ಶ್ರೀ ಮಂಜುನಾಥ ಕಾಮತ್ ರ ಉಡುಪಿ ಕಂಡಿರಾ...? ಎಂಬ ಅತ್ಯಂತ ಜನಪ್ರಿಯ ಯೂಟ್ಯೂಬ್ ಕಾರ್ಯಕ್ರಮ ಸರಣಿಯನ್ನು ಬಹುತೇಕರು ನೋಡಿರುತ್ತೀರ. ನಾನು ಅವರ ಯೂಟ್ಯೂಬ್ ಸರಣಿ ಕಾರ್ಯಕ್ರಮ ದ ಸ್ಪೂರ್ತಿಯಿಂದ ಉಡುಪಿ ಕಡೆ ಹೋದಾಗ ಉಡುಪಿಯನ್ನು ಹೊರಗಣ್ಣು ಮಾತ್ರವಲ್ಲದೆ ಒಳಗಣ್ಣಿನಿಂದಲೂ ನೋಡಿದಾಗ ಉಡುಪಿ ಯಲ್ಲಿ ಒಂದಷ್ಟು ಅಚ್ಚರಿ ವಿದ್ಯಮಾನಗಳು ನನ್ನ ಗಮನಕ್ಕೆ ಬಂದವು. ನಾನು ಕಾರ್ಯ ನಿಮಿತ್ತ ಆಗಾಗ್ಗೆ ಉಡುಪಿಗೆ ಹೋಗಿ ಬರುತ್ತಿರುತ್ತೇನೆ.
ನನಗೆ ಪ್ರತಿ ಊರು, ಮನೆ, ಜನ, ಜೀವನ ಎಲ್ಲವೂ ಆಸಕ್ತಿದಾಯಕ ಅಧ್ಯಯನಶೀಲ ವಸ್ತು. ಆ ಊರಿನ ಅಂಗಡಿಕಾರರಿಂದ ಆರಂಭಿಸಿ, ಆಟೋ ಡ್ರೈವರ್ ಗಳು, ಕೂಲಿ ಕಾರ್ಮಿಕರು, ಹೀಗೆ ಬೇರೆ ಬೇರೆ ಹುದ್ದೆಯ ಅನೇಕ ನಿವಾಸಿಗಳನ್ನು ಮಾತ ನಾಡಿಸಿ ಕುಶಲೋಪರಿ ವಿಚಾರಿಸುತ್ತೇನೆ. ಹೀಗೆ ಮಾತನಾಡಿಸಿದಾಗ ಕೆಲವು ಕುತೂಹಲಕಾರಿ ಅಂಶಗಳು ನನ್ನ ಗಮನಕ್ಕೆ ಬಂದವು.
ಅರಳು ಹುರಿದಂತೆ ತುಳು ಭಾಷೆ ಮಾತನಾಡುವ ಆಟೋ ಚಾಲಕ ಉಡುಪಿ ನಿವಾಸಿ ಎಂದೆನ್ನಿಸಿದರೂ ಆತನ ಮುಖದಲ್ಲಿ ಇವ ಮೂಲ ಉಡುಪಿಯವ ಎನ್ನುವ ಚರ್ಯೆ ಕಾಣಿಸಲಿಲ್ಲ. ನಾನು ಅವನನ್ನು ನಿನ್ನ ಸ್ವಂತ ಊರು ಇದಲ್ಲ ಎಂದೆ. ಅವನು "ಹೌದು ಸಾರ್" ನಮ್ಮೂರು "ಯಾದಗಿರಿ" ಎಂದ.
ಉಡುಪಿ ಅಷ್ಠ ಮಠದ ಪ್ರಾಂಗಣದ ರಥಬೀದಿ ಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದವನನ್ನು ನಿಮ್ಮೂರು ಯಾವುದೆಂದು ಕೇಳಿದೆ...; ಆತ ನಮ್ಮೂರು "ಬಾದಾಮಿ" ಎಂದ. ಅಲ್ಲಿ ತರಕಾರಿ ಮಾರುವವ ಅಂಗಡಿಯವರೊಬ್ಬರು "ಹಾವೇರಿ" ಮೂಲದವರು. ನನ್ನ ಆಪ್ತರ ಅಂಗಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡು ವವರು "ಉತ್ತರ ಕರ್ನಾಟಕ" ಮೂಲದವರು. ಧಾರ್ಮಿಕ ಕ್ಷೇತ್ರವೊಂದರ ಬಾಣಸಿಗರು "ಉತ್ತರ ಕರ್ನಾಟಕ" ಮೂಲದವರು. ಉಡುಪಿ ಸುತ್ತ ಮುತ್ತಲಿನ ಪರಿಸರದಲ್ಲಿ ಬಹುತೇಕ ಕೂಲಿ ಕಾರ್ಮಿಕ- ನೌಕರ ವರ್ಗದವರು "ಉತ್ತರ ಕರ್ನಾಟಕ" ಮೂಲದವರು.
ನಾವು ಮಲೆನಾಡಿನಿಂದ ಯಾವುದೇ ಮಾರ್ಗದಲ್ಲಿಯಾದರೂ ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೆ ಸಂಚಾರ ಮಾಡಿದರೆ ರಸ್ತೆ ಪಕ್ಕದ ಹತ್ತು ಮನೆಗಳಲ್ಲಿ ಕನಿಷ್ಠ ನಾಲ್ಕು ಮನೆಯಾದರೂ ಖಾಲಿ ಬಿದ್ದಿರುತ್ತದೆ. ಇದರಲ್ಲಿ ಕೆಲವು ಹೊಸದಾಗಿ ಕಟ್ಟಿ ಯಾವತ್ತೋ ನಾವು ಮರಳಿ ಊರಿಗೆ ಬಂದು ನೆಲಸುತ್ತೇವೆ ಎಂಬಂಥಹ ಆಗದ ಹೋಗದ ಆಸೆಗೆ ಕಟ್ಟಿದ ಚಂದದ ಮನೆ ಯಾನೆ ಬಂಗಲೆಗಳೂ ಇಲ್ಲಿವೆ. ಎಫ್ ಸಿ ಮುಗಿದ, ಇನ್ಯಾವತ್ತೂ ರಸ್ತೆ ಗಿಳಿದು ಸಂಚಾರ ಮಾಡಲಾರದ ಕಾರು ವಾಹನಗಳಿದ್ದಂತೆ ಹಡಲು ಬಿಟ್ಟ ಗದ್ದೆಗಳು ಇನ್ನೆಂದೂ ತಮ್ಮ ಒಡಲಿನಲ್ಲಿ ಅನ್ನ ವನ್ನು ಹೆರಲಾರದಂತೆ ಅನಿಸುವಂತೆ ಖಾಲಿಬಿದ್ದಿದೆ. ಉಡುಪಿ ಸುತ್ತ ಮುತ್ತಲಿನ ಊರುಗಳಲ್ಲಿ ಬರೀ ಹಸಿರೇ ತುಂಬಿ ಭೂ ರಮೆ ಹಸಿರ ಸೀರೆ ತೊಟ್ಟಂತನ್ನಿಸುತ್ತಿದೆ. ನಮ್ಮಂಥ ಗೋಪಾಲಕರಿಗೆ ಈ ಹಸಿರ ಹುಲ್ಲು ನೋಡಿದರೆ ನಮ್ಮ ಊರಿನಲ್ಲಿ ನೆಲಕ್ಕೆ ಹತ್ತವಾಗಿರುವ ಹಸಿರ ಜೆಡ್ಡಿನ ಹುಲ್ಲು ಕುಡಿಯನ್ನ ಗೋವುಗಳು ತಮ್ಮ ಬಾಯಿಯಿಂದ ಶ್ರಮ ಪಟ್ಟು ಕೀಳುವುದು ಜ್ಞಾಪಕ ವಾಗುತ್ತದೆ. ಇಲ್ಲಿ ಮೇಯಲು ಜಾನುವಾರುಗಳೇ ಇಲ್ಲ. ಉಡುಪಿ ಸುತ್ತ ಮುತ್ತಲಿನ ಯಾವುದೇ ಊರಿನಲ್ಲೂ ದೇಸಿ ಹಸುಗಳು ಮೇಯುವುದನ್ನ ನಾನು ನೋಡೇ ಇಲ್ಲ. ಇದು ಆ ಪರಿಸರ ಮೂಲ ನಿವಾಸಿ ಕೃಷಿ ಯಿಂದ ಹಿಂದೆ ಸರಿದದ್ದರ ದ್ಯೋತಕ.
ಇದಕ್ಕೆ ಈ ನೂರು ವರ್ಷಗಳ ಹಿಂದೆ ಇಲ್ಲಿನ ಕೃಷಿಕನಿಗೆ ಆಸರೆಯಾಗಿ ನಿಂತಿದ್ದ ಕೂಲಿ ಕಾರ್ಮಿಕ ವರ್ಗ ಆ ನಂತರದ ದಿನಗಳಲ್ಲಿ ವಲಸೆ ಹೋದದ್ದು ಮೂಲ ಕಾರಣ. ಇಲ್ಲೀಗ ಕೂಲಿ ಕಾರ್ಮಿಕರಿಗೆ ಸಂಬಳ ಕೊಟ್ಟು ಗದ್ದೆ ಬೇಸಾಯ ಮಾಡಿದರೆ ಅಸಲುಗಿಂತ ಹೆಚ್ಚು ಖರ್ಚು. ಒಂದಷ್ಟು ತೆಂಗಿನ ಮರಗಳು ಕಾಣಿಸುತ್ತದೆ. ಅದರಲ್ಲಿ ಕಾಯಿ ಬಿಟ್ಟರೂ ಹೆಕ್ಕಲು ಜನ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಪುತ್ತೂರು ಧರ್ಮಸ್ಥಳ ಸುಳ್ಯ ಭಾಗದಲ್ಲಿ ಒಂದಷ್ಟು ಕೃಷಿ ಜೀವಂತವಾಗಿದೆ ಹೊರತು ಇನ್ನೆಲ್ಲೂ ಕೃಷಿ ಸಾಧ್ಯವೇ ಇಲ್ಲ ಎನಿಸುವಷ್ಟು ಕೃಷಿಗೆ ಪರದೆ ಸರಿದಿದೆ. ಒಂದೊಮ್ಮೆ ವಲಸೆ ಹೋದವರು ಇಲ್ಲಿಗೆ ಮರಳಿ ಬಂದರೂ ಮತ್ತೆ ಕೃಷಿ ಮಾಡಲಾರರು.
ಉಡುಪಿ ತುಂಬಾ ಮನೆಗಳಿವೆ... ಆದರೆ ''ಊರು ಮನೆ ಮೂಲ ನಿವಾಸಿಗಳಿಲ್ಲ ..!!"
ನನ್ನ ಆಪ್ತ ಮಲೆನಾಡಿಗರೊಬ್ಬರು ಉಡುಪಿಯಲ್ಲಿ ಸರ್ಕಾರಿ ನೌಕರರು. ಅವರಿಗೆ ಉಡುಪಿ ಸಮೀಪದ ಊರಿನಲ್ಲಿ ಅತ್ಯಂತ ವ್ಯವಸ್ಥಿತ, ಇಂಟರ್ ಲಾಕ್ ಅಂಗಳದ, ಸ್ವಂತ ಬಾವಿ, ಕಂಪೌಂಡ್ ಸುರಕ್ಷಿತ ಡುಪ್ಲೆಕ್ಸ್ ವಿಶಾಲವಾದ "ಬಾಡಿಗೆ ಮನೆ" ಅತ್ಯಂತ ಕಡಿಮೆ ಬಾಡಿಗೆಗೆ ಸಿಕ್ಕಿದೆ. ವಿಶೇಷ ವೆಂದರೆ ಆ ಮನೆಯ ಮಾಲಿಕರಿಗೆ ಯಾರಾದರೂ ನಂಬಿಕಸ್ಥ ಬಾಡಿಗೆ ದಾರರು ಸಿಕ್ಕಿ ಅವರು ಆ ಮನೆ ಖಾಲಿ ಬೀಳದಿದ್ದರೆ ಸಾಕು ಎನ್ನುವ ಆಸೆಯಿಂದ ಬಾಡಿಗೆಗೆ ನೀಡಿದ್ದಾರೆ. ಇಲ್ಲಿನ ಬಾಡಿಗೆ ಮನೆ ಓನರ್ ಗಳದ್ದು ನೋ ಡಿಮ್ಯಾಂಡ್...
ಉಡುಪಿ ಕುಂದಾಪುರ ಸುತ್ತಮುತ್ತ ಬಿಟ್ಟರೆ ಶಿವಮೊಗ್ಗ ಬೆಂಗಳೂರಿನಂತಹ ನಗರದಲ್ಲಿ ಬಾಡಿಗೆ ಮನೆ ಬಳಕೆದಾರರಿಗೆ ಈ ಅವಕಾಶ ಇಲ್ಲ.
ಕಾಸರಗೋಡಿನಿಂದ up to ಹೊನ್ನಾವರ ದ ತನಕ ನೂರೈವತ್ತು ವರ್ಷಗಳ ಹಿಂದೆ ಘಟ್ಟದ ಕೆಳಗಿನವರ ವಿವಿಧ ವರ್ಗದ ಜಾತಿಯವರ ವಲಸೆ ವಿವಿಧ ಕಾರಣಕ್ಕೆ ಆಯಾ ಭಾಗಕ್ಕೆ ಆತು ಕೊಂಡಿರುವ "ಘಟ್ಟ"ದ ಮೇಲೆ ವಲಸೆ ಹೋಗಿದೆ. ವಿಶೇಷವೇನೆಂದರೆ ಇದು ಕಾಲು ನಡಿಗೆಯ ಕಾಲದಲ್ಲಿ ಆದ ವಲಸೆ...!!
ಇದಾದ ನಂತರ ವಾಹನ ಸೌಕರ್ಯ ಬಂದ ಮೇಲೆ ರಾಜ್ಯದ ಇನ್ಯಾವ ಜಿಲ್ಲೆಯಿಂದಲೂ "ಅವಿಭಜಿತ ಧಕ್ಷಿಣ ಕನ್ನಡ ಜಿಲ್ಲೆಯ" ಜನಗಳಷ್ಟು ವಲಸೆ ಹೋಗಿಲ್ಲ. ಇವತ್ತು ದೇಶ ಅಲ್ಲ ಪ್ರಪಂಚದಾದ್ಯಂತ "ಉಡುಪಿ ಹೋಟೆಲ್" ಖ್ಯಾತಿಯಿದೆ. ಚಂದ್ರ ಲೋಕದಲ್ಲೂ ಅವಕಾಶ ಇದ್ದಲ್ಲಿ ದಕ್ಷಿಣ ಕನ್ನಡಿಗರು "ಉಡುಪಿ ಹೋಟೆಲ್" ಆರಂಭಿಸುತ್ತಾರೆ ಎಂಬುದು ಅತಿಶಯದ ಮಾತಲ್ಲ. ಹೋಟೆಲ್ ಒಂದಲ್ಲ ಹೊರ ರಾಜ್ಯದಲ್ಲಿ ಎಲ್ಲಾ ರಂಗದಲ್ಲೂ ಬುದ್ದಿವಂತ ದಕ್ಷಿಣ ಕನ್ನಡ ಜಿಲ್ಲಿಗರು ತಮ್ಮ ಛಾಪು ಮೂಡಿಸಿದ್ದಾರೆ.
ಕಳೆದ ಒಂದು ಶತಮಾನದಲ್ಲಿ ಜಗತ್ತು ತಂತ್ರಜ್ಞಾನ ಆಧಾರಿತ ಉದ್ಯಮದತ್ತ ಹೊರಳಿದೆ. ಮತ್ತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಿಕ್ಷಣ ರಂಗ, ವೈದ್ಯಕೀಯ ರಂಗ ಮತ್ತು ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ಬಹಳ ಅಭಿವೃದ್ಧಿ ಹೊಂದಿ ಇಡೀ ಜಗತ್ತನ್ನ ತನ್ನೆಡೆಗೆ ಸೆಳಿದಿದೆ. ಮಂಗಳೂರು, ಮಣಿಪಾಲ, ಧರ್ಮಸ್ಥಳ, ನಿಟ್ಟೆ- ಕಾರ್ಕಳ ಮುಂತಾದ ಕಡೆಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಿಲ್ಲೆಯ ಹೊರಗಿನ ಲಕ್ಷಾಂತರ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಬಂದು ನೆಲಸಿ ಶಿಕ್ಷಣ ಪಡೆಯುತ್ತಿದ್ದಾರೆ.
ಜಗತ್ತಿನಾದ್ಯಂತದ ಹಿಂದೂಗಳು ಧಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳನ್ನು ಸಂಪರ್ಕ ಮಾಡಿ ದೇವತಾ ದರ್ಶನ ಮಾಡುತ್ತಿದ್ದಾರೆ.
ಮಣಿಪಾಲ್ ಆಸ್ಪತ್ರೆ ನಮ್ಮ ಮಲೆನಾಡು ಕರಾವಳಿ ಪ್ರದೇಶದ ಕಟ್ಟ ಕಡೆಯ ಚಿಕಿತ್ಸೆಯ ಅವಕಾಶವಾಗಿ ಕಳೆದ ಐವತ್ತು ವರ್ಷಗಳಿಗಿಂತ ಹೆಚ್ಚಿನ ವರ್ಷಗಳಿಂದ ವೈದ್ಯಕೀಯ ಚಿಕಿತ್ಸಾ ಸಾರ್ವಭೌಮತ್ವವನ್ನು ಸಾಧಿಸಿದೆ.
ಇಷ್ಟೆಲ್ಲಾ ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲೆಯ "ಮೂಲ ನಿವಾಸಿಗಳು" ಕಾಣಿಸುತ್ತಿಲ್ಲ!? ಕಳೆದ ನೂರೈವತ್ತು ವರ್ಷಗಳ ವಿವಿಧ ಹಂತದಲ್ಲಿ ಧಕ್ಷಿಣ ಕನ್ನಡ ಜಿಲ್ಲೆಯಿಂದ ವಿವಿಧ ಕಾರಣಕ್ಕೆ ಮಹಾ ವಲಸೆಯಾಗಿದೆ. ಈಗ "ಉಡುಪಿ"ಯಲ್ಲಿ ಜನ ಇದ್ದರೂ ಬಹುತೇಕರು ಮೂಲ ಉಡುಪಿಯವರಲ್ಲ.
ಆದರೆ ತಲೆಮಾರಿನ ಆಚೆಯೂ ಧಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಊರು, ರಾಜ್ಯ ಮತ್ತು ವಿದೇಶದಲ್ಲಿ ಇದ್ದರೂ ಊರ ಕಡೆ ಅವರ ನೆಂಟರಿಷ್ಟರು , ಜಮೀನು ಮನೆ ಯಾವುದೂ ಇಲ್ಲದೇ ಇದ್ದರೂ ಊರಿನ ಸೆಳೆತ ಎಂದಿಗೂ ಕಡಿಮೆಯಾಗಿಲ್ಲ. ನಮ್ಮ ಮಲೆನಾಡಿನ ಕಡೆ ಊರ ಬಿಟ್ಟವರಿಗೆ ಮತ್ತೆಂದೂ ಊರ ಕಡೆ ಬರಬೇಕಾದ "ಸೆಳೆತ" ಇಲ್ಲ. ನಮ್ಮ ಕಡೆ ಒಮ್ಮೆ ಊರು ಬಿಟ್ಟವರು ಮತ್ತೆ ಇತ್ತ ಕಡೆ ತಲೆ ಹಾಕಿಲ್ಲ...!!
ಆದರೆ ಕರಾವಳಿಯವರಿಗೆ ಎರಡು ಗಟ್ಟಿ ಸೆಳೆತಗಳು ತಾಯ್ನಾಡಿಗೆ ಸದಾ ಮಿಡಿಯುವಂತೆ ಮಾಡುತ್ತಿದೆ. ಅದರಲ್ಲಿ ಮೊದಲೆಯದ್ದು ಭಾಷೆ- ಉಡುಪಿ ಮಂಗಳೂರಿನ ನಿವಾಸಿಗಳ ತುಳು. ಮತ್ತು ಕುಂದಾಪುರ ಸುತ್ತಲಿನ ಕುಂದಾಪುರ ಕನ್ನಡ ಭಾಷೆ. ಎರಡನೆಯದ್ದು, ಕರಾವಳಿಯ ಶಕ್ತಿ ದೇವತೆಗಳ ದೇವಸ್ಥಾನಗಳು ಮತ್ತು "ದೈವಸ್ಥಾನ"ಗಳು.
ಭಾಷಾ ಪ್ರೇಮ ಮತ್ತು ದೇವರ ಆರಾಧನಾ ಭಾವ ಯಾವುದೋ ಕಾಲದಲ್ಲಿ ಊರು ಬಿಟ್ಟವರನ್ನೂ ನಾವು ಧಕ್ಷಿಣ ಕನ್ನಡ ಮೂಲದವರು ಒಂದು ಒಳಭಾವ ಅವರಲ್ಲಿ ಉಳಿಸಿ ಬೆಳಸಿ ಬಾಳಿಸುತ್ತಿದೆ. ಜಗತ್ತಿನ ಎಲ್ಲ ಜಾನಪದ ಕಲೆಯೂ ಅಳಿವಿನಂಚಿಗೆ ಸರಿದಿದ್ದರೂ ತುಳು ನಾಡಿನ "ಯಕ್ಷಗಾನ" ಕಲೆ ಜೀವಂತಿಗೆ ಈ ಊರವರ ಅಭಿಮಾನ ಕಾರಣ.
ಪಂಜಾಬಿನ ಸಿಖ್ ಸಮುದಾಯ ತಾಯ್ನಾಡು ಮತ್ತು ತಮ್ಮ ಧಾರ್ಮಿಕ ನಂಬಿಕೆಯನ್ನು ಜಗತ್ತಿನ ಎಲ್ಲೇ ಹೋದರೂ ಉಳಿಸಿ ಬಾಳಿಸಿಕೊಂಡು ಹೋಗುತ್ತಿರುವ ಸಮೂದಾಯವಾಗಿದೆ. ಅದೇ ರೀತಿಯಲ್ಲಿ ಕರಾವಳಿಗರೂ ಕೂಡ ಕರಾವಳಿಯಿಂದ ವಲಸೆ ಹೋಗಿಯೂ ತಮ್ಮ ಭಾಷೆ ಮತ್ತು ಊರ ದೇವರು ದೈವಗಳ ಆರಾಧನಾ ಪ್ರೇಮದಿಂದ ತಾಯಿ ನಾಡಿನ ಕಡೆಗೆ ಅದಮ್ಯ ಪ್ರೀತಿ ಉಳಿಸಿ ಕೊಂಡಿದ್ದಾರೆ.
ಇದೆಲ್ಲಾ ಹೆಮ್ಮೆ ಪಡುವ ಸಂಗತಿಗಳ ನಡುವೆ ಕರಾವಳಿಯ ಊರು ಮನೆ ಅಂತರಾಳದ ನಡುವೆ ಖಾಲಿ ಮನೆಗಳು. ಎಲ್ಲಿಂದಲೋ ಬಂದು ಇಲ್ಲಿಯವರಾಗುತ್ತಿರುವ ವಲಸೆ ಜೀವಿಗಳು! ಕರಾವಳಿಯ ನೂರೈವತ್ತು ವರ್ಷಗಳ ಈಚಿನ ಮಹಾ ವಲಸೆ ಒಂದು ದೊಡ್ಡ ಅಧ್ಯಯನ ವಸ್ತುವಾಗಿದೆ.
ಉಡುಪಿ ಪಟ್ಟಣವನ್ನು ಕಣ್ಣರಳಿಸಿ ನೋಡಿದಾಗ ಜನ ಸಾಗರದ ನಡುವೆ "ಜನರಿಲ್ಲದ" ಊರು ಎನಿಸುತ್ತದೆ. ಎಷ್ಟೇ ಆಸೆಯಿಂದ ಕರಾವಳಿಯಿಂದ ಹೊರ ಊರುಗಳಿಗೆ ಹೋಗಿರುವ ವಲಸಿಗರು ಮರಳಿ ಊರಿಗೆ ಬಂದು ನೆಲೆಸುತ್ತೇವೆಂದು ಬಯಸಿದರೂ ಸಾಧ್ಯವೇ ಆಗದೇ ಕನಸಾಗಿ ಉಳಿಯುತ್ತದೆ.
ಚಂದ ಚಂದದ ಮನೆ- ಕಾಂಪೌಂಡ್ಗಳು. ಎಂದಾದರೂ ಗೇಟಿಗೆ ಬೀಗ ಹಾಕಿರುವ ಬೀಗ ತೆರೆದು ಕೀರಲು ಸದ್ದುಮಾಡುವ ಗೇಟು ತೆರೆದು ರಂಗೋಲಿ ಬರೆದಂತಾ ಇಂಟರ್ ಲಾಕ್ ಹಾಕಿದ ಅಂಗಳ ದಾಟಿ ಮನೆ ಬೀಗ ತೆರದು ಮನೆಯ ಯಜಮಾನ ಒಳ ಬಂದು ಮತ್ತೆ ನೆಲೆಸಿಯಾನು ಎಂಬ ಆಸೆಯಲಿ ಕಾಯುತ್ತಿದೆ ಈ ನಿರ್ವಸಿತ ಮನೆ.
ವಂದನೆಗಳು
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ