ಮೇ 8: ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

Upayuktha
0







ಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ.  ಮಾನವೀಯತೆ ಯಿಂದ ಶಾಂತಿಯ ಕಡೆಗೆ  ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ  ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8. 1859 ರ ಜೂನ್ 24 ರಂದು ‘ಸಲ್ಫರಿನೋ’ ಕದನ ದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ  ಹೆನ್ರಿ ಡ್ಯೂನಾಂಟ್ ಜನರಿಂದ  ಜನರಿಗೆ ನೆರವು  ಎಂಬ ಕಲ್ಪನೆಯೊಂದಿಗೆ 1863 ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಯನ್ನು ಹುಟ್ಟುಹಾಕಿದರು.


ಇಂದು ರೆಡ್ ಕ್ರಾಸ್ ಸಂಸ್ಥೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಸೇವಾ ಸಂಘಟನೆ ಯಾಗಿ ಮಾರ್ಪಾಡಾಗಿ, ಯುದ್ಧ ಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂರತವಾಗಿ ಶಾಂತಿ ಪ್ರಕ್ರಿಯೆಗಳು ಹಾಗೂ ಚಟುವಟಿಕೆಗಳ ಕಾರ್ಯ ನಿರ್ವಹಿಸುತ್ತಲಿದೆ. ಭಾರತದಲ್ಲಿ ಕೂಡಾ 1920 ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉದಯವಾಯಿತು. 

ಕರ್ನಾಟಕದಲ್ಲಿ 1921ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಹುಟ್ಟಿಕೊಂಡಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯುನ್ನತ  ವಿಶಾಲವಾದ ಹಾಗೂ ದೇಶೀಯ ಮಾನವೀಯ ಸೇವಾ ಸಂಘಟನೆಯಾಗಿದೆ. ಈ ಸಂಸ್ಥೆಯು ವಿಕೋಪಗಳಲ್ಲಿ ಪಾಲ್ಗೊಳ್ಳುವಿಕೆ, ಆರೋಗ್ಯ ಆರೈಕೆ ಸೇವೆಗಳು, ರಕ್ತ ಸಂಗ್ರಹಣ ಸೇವೆಗಳು ಮತ್ತು ಕಿರಿಕಿರಿ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು, ಇತ್ಯಾದಿ ಸೇವಾ ಕಾರ್ಯ ಗಳಿಗೆ ಪ್ರಸಿದ್ಧವಾಗಿದೆ . ಒಟ್ಟಿನಲ್ಲಿ ಮೇ 8ನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ಜೀವನ ಶೈಲಿಯ ಪುನರ್ ವಿಮರ್ಶೆ ಮಾಡಿ, ಸಮಾಜದ ನೊಂದವರ, ರೋಗಿಗಳ, ದುರ್ಬಲ ವರ್ಗದವರ, ಮತ್ತು ಶೋಷಿತರ ಸೇವೆಗೆ ಸಮರ್ಪಿಸಿಕೊಳ್ಳುವ ಒಂದು ಸುದಿನ ಎಂದರೂ ತಪ್ಪಲ್ಲ.


ರೆಡ್ ಕ್ರಾಸ್ ಸಂಸ್ಥೆಯ ಉಗಮ 1859 ರಲ್ಲಿ ಇಟಲಿ, ಫ್ರಾನ್ಸ್‌ ಹಾಗೂ ಆಸ್ಟೀಯ ದೇಶಗಳ ನಡುವೆ ನಡೆದ ಯುದ್ಧದಲ್ಲಿ ಗಾಯ ಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂಸೇವಾ ಸಂಸ್ಥೆಯಾದ ರೆಡ್‌ಕ್ರಾಸ್ ನ್ನು 1863 ರಲ್ಲಿ ಹೆನ್ರಿ ಡ್ಯೂನಾಂಟ್  ಸ್ಥಾಪಿಸಿದರು. ನಂತರ ಇದು ಅಂತರಾಷ್ಟೀಯ ರೆಡ್‌ಕ್ರಾಸ್ ಸಂಸ್ಥೆ, ಅಂತರಾಷ್ಟ್ರೀಯ  ರೆಡ್ ಕ್ರಾಸ್ ಒಕ್ಕೂಟ ಹಾಗೂ ರಾಷ್ಟ್ರೀಯ  ರೆಡ್ ಕ್ರಾಸ್ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು.


ರೆಡ್ ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ಜೂನ್ 1859ರ 24 ರಂದು ನಡೆದ ಅಮಾನವೀಯ, ಭೀಕರ ಯುದ್ಧದ ರಣರಂಗ ರೆಡ್ ಕ್ರಾಸ್ ಉಗಮಕ್ಕೆ ಕಾರಣವಾಯಿತು. ಒಂದೆಡೆ  ಫ್ರಾನ್ಸ್‌ ಮತ್ತು ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರೀಯಾ  ಸೈನ್ಯ ಆ ರಣರಂಗದಲ್ಲಿ ಇದ್ದವು. ಮೂರು ಲಕ್ಷಕ್ಕೂ ಹೆಚ್ಚಿನ ಸೈನಿಕರು ಆ ರಣ ರಂಗದಲ್ಲಿ ಕಾದಾಡುತ್ತಿದ್ದರು. 1859ರ ಜೂನ್ 24 ರಂದು “ಸಲ್ಫೆರಿನೋ” ದಲ್ಲಿ ನಡೆದ ಈ ಯುದ್ಧ 15 ಗಂಟೆಗಳ ಕಾಲ ನಡೆದಿತ್ತು. ಯುದ್ಧ ಮುಗಿದಾಗ ರಣರಂಗದ ತುಂಬಾ ಸತ್ತ ಹಾಗೂ ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.


ಆ ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಿದ್ದ ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ಬಹಳ ವಿರಳವಾಗಿತ್ತು. ರಕ್ತಸಿಕ್ತ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದರೂ, ಸಹಾಯ ಹಸ್ತ ನೀಡಲು ಕೈಗಳೇ ಇರಲಿಲ್ಲ. ಮೃತ ದೇಹಗಳನ್ನು ಸಾಗಿಸಲು ಹಾಗೂ ಬದುಕಿ ಉಳಿದ ಗಾಯಾಳು ಸೈನಿಕರನ್ನು ಉಪಚರಿಸಲು ಮತ್ತು ಚಿಕಿತ್ಸೆ ಮಾಡಲು ವೈದ್ಯಕೀಯ ಸಹಾಯ ಬಹಳ ಸ್ವಲ್ಪ ಪ್ರಮಾಣದಲ್ಲಿ ಇತ್ತು . 

ಸ್ವಿಜರ್ಲೆಂಡ್‌ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಎಂಬಾತ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದನು. ಸೂರ್ಯ ಮುಳುಗುವ ಹೊತ್ತಲ್ಲಿ ಅಲ್ಲಿ ಬಂದಿದ್ದ “ಡ್ಸೂನಾಂಟ್” ಮರುದಿನ ಸೂರ್ಯ ಉದಯಿಸುವವರೆಗೆ “ಸ್ಥಳೀಯ ಗ್ರಾಮಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿದನು. ಯುದ್ಧ ಗಾಯಾಳುಗಳನ್ನು ಖಾಸಗಿ ಮನೆಗಳಲ್ಲಿ, ಚರ್ಚ್ ಗಳಲ್ಲಿ, ಆಶ್ರಮಗಳಲ್ಲಿ, ಮಸೀದಿಗಳಲ್ಲಿ ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದನು.


ಹೆನ್ರಿ ಡ್ಸೂನಾಂಟ್ ಒಬ್ಬ ಪಕ್ಕಾ ವ್ಯಾಪಾರಿ, ಆದರೆ ಮಾನವೀಯತೆಯ ಮುಂದೆ ವ್ಯಾಪಾರ ಬುದ್ದಿ ಮಂಕಾಗಿತ್ತು. ಅಲ್ಜೀರಿಯದಲ್ಲಿ ಕಾರ್ನ ಮಿಲ್ ಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಲು ನೆಪೋಲಿಯನ್ ದೊರೆಯನ್ನು ಕಾಣಲು ಬಂದಿದ್ದನು. ತಾನು ನಡೆಯುತ್ತಾ ಇದ್ದ ದಾರಿಯಲ್ಲಿನ ರಣರಂಗದ , ಮಾರಣಾಂತಿಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದನು. ಆ ಸೈನಿಕರ ನೋವಿಗೆ ತಕ್ಷಣ ಸ್ವಂದಿಸಿದನು. ಆ ಸೈನಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪೂರಕವಾಗಿ ಸ್ವಯಂಸೇವಕ ತಂಡವನ್ನು ತಯಾರು ಮಾಡಿದನು. ಯಾವುದೇ ದೇಶ, ಜಾತಿ, ಮತ, ಕುಲ, ಗೋತ್ರ, ಬಣ್ಣ, ಧರ್ಮಗಳ ಭೇದ ಮಾಡದೆ ಎಲ್ಲಾ ದೇಶದ ಗಾಯಾಳು ಗಳನ್ನು ಉಪಚರಿಸಿ ಮಾನವೀಯತೆಯನ್ನು ಮೆರೆದನು. ಕಾಲಚಕ್ರ ಉರುಳುತ್ತಿತ್ತು, ಜನ ಎಲ್ಲವನ್ನೂ ಮರೆತರೂ, ಹೆನ್ರಿ ಡ್ಸೂನಾಂಟ್ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದ. ಯುದ್ಧದ ಭೀಕರತೆ ಹೆನ್ರಿಯ ಮನದಲ್ಲಿ ಆಳವಾಗಿ ಬೇರೂತ್ತಿತ್ತು. ಹಗಲೂ ರಾತ್ರಿ ಯುದ್ಧದ ಬಗ್ಗೆಯೇ ಯೋಚಿಸುತ್ತಿದ್ದ ಆತ, ಇದಕ್ಕೊಂದು ಶಾಶ್ವತ ಪರಿಹಾರ ಪಡೆಯಲೇ ಬೇಕೆಂಬ ದೃಢ ಚಿತ್ತದಿಂದ ಕಾರ್ಯ ಪ್ರವೃತ್ತವಾದ.

ಯುದ್ಧಕಾಲದಲ್ಲಿ ಮಾನವ ಜನಾಂಗ ಎದುರಿಸುವ ಭಯಂಕರ ಯಾತನೆಯನ್ನು ತಪ್ಪಿಸಲು ಹೆನ್ರಿ ಡ್ಯೂನಾಂಟ್ ತನ್ನದೇ ಆದ ಎರಡು ಅಂಶಗಳನ್ನು ಮನದಟ್ಟು ಮಾಡಿಕೊಂಡ. ಆ ನಿಟ್ಟಿನಲ್ಲಿ ಹೆನ್ರಿ ಡ್ಯೂನಾಂಟ್ “ ದಿ ಮೆಮಾರಿ ಆಫ್‌ ಸಲ್ರೆರಿನೋ” ಎಂಬ ಪುಸ್ತಕವನ್ನು ಪ್ರಕಟಿಸಿ, ಅದರ ಪ್ರತಿಗಳನ್ನು ವಿಶ್ವದಾದ್ಯಂತ ಹಂಚಿದ. ಆ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದ. ಆ ಎರಡು ಅಂಶಗಳು ಯಾವುದೆಂದರೆ 

(1) ಅಂತರಾಷ್ಟ್ರೀಯ  ಸ್ವಯಂಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಬೆಕು. ಇದರಲ್ಲಿ ಸ್ವಯಂ ಸೇವಕ ತಂಡವು ಯುದ್ಧ ಮುಕ್ತಾಯವಾದ ಬಳಿಕ ಅಲ್ಲಿನ ಗಾಯಾಳುಗಳನ್ನು ಅವರ ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು.

(2) ಗಾಯಾಳು ಸೈನಿಕರನ್ನುಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು  ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು, ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ,  ಅಂತರಾಷ್ಟ್ರೀಯ  ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಅದ್ಭುತವಾದ ಪುಸ್ತಕವನ್ನು ಓದಿದ ಬಳಿಕ ಜಿನಿವಾದ ಸಮಾಜಕಲ್ಯಾಣ ಸಂಸ್ಥೆಯೊಂದು  ಹೆನ್ರಿ ಡ್ಯೂನಾಂಟ್‌ನ ಸಂಕಲ್ಪಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಮುಂದೆ ಬಂದಿತು. 5 ಮಂದಿಯ ಒಂದು ಸಮಿತಿಯನ್ನು ಮಾಡಿ , ಹೆನ್ರಿ ಡ್ಯೂನಾಂಟ್‌ರವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಈ ಸಮಿತಿಯು ಒಬ್ಬ ಸೇನೆಯ ನಿವೃತ್ತ ಕಮಾಂಡರ್, ಒಬ್ಬ ವೈದ್ಯ, ಒಬ್ಬ ಸಮಾಜ ಸೇವಕ, ಒಬ್ಬ ವ್ಯಾಪಾರಿ, ಮತ್ತೊಬ್ಬ ನಿವೃತ್ತ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಶ್ರಮದ ಫಲವಾಗಿ 1863, ಅಕ್ಟೋಬರ್ 26 ರಂದು ಜಿನೇವಾದಲ್ಲಿ ಅಂತರಾಷ್ಟೀಯ ಸಮ್ಮೇಳನ ನಡೆದು, 16 ರಾಷ್ಟ್ರಗಳ  ವಿವಿಧ ಆಮಂತ್ರಿಕರು ಇದರಲ್ಲಿ ಪಾಲ್ಗೊಂಡಿದ್ದರು.

“ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ” ಎಂಬ ಹೆಸರಿನ ಅಂತರಾಷ್ಟ್ರೀಯ  ಸಂಸ್ಥೆಯನ್ನು ಸ್ಥಾಪಿಸಲು ಈ ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು. ಮುಂದೆ ಇದೇ ಸಂಸ್ಥೆ “ ರೆಡ್ ಕ್ರಾಸ್ ಸಂಸ್ಥೆ” ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಹೀಗೆ ಒಬ್ಬ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ ನ ಹೃದಯ ಅಂತಃಕರಣದ ಮತ್ತು ಪರಿಶ್ರಮದ ಫಲವಾಗಿ ಅಂತರಾಷ್ಟ್ರೀಯ  ರೆಡ್ ಕ್ರಾಸ್ ಸಂಸ್ಥೆಯ ಉಗಮವಾಯಿತು.


ಜೀನ್ ಹೆನ್ರಿ ಡ್ಯೂನಾಂಟ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ,

ಸ್ವಿಜರ್ಲೆಂಡ್ ದೇಶದ ಜಿನೀವಾದಲ್ಲಿ 1828ರ ಮೇ 8 ರಂದು ಜನಿಸಿದ. ತಂದೆ ಜೀನ್ ಜ್ಯಾಕ್ ಡ್ಯೂನಾಂಟ್ ವ್ಯಾಪಾರಿ ಮತ್ತು ಸಮಾಜ ಸೇವಕ ತಾಯಿ ಬಹಳ ಧಾರ್ಮಿಕ ಭಕ್ತೆ. ಇವರಿಬ್ಬರ ಗುಣ ಮೈಳೈಸಿ ಹೆನ್ರಿ ಡ್ಯೂನಾಂಟ್ ವ್ಯಾಪಾರದ ಜೊತೆಗೆ ಮಾನವೀಯತೆಯನ್ನು ಹಚ್ಚಿಕೊಂಡ. ಎಳೆ ಪ್ರಾಯದಲ್ಲೇ ಬಡವರಿಗೆ, ರೋಗಿಗಳಿಗೆ, ವೃದ್ಧರಿಗೆ ಔಷದ, ಸಹಾಯ, ಆಹಾರ ನೀಡುವುದನ್ನು ರೂಢಿ ಮಾಡಿಕೊಂಡಿದ್ದ. ಕಾಲೇಜು ವಿದ್ಯಾರ್ಥಿಯಾದ್ದಾಗಿನಿಂದಲೂ  ಡ್ಯೂನಾಂಟ್ ಪ್ರತಿಭಾವಂತನಾಗಿದ್ದ ಜೊತೆಗೆ ಮಾನವೀಯ ಕಳಕಳಿ ಮತ್ತು ಧಾರ್ಮಿಕ ಚರ್ಚೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮತ್ತು ಒಬ್ಬ ಉತ್ತಮ ಮಾತುಗಾರನಾಗಿದ್ದನು. 1844 “ ವೈ.ಎಂ. ಸಿ.ಎ. ಎಂಬ ಧರ್ಮ ಸಂಸ್ಥೆ ಹುಟ್ಟಿಹಾಕಿ ಬಡವರಿಗೆ, ರೋಗಿಗಳಿಗೆ, ನೊಂದವರಿಗೆ, ಸಾಂತ್ವನ ಹೇಳುವಲ್ಲಿ ಹೆಚ್ಚು ಆಸಕ್ತನಾಗಿದ್ದನು. ತನ್ನ ಜೀವನದ ಹೆಚ್ಚಿನ ಸಮಯವನ್ನು ಯುದ್ಧ ಖೈದಿಗಳ ಕಲ್ಯಾಣಕ್ಕಾಗಿ, ಸಮುದ್ರದಲ್ಲಿ ಗಾಯಗೊಂಡ ಜನರಿ ಗಾಗಿ ಸೇವೆ ಮಾಡುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿರಿಸಿದನು. 


1859ರ “ಸಲ್ರೆರಿನೋ ಯುದ್ಧ” ಡ್ಯೂನಾಂಟ್‌ನ ಜೀವನ  ಧೇಯವನ್ನು ಬದಲಾಯಿಸಿತು. ಮೂಲತಃ ವ್ಯಾಪಾರಿಯಾಗಿದ್ದರೂ, ವ್ಯಾವಹಾರಿಕತೆಗಿಂತ ಮಾನವೀಯತೆಗೆ ಹೆಚ್ಚು ಒತ್ತು ನೀಡಿದ ಫಲವಾಗಿಯೇ “ರೆಡ್ ಕ್ರಾಸ್” ಸಂಸ್ಥೆ ಉಗಮಕ್ಕೆ ಪರೋಕ್ಷವಾಗಿ ಕಾರಣೀ ಭೂತನಾದನು. 1901ರಲ್ಲಿ ಹೆನ್ರಿ ಡ್ಯೂನಾಂಟ್ ವಿಶ್ವದ ಅತ್ಯುನ್ನತ ಗೌರವವಾದ“ನೋಬೆಲ್ ಶಾಂತಿ ಪುರಸ್ಕಾರ” ಪ್ರಪ್ರಥಮವಾಗಿ ದೊರಕಿತು. ರೆಡ್ ಕ್ರಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಸಮಿತಿಯು ಹೆನ್ರಿ ಡ್ಯೂನಾಂಟ್ ಬಗ್ಗೆ ಜಿನೀವಾದಿಂದಲೇ ಕಳಿಸಿದ ಸಂದೇಶ ಈ ರೀತಿಯಾಗಿತ್ತು. “ ಇಂಥ ಘನತ್ತರವಾದ ಗೌರವಕ್ಕೆ ನಿಮ್ಮಂತೆ ಪಾತ್ರರಾದವರು ಬೇರೆ ಯಾರೋಬ್ಬರೂ ಇಲ್ಲ. 40 ವರ್ಷಗಳ ಸತತ ಪರಿಶ್ರಮದಿಂದ ಈ ಸಂಘಟನೆಯನ್ನು ಯುದ್ಧರಂಗದಲ್ಲಿನ ಗಾಯಾಳುಗಳ ಪರಿಹಾರಕ್ಕಾಗಿ ನೀವು ಆರಂಭಿಸಿದಿರಿ. ನೀವಿಲ್ಲದಿದ್ದರೆ 19ನೇ ಶತಮಾನದ ಸರ್ವೋಚ್ಚ ಮಾನವೀಯ ಸಾಧನೆಯಾದ ರೆಡ್ ಕ್ರಾಸ್ ಸಂಸ್ಥೆ ಉದಯಿಸುತ್ತಿರಲಿಲ್ಲ”. ತನ್ನ ಜೀವನದ ಕೊನೆ ಕ್ಷಣದಲ್ಲಿ ಕೂಡ ಹೆನ್ರಿ ಡ್ಯೂನಾಂಟ್ ಬಡರೋಗಿಗಳ ಸೇವೆ ಮಾಡುತ್ತಾ ಆಸ್ಪತ್ರೆಯಲ್ಲಿಯೇ ಇದ್ದ ಹೀಗೆ ಶ್ರೀಮಂತನಾದರೂ ಬಡವರ ಜೊತೆಗೆ ಬದುಕಿದ, ರೆಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ 30ನೇ ಅಕ್ಟೋಬರ್ 1910ರಂದು ಹ್ರೆಡನ್ ನಗರದಲ್ಲಿ ಮರಣ ಹೊಂದಿದರು. ಹೆನ್ರಿ ಡ್ಯೂನಾಂಟ್‌ನ ಜನ್ಮದಿನವಾದ ಮೇ 8 ನ್ನು ಪ್ರತಿ ವರ್ಷ “ವಿಶ್ವ ರೆಡ್ ಕ್ರಾಸ್” ದಿನ ಎಂದು ಆಚರಿಸಲಾಗುತ್ತದೆ. ಹೆನ್ರಿ ಡ್ಯೂನಾಂಟ್ ತನ್ನ ಜೀವನದ ಉದ್ದೇಶವನ್ನು ತುಂಬಾ ಸರಳವಾದ 3 ಶಬ್ದಗಳಲ್ಲಿ ಬರೆದಿದ್ದಾನೆ. ಜನತೆಯಿಂದ, ಜನತೆಗೆ ನೆರವು ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯಗಳನ್ನು ಈ ಶಬ್ದಗಳೇ ವಿವರಿಸುತ್ತದೆ.


ಒಟ್ಟಿನಲ್ಲಿ “ರೆಡ್ ಕ್ರಾಸ್” ಸಂಸ್ಥೆ ತನ್ನ ಸೇವಾ ಕಾರ್ಯಗಳಿಂದ ಜಾಗತಿಕ ಆಶಾಕಿರಣವಾಗಿ ಹೊರಹೊಮ್ಮಿತು. ರೆಡ್ ಕ್ರಾಸ್ ಸಂಸ್ಥೆ ಸಾರ್ವಕಾಲಿಕ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿ, ಯುದ್ಧಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆ ಗಳನ್ನು ನಡೆಸುತ್ತಲೇ ಇದ್ದು ವಿಶ್ವಶಾಂತಿಗೆ ಮುನ್ನುಡಿ ಬರೆಯುತ್ತಿದೆ. ರೆಡ್ ಕ್ರಾಸ್ ಸಂಸ್ಥೆ ಮೂಲ ತತ್ವಗಳು “ ಮಾನವೀಯತೆ ಯಿಂದ ಶಾಂತಿಯ ಕಡೆಗೆ ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್ ಕ್ರಾಸ್ ಸಂಸ್ಥೆಯ ಮೂಲ ಧ್ಯೇಯ ಗಳನ್ನು ಈ ರೀತಿ ವಿಂಗಡಿಸಲಾಗಿದೆ.


1.  ಮಾನವೀಯತೆ: ಯುದ್ಧರಂಗದಲ್ಲಿನ ಗಾಯಾಳುಗಳಿಗೆ ತಾರತಮ್ಯವಿಲ್ಲದೇ ಸೇವೆ ಸಲ್ಲಿಸುವ ಉದ್ದೇಶ ದಿಂದ ರೆಡ್ ಕ್ರಾಸ್ ಸಂಸ್ಥೆ ಜನ್ಮ ತಾಳಿತು. ಮಾನವೀಯ ಸಂಕಟಗಳನ್ನು ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮರ್ಥವಾಗಿ ತಡೆ ಗಟ್ಟುವುದು ಅಥವಾ ಉಪಶಮನ ಮಾಡುವುದೇ ಅದರ ಪರಮ ಗುರಿ. ಜೀವನ ಸಂರಕ್ಷಣೆ , ಆರೋಗ್ಯ ಪಾಲನೆ ಹಾಗೂ ಮಾನವನ ಘನತೆ ಕಾಪಾಡುವುದು. ಇವುಗಳು ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳು. ಅದು ಪರಸ್ಪರ ತಿಳುವಳಿಕೆ, ಸ್ನೇಹ, ಸಹಕಾರ ಹಾಗೂ ಶಾಶ್ವತ ಶಾಂತಿ ಇವುಗಳನ್ನು ಜನರಲ್ಲಿ ಅಭಿವೃದ್ಧಿ ಪಡಿಸುತ್ತದೆ.

2. ನಿಷ್ಪಕ್ಷಪಾತ: ರೆಡ್ ಕ್ರಾಸ್ ಸಂಸ್ಥೆ ವ್ಯಕ್ತಿಯ ರಾಷ್ಟ್ರೀಯತೆ , ಜನಾಂಗ , ಧಾರ್ಮಿಕ ಶ್ರದ್ಧೆ, ವರ್ಗ ಅಥವಾ ರಾಜಕೀಯ ಅಭಿಪ್ರಾಯ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಪಕ್ಷಪಾತ ಮಾಡುವುದಿಲ್ಲ.

3. ತಟಸ್ಥತೆ: ಎಲ್ಲರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಯಾವುದೇ ದ್ವೇಷಗಳಲ್ಲಿ ಭಾಗಿಯಾಗು ವುದಿಲ್ಲ ಅಥವಾ ಯಾವುದೇ ರಾಜಕೀಯ, ಜನಾಂಗೀಯ , ಧಾರ್ಮಿಕ ಮತ್ತು ಆದರ್ಶವಾದಗಳ ವಿವಾದ ಪ್ರಸಂಗಗಳಲ್ಲಿ ಪಾಲ್ಗೊಳ್ಳುವುದಿಲ್ಲ.

4. ಸ್ವಾತಂತ್ರ್ಯ:  ರೆಡ್ ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯ  ಮತ್ತು ಸ್ವತಂತ್ರ ಸಂಘಟನೆಯಾಗಿದೆ. ಯಾವುದೇ  ದೇಶದಲ್ಲಿನ ರಾಷ್ಟ್ರೀಯ  ರೆಡ್ ಕ್ರಾಸ್ ಸಂಸ್ಥೆ ಆ ದೇಶದ ಸಹಾಯಕ ಮಾನವ ಸೇವೆ ಗಳ ಪರಿಹಾರಕಾರಕ ಸಂಘಟನೆಯಾಗಿದ್ದು, ಅದು ತನ್ನದೇ ಆದ ನೀತಿ, ನಿಯಮಗಳಿಗೆ ಒಳಪಟ್ಟ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಪತ್ತಿನಿನ ಸಂದರ್ಭದಲ್ಲಿ ತಾನು ರೂಪಿಸಿದ ನೀತಿ ನಿಯಮಗಳಿಗೆ ಬದ್ಧವಾಗಿ. ಮೂಲತತ್ವಗಳಿಗೆ ದಕ್ಕೆಯಾಗದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಮರ್ಥವಾಗಿರುತ್ತದೆ.

5. ಸ್ವಯಂ ಪ್ರೇರಣ ಸೇವೆಗಳು: ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಪ್ರೇರಿತ ಪರಿಹಾರಕಾರಕ ಸಂಘಟನೆಯಾಗಿದ್ದು, ಈ ಸಂಸ್ಥೆಯನ್ನು ಯಾವುದೇ ರೂಪದಲ್ಲಿಯೂ ಲಾಭಗಳಿಕೆಯ ಉದ್ದೇಶದಿಂದ ನಿರ್ಮಿಸಿರುವುದಿಲ್ಲ. 

6. ಏಕತೆ: ಯಾವುದೇ ದೇಶದಲ್ಲಿ ಕೇವಲ ಒಂದೇ ಒಂದು ರಾಷ್ಟ್ರೀಯ  ರೆಡ್ ಕ್ರಾಸ್ ಸಂಘಟನೆ ಇರುತ್ತದೆ. ಅದು ಎಲ್ಲರಿಗೂ ಮಕ್ತವಾಗಿರುತ್ತದೆ. ಅದು ರಾಷ್ಟ್ರವ್ಯಾಪಿ  ತನ್ನ ಮಾನವೀಯ ಸೇವೆಗಳನ್ನು ನೆರವೇರಿಸುತ್ತದೆ.

7. ವಿಶ್ವವ್ಯಾಪಕತ್ವ:  ರೆಡ್ ಕ್ರಾಸ್ ಸಂಸ್ಥೆ ವಿಶ್ವವ್ಯಾಪಿ ಸಂಘಟನೆಯಾಗಿದ್ದು, ಎಲ್ಲಾ ಸಂಸ್ಥೆಗಳಿಗೂ ಸಮಾನ ಸ್ಥಾನಮಾನ ಹೊಂದಿದ್ದು, ಇತರರಿಗೆ ಸಹಾಯ ಮಾಡುವಲ್ಲಿನ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಹಂಚಿಕೊಳ್ಳುತ್ತದೆ.

ರೆಡ್ ಕ್ರಾಸ್ ಲಾಂಛನ:  ಬಿಳಿ ಹಿನ್ನಲೆಯಲ್ಲಿ ಕೆಂಪು ಕ್ರಾಸ್ ಹೊಂದಿದ ಲಾಂಛನ ರೆಡ್ ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್‌ನ ಎಲ್ಲಾ ಬಾಹುಗಳೂ ಪರಸ್ಪರ ಸಮವಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿರುವ ಸೇವೆ, ಉಪಕಾರ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ಈ ಸೇವಾ ಕಾರ್ಯದಲ್ಲಿ ತೊಡಗಿರುವರು. ಯುದ್ಧದಿಂದ ಹೊರತಾರವರು ಎಂಬ ಸಂಕೇತ, ಈ ಲಾಂಛನದಿಂದ ಸೂಚಿಸಲಾಗುತ್ತದೆ. ಒಟ್ಟಿನಲ್ಲಿ ತುರ್ತು ಅವಘಡದ ಸಮಯದಲ್ಲಿ ಮಾನವೀಯ ಮತ್ತು ಪರಿಹಾರಕಾರಕ ಸೇವೆ ನೀಡುವ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಈ ಲಾಂಛನವನ್ನು ಬಳಸಬಹುದು. ರೆಡ್ ಕ್ರಾಸ್ ಸಂಘಟನೆಯ ಚಟುವಟಿಕೆಗಳನ್ನು ಯುದ್ಧಕಾಲದ ಚಟುವಟಿಕೆ ಮತ್ತು ಶಾಂತಿ ಕಾಲದ ಚಟುವಟಿಕೆ ಎಂದು ವಿಂಗಡಿಸಲಾಗುತ್ತದೆ.


ಶಾಂತಿ ಸಮಯದ ಚಟುವಟಿಕೆಗಳಾದ, ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದು ಎಂಬುದಾಗಿ ವಿಂಗಡಿಸಲಾಗಿದೆ. “ಮಾನವೀಯತೆಯಿಂದ ಶಾಂತಿಯ ಕಡೆಗೆ” ಎಂಬ ಧ್ಯೇಯ ವಾಕ್ಯದಿಂದ ಜಗತ್ತಿನಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುವ ರೆಡ್ ಕ್ರಾಸ್ ಸಂಸ್ಥೆ, ತನ್ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ನನ್ನು ಸ್ಮರಿಸುವ ಉದ್ದೇಶಕ್ಕಾಗಿಯೇ ಮೇ 8ನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ದಿನ ಎಂದು ಜಗತ್ತಿನಾದ್ಯಂತ‌ ಆಚರಿಸಲಾಗುತ್ತದೆ. ನಾವೆಲ್ಲಾ ಸೇರಿ ದೇಶ, ಜಾತಿ ಮತ, ಜನಾಂಗ, ಕುಲ, ಗೋತ್ರ, ವರ್ಣ ಬೇಧಗಳನ್ನು ಮೆಟ್ಟಿ ನಿಂತು, ವಿಶ್ವ ಭಾತೃತ್ವದ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದಲ್ಲಿ, ಅದುವೇ ಆ ಮಹಾನ್ ಜೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ಅತಿಶಯೋಕ್ತಿಯಲ್ಲ.



-ಡಾ|| ಮುರಲಿ ಮೋಹನ್ ಚೂಂತಾರು

ಭಾರತೀಯ ರೆಡ್ ಕ್ರಾಸ್ ಸೊಸೈಟಿ

ಮಂಗಳೂರು

drmuraleemohan@gmail.com

9845135787



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top