ಶೈಕ್ಷಣಿಕ ಅರಾಜಕತೆಯತ್ತ ಸಾಗುತ್ತಿದೆ ಕರ್ನಾಟಕ

Upayuktha
0



-ರಾಜೀವ ಹೆಗಡೆ


ಘಟನೆ.1: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರುವವರೆಗೂ ಪಿಯು ಕಾಲೇಜುಗಳ ಪ್ರವೇಶ ಪ್ರಕ್ರಿಯೆ ನಡೆಸಕೂಡದು ಎನ್ನುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿತ್ತು. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿತ್ತು. ಆ ಸಂದರ್ಭದಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ಇಬ್ಬರು ಪ್ರತಿಷ್ಠಿತ ಸಂಸ್ಥೆಗಳ ಒತ್ತಡಕ್ಕೆ ಮಣಿದ ಪ್ರಭಾವಿ ಸಚಿವರೊಬ್ಬರು, ಅಧಿಕಾರಿಗಳನ್ನು ಕರೆಯಿಸಿಕೊಂಡರು. 'ಇವರು ನಮ್ಮವರು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿʼ ಎನ್ನುವ ಮೌಖಿಕ ಎಚ್ಚರಿಕೆ ನೀಡಿದರು. ಸಚಿವರಿಂದ ಅವಾಜು ಹಾಕಿಸಿದ ಶಿಕ್ಷಣ ಸಂಸ್ಥೆಗಳು ಲಕ್ಷ ಲಕ್ಷ ರೂಪಾಯಿ ಶುಲ್ಕ ಏರಿಸಿಕೊಂಡು, ಯಾವುದೇ ನಿಯಮ ಸಂಬಂಧವಿಲ್ಲದಂತೆ ಹಣ ವಸೂಲಿ ಮಾಡಿದವು.


ಘಟನೆ.2: ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ ಹೇಳುವಂತೆ ಬೆಂಗಳೂರಿಗೆ ಕೇವಲ ₹500 ಹಿಡಿದುಕೊಂಡು ಬಂದು, ಇಂದು ₹300 ಕೋಟಿ ಸಾಮ್ರಾಜ್ಯ ಕಟ್ಟಿದ್ದಾರೆ. ಜಗತ್ತಿನ ಯಾವುದೇ ವಿಷಯಗಳ ಬಗ್ಗೆ ಮಾತನಾಡುವ ಈ ವ್ಯಕ್ತಿಯ ಕೋಚಿಂಗ್‌ ಸೆಂಟರ್‌ನ ಶುಲ್ಕವನ್ನು ಕೇಳಿದರೆ ತಲೆ ತಿರುಗಿ ಹೋಗುತ್ತದೆ. ಈ ವ್ಯಕ್ತಿಯು 12+1 ಎನ್ನುವ ವ್ಯವಸ್ಥೆಯನ್ನು ಅನಾಯಾಸವಾಗಿ ಜಾರಿ ಮಾಡಿಕೊಂಡು, ಪರ್ಯಾಯ ಶಿಕ್ಷಣ ಸಾಮ್ರಾಜ್ಯ ಕಟ್ಟುತ್ತಿದ್ದಾರೆ.


ಘಟನೆ.3: ಪ್ರತಿಷ್ಠಿತ ಎಂದು ಬರೆಯಿಸಿಕೊಳ್ಳುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಳೆದ ಮೂರು ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ದುಪ್ಪಟ್ಟು ಮಾಡಿವೆ. ಪ್ರೀ-ನರ್ಸರಿ ಶಾಲೆಗಳ ಶುಲ್ಕ ಒಂದು-ಎರಡು ಲಕ್ಷ ರೂಪಾಯಿ ದಾಟಿವೆ. ಅಂತಾರಾಷ್ಟ್ರೀಯ ಶಾಲೆಗಳೆಂದು ಬೋರ್ಡ್‌ ಹಾಕಿಕೊಂಡವರು ಎರಡಂಕಿ ಲಕ್ಷವನ್ನು ದಾಟುತ್ತಿವೆ. ಆ ಶಾಲೆಗಳ ಶುಲ್ಕ ತೋರಿಸಿಕೊಂಡು ಉಳಿದವರು ಕೂಡ ಈ ಬಾರಿ ಹೆಚ್ಚಿಸಿವೆ. ಶುಲ್ಕ ಬರಿಸಲು ಇಎಂಐ ಪಾವತಿ ರೂಪದ ವ್ಯವಸ್ಥೆ ಬಂದಿದೆ.


ಸಂಪೂರ್ಣ ರಾಜಕೀಯ ಹೊಂದಾಣಿಕೆಯಲ್ಲಿ ಮಿಂದೇಳುತ್ತಿರುವ ಕರ್ನಾಟಕದಲ್ಲಿ, ಶಿಕ್ಷಣ ಕ್ಷೇತ್ರದ ಈ ಅವ್ಯವಸ್ಥೆ ಬಗ್ಗೆ ಬೀದಿಗಿಳಿಯುವ ಕೆಲಸವನ್ನೇ ಮಾಡುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಾವು ಎಣಿಸಲಾಗದ ಮಟ್ಟಿಗೆ ಶಿಕ್ಷಣವನ್ನು ಕುಲಗೆಡಿಸಿದ್ದೇವೆ. ಈ ಅವ್ಯವಸ್ಥೆ ಬಗ್ಗೆ ಮಾತನಾಡಬೇಕಾದ ರಾಜಕೀಯ ಶಕ್ತಿ ಹಾಗೂ ಸಂಘ-ಸಂಸ್ಥೆಗಳೇ ಈ ವಸೂಲಿ ಕೇಂದ್ರಗಳಾಗಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಗೋಳಿಗೆ ಯಾರೂ ಧ್ವನಿಯಾಗುತ್ತಿಲ್ಲ. ವಿಪರ್ಯಾಸವೆಂದರೆ ಬೆವರಿನ ಜತೆಗೆ ರಕ್ತ ಸುರಿಸುತ್ತಿರುವ ನಾವು ಜನಸಾಮಾನ್ಯರು ಕೂಡ ಮೌನಕ್ಕೆ ಶರಣಾಗಿದ್ದೇವೆ.


ಕಳೆದ ಮೂರು ವರ್ಷಗಳಲ್ಲಿ ಖಾಸಗಿ ಶಾಲೆಗಳ ಶುಲ್ಕವು ಬಹುತೇಕ ದುಪ್ಪಟ್ಟಾಗಿದೆ. ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಈ ವರ್ಷವೊಂದರಲ್ಲೇ ಶೇ.75ರಷ್ಟು ಶುಲ್ಕ ಹೆಚ್ಚಳವಾಗಿದೆ. ನನ್ನ ಸ್ನೇಹಿತರೊಬ್ಬರು ಮೊನ್ನೆ ತಮ್ಮ ಮಗನನ್ನು ಪ್ರೀ-ನರ್ಸರಿಗೆ ಸೇರಿಸಲು ಹೋದಾಗ ₹2.5 ಲಕ್ಷ ಶುಲ್ಕ ಕಟ್ಟಲು ಹೇಳಿದರಂತೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಗೆ ಎಲ್ಲ ಕೋಚಿಂಗ್‌ ಸೇರಿ ಸರಿ ಸುಮಾರು ₹10 ಲಕ್ಷ ಆಗುತ್ತಿದೆ ಎಂದು ಶಿಕ್ಷಣ ಇಲಾಖೆಯಲ್ಲಿನ ವ್ಯಕ್ತಿಯೊಬ್ಬರು ಅಸಹಾಯಕತೆಯಿಂದ ಹೇಳಿಕೊಂಡರು. ದುಡ್ಡಿದ್ದವರು ದುಬಾರಿ ಶಾಲೆಗೆ ಕಳುಹಿಸುತ್ತಾರೆ ಬಿಡಿ ಎಂದು ನಿರ್ಲಕ್ಷಿಸುವ ಕಾಲ ಹೋಯಿತು. ಏಕೆಂದರೆ ಈ ಶಾಲೆಯ ಶುಲ್ಕ ತೋರಿಸಿ ಅಳಿದುಳಿದ ಶಾಲೆಗಳು ಕೂಡ ಶುಲ್ಕವನ್ನು ಅತಿಯಾಗಿ ಏರಿಸುತ್ತಿವೆ.


ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ದುಬಾರಿ ಶಿಕ್ಷಣ ಎನಿಸಿಕೊಳ್ಳುವ ವೃತ್ತಿಪರ ಕೋರ್ಸ್‌ಗಳ ಶುಲ್ಕಕ್ಕಿಂತ ಪ್ರಾಥಮಿಕ ಹಾಗೂ ಪಿಯು ಶಿಕ್ಷಣದ ಶುಲ್ಕ ಹೆಚ್ಚಾಗಿದೆ. ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿನ ಶೇ.10ರಷ್ಟು ಮೂಲ ಸೌಕರ್ಯವನ್ನು ಈ ಶಿಕ್ಷಣ ಸಂಸ್ಥೆಗಳು ಹೊಂದಿರುವುದಿಲ್ಲ. ಆ ಶಿಕ್ಷಣ ಸಂಸ್ಥೆಗಳ ಕಾಲು ಭಾಗದಷ್ಟು ವೇತನವನ್ನು ಶಿಕ್ಷಕರಿಗೆ ನೀಡುವುದಿಲ್ಲ. ಆ ಶಾಲೆಗಳಲ್ಲಿನ ಶಿಕ್ಷಕರ ಗೋಳಿನ ಬಗ್ಗೆ ಪುಸ್ತಕ ಬರೆಯುವಷ್ಟು ವಿಚಾರಗಳಿವೆ. ಇಷ್ಟಾಗಿಯೂ ಎಂಬಿಬಿಎಸ್‌, ಎಂಜಿನಿಯರಿಂಗ್‌, ಎಂಬಿಎ ಕೋರ್ಸ್‌ಗಳಿಗಿಂತ ಪ್ರಾಥಮಿಕ ಶಾಲೆಗಳ ಶುಲ್ಕ ಹೆಚ್ಚಾಗಿದೆ. ಯಾವ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳು ಈ ಮಟ್ಟದ ದುಬಾರಿ ಶುಲ್ಕ ನಿಗದಿ ಮಾಡುತ್ತಿವೆ ಎನ್ನುವುದನ್ನು ಪ್ರಶ್ನಿಸುವ ಜವಾಬ್ದಾರಿಯನ್ನೇ ಸರ್ಕಾರ ಮರೆತಿದೆ. ಏಕೆಂದರೆ ಈ ಶಿಕ್ಷಣ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ರಾಜಕಾರಣಿಗಳು ಅಥವಾ ಅಧಿಕಾರಿಗಳ ಕುಟುಂಬವೇ ಕುಳಿತಿದೆ. ಅವರಿಗೆ ಹೇಗೂ ಲೂಟಿ ಮಾಡಿದ ದುಡ್ಡಿದೆ ಅಥವಾ ಆ ಶಾಲೆಗಳಲ್ಲಿ ಉಚಿತವಾಗಿಯೇ ಸೀಟುಗಳು ಸಿಗುತ್ತವೆ. ಆದರೆ ಜನ ಸಾಮಾನ್ಯರು ಹುಚ್ಚಿಗೆ ಬಿದ್ದವರಂತೆ ಸಾಲ ಮಾಡಿ ಈ ಶಾಲೆಗಳ ಹಿಂದೆ ಬೀಳಬೇಕಿದೆ.


ಸರ್ಕಾರ ಅಥವಾ ಸಂಘಗಳಲ್ಲಿ ಮೇಲೆ ಕುಳಿತವರನ್ನು ಈ ಬಗ್ಗೆ ಒಮ್ಮೆ ಪ್ರಶ್ನಿಸಿ ನೋಡಿ, ನಿಮಗೆ ಅತ್ಯದ್ಭುತವಾದ ಉತ್ತರ ಬರುತ್ತದೆ. ʼನೀವು ತಿಳಿದವರೆಲ್ಲ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತೀರಿ. ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರು ಹಾಳಾಗಿ ಹೋಗಿದ್ದಾರೆ. ಹೀಗಾಗಿ ಸರ್ಕಾರ ಏನು ಮಾಡಲು ಸಾಧ್ಯ?ʼ ಎನ್ನುವ ಅತ್ಯಂತ ಬುದ್ಧಿವಂತಿಕೆಯ ಉತ್ತರ ನೀಡುತ್ತಾರೆ. ಒಂದು ಕ್ಷಣಕ್ಕೆ ನಮ್ಮ ಕೆನ್ನೆಗೆ ರಪ್ಪೆಂದು ಹೊಡೆದುಕೊಳ್ಳಬೇಕು ಎನ್ನುವ ಮಟ್ಟಿಗೆ ಪ್ರಾಮಾಣಿಕ ಎನಿಸುವ ಉತ್ತರ ಕೊಟ್ಟುಬಿಡುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲನ ವಾತಾವರಣನ್ನು ಹಾಳು ಮಾಡಿದ್ದು ಹಾಗೂ ಖಾಸಗಿ ಶಾಲೆಗಳ ಮೇಲೆ ಗೀಳು ಹುಟ್ಟಿಕೊಳ್ಳುವಂತೆ ಮಾಡಿದ್ದು ಪಾಲಕರಲ್ಲ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರಗಳಾಗಿಯೇ ಇಂದು ಈ ಹಂತಕ್ಕೆ ಬಂದು ತಲುಪಿದೆ.


ಕೋರ್ಟ್‌ ಕಡೆ ಕೈ ತೋರಿಸುವ ಸರ್ಕಾರ

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಯನ್ನು ಪ್ರಶ್ನಿಸಿದರೆ, ಹೈಕೋರ್ಟ್‌ನತ್ತ ರಾಜ್ಯ ಸರ್ಕಾರ ಬೊಟ್ಟು ಮಾಡುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕವನ್ನು ನಿರ್ಧರಿಸುವ ಅಧಿಕಾರವಿಲ್ಲವೆಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ನೀಡಿದೆ. ಯಾವ ಘನ ಉದ್ದೇಶ ಹಾಗೂ ಹಿನ್ನೆಲೆಯಲ್ಲಿ ಈ ಆದೇಶ ಹೊರಕ್ಕೆ ಬಂದಿದೆಯೋ ನನಗೆ ತಿಳಿದಿಲ್ಲ. ಆದರೆ ಇಂತಹದೊಂದು ಆದೇಶದ ವಿರುದ್ಧ ಮೇಲ್ಮನವಿ ಹೋಗದಿರುವ ಶಿಕ್ಷಣ ಇಲಾಖೆ ಮಾತ್ರ ಜನ ವಿರೋಧಿಯಾಗಿದೇ. ವೈಯಕ್ತಿಕ ಭ್ರಷ್ಟಾಚಾರ ಪ್ರಕರಣಗಳಿಗೆ ಕೋಟಿ ಕೋಟಿ ಸುರಿದು ದೆಹಲಿಯಿದ ವಕೀಲರನ್ನು ವಿಮಾನದಲ್ಲಿ ಕರೆತರುತ್ತಾರೆ. ಆದರೆ ರಾಜ್ಯದ ಬಡ ಹಾಗೂ ಸಾಮಾನ್ಯ ಜನರ ಮಕ್ಕಳ ಭವಿಷ್ಯ ನಿರ್ಧರಿಸುವ ವಿಚಾರಕ್ಕೆ ಇಂತಹ ವಕೀಲರು ಕಾಣಿಸುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವ ಎನ್ನುವ ಈ ನಾಟಕದಲ್ಲಿ ನಾವು ಪ್ರಜೆಗಳು ಪ್ರಭುಗಳು ಅಲ್ಲವೇ ಅಲ್ಲ. ನಮ್ಮನ್ನು ಅಬ್ಬೆಪಾರಿಗಳನ್ನಾಗಿ ಮಾಡಿ ಲೂಟಿ ಮಾಡುತ್ತಿದ್ದಾರೆ.


ಅಷ್ಟಕ್ಕೂ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುವರು, ಈ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದು ಟೀಕಿಸುವವರಿದ್ದಾರೆ. ವಾಸ್ತವವೇನೆಂದರೆ ಇಂಗ್ಲಿಷ್‌ ಮಾಧ್ಯಮದ ಗೀಳಿಗೆ ಬಿದ್ದು ಸರ್ಕಾರಿ ಶಾಲೆಗಳು ಹಳ್ಳ ಹಿಡಿದಿವೆ. ಇದನ್ನೇ ಅಸ್ತ್ರವಾಗಿಸಿಕೊಂಡು ಖಾಸಗಿ ಶಾಲೆಗಳು ಪಾಲಕರನ್ನು ಎಟಿಎಂ ಯಂತ್ರಗಳಂತೆ ಪರಿಗಣಿಸುತ್ತಿದ್ದಾರೆ. ಆದರೆ ಈ ಬಗ್ಗೆ ಧ್ವನಿ ಎತ್ತಬೇಕಾದವರು ಖಾಸಗಿ ಶಾಲೆಗಳ ದಾಳವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆ ಉದ್ಧಾರ ಮಾಡಿ ಎಂದರೆ, ಅದು ಸರಿ‌ ಮಾಡಲಾಗದಷ್ಟು ಕುಲಗೆಟ್ಟು ಹೋಗಿದೆ ಎನ್ನುತ್ತಾರೆ. ಖಾಸಗಿ ಶಾಲೆ ನೀಯಂತ್ರಿಸಿ ಎಂದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಜನ ಎಲ್ಲಿಗೆ ಹೋಗಬೇಕು?


ಕೋಚಿಂಗ್‌ ಕೇಂದ್ರಗಳ ಹಾವಳಿ

ಕೆಲ ವರ್ಷಗಳ ಹಿಂದೆ ಕೋಚಿಂಗ್‌ ಕೇಂದ್ರಗಳು ಉಳ್ಳವರಿಗೆ ಸೀಮಿತವಾಗಿತ್ತು. ಕೋಚಿಂಗ್‌ ಇಲ್ಲದೆಯೂ ಸಿಇಟಿ ಅಥವಾ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಸಾಧ್ಯತೆ ಸಾಕಷ್ಟಿತ್ತು. ಆದರಿಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸಂಬದ್ಧ ಪಠ್ಯ ಕ್ರಮದ ಕಾರಣದಿಂದ ಪ್ರತಿ ದಿನ ನಡೆಯುವ ತರಗತಿಯ ಕಲಿಕೆಯಿಂದ ದ್ವಿತೀಯ ಪಿಯುನಲ್ಲಿ ಒಳ್ಳೆಯ ಅಂಕ ಪಡೆಯಬಹುದು. ಆದರೆ ಸ್ಪರ್ಧಾತ್ಮಕ ಪರೀಕ್ಷಯತ್ತ ತಲೆ ಹಾಕಿ ಮಲುಗಲು ಕೂಡ ಸಾಧ್ಯವಿಲ್ಲ ಎನ್ನುವಂತಾಗಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದೇ ಪರ್ಯಾಯ ತರಗತಿಗಳನ್ನು ನಡೆಸಲು ಆರಂಭಿಸಿವೆ. ಅದರ ಶುಲ್ಕವು ಪಿಯು ಶುಲ್ಕಕ್ಕಿಂತ ಹೆಚ್ಚಿರುತ್ತವೆ. ಇದರ ಪರಿಣಾಮವಾಗಿ ನಮ್ಮ ಕಾಲದ ಕೋಚಿಂಗ್‌ ಸೆಂಟರ್‌ಗಳು ಇಂದು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಲೂಟಿ ಸಂಸ್ಥೆಗಳಾಗಿ ಪರಿವರ್ತನೆಯಾಗಿವೆ.


ಪ್ರಥಮ ಹಾಗೂ ದ್ವಿತೀಯ ಪಿಯುಗೆ Aಯಿಂದ Zವರೆಗೆ ವಿಂಗ್‌ಗಳು ಆರಂಭವಾಗಿವೆ. ಎಂಬಿಬಿಎಸ್‌ನ ಕಾಮೆಡ್‌-ಕೆ ಸೀಟುಗಳಿಗಿಂತ ಅತ್ಯಧಿಕ ಮೊತ್ತವನ್ನು ಕೇವಲ ಪಿಯುಗೆ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೋಚಿಂಗ್‌ ಸೆಂಟರ್‌ ನಡೆಸುವರೆಲ್ಲ ಜಗತ್ತಿಗೆ ಮೋಟಿವೇಷನ್‌ ಸ್ಪೀಕರ್‌ಗಳಾಗಿದ್ದಾರೆ. ಶಿಕ್ಷಣದ ಹೆಸರಲ್ಲಿ ಪ್ರತಿ ವರ್ಷ ಕೋಟಿ ಕೋಟಿ ಲೂಟಿ ಮಾಡುವ ಭ್ರಷ್ಟ ರಾಜಕಾರಣಿಗಳು, ಬಡತನದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಬಿಟ್ಟಿ ಭಾಷಣ ಮಾಡುತ್ತಾರೆ. ನಾವು ಇವರನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತಿದ್ದೇವೆ. ಹೀಗೆ ಕುಳಿತರೆ ಇನ್ನು ಕೆಲವೇ ವರ್ಷಗಳಲ್ಲಿ ಜನಸಾಮಾನ್ಯರು ವೈದ್ಯರು ಆಗುವುದು ಸಾಧ್ಯವೇ ಇಲ್ಲದಂಥ ದುಸ್ಥಿತಿ ನಿರ್ಮಾಣವಾಗುತ್ತದೆ. ಜನರ ನೋವನ್ನು ಅರಿಯದವ, ಕಷ್ಟವನ್ನು ನೋಡದವ ವೈದ್ಯನಾದರೆ ಯಾವ ರೀತಿಯ ಚಿಕಿತ್ಸೆ ದೊರೆಯಬಹುದು ಎನ್ನುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದನ್ನೆಲ್ಲ ನೆನೆಸಿಕೊಂಡರೆ ಮೈ ಉರಿದುಹೋಗುತ್ತದೆ, ಕೋಪ ನೆತ್ತಿಗೇರಿ ರಾತ್ರಿ ನಿದ್ರೆ ಬರದಂಥ ಸ್ಥಿತಿ ನಿರ್ಮಾಣವಾಗುತ್ತದೆ.


ಶಿಕ್ಷಣ ಮೇಳ ಹಾಗೂ ಮಾಧ್ಯಮ

ಕೆಲ ವರ್ಷಗಳ ಹಿಂದೆ ಎಂಜಿನಿಯರಿಂಗ್‌ ಹಾಗೂ ವೈದ್ಯ ಕೋರ್ಸ್‌ಗಳ ಶುಲ್ಕವನ್ನು ಶೇ.೫ರಷ್ಟು ಏರಿಸಿದ್ದಾಗ ಮಾಧ್ಯಮಗಳಲ್ಲಿ ಪ್ರತಿರೋಧದ ರೂಪದಲ್ಲಿ ಮುಖಪುಟದ ವರದಿಯಾಗಿತ್ತು. ನಿಗದಿತ ಶುಲ್ಕಕ್ಕಿಂತ ೫-೧೦ ಸಾವಿರ ರೂಪಾಯಿ ಹೆಚ್ಚುವರಿ ಶುಲ್ಕ ಪಡೆಯುವುದರ ವಿರುದ್ಧ ದೊಡ್ಡ ಗಲಾಟೆಯಾಗಿತ್ತು. ಮಾಧ್ಯಮ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸದನದಲ್ಲಿ ಪ್ರತಿಪಕ್ಷ ನಾಯಕರು ಪ್ರತಿಭಟಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರವು ಅನಿವಾರ್ಯವಾಗಿ ಕ್ರಮವನ್ನು ಕೂಡ ತೆಗೆದುಕೊಳ್ಳಬೇಕಾಗಿತ್ತು. ಆದರೆ ಮಾಧ್ಯಮ ಸಂಸ್ಥೆಗಳು ಮಾಡಿದ ಒಂದು ಸಣ್ಣ ತಪ್ಪಿನಿಂದ ದಶಕದೊಳಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕಳೆದೊಂದು ದಶಕದಿಂದ ಬಹುತೇಕ ಮಾಧ್ಯಮ ಸಂಸ್ಥೆಗಳು ಶಿಕ್ಷಣ ಮೇಳ ನಡೆಸುತ್ತಿವೆ. ಆರಂಭಿಕ ಹಂತದಲ್ಲಿ ಓದುಗರಿಗೆ ಶೈಕ್ಷಣಿಕ ಸಲಹೆ ನೀಡುವುದು ಇದರ ಉದ್ದೇಶವಾಗಿತ್ತು. ಆದರೆ ದಿನ ಕಳೆದಂತೆ ಮಾಧ್ಯಮಗಳಲ್ಲ ಋಣಾತ್ಮಕ ಸುದ್ದಿಗಳು ಬರುವುದನ್ನು ನಡೆಯಲು ಇವು ಅಸ್ತ್ರವಾಗಿ ರೂಪುಗೊಂಡವು. ಶಿಕ್ಷಣ ಮೇಳದಲ್ಲಿ ಭಾಗಿಯಾದರೆ ನಾವು ಸೇಫ್‌ ಎನ್ನುವ ಮಟ್ಟಿಗೆ ದೊಡ್ಡ ಶಿಕ್ಷಣ ಸಂಸ್ಥೆಗಳು ಬದಲಾದವು. ಇದರ ಪರಿಣಾಮವಾಗಿ ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿ ಬಗ್ಗೆ ಚಕಾರವೆತ್ತುತ್ತಿಲ್ಲ. ಸರ್ಕಾರದ ಭಯದಿಂದ ಶಿಕ್ಷಣ ಇಲಾಖೆಯ ಅವ್ಯವಸ್ಥೆಯ ಬಗೆಗೂ ಜಾಣ ಕುರುಡು ಪ್ರದರ್ಶಿಸಲಾಗುತ್ತಿದೆ. ಅಂದ್ಹಾಗೆ ʼನನ್ನ ಲೆವಲ್‌ನ ನಾಯಕರ ಬಗ್ಗೆ ಮಾತ್ರ ಮಾತನಾಡುತ್ತೇನೆʼ ಎನ್ನುವ ಬಾಯಿಚಪಲದ ರಾಜಕಾರಣಿಯ ಅಸಂಬದ್ಧ ಹೇಳಿಕೆಗಳು ಎಲ್ಲ ಮಾಧ್ಯಮಗಳಲ್ಲೂ ರಾರಾಜಿಸಲು ಕಾರಣ ಕೂಡ ಇದೇ ʼಪರಿಶ್ರಮʼದ ಜಾಹೀರಾತು ಎನ್ನುವುದನ್ನು ಮರೆಯಬೇಡಿ.  ಇದೊಂದು ಸಣ್ಣ ಉದಾಹರಣೆಯಷ್ಟೆ. ನಾವು ಜನಸಾಮಾನ್ಯರು ಹೀಗೆ ಕುಳಿತರೆ ಈ ಲೂಟಿಕೋರರು ಜನಸಾಮಾನ್ಯರ ಕೈಗೆ ಸಿಗದೆ ಬೇರೆಯದೇ ಲೆವಲ್‌ ತಲುಪುತ್ತಾರೆ, ಹುಷಾರಾಗಿರಿ.


ಒಂದೊಮ್ಮೆ ಮಾಧ್ಯಮ ಹಾಗೂ ಸರ್ಕಾರದ ಬಗ್ಗೆ ನಾನು ಹೇಳುತ್ತಿರುವುದು ಕಲ್ಪನೆಗೆ ಸೀಮಿತವಾದ ವಿಚಾರವೆಂದಾಗಿದ್ದರೆ, ಇಷ್ಟೊಂದು ಅವ್ಯವಸ್ಥೆ ಇರಲು ಸಾಧ್ಯವಿರಲಿಲ್ಲ. ಹಾಗೆಯೇ ಸರ್ಕಾರ ಹಾಗೂ ಮಾಧ್ಯಮಗಳ ಹಂತದಲ್ಲಿ ಇಂತಹದೊಂದು ಮೌನ ಕಾಣಿಸುತ್ತಿರಲಿಲ್ಲ. ಈ ರಾಜ್ಯದಲ್ಲಿನ ಒಂದೂವರೆ ಕೋಟಿ ವಿದ್ಯಾರ್ಥಿಗಳು ಹಾಗೂ ಮೂರು ಕೋಟಿ ಪಾಲಕರಿಗೆ ಸಂಬಂಧಿಸಿದ ವಿಷಯದ ಬಗ್ಗೆ ಇನ್ನೆಷ್ಟು ದಿನ ಇದೇ ರೀತಿ ಜಾಣ ಕುರುಡು ಪ್ರದರ್ಶಿಸಿಕೊಂಡಿರುತ್ತೀರಿ?


ತಿಳಿದವರಿಗೆ ನನ್ನ ಪ್ರಶ್ನೆಗಳು...

* ನಾನು ಪಡೆಯುವ ಸಂಬಳಕ್ಕೆ ಮಾನದಂಡವಿದೆ, ನಾನು ಕಟ್ಟುವ ತೆರಿಗೆಗೆ ಮಾನದಂಡವಿದೆ, ನನ್ನ ಮನೆಗೆ ಬರುವ ವಿದ್ಯುತ್‌, ನೀರಿನ ಬಿಲ್‌ಗೆ ಇತಿ-ಮಿತಿಗಳಿವೆ. ಆದರೆ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಶಿಕ್ಷಣ ವ್ಯವಸ್ಥೆಗೆ ಇದ್ಯಾವುದು ಅನ್ವಯವಾಗದು ಎಂದು ಯಾರಾದರೂ ಹೇಳಿದರೆ ಸರ್ಕಾರ ಹೇಗೆ ಒಪ್ಪಿಕೊಳ್ಳುತ್ತದೆ?


* ಪ್ರಾಥಮಿಕ ಶಿಕ್ಷಣದಲ್ಲಿ ಲಕ್ಷ ಲಕ್ಷ ಶುಲ್ಕ ಪಡೆದುಕೊಳ್ಳುವ ಅಗತ್ಯವೇನಿದೆ ಹಾಗೂ ಅದಕ್ಕೆ ಪೂರಕವಾದ ಯಾವ ತರಬೇತಿಯನ್ನು ಈ ಶಿಕ್ಷಣ ಸಂಸ್ಥೆಗಳು ನೀಡುತ್ತವೆ?


* ಪ್ರತ್ಯೇಕ ಪಠ್ಯ-ಪುಸ್ತಕದ ಹೆಸರಲ್ಲಿ ಸಾವಿರಗಟ್ಟಲೇ ಲೂಟಿ ಮಾಡುವುದನ್ನು ಶಿಕ್ಷಣ ಇಲಾಖೆ ಹೇಗೆ ಒಪ್ಪಿಕೊಳ್ಳುತ್ತಿದೆ?


* ರಾಜ್ಯದ ಯಾವ ಶಿಕ್ಷಣ ಸಂಸ್ಥೆಯು ತಾನು ಪಡೆಯುವ ಶುಲ್ಕದ ನಿಜವಾದ ವಿವರವನ್ನು ತನ್ನ ನೋಟಿಸ್‌ ಬೋರ್ಡ್‌ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ?


* ಶಿಕ್ಷಣದ ಹೆಸರಲ್ಲಿ ಯಾವುದಾದರೊಬ್ಬ ವ್ಯಕ್ತಿ ನೂರಾರು ಕೋಟಿ ಸಾಮ್ರಾಜ್ಯ ಕಟ್ಟುತ್ತಿದ್ದೇನೆ ಎಂದು ರಾಜಾರೋಷವಾಗಿ ಹೇಳುತ್ತಿದ್ದರೂ, ಆತನಿಗೆ ಸುಪ್ರೀಂ ಕೋರ್ಟ್‌ನ ʼಶಿಕ್ಷಣ ಲಾಭದಾಯಕ ಉದ್ಯಮವಲ್ಲʼ ಎನ್ನುವ ಆದೇಶವೇಕೆ ಅನ್ವಯವಾಗುವುದಿಲ್ಲ?


ವಿಶೇಷ ಸೂಚನೆ: ಈ ಪ್ರಶ್ನೆಗಳು ನ್ಯಾಯಾಂಗಕ್ಕೆ ಕೇಳುವ ಉದ್ಧಟತನವನ್ನು ನಾನು ಮಾಡುವುದಿಲ್ಲ. ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಜವಾಬ್ದಾರಿಯುತ ಸರ್ಕಾರ ಮಾಡಬೇಕು. ಅವರಿಗೆ ಬೇಕಾದ ಪ್ರಕರಣಗಳಲ್ಲಿ ವಿದೇಶದಲ್ಲಿ ಕುಳಿತ ವಕೀಲರನ್ನಾದರೂ ಕರೆತಂದು ಆ ಕೆಲಸ ಮಾಡಿಸುತ್ತಾರೆ.


ಕೊನೆಯದಾಗಿ: ಇದೇ ರೀತಿ ಮುಂದುವರಿದರೆ ಶೈಕ್ಷಣಿಕ ಅರಾಜಕತೆಯತ್ತ ಕರ್ನಾಟಕ ಹೆಜ್ಜೆ ಹಾಕಬೇಕಾಗುತ್ತದೆ. ಹಿಂದೊಂದು ಕಾಲದಲ್ಲಿ ಅಬಕಾರಿ ಮಾಫಿಯಾವು ರಾಜ್ಯವನ್ನು ಆಳುತ್ತಿದ್ದಂತೆ, ಶೈಕ್ಷಣಿಕ ಮಾಫಿಯಾವು ಎಲ್ಲವನ್ನೂ ನಿರ್ಧರಿಸುವ ಕಾಲ ಸನ್ನಿಹಿತವಾಗುತ್ತಿದೆ. ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯು ಸರ್ಕಾರದಿಂದ ದೂರ ಸರಿದಷ್ಟು, ಬಡವರಿಂದ ಅದು ದೂರ ಹೋಗುತ್ತಿದೆ ಎಂದರ್ಥ. ಹಾಗೆಯೇ ಅಲ್ಲೊಂದು ಆಧುನಿಕ ಮಾಫಿಯಾ ಸೃಷ್ಟಿಯಾಗುತ್ತಿದೆ ಎನ್ನುವುದರ ಸಂಕೇತವೂ ಹೌದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top