ಮಂಗಳೂರು: ಕೋಡಿಕಲ್ ನ ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳದ ರಜತ ಮಹೋತ್ಸವ ಸಂಭ್ರಮ ಸಮಾರಂಭ 'ಯಕ್ಷಪಕ್ಷ ರಜತ ಸರಯೂ' ಅಷ್ಟಾಹ 15 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ನಿರ್ದೇಶಕ ಅಲೆವೂರಾಯ ವರ್ಕಾಡಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 16ರಿಂದ 23ರ ವರೆಗೆ ದೇರೆಬೈಲ್ ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 5ರಿಂದ ವಿವಿಧ ಮಕ್ಕಳ ಮೇಳಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಮೇ 26ರಿಂದ ಜೂ. 1ರ ವರೆಗೆ ಪ್ರತಿದಿನ ಸಂಜೆ 5ರಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಯಕ್ಷಪಕ್ಷ ರಜತ ಸಂಭ್ರಮ ಸಪ್ತಾಹ ವಿರ್ಪಡಿಸಲಾಗಿದೆ ಎಂದರು.
ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಮೇ 16ರಂದು ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಈ ವೇಳೆ ಯಕ್ಷಾರ್ಯ ಎಂಬ ಅರ್ಥಸಹಿತ ಪ್ರಸಂಗಗಳ ಪುಸ್ತಕ ಬಿಡುಗಡೆಗೊಳ್ಳಲಿದೆ. ಮೇ 26ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಪ್ತಾಹವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿ, ಯಕ್ಷ ರಜತ ನೆನಪಿನ ಸಂಚಿಕೆ ಬಿಡುಗಡೆ ಮಾಡುವರು.
ಅನಂತರ 7 ದಿನಗಳ ಕಾಲ ಜಿಲ್ಲೆಯ ಖ್ಯಾತ ಕಲಾವಿದರ ಒಗ್ಗೂಡುವಿಕೆಯಿಂದ ಬ್ರಹ್ಮ ಕಪಾಲ, ರಾವಣೋದ್ಭವ-ಮಂಡೋದರಿ ಪರಿಣಯ, ಶಶಿಪ್ರಭಾ ಪರಿಣಯ, ಚೂಡಾಮಣಿ, ಅಭಿಮನ್ಯು ಕಾಳಗ, ಶ್ರೀದೇವಿ ಮಹಾತ್ಮ ಮತ್ತು ಶ್ರೀನಿವಾಸ ಕಲ್ಯಾಣ ಪ್ರಸಂಗಗಳು ಜರಗಲಿದೆ. ಜೂ. 1ರಂದು ದಿನವಿಡೀ ಮಹಿಳಾ ಯಕ್ಷಗಾನ ಸಂಭ್ರಮ ನಡೆಯಲಿದೆ.
ಮಂಗಳೂರು ವಿ.ವಿ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಹಿಳಾ ಯಕ್ಷಗಾನ ವಿಚಾರಗೋಷ್ಠಿ ನಡೆಯಲಿದೆ ಎಂದರು. ಸಂಸ್ಥೆಯ ಗೌರವ ಸಂಚಾಲಕ ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ಸರಯೂ ಮಹಿಳಾ ತಂಡದ ಅಧ್ಯಕ್ಷೆ ವಿಜಯಲಕ್ಷ್ಮೀ ಎಲ್.ಎನ್., ಗೌತಮ್ ಭಂಡಾರಿ, ವಿದ್ಯಾರ್ಥಿಗಳಾದ ನಿಹಾಲ್ ಪೂಜಾರಿ, ಶೈಶಾ ಭಂಡಾರಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ