ಮಂಗಳೂರಿನಲ್ಲಿ ಮುಂದಿನ ವರ್ಷ ಕೂಟ ಬಂದು ಕೇಂದ್ರಾಧಿವೇಶನ : ಶ್ರೀಧರ ಹೊಳ್ಳ

Upayuktha
0

 


ಮಂಗಳೂರು: ಕೂಟ ಮಹಾಜಗತ್ತಿನ ಕೇಂದ್ರ ಸಮಿತಿಯು ಅವಕಾಶ ನೀಡಿದರೆ ಮುಂದಿನ ವರ್ಷದ ಕೂಟ ಬಂದು ಕೇಂದ್ರಾಧಿವೇಶನದ ಆತಿಥ್ಯವನ್ನು ಮಂಗಳೂರು ಅಂಗ ಸಂಸ್ಥೆಯು ವಹಿಸಲಿದ್ದು, ಮಾದರಿಯಾಗಿ ಆಯೋಜಿಸಲಿದೆ ಎಂದು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.


ಭಾನುವಾರ ನಗರದ ಪಾಂಡೇಶ್ವರದಲ್ಲಿರುವ ಗುರುನರಸಿಂಹ ಸಭಾ ಭವನದಲ್ಲಿ ನಡೆದ ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದಿನ ವರ್ಷದ  ಅಧಿವೇಶನಕ್ಕೆ ಬೇಕಾದ ಎಲ್ಲ ರೀತಿಯ ಪೂರ್ವ ಸಿದ್ಧತೆ ನಡೆಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಈ ವರ್ಷ ಮಂಗಳೂರು ವಲಯದ ಅಧಿವೇಶನವನ್ನು ಆಯೋಜಿಸಲಾಗುವುದು ಎಂದರು.


ಕಳೆದ ಒಂದು ವರ್ಷದಿಂದ ಮಂಗಳೂರು ಘಟಕವು ಹಲವು ಮಾದರಿ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಮುಂದಿನ ವರ್ಷವೂ ಅದೇ ಸಂಪ್ರದಾಯ ಮುಂದುವರಿಸುವುದರೊಂದಿಗೆ ಹೊಸದಾಗಿ ಸಾಮೂಹಿಕ ದುರ್ಗಾಪೂಜೆ ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಯನ್ನು ನಡೆಸಲಾಗುವುದು ಎಂದರು.


ಇದೇ ವೇಳೆ ಮಂಗಳೂರು ಘಟಕದ ಸಂಪೂರ್ಣ ಮಾಹಿತಿಯುಳ್ಳ ವೆಬ್‌ಸೈಟ್ ಅನ್ನು ಅನಾವರಣಗೊಳಿಸಲಾಯಿತು. ದೇಶ ವಿದೇಶದಲ್ಲಿರುವ ಮಂಗಳೂರು ಘಟಕದ ಸದಸ್ಯರನ್ನು ಸಂಪರ್ಕಿಸುವ ಉದ್ದೇಶದಿಂದ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಕೂಟ ಸಮಾಜದ ಸಾಧಕರ ವಿವರಗಳೊಂದಿಗೆ ಎಲ್ಲ ಸದಸ್ಯರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಅಪ್‌ಡೇಟ್ ಮಾಡಲಾಗುವುದು ಎಂದು ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಸನ್ನ ಇರುವೈಲು ಹಾಗೂ ಗಣೇಶ್ ಪ್ರಸಾದ್ ಎಮ್ಮೆಕೆರೆ ಮಾಹಿತಿ ನೀಡಿದರು.


2025ರ  ಕೂಟ ಸಮಾಜದ ಕೇಂದ್ರಾಧಿವೇಶನ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲಿಗ್ರಾಮದಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಯಶಸ್ವಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಕೇಂದ್ರೀಯ ಕಾರ್ಯದರ್ಶಿ ಸಿ. ಸುರೇಶ್ ತುಂಗಾ ಹೇಳಿದರು.


ಕೂಟ ಸಮಾಜವು ಸಾಲಿಗ್ರಾಮ ಕ್ಷೇತ್ರದೊಂದಿಗಿನ ಸಂಬಂಧ ಹಾಗೂ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸಾಲಿಗ್ರಾಮ ಕ್ಷೇತ್ರ ಎಂಬುದು ತಾಯಿ ಮನೆ. ನಮಗೆ ದೇವರು ಹಾಗೂ ಗುರು ಎಂದರೆ ಗುರುನರಸಿಂಹ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಇನ್ನಷ್ಟು ಕೆಲಸ ಮಾಡಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಕೂಟ ಮಹಾಜಗತ್ತು ಕೇಂದ್ರ ಅಧ್ಯಕ್ಷರಾದ ಎಚ್. ಸತೀಶ್ ಹಂದೆ ಹೇಳಿದರು.


ಮಂಗಳೂರು ಅಂಗ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಲೆಕ್ಕಪತ್ರ ಮಂಡಿಸಿದರು. ಕೂಟವಾಣಿ ಪತ್ರಿಕೆಯ ಸಂಪಾದಕರಾದ ಅಡ್ಡೂರು ಕೃಷ್ಣರಾವ್ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು. ಸಿ. ಎ ಚಂದ್ರಮೋಹನ್ ಕೆ. ಕಾರ್ಯಕ್ರಮ ನಿರೂಪಿಸಿದರು.


ಕೇಂದ್ರೀಯ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ್, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ರಂಗನಾಥ ಐತಾಳ್, ಪ್ರವೀಣ್ ಮಯ್ಯ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಮೆನೇಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಬಾಲಕೃಷ್ಣ ಐತಾಳ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ,  ಬಾಲಕೃಷ್ಣ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.


ಮನೆಯಲ್ಲೇ ಗುರುಕುಲವನ್ನು ಸ್ಥಾಪಿಸಿ ನೂರಾರು ಯುವಕರಿಗೆ ವೇದ ಪಾಠ ಮಾಡಿ ಅಪಾರ ಶಿಷ್ಯವರ್ಗವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ವೇದಮೂರ್ತಿ ಬ್ರಹ್ಮಶ್ರೀ ಮಾವಿನಕುಡಿಕೆ ಸುಬ್ರಹ್ಮಣ್ಯ ಭಟ್ಟ ಅವರ ನೆನಪಿಗಾಗಿ ಮುಂದಿನ ವರ್ಷದಿಂದ ನಾಡಿನ ಶ್ರೇಷ್ಠ ಸಾಧಕ ಯುವ ಪುರೋಹಿತರನ್ನು ಗುರುತಿಸಿ ಪುರಸ್ಕಾರ ನೀಡುವ ಸಲುವಾಗಿ ಅವರ ಪುತ್ರ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಸಿಇಒ ಮಹಾಬಲೇಶ್ವರ ಎಂ ಎಸ್ ಅವರು ಮಂಗಳೂರು ಘಟಕಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು.


ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿ ಪುರಸ್ಕರಿಸಲಾಯಿತು. ಜೀವನದಲ್ಲಿ ಎಂಟು ದಶಕ ಪೂರೈಸಿದ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top