ಬೆಂಗಳೂರು ಕಾಲ್ತುಳಿತ ದುರಂತ: ಮುಖ್ಯಮಂತ್ರಿಯವರಿಗೊಂದು ಬಹಿರಂಗ ಪತ್ರ

Upayuktha
0


ಸನ್ಮಾನ್ಯ ಮುಖ್ಯಮಂತ್ರಿಗಳು 

ಕರ್ನಾಟಕ ಸರಕಾರ 

ವಿಧಾನ ಸೌಧ 

ಬೆಂಗಳೂರು -1


ಸನ್ಮಾನ್ಯರೇ 


ದಿನಾಂಕ 4.6.2025 ರಂದು ನಡೆದ ದುರಂತದಲ್ಲಿ ಅರೋಪಿಗಳಿಗೆ ಅರ್ಥ ಪೂರ್ಣ ಶಿಕ್ಷೆ ವಿಧಿಸುವ- ಕುರಿತು 


ರಾಜ್ಯ ಆಡಳಿತದ ಕೇಂದ್ರ ಸ್ಥಾನ, ವಿಧಾನ ಸೌಧದಿಂದ, ಕೂಗಳತೆ ದೂರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ನಡೆದ ಕಾಲ್ತುಳಿತದ ದುರಂತ ನಮ್ಮೆಲ್ಲರ ಅಂತಃಪ್ರಜ್ಞೆಯನ್ನೇ ನಾಶಮಾಡುವಂತಿದೆ. ನಾವು ಬೆಂಗಳೂರಿನವರು ಎಂದುಕೊಳ್ಳಲೂ ನಾಚಿಕೆಯಾಗುವಂತಹ ಘಟನೆ ಇದು ಆಗಿದೆ. ಈ ಭೀಕರ, ಮನುಷ್ಯ ನಿರ್ಮಿತ ಅವಘಡದಲ್ಲಿ ಮಡಿದವರು ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಘಟನೆ  ನಡೆದ ಸ್ಥಳದಲ್ಲಿದ್ದ ಗಂಡಸರು ತಮ್ಮಲ್ಲಿ ಮನುಷ್ಯತ್ವ ಉಳಿದಿದಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.


ಇಂತಹ ಘಟನೆಯ ಹಿಂದೆ ಪಿತೂರಿ ಇರಲೂ ಸಾಧ್ಯವಿರುವುದರಿಂದ ಈ ಘಟನೆಯ ಕುರಿತು ದಂಡಾಧಿಕಾರಿ ತನಿಖೆಯನ್ನು ತಾವು ಆದೇಶಿಸಿದ್ದೀರಿ.


ಆದರೆ ನಾವು ಈ ದೇಶದಲ್ಲಿ ಈಗಾಗಲೇ ಕಂಡಿರುವಂತೆ ಇಂತಹ ತನಿಖೆಗಳು ಪೂರ್ಣಗೊಂಡದ್ದಾಗಲಿ ಅದರ ಮೇಲೆ ಕ್ರಮ ಕೈಗೊಂಡದ್ದಾಗಲಿ ನಾವು ಕಂಡಿಲ್ಲ. ತನಿಖೆಯು ವರ್ಷಗಟ್ಟಲೆ ನಡೆಯುತ್ತದೆ. ಇನ್ನೊಂದು ಇಂತಹ ದುರಂತ ಸಂಭವಿಸುತ್ತದೆ, ನಾವು ಈ ಘಟನೆಯನ್ನು ಮರೆಯುತ್ತೇವೆ.


ತನಿಖೆ ಸಂಪೂರ್ಣವಾದರೂ ತಪ್ಪಿತಸ್ಥ ವ್ಯಕ್ತಿಗಳೂ ಸಂಸ್ಥೆಗಳೂ ಬಲಾಢ್ಯವಾಗಿದ್ದು ನ್ಯಾಯವೆಂಬುದು ಮರೀಚಿಕೆಯಾಗಿಯೇ ಕಾಣುತ್ತಿದೆ. 


ನಿನ್ನೆ ದಿನ ಉಪಮುಖ್ಯಮಂತ್ರಿಗಳು ಪತ್ರಕರ್ತರ ಮುಂದೆ ಹಾಕಿದ ಕಣ್ಣೀರು ಇಡೀ ರಾಜ್ಯದ ನಮ್ಮೆಲ್ಲ ನಾಗರಿಕರ ಅಶ್ರುಗಳಾಗಿವೆ. ಈ ಕಣ್ಣೀರು ಅರುವ ಮೊದಲೇ ತಾವು ಆ ನೋವು ಅನುಭವಿಸುತ್ತಿರುವ ಕುಟುಂಬಗಳಿಗೂ ಮತ್ತು ರಾಜ್ಯದ ಜನತೆಗೂ ನ್ಯಾಯ ದೊರಕಿಸಬೇಕೆಂದು ಪ್ರಾರ್ಥಿಸುತ್ತೇನೆ. ಅಲ್ಲದೆ ನಾವು ಬೆಂಗಳೂರಿನ ಜನ ಇಂತಹದ್ದನ್ನು ಸಹಿಸುವುದಿಲ್ಲ ಎಂಬುದನ್ನು ಜಗತ್ತಿಗೆ ಸಾರಬೇಕಾಗಿದೆ.


ಅದಕ್ಕಾಗಿ ನೀವು ಖಂಡಿತವಾಗಿ ಜಾರಿ ಮಾಡಬಹುದಾದ ಮತ್ತು ಶೀಘ್ರ ನ್ಯಾಯ ದೊರಕಿಸಬಹುದಾದ ಕ್ರಮಗಳನ್ನು ಈ ಕೆಳಕಂಡಂತೆ  ಜಾರಿ ಮಾಡಬೇಕೆಂದು ಕೋರುತ್ತೇನೆ. ಈ ಇಡೀ ಪ್ರಕರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್ ಸಿಬಿ ಆಡಳಿತವೇ ಕಾರಣ. ಈ ಕುರಿತಂತೆ ಯಾರಿಗೂ ಅನುಮಾನ ಉಳಿದಿಲ್ಲ.


2. ⁠ಐಪಿಎಲ್ ಪಂದ್ಯಾಟಗಳಿಂದ ಕಳೆದ 18 ವರ್ಷಗಳಲ್ಲಿ ಈ ಎರಡೂ ಸಂಸ್ಥೆಗಳೂ ಹೇರಳವಾಗಿ ಹಣ ಸಂಪಾದಿಸಿವೆ. ಅವರು ಗಳಿಸಿರುವ ಸಂಪತ್ತೆಲ್ಲವೂ  ಅಭಿಮಾನಗಳು ನೀಡಿದ ಸಂಪತ್ತಾಗಿವೆ.


3. ⁠ಆದುದರಿಂದ ಈ ಕೂಡಲೇ ರಾಜ್ಯ ಸರಕಾರವು ಒಂದು ಅಧ್ಯಾದೇಶವನ್ನು ಜಾರಿಮಾಡಿ ಈ ಎರಡು ಸಂಸ್ಥೆಗಳೂ ತಲಾ ರೂ ಒಂದು ಕೋಟಿಯಂತೆ  ಮಡಿದವರ ಕುಟುಂಬಕ್ಕೂ ತಲಾ ರೂ 25 ಲಕ್ಷದಂತೆ ಗಾಯಗೊಂಡವರಿಗೂ ನೀಡುವಂತೆ ಆದೇಶಿಸಬೇಕು.


4. ⁠ಈ ಎರಡೂ ಸಂಸ್ಥೆಗಳು ಸೇರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈ ಘಟನೆ ನಡೆದ ಪ್ರದೇಶದಲ್ಲಿ ಮಡಿದವರಿಗೆ ಶಾಶ್ವತ ಸ್ಮಾರಕವೊಂದನ್ನು ನಿರ್ಮಿಸಬೇಕು.


5. ⁠ಮುಂದೆ ಇಂತಹ ಘಟನೆಗಳು ನಡೆಯದಂತೆ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಅಗತ್ಯವಿರುವ ಬಂಡವಾಳ ಹೂಡಬೇಕು.

6. ⁠ತನ್ನ ಅಪರಿಮಿತ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಾಗ ಯಾವುದೇ ಕುಂದು ಕೊರತೆಯಾಗದಂತೆ ಸೌಲಭ್ಯಗಳನ್ನು ಈ ಸಂಸ್ಥೆಗಳು ಕಲ್ಪಿಸಬೇಕು. .

7. ⁠ಈ ಕೂಡಲೇ ಹಣವನ್ನು ತೊಡಗಿಸಿ ತಂತ್ರಜ್ಞಾನದ ಮುಖಾಂತರ ಪ್ರತಿಯೊಬ್ಬ ಅಭಿಮಾನಿಯೂ ಕ್ರೀಡಾಂಗಣಕ್ಕೆ ಬಂದಾಗ ಅವನನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು.


8. ⁠ಸಾಧ್ಯವಿದ್ದರೆ ಕ್ರೀಡಾಂಗಣವನ್ನು ಕಡಿಮೆ ನಿಬಿಡ ಪ್ರದೇಶಕ್ಕೆ ವರ್ಗಾಯಿಸಬೇಕು.

9. ಆರ್ ಸಿ ಬಿ ಯ ಆಡಳಿತ, ಕ್ರಿಕೆಟ್ ಅಸೋಸಿಯೇಷನ್ ಮತ್ತು ತಂಡದ ಕ್ರೀಡಾಳುಗಳು ಬೇಷರತ್ತಾಗಿ ಬಹಿರಂಗ ಕ್ಷಮೆ ಕೇಳಬೇಕು.

10. ⁠ಇಂತಹ ಪ್ರಕರಣಗಳಲ್ಲಿ ಜೀವಬಿಟ್ಟು ಕೆಲಸ ಮಾಡುವ ಪೊಲೀಸಿನವರಿಗೂ ರಕ್ಷಣಾ ಪಡೆಗೂ  ತಂತ್ರಜ್ಞಾನ, ಸಂಚಾರ ಮತ್ತು ಭತ್ತೆಯನ್ನು ತಪ್ಪದೆ ಕ್ರಿಕೆಟ್ ಮಂಡಳಿ ಏರ್ಪಡಿಸಬೇಕು.


11. ⁠ಕನಿಷ್ಠ 10 ಜನರಿಗೆ ಒಬ್ಬ ಪೊಲೀಸ್ ಇರಬೇಕು. ಇದರ ಖರ್ಚು ಅಭಿಮಾನಿಗಳಿಂದ ದೋಚುವ ಕ್ರಿಕೆಟ್ ಆಡಳಿತಮಂಡಳಿಯೇ ವಹಿಸಿಕೊಳ್ಳಬೇಕು. .


ಸನ್ಮಾನ್ಯರೇ,

ತಾವು ಈ ನಾಡು ಕಂಡ ಅಪರೂಪದ ಜನನಾಯಕರು. ಈ ಸಂದರ್ಭ ತಾವು ಕೈಕಟ್ಟಿ ಕುಳಿತರೆ ರಾಜ್ಯಕ್ಕದೊಂದು ಕಪ್ಪುಚುಕ್ಕೆ. ಇದು ದುರಂತವಲ್ಲ  ಅಭಿಮಾನಿಗಳ ಕೊಲೆ ಎಂಬ ಮನಸ್ಥಿತಿ ನಮ್ಮದಾಗಿದೆ. ಈ ಪ್ರಕರಣದಲ್ಲಿ ಮುಂದೆಂದೋ ಒಂದು ದಿನ ದೊರೆಯಬಹುದಾದ ನ್ಯಾಯ ನಮಗೆ ಬೇಡ. ಬದಲಾಗಿ ಅವರಲ್ಲಿರುವ ಹೇರಳವಾದ ಹಣವನ್ನು ಅಭಿಮಾನಿಗಳಿಗೆ ಬಳಸುವಂತೆ ಮಾಡಿ ನಮಗೆ ಸಾಂತ್ವನ ನೀಡಿರಿ.


ನ್ಯಾಯ ತೀರ್ಮಾನದ ಹೊಸ ಅಧ್ಯಾಯ ಬರೆಯಿರಿ. ಅಧ್ಯಾದೇಶ ಜಾರಿಗೊಳಿಸಿರಿ. ನಾವು ಕರ್ನಾಟಕದ ನಾಗರಿಕರು ತಮ್ಮ ತೀರ್ಮಾನಕ್ಕಾಗಿ ಕಾಯುತ್ತೇವೆ.


ಇಂತಿ ತಮ್ಮ


- ಡಾ ಎಲ್ ಎಚ್ ಮಂಜುನಾಥ್ 

lh.manjunath@gmail.com

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top