹೀಗೆಂದರೆ ವೇಗದಾಯಕವಾದದ್ದು ಎಂದರ್ಥ.


ವೇದಗಳ ಇತಿಹಾಸದಲ್ಲೇ ಪ್ರಸಿದ್ಧವಾಗಿರುವ ಹತ್ತು ರಾಜರ ಕಾಳಗಕ್ಕೆ ಸಾಕ್ಷಿಯಾಗಿರುವ ನದಿ ಈ ರಾವೀ ನದಿ. ಅಂದಿನ ವರೆಗೆ ಅನೇಕ ಸಣ್ಣಪುಟ್ಟ ರಾಜರ ಸಂಸ್ಥಾನಗಳಿದ್ದು ಇದೀಗ ಏಕ ಚಕ್ರಾಧಿಪತ್ಯಕ್ಕೆ ರಾಷ್ಟ್ರ ಒಳಗೊಳ್ಳುತ್ತದೆ. ಅಂತಹ ಪ್ರಮುಖವಾದ ಮಹಾನ್ ಕಾಳಗ ನಡೆದಿದ್ದು ಇದೆ ಪರುಷ್ಣೀ ನದಿಯ ದಂಡೆಯ ಮೇಲೆ. ಪುರು, ಯದು, ತುರ್ವಸು, ಅನು, ಅಲೀನ, ಪಕ್ತಾ, ಮೊದಲಾದ ರಾಜಮನೆತನಗಳು ಸೆಣಸಿದ್ದ ಕಾಳಗವದು. ಕೊನೆಯಲ್ಲಿ ಭರತ ವಂಶವು ಜಯಭೇರಿಯನ್ನು ಮೊಳಗಿಸಿ ಅಖಂಡ ಭಾರತವನ್ನು ಏಕ ಚಕ್ರಾಧಿಪತ್ಯಕ್ಕೆ ಒಳಪಡಿಸಿತೆಂದು ವೇದ್ಯವಾಗುತ್ತದೆ.


ಈ ಮಹತ್ತರ ಕಾಲಕ್ಕೆ ಆಸರೆಯಾದ ನದಿ ಇದೇ ರಾವಿ ನದಿ. ನಂತರದ ದಿನಗಳಲ್ಲಿ ಕುರು ಮತ್ತು ಪಾಂಚಾಲ ವಂಶಗಳು ಪ್ರಸಿದ್ಧಿಯನ್ನು ಪಡೆದಾಗ ಅವು ಮಧ್ಯ ಭಾರತದಲ್ಲಿ ತಮ್ಮ ರಾಜಧಾನಿಯನ್ನು ಸಂಸ್ಥಾಪಿಸಿದಾಗ ಭಾರತದ ಇತಿಹಾಸದಲ್ಲಿ ರಾವಿ ನದಿಯು ತನ್ನ ಪ್ರಾಮುಖ್ಯತೆಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿತು.


ಆದರೆ ಇಂದಿಗೂ ಸಿಂಧು ನದಿ ವ್ಯವಸ್ಥೆಯಲ್ಲಿ ಅಗ್ರಸ್ಥಾನವನ್ನು ಪಡೆದಿರುವ ನದಿ ಇದಾಗಿದೆ. ಭಾರತ ಹಾಗೂ ಪಾಕಿಸ್ತಾನ ಸೇರಿದಂತೆ  ಜನರಿಗೆ ಕೃಷಿ, ನಿರಾವರಿ, ಔಷಧ, ಮೊದಲಾದ ದೈನಂದಿನ ಬಳಕೆಗಳನ್ನು ಪೂರೈಸುತ್ತಾ ಲಕ್ಷಾಂತರ ಜನರಿಗೆ ಜೀವದಾಯಿನಿಯಾಗಿ ಪ್ರವಹಿಸುತ್ತಿದ್ದಾಳೆ.


- ಅಭಿಜ್ಞಾ ಉಪಾಧ್ಯಾಯ 

ಇತಿಹಾಸ ಪ್ರಾಧ್ಯಾಪಕಿ 

ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ) ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top