ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬರ್ಬರ ಹತ್ಯೆಯ ಸಂಚಿನಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ ಎಂದು ಮೂಡುಬಿದಿರೆ-ಮೂಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ನೇರ ಆರೋಪ ಮಾಡಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಹಾದಿ ಶಕ್ತಿಗಳಿಗೆ ನೀಡುತ್ತಿರುವ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರಿಗೆ ಜಿಹಾದಿಗಳಿಂದ ಜೀವ ಬೆದರಿಕೆ ಇದೆಯೆಂದು ಗೊತ್ತಿದ್ದರೂ ಅವರು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಹೊಂದದಂತೆ ಮಾಡಲಾಯಿತು. ಆ ಮೂಲಕ ಪೊಲೀಸರು ಅವರನ್ನು ನಿಃಶಸ್ತ್ರಗೊಳಿಸಿ ಜಿಹಾದಿ ಶಕ್ತಿಗಳಿಗೆ ಕೊಲೆ ಎಸಗಲು ಅನುವು ಮಾಡಿಕೊಟ್ಟರು. ಕೃತ್ಯ ನಡೆದ ಬೆನ್ನಿಗೇ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ತನಿಖೆಗೂ ಮೊದಲೇ ಫಾಸಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರು. ಆ ಮೂಲಕ ತನಿಖೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದರ ಮೇಲೆ ಪ್ರಭಾವ ಬೀರಿದರು ಎಂದು ಶಾಸಕ ಕೋಟ್ಯಾನ್ ವಾಗ್ದಾಳಿ ನಡೆಸಿದರು.
ಗೃಹಸಚಿವ ಡಾ. ಜಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹತ್ಯೆಗೀಡಾದ ಹಿಂದೂ ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಆತನನ್ನು ರೌಡಿಶೀಟರ್ ಎಂದು ಬಿಂಬಿಸಿದ್ದಲ್ಲದೆ, ಮುಸ್ಲಿಂ ಮುಖಂಡರ ಸಭೆ ನಡೆಸಿ ತನಿಖೆಯ ದಿಕ್ಕನ್ನು ಪೊಲೀಸರಿಗೆ ನಿರ್ದೇಶಿಸಿದರು. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆಡಳಿತ ಪಕ್ಷ ಕಾಂಗ್ರೆಸ್ನ ಒತ್ತಡಕ್ಕೆ ಮಣಿದು ಹಿಂದೂ ಕಾರ್ಯಕರ್ತರ ವಿರುದ್ಧ, ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ನೇರ ಆರೋಪ ಮಾಡಿದರು.
ಪೊಲೀಸರು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಅನ್ನುವ ಬಗ್ಗೆ ಎಳ್ಳಷ್ಟೂ ಭರವಸೆ ಉಳಿದಿಲ್ಲ. ಹಾಗಾಗಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಿಂದ ತನಿಖೆ ನಡೆಸಬೇಕು. ರಾಜ್ಯದ ಪೊಲೀಸರ ಮೇಲೆ ವಿಶ್ವಾಸ ಉಳಿದಿಲ್ಲ. ಹಿಂದುತ್ವದ ಪರವಾಗಿ ಮಾತನಾಡಿದ ಕಾರಣಕ್ಕೆ ಶಾಸಕರ ಮೇಲೆ ಸುಳ್ಳು ಕೇಸುಗಳನ್ನು ಹಾಕುವ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮೇಲೆ ದ್ವೇಷ ಭಾಷಣದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸುವ ಕಾಂಗ್ರೆಸ್ ಕೈಗೊಂಬೆ ಪೊಲೀಸರು, ಸುಹಾಸ್ ಹಂತಕರನ್ನು ಬಂಧಿಸುವಲ್ಲಿ ಯಾವ ಸಾಧನೆಯನ್ನೂ ಮಾಡಿಲ್ಲ. ಎಲ್ಲವೂ ಪೂರ್ವಯೋಜಿತ ಸಂಚಿನಂತೆ ಹಂತಕರಿಗೆ ಪೊಲೀಸರೇ ಮಾರ್ಗದರ್ಶನ ಮಾಡಿ ನಂತರ ತಾವು ಬಂಧಿಸಿದಂತೆ ನಾಟಕವಾಡಿದ್ದಾರೆ. ಸುಹಾಸ್ ಹತ್ಯೆಯ ಬಳಿಕ ಹಂತಕರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಬುರ್ಖಾಧಾರಿ ಮಹಿಳೆಯರನ್ನು ಏಕೆ ಬಂಧಿಸಿಲ್ಲ? ಎಂದು ಶಾಸಕರು ಪ್ರಶ್ನಿಸಿದರು.
ಬಜಪೆ, ಮೂಲ್ಕಿ ಠಾಣೆಗಳ ಪೊಲೀಸರು ನೇರವಾಗಿಯೇ ಈ ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಾಗಲೂ ಬಜಪೆಯ ನಿರ್ದಿಷ್ಟ ಅಪಾರ್ಟ್ಮೆಂಟ್ ಒಂದರಲ್ಲಿ ದುಷ್ಕರ್ಮಿಗಳು ಅಡಗಿ ಕುಳಿತುಕೊಳ್ಳುತ್ತಾರೆ. ಆ ಅಪಾರ್ಟ್ಮೆಂಟ್ ಯಾರಿಗೆ ಸೇರಿದ್ದು? ಅದರ ಮಾಲೀಕರು ಇಂತಹ ಸಮಾಜಘಾತುಕ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆಯೇ? ಈ ದಿಕ್ಕಿನಲ್ಲಿ ಏಕೆ ತನಿಖೆ ನಡೆಸಿಲ್ಲ? ಎಂದು ಅವರು ಪ್ರಶ್ನಿಸಿದರು.
ಹಿಂದೂಗಳನ್ನು ಹತ್ತಿಕ್ಕುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಸರಕಾರ ಯಾವುದೇ ಪಕ್ಷದ್ದಿರಲಿ, ಪೊಲೀಸರು ಕಾನೂನುಬದ್ಧ ಕರ್ತವ್ಯ ನಿರ್ವಹಿಸಬೇಕು. ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಮುಂದೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದೀತು. ದೀರ್ಘಾವಧಿಯ ಸರಕಾರಿ ಸೇವೆಯಡಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಐದು ವರ್ಷಕ್ಕೊಮ್ಮೆ ಬದಲಾಗುವ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಡಿ ಎಂದು ಅವರು ಎಚ್ಚರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ