ಮಂಗಳೂರು: "ಯಾವುದೇ ಸಂಸ್ಥೆಯ ಸಾಧನೆಯನ್ನು ಗುರುತಿಸಲು ಅದು ಮಾಡಿದ ಸಾಹಸ ಕಾರ್ಯಗಳೇ ರಹದಾರಿಯಾಗುತ್ತದೆ. ಸಾಧನಾಪಥದಲ್ಲಿ ಸಾಗುವಾಗ ಕಂಟಕ ಮಾರ್ಗವಿರುತ್ತದೆ. ಅದನ್ನು ದಾಟಿ ಸಾಗುವಾಗ ಕಷ್ಟ ಎದುರಾಗುವುದು ಸಹಜ. ತೆಂಕುತಿಟ್ಟಿನಲ್ಲಿ ಮಕ್ಕಳ ಮೇಳ ಎಂಬ ಕಲ್ಪನೆಯನ್ನು ಹುಟ್ಟುಹಾಕಿ, ದೇಶಾದ್ಯಂತ ಸಂಚರಿಸಿ, ಯಕ್ಷಗಾನದ ಕಂಪನ್ನು ಪಸರಿಸಿದ ಕೀರ್ತಿ ಸರಯೂ ಸಂಸ್ಥೆ. 25 ವರ್ಷಗಳಿಂದ ಅದು ಬೆಳೆದದ್ದನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಇನ್ನು ಇನ್ನು ಹೆಚ್ಚಿನ ಗಣನೀಯ ಸಾಧನೆಯನ್ನು ಈ ಮಕ್ಕಳ ಮೇಳದ ಚಿಣ್ಣರು ನಡೆಸಲಿ" ಎಂದು ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿಕ್ಷಣ ತಜ್ಞ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.
ಅವರು ಕದ್ರಿಯಲ್ಲಿ ನಡೆದ "ಯಕ್ಷ ಪಕ್ಷ- ರಜತ ಸಂಭ್ರಮ" ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಸರಯೂ ಮಕ್ಕಳ ಮೇಳದ ಗೌ. ಸಂಚಾಲಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ರವರು ಸರಯೂ ಸಾಗಿ ಬಂದ ಹಾದಿಯನ್ನು ವಿವರಿಸಿ ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.
ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪರು ಶುಭ ಹಾರೈಸಿದರು. ವಾರ್ಡ್ 17ರ ಮನಪಾ ಮಾಜಿ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡುತ್ತಾ "ನನ್ನಲ್ಲಿನ ಒಂದು ಸಾಂಸ್ಕೃತಿಕ ಸಂಸ್ಥೆ ಇಂದು ಬೆಳ್ಳಿಹಬ್ಬವನ್ನಾಚರಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ನಾನು ರಾಜಕೀಯದವನಾದರೂ ಈ ಸಂಸ್ಥೆಯ ಭಾಗವೇ ಆಗಿದ್ದೇನೆ" ಎಂದರು.
ಕಾರ್ಯಕ್ರಮದಲ್ಲಿ "ಧೀಂಗಿಣ ವೀರ" ಧರ್ಮಸ್ಥಳ ಚಂದ್ರಶೇಖರ ಹಾಗೂ ಖ್ಯಾತ ಹಿಮ್ಮೇಳವಾದಕ ಅಕ್ಷಯ ರಾವ್ ವಿಟ್ಲರನ್ನೂ ಅತಿಥಿ ಗಣ್ಯರು ಸನ್ಮಾನಿಸಿದರು. ಸದಾಶಿವ ಎಂ, ಪ್ರಭಾಕರ ರಾವ್ ಪೇಜಾವರ್, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.
ಗೌತಂ ಭಂಡಾರಿ ಹಾಗೂ ಭಾರತೀ ಪ್ರಮೋದ್ ಸನ್ಮಾನ ಪತ್ರ ವಾಚಿಸಿದರು ನಿರೂಪಕರಾಗಿ ಸುಧಾಕರ ರಾವ್ ಪೇಜಾವರ್ ಸಹಕರಿಸಿದರು.
ಬಳಿಕ ವ್ಯವಸಾಯಿ ಕಲಾವಿದರು ಹಾಗೂ ಸಂಸ್ಥೆಯ ಕಲಾವಿದರ ಕೂಡುವಿಕೆಯಿಂದ ಶ್ರೀನಿವಾಸ ಕಲ್ಯಾಣ ಜರಗಿ ಯಕ್ಷ ಪಕ್ಷ ಸಮಾಪನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ