ಭಂಡಾರಕೇರಿ ಶ್ರೀಗಳ ವಿಶೇಷ ಸಂಕಲ್ಪ: 1000 ಮನೆ ಗುರಿ ತಲುಪಿದ ಮನೆ ಮನೆ ಭಾಗವತ ಅಭಿಯಾನ

Upayuktha
0




ಉಡುಪಿ: ರಾಜ್ಯದ ಧಾರ್ಮಿಕ ನಕಾಶೆಯಲ್ಲಿ ಪ್ರಮುಖ ಸ್ಥಾನ ಪಡೆದ ಕರಾವಳಿಯಲ್ಲಿ ಮನೆಮನೆಗಳಲ್ಲಿ ಭಾಗವತ ಅಭಿಯಾನವೆಂಬ ವಿನೂತನ ಕಾರ್ಯಕ್ರಮ ಪ್ರಚಾರದ ಸದ್ದುಗದ್ದಲವಿಲ್ಲದೆ ಯಶಸ್ವಿಯಾಗಿದೆ.


ಜಗದ್ಗುರು ಮಧ್ವಾಚಾರ್ಯರು ಅವತರಿಸಿದ ದಿವ್ಯ ನೆಲ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಶ್ರೀ ಮದ್ಭಾಗವತ ಸಾರುವ ಭಕ್ತಿ ಸಿದ್ಧಾಂತದ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಶ್ರೀ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಕಳೆದ ವರ್ಷದ ತಮ್ಮ ಉಡುಪಿಯ ಚಾತುರ್ಮಾಸ್ಯ ವ್ರತದ ಸಂದರ್ಭ ಹಮ್ಮಿಕೊಂಡ 1000 ಮನೆಗಳಲ್ಲಿ ಭಾಗವತ ಅಭಿಯಾನ ಗುರಿ ತಲುಪಿ ಸಂಪನ್ನಗೊಂಡಿದೆ.


ಈ ಅಭಿಯಾನದ 5 ನೇ ಹಂತವಾಗಿ ಕಳೆದ ಜೂನ್ 9 ರಿಂದ ನಿನ್ನೆ ತಾರೀಖು 18ರ ವರೆಗೆ ಮೂಡಬಿದಿರೆ ಮುಲ್ಕಿ ಹೆಬ್ರಿ ಕಾರ್ಕಳ ಕಟೀಲು ಮೊದಲಾದೆಡೆಗಳಲ್ಲಿ ಸುಮಾರು 140 ಕ್ಕೂ ಅಧಿಕ ವಿಪ್ರರ ಮನೆಗಳಿಗೆ ತಮ್ಮ ಪಟ್ಟದ ದೇವರಾದ ಮಧ್ವಾಚಾರ್ಯ ಕರಾರ್ಚಿತ ಕೋದಂಡ ರಾಮದೇವರೊಂದಿಗೆ ತೆರಳಿದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಭಾಗವತ ಗ್ರಂಥದ ಭಕ್ತಿ ಸಂದೇಶಗಳನ್ನು ಕೆಲಹೊತ್ತು ನೀಡಿ ಅನುಗ್ರಹಿಸಿದರು.


ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೀಪದ ಎ ರಘುರಾಮ್ ಭಟ್ ಎಂಬ ಭಕ್ತರ ಮನೆಯಲ್ಲಿ 1000 ನೇ ಮನೆ ಭೇಟಿ ನಡೆಯಿತು.


ಭಕ್ತರಿಗೆ ಯಾವುದೇ ಕಷ್ಟ ಮತ್ತು ವಿಶೇಷ ಖರ್ಚು ವೆಚ್ಚವಾಗಬಾರದೆಂಬ ಉದ್ದೇಶದಿಂದ ತುಂಬ ಸರಳವಾಗಿ ನಡೆಸುವಂತೆ ಎಲ್ಲ ಮನೆಗಳವರಿಗೂ ಸೂಚಿಸಲಾಗಿತ್ತು.


5 ನೇ ಹಂತದ ಅಭಿಯಾನದ ಸಂದರ್ಭದಲ್ಲಿ ಜಡಿಮಳೆಯ ಸವಾಲು ಎದುರಾಗಿತ್ತು. ಆದರೆ ಹೆಬ್ರಿ ಕಟೀಲು ಮುದರಂಗಡಿ ಅಡ್ವೆ ಎಕ್ಕಾರು ಹಾಗೂ ಉಡುಪಿ ಕೊಡವೂರು ಮೊದಲಾದ ತೀರಾ ಗ್ರಾಮೀಣ ಪ್ರದೇಶಗಳ ಕಾಡು ಗದ್ದೆ ಬಯಲು, ಕಾಲುದಾರಿಗಳಲ್ಲೂ ಸಾಗಿ ನಡೆಸಿದ ಮನೆ ಭೇಟಿ ಅಭಿಯಾನ ಒಂದು ರೋಚಕ ಅನುಭವ ಎಂದು ಶ್ರೀಗಳು ಹೇಳುತ್ತಾರೆ.‌ ಈ ಮೂಲಕ ರಾಮಾಯಣ ರಾಮಾಯಣ ಕಾಲದ  ದಂಡಕಾರಣ್ಯವಾಗಿರುವ ಈ ಪ್ರದೇಶದಲ್ಲಿ ಅಭಿಯಾನವನ್ನು ನಡೆಸಿರುವುದು ಜೀವನ ಪರ್ಯಂತ ಒಂದು ಸಾರ್ಥಕ ಮತ್ತು ಸ್ಮರಣೀಯವೆನಿಸಿದೆ. ಇದರ ಪೂರ್ಣ ಶ್ರೇಯಸ್ಸು ಸತ್ಫಲಗಳನ್ನು ಭಾಗವಹಿಸಿದ ಎಲ್ಲ ಮನೆಗಳಿಗೆ ಭೇಟಿ ನೀಡಿದ ಗ್ರಾಮಗಳಿಗೆ ಊರಿಗೆ ನಾಡಿಗೆ ಮತ್ತು ದೇಶಕ್ಕೆ ಭಗವಂತ ಅನುಗ್ರಹಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.‌


ಈ ಬಾರಿಯ ಅಭಿಯಾನದಲ್ಲಿ ಮನೆಗಳ ಭೇಟಿಯ ಜೊತೆಗೆ ಹೆಬ್ರಿ ಅನಂತಪದ್ಮನಾಭ, ಪುತ್ತಿಗೆ ಸೋಮನಾಥೇಶ್ವರ ಸಿಮಂತೂರು ಆದಿಜನಾರ್ದನ,  ಅಲಂಗಾರು ಮಹಾಲಿಂಗೇಶ್ವರ, ಸಾಣೂರು ಮಹಾಲಿಂಗೇಶ್ವರ ಕಟೀಲು ದುರ್ಗಾಪರಮೇಶ್ವರೀ ವಡಭಾಂಡೇಶ್ವರ ಬಲರಾಮ, ದೇವಸ್ಥಾನಗಳು, ಸುರತ್ಕಲ್, ಬಜಪೆ ಹಾಗೂ ಹೆಬ್ರಿ, ಪುತ್ತಿಗೆಯ ರಾಘವೇಂದ್ರ ಮಠ ಹಾಗೂ ಕೆಲವು ಪ್ರಾಚೀನ ಮಠಗಳಿಗೂ ಭೇಟಿ ನೀಡಿರುವರು. ಹೆಬ್ರಿ ಗಿಲ್ಲಾಳಿಯ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಪಟ್ಟದ ದೇವರ ರಾತ್ರಿ ಪೂಜೆಯನ್ನೂ ಶ್ರೀಗಳು ನೆರವೇರಿಸಿದರು.


ಶ್ರೀಕೃಷ್ಣನ ಪವಿತ್ರ ನೆಲೆ ಮತ್ತು ದೇಶ ಕಂಡ ಶ್ರೇಷ್ಠ ದಾರ್ಶನಿಕರಾದ ಶ್ರೀ ಮಧ್ವಾಚಾರ್ಯರ ಜನ್ಮ- ಕರ್ಮಭೂಮಿಯಾಗಿರುವ ಈ ಜಿಲ್ಲೆಗಳ ಮನೆಮನೆಗಳಲ್ಲಿ ದೇವಸ್ಥಾನಗಳಲ್ಲಿ ನಿತ್ಯ ನಿರಂತರವೆಂಬಂತೆ ರಾಮಾಯಣ ಭಾರತ ಭಾಗವತಾದಿ ಸದ್ಗ್ರಂಥಗಳ ಪಠಣ ಪ್ರವಚನ ಪಾರಾಯಣಾದಿಗಳು, ಭಜನೆ ಸ್ತೋತ್ರಗಳ ಮೂಲಕ ದೇವರ ಸ್ತುತಿಗಳು ನಡೆಯುತ್ತಿರಬೇಕು. ಇದು ಎಲ್ಲರ ವೈಯಕ್ತಿಕ ಒಳಿತು ಮತ್ತು  ನೆಲದ ಸುಭಿಕ್ಷೆ ಸಮೃದ್ಧಿಗೆ ಕಾರಣವಾಗಲಿದೆ ಎನ್ನುವುದು ಶ್ರೀಗಳ ಆಶಯ.


ಇದೇ ಅಕ್ಟೋಬರ್ ತಿಂಗಳಾಂತ್ಯ ಮತ್ತು ನವಂಬರ್ ಆರಂಭದಲ್ಲಿ ಬರುವ ಕಾರ್ತಿಕ ಮಾಸದಲ್ಲಿ ಉಡುಪಿಯಲ್ಲಿ ಈ ಅಭಿಯಾನವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಸಮರ್ಪಣೋತ್ಸವವನ್ನು ನಡೆಸಲಾಗುವುದು ಎಂದು ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ.


ಮನೆಮನೆ ಭೇಟಿಯ ಈ ಅಪರೂಪದ ಅಭಿಯಾನದ ಯಶಸ್ಸಿಗಾಗಿ ಉಡುಪಿಯ ಶ್ರೀನಿವಾಸ ಬಾದ್ಯ, ವಿಷ್ಣುಪ್ರಸಾದ್ ಪಾಡಿಗಾರ್, ಬೈಲೂರು ಜಯರಾಮಾಚಾರ್ಯ, ಚಂದ್ರಶೇಖರಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಯವರ ತಂಡ ಮತ್ತು ಮಠದ ವ್ಯವಸ್ಥಾಪಕ ರಾಜೇಶ ಉಪಾಧ್ಯ ಪಣಿಯಾಡಿಯವರು ಶ್ರಮಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top