ಕುಮಟಾ: ಶಿಕ್ಷಕರಾಗಿ, ಸಂಘಟಕರಾಗಿ, ಕಲೆಯ ಆರಾಧಕರಾಗಿ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಜು ನಾಯ್ಕ ಮಿರ್ಜಾನ ಅವರು ಕಥೆ ಕವನ ಚುಟುಕುಗಳನ್ನು ರಚಿಸುವ ಮೂಲಕ ಶ್ರೇಷ್ಠ ಸಾಹಿತಿಯಾಗಿ ಹೊರ ಹೊಮ್ಮುತ್ತಿದ್ದಾರೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಅಭಿಪ್ರಾಯಪಟ್ಟರು.
ಅವರು ಗುರುವಾರ ಮಧ್ಯಾಹ್ನ ಜನತಾ ವಿದ್ಯಾಲಯ ಮಿರ್ಜಾನ ಅಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕುಮಟಾ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಶಿಕ್ಷಕ ರಾಜು ನಾಯ್ಕ ಮಿರ್ಜಾನ ಅವರು ರಚಿಸಿದ ಹೊಗೆ ಮತ್ತು ಇತರ ಕಥೆಗಳು ಹಾಗೂ ಚುಟುಕು ಮತ್ತು ಕವಿತೆಗಳು ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿಕ್ಷಕಿ ಕಲ್ಪನಾ ನಾಯಕ ಹಾಗೂ ಶಿಕ್ಷಕ ವಿಜಯಕುಮಾರ ನಾಯ್ಕ ಅವರು ಕೃತಿ ಪರಿಚಯ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯಕ ಅವರು ಮಾತನಾಡಿ ರಾಜು ನಾಯ್ಕರ ಕ್ರಿಯಾಶೀಲತೆ ಹೊಸ ತಲೆಮಾರಿನ ಜನರಿಗೆ ಮಾದರಿ ಯಾಗಿದ್ದು ಮತ್ತಷ್ಟು ಕೃತಿಗಳು ಅವರಿಂದ ಹೊರ ಬರಲಿ ಎಂದು ಹಾರೈಸಿದರು.
ಗೋಕರ್ಣ ಅರ್ಬನ್ ಬ್ಯಾಂಕ್ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣ ಮಾಲಿಗದ್ದೆ ಮಾತನಾಡುತ್ತಾ, ನಮ್ಮ ಕುಟುಂಬದ ಅದ್ಭುತ ಪ್ರತಿಭೆ ರಾಜು ನಾಯ್ಕ ಸಾಹಿತಿಯಾಗಿ ಬೆಳವಣಿಗೆ ಹೊಂದುತ್ತಿರುವದು ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಲೇಖಕ ರಾಜು ನಾಯ್ಕ ನನ್ನೊಳಗಿನ ತುಡಿತದಿಂದ ಇಂದು ಸಾಹಿತ್ಯ ಕೃಷಿ ಮಾಡಲು ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ ನಾಯ್ಕ ಹಲವು ಪ್ರತಿಭೆಗಳಿಂದ ತುಂಬಿರುವ ಕುಮಟಾದಲ್ಲಿ ಸಾಹಿತ್ಯ ಕ್ಷೇತ್ರವೂ ಶ್ರೀಮಂತವಾಗಿದೆ. ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಉಮಾ ಹೆಗಡೆ, ರಾಜ್ಯ ಸ್ಕೌಟ್ ಸಂಸ್ಥೆ ಖಜಾಂಚಿ ಜಿ. ಆರ್. ಮಡಿವಾಳ, ಹೆಬ್ಬಾರ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಶ್ವನಾಥ ಗುನಗ, ಉಪಯುಕ್ತ ನ್ಯೂಸ್ ಸುದ್ದಿ ಸಂಪಾದಕಿ ಸೌಮ್ಯ ಕೊಡಿಯಾ ಉಪಸ್ಥಿತರಿದ್ದರು.
ವಿಲ್ಸನ್ ಡಿ ಲಿಮಾ ಸ್ವಾಗತಿಸಿದರು, ಗಜಾನನ ರಾಯಕರ ವಂದಿಸಿದರು. ಶಿಕ್ಷಕ ಎನ್. ರಾಮು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ