ಮಂಗಳೂರು: ದೇಶದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ಹೃದ್ರೋಗ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಇದರ ಮಾಹಿತಿ, ಜಾಗೃತಿ, ಮುಂಜಾಗೃತ ಕ್ರಮ, ಆಧುನಿಕ ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಈ ವೈದ್ಯಕೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಹೇಳಿದರು.
ಅವರು ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಶಿಶು ಮತ್ತು ಮಕ್ಕಳ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ತಮ್ಮ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಎರಡು ದಿನ ಅವಧಿಯ ಮಕ್ಕಳ ಹೃದ್ರೋಗ ಶಾಸ್ತ್ರ ಶಿಕ್ಷಣ, ಆರೈಕೆ, ಮತ್ತು ಚಿಕಿತ್ಸೆಯ ಶನಿವಾರ ಕಾಲೇಜಿನ ಡ್ರೋಮ್ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿ ವೈದ್ಯಕೀಯ ವೃಂದ ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ವೃಂದದವರನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಮಾನ್ ಮಾತನಾಡಿ, ವೈದ್ಯರು ನಿರಂತರ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿ ನೂತನ ಅವಿಷ್ಕಾರಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ದಿಸಿ ಯಶಸ್ಸು ಸಾಧಿಸಿ ಜನಮನ್ನಣೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೊಚ್ಚಿನ್ ನಗರ ಮೂಲದ ಡಾ. ಕೃಷ್ಣ ಕುಮಾರ್ ಹಾಗೂ ಬೆಂಗಳೂರು ನಗರ ಮೂಲದ ಡಾ. ಸೇಜಲ್ ಶಾರವರು ಹೃದ್ರೋಗ ಶಾಸ್ತ್ರ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ, ನೀಡಿದ ಅಮೂಲ್ಯ ಕೊಡುಗೆ ಮತ್ತು ಸಾಧಿಸಿದ ಅಮೋಘ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶಹನವಾಜ್ ಮಣಿಪಾಡಿಯವರು ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ, ದೇಶದ ನಾನಾ ಭಾಗಗಳಿಂದ ಭಾಗವಹಿಸಿದ ಖ್ಯಾತ, ನುರಿತ, ಮಕ್ಕಳ ಹೃದ್ರೋಗ ಪ್ರವೀಣರು, ಶಾಸ್ತ್ರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ, ಮಕ್ಕಳಲ್ಲಿ ಕಾಣುವ ಹೃದಯ ಸಂಬಂಧಿ ವಿವಿಧ ರೋಗಗಳ ಕಾರಣ, ಲಕ್ಷಣ, ಜಾಗೃತಿ ಮತ್ತು ನಾನಾ ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಲಿರುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಲಹ ಸಮಿತಿ ಸದಸ್ಯ ಡಾ. ಎಂ.ವಿ. ಪ್ರಭು, ಮಕ್ಕಳ ಶಾಸ್ತ್ರ ವಿಭಾಗದ ಡಾ. ಶಂಶಾದ್ ಎ. ಖಾನ್, ಸಂಸ್ಥೆಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ವೈದ್ಯಕೀಯ ಸಹ ಅಧೀಕ್ಷಕ ಡಾ. ಅಂಜನ್ ಕುಮಾರ್, ಕಾರ್ಯಾಗಾರದ ಸಲಹೆಗಾರ ಡಾ. ಪ್ರೇಮ್ ಆಳ್ವ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಚೇತನ್ ತಾಂಡೆಲ್ ವಂದಿಸಿದರು. ಈ ಕಾರ್ಯಾಗಾರದಲ್ಲಿ ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಡಾ. ವರ್ಷ ಸ್ವಾಗತಿಸಿದರು ಮತ್ತು ಡಾ. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ