.
ಸಾಂಕೇತಿಕ ಚಿತ್ರ
ನನಗೆ ಜ್ಞಾಪಕವಿದ್ದಂತೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ನಮ್ಮಗಳ ಯಾರ ಮನೆಯಲ್ಲೂ ವೈದಿಕ ತಿಥಿ, ಹಬ್ಬ ಹರಿದಿನದ ಹೊರತು ಬೇರಾವ ದಿನಗಳಲ್ಲೂ ಪೇಟೆಯಿಂದ ಹಣ್ಣು ಹೂವು ತರುವ ಪದ್ದತಿಯಿರಲಿಲ್ಲ...!
ಈಗಿನ ಆಧುನಿಕ ಯುಗಕ್ಕೆ ನಮ್ಮ ಸಮಾಜ ವರ್ಗಾವಣೆ ಆದ ಮೇಲೆ, ಆಧುನಿಕ ವೈದ್ಯಕೀಯ ಪದ್ದತಿ ಚಿಕಿತ್ಸೆ ಶುರುವಾದ ಮೇಲೆ, ಜನರಿಗೂ ಅನುಕೂಲ ಹೆಚ್ಚಾದ ಮೇಲೆ ಪೇಟೆಯಿಂದ ಹಣ್ಣು-ಹೂಗಳನ್ನು ತರುವ ಪದ್ಧತಿ ಶುರುವಾಯ್ತು.
ಇದೆಲ್ಲಾ ಕಾರಣಕ್ಕೂ ಕಲಶ ಇಟ್ಟಂತೆ ಕೊರೋನ ನಂತರ ಮನೆ ಮನೆಯ ಬಾಗಿಲಿಗೂ ಹಣ್ಣು ತರಕಾರಿ ಬರುವುದೂ ಮತ್ತು ಡಾಕ್ಟರ್ ಹಣ್ಣು ತಿನ್ನಿ ಎನ್ನುವ ಸಲಹೆ ನೀಡಲು ಶುರುಮಾಡಿದ ಮೇಲಿನ ದಿನಗಳ ನಂತರ ಈಗ ಎಲ್ಲರ ಮನೆಗಳಲ್ಲೂ ಪೇಟೆ ಅಂಗಡಿ ಹಣ್ಣುಗಳು ಉಪಯೋಗ ಶುರುವಾಗಿದೆ.
ಕಿತ್ತಳೆ, ಸೇಬು, ಮಾವು, ದಾಳಿಂಬೆ ಹಣ್ಣು ಗಳು ಇರಲಿ ಈ ಮಂಗನ ಕಾಟದ ಕಾರಣಕ್ಕೆ ನಾವು ಪೇಟೆ ಹಣ್ಣಿನ ಅಂಗಡಿಗಳಿಂದ ಸೀಬೆ ಯಾನೆ ಪೇರಳೆ, ಬಾಳೆ ಹಣ್ಣು ಕೂಡ ತರಬೇಕಿದೆ...!
ದುರಂತ ಎಂದರೆ, ಕಿತ್ತಳೆ, ಸೇಬು, ದಾಳಿಂಬೆ, ಮಾವು, ಪೇರಳೆ, ಅನಾನಸ್, ದ್ರಾಕ್ಷಿ, ಮೋಸಂಬಿ..... ಈ ಬಗೆ ಬಗೆಯ ಹಣ್ಣುಗಳು ಹೊಳೆಯುವ ಬಣ್ಣ ದ್ದಾಗಿದ್ದರೂ "ರುಚಿ ಶೂನ್ಯ"! ನೀವು ಗಮನಿಸಿ ನೋಡಿ, ಬಾಳೆ ಹಣ್ಣು ಹಳದಿಯಾಗಿದ್ದರೂ ಅಲ್ಲಲ್ಲಿ ಹಸಿರು ಮೂಗು ತೂರಿಸಿರುತ್ತದೆ. ಬಣ್ಣ ಹಳದಿಯಾದರೂ ಸಿಪ್ಪೆಯೊಳಗೆ ಕಾಯಿ ಕಾಯಿ. ದಾಳಿಂಬೆ ಹಣ್ಣು ಒಳಗೆ ಒಂದಷ್ಟು ಕಪ್ಪು ಕಪ್ಪು ಬೀಜ.
ಪ್ರತಿ ಕೆಜಿ ಆರು ಹಣ್ಣು ಮಾವಿನ ಹಣ್ಣಿನಲ್ಲಿ ಒಂದು ಹಣ್ಣಾದರೂ ಕೊಳೆತು ಹೋಗುತ್ತದೆ...! ಮೋಸಂಬಿ ಹಣ್ಣನ್ನು ಕೈಯಿಂದ ಬಿಡಿಸಲೇ ಅಸಾಧ್ಯ.
ಕಿತ್ತಳೆ ಹಣ್ಣಿನ ಸಿಪ್ಪೆಯೊಳಗೇ ಗ್ಯಾಸ್ ತುಂಬಿ ಬಾಲ್ ಮಾಡಿದಂತನ್ನಿಸುತ್ತದೆ. ಪೇರಳೆ ಹಣ್ಣು ಹಳದಿಯಾಗಿದ್ದರೂ ಚಪ್ಪೆ ಚಪ್ಪೆ ರುಚಿ ರಹಿತ.
ಡಾ. ಅಂಜನಪ್ಪರವರು ಪೇರಳೆ ಹಣ್ಣು ಮಧುಮೇಹಕ್ಕೆ ಒಳ್ಳೆಯ ಔಷಧ ಎಂಬ ಸಲಹೆ ನೀಡಿದ ಮೇಲೆ ಪೇರಳೆಗೊಂದು ಒಳ್ಳೆಯ ಮಾರುಕಟ್ಟೆ create ಆಗಿದೆ.
ಪೇರಳೆಯಲ್ಲಿ ಪೂನಾ ಮಾದರಿ ಪೇರಳೆ ಅದ್ಭುತವಾದ ರುಚಿ. ಯಾಕೆ ಹೀಗೆ...? ನಮ್ಮ local ಮಾರುಕಟ್ಟೆಯ ಹೆಚ್ಚಿನ ಹಣ್ಣುಗಳು rejected quality ಯವು ಎನಿಸುತ್ತದೆ. ನಮಗೆ ಖರೀದಿಗೆ ಸಿಗುವ ಹಣ್ಣುಗಳು ನಿಜವಾಗಿಯೂ ಬೆಳೆದು ಕಳಿತ ಹಣ್ಣುಗಳಲ್ಲ!
ಮಾಂಸಾಹಾರಿಗಳಿಗೆ ಕನಿಷ್ಠ ಸಮುದ್ರದ ಮೀನುಗಳಾದರೂ ಇದ್ದಿದ್ದರಲ್ಲಿ ಸಾವಯವ ಆರೋಗ್ಯಕರ ತಿನಿಸಾಗಿ ಸಿಗುತ್ತದೇನೋ. ಆದರೆ ಸಸ್ಯಾಹಾರಿಗಳಿಗೆ ಸಂಪೂರ್ಣ ವಿಷಯುಕ್ತ ಆಹಾರೋತ್ಪನ್ನಗಳೇ ಸಿಗುವುದು.
ಎರಡನೇ ಹಂತದ ನಗರ ಪಟ್ಟಣಗಳಿಗೆ ದೊಡ್ಡ ಮಾರುಕಟ್ಟೆಯಿಂದ ಬರುವ ಹಣ್ಣುಗಳ ಕಥೆ ಇಷ್ಟೇ. ಬಣ್ಣ ಬಣ್ಣ, ರುಚಿಯಿಲ್ಲಣ್ಣ...!
ಮನೆಯ ಹಿರಿಯರಿಗೆ ಹಣ್ಣು ತಂದು ಕೊಟ್ಟರೆ ಬ್ಯಾಡ ಮಾರಾಯ... ಅಂತಾರೆ. ನಾವು ಫಸ್ಟ್ quality ಹಣ್ಣಿನ ಬೆಲೆ ಕೊಟ್ಟು ಕಚ್ಚಟೆ ಕಾಯಿ ಹಣ್ಣು ಮಾಡಿದವು ನಮಗೆ ಖರೀದಿಗೆ ಸಿಗುತ್ತಿದೆ. ಬರೀ ಹುಳಿ, ರುಚಿ ರಹಿತ.
ಹೀಗಾದರೆ ಹಣ್ಣಿನ ಮಾರುಕಟ್ಟೆ ಗತಿ ಏನು?
ಮಾವಿನ ಹಣ್ಣಿನ ಸಿಹಿ, ಸೇಬು ಹಣ್ಣಿನ ಆರೋಗ್ಯಕರ ಅಂಶಗಳು, ದಾಳಿಂಬೆಯ ಒಳಗಿನ ಕಾಳಿನ ರುಚಿ, ಕಿತ್ತಳೆಯ ಘಮ. ಹೊಸ ತಲೆಮಾರಿಗೆ ಇಂತಹ ಹಣ್ಣನ್ನೇ ತಿನಿಸಿದರೆ ಅವಕ್ಕೆ ಹಣ್ಣುಗಳ ಬಗ್ಗೆಯೇ ಅವಜ್ಞೆ ಬರದೇ?
ಈ ಬಗ್ಗೆ ಹಣ್ಣಿನ ಬೆಳೆಗಾರರು, ಹಣ್ಣಿನ ಮಾರಾಟಗಾರರು ಮತ್ತು ಹಣ್ಣನ್ನು ಖರೀದಿಸುವ ಗ್ರಾಹಕರು ಚಿಂತನೆ ನಡೆಸಬೇಕಿದೆ.
ಏನಂತೀರ...?
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ