ಅಂಬಿಕಾ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಪುತ್ತೂರು: ಎಲ್ಲಾ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿರಿಸಿ ದೇಶಕ್ಕಾಗಿ ಸ್ಪಂದಿಸುವ ಯುವಸಮುದಾಯದ ಸೃಷ್ಟಿಯಾಗಬೇಕು. ಶಿಕ್ಷಣ ವ್ಯವಸ್ಥೆ ಈ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಕೇವಲ ಹಣದ ಹಿಂದೆ ಬೀಳುವ ಯುವಸಮುದಾಯವನ್ನು ಸೃಷ್ಟಿಸುವುದು ಶಿಕ್ಷಣದ ಉದ್ದೇಶವಾಗಬಾರದು. ಶಿಕ್ಷಣದಲ್ಲಿ ದೇಶಪ್ರೇಮ, ಸಂಸ್ಕೃತಿ, ಸಂಸ್ಕಾರಗಳು ಮಿಳಿತವಾಗಿದ್ದಾಗ ಅತ್ಯುತ್ಕೃಷ್ಟ ಯುವಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಥಿಗಳ ಬೀಳ್ಕೊಡುಗೆ ಸಮಾರಂಭ- ಸಮರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಒಬ್ಬ ವಿದ್ಯಾರ್ಥಿ ಪದವಿ ಪೂರೈಸುವ ವೇಳೆಗೆ ಆತನ ಶಿಕ್ಷಣಕ್ಕಾಗಿ ಕೆಲವು ಲಕ್ಷಗಳನ್ನು ಸರ್ಕಾರ ಆತನ ಮೇಲೆ ಖರ್ಚು ಮಾಡಿರುತ್ತದೆ. ಹೀಗೆ ಭಾರತದ ನೆಲದಿಂದ ಲಕ್ಷಾಂತರ ಪಡೆದು ಶಿಕ್ಷಣ ಪಡೆದ ವಿದ್ಯಾರ್ಥಿ ನಾಳೆ ಯಾವುದೋ ದೇಶಕ್ಕೆ ಹೋಗಿ ಅಲ್ಲೇ ನೆಲೆಸುವ ನಿರ್ಣಯ ಮಾಡುತ್ತಾನೆಂದರೆ ನಮ್ಮ ದೇಶದ ಬಗೆಗೆ ಆತನಿಗೆ ಯಾವ ಗೌರವವಿದೆ ಎಂದು ಪ್ರಶ್ನಿಸಬೇಕಾಗುತ್ತದೆ. ಈ ಮಣ್ಣಿನಲ್ಲಿ ಜನಿಸಿದ್ದಕ್ಕೆ, ಇಲ್ಲಿನ ಅನ್ನಾಹಾರ ಸೇವಿಸಿದ್ದಕ್ಕೆ ಕನಿಷ್ಟ ಕೃತಜ್ಞತೆಯನ್ನೂ ತೋರಲಾರದವರನ್ನು ನಾವು ಸೃಷ್ಟಿಸುತ್ತಿದ್ದೇವೆಯೆಂದರೆ ಅದು ನಮ್ಮ ಶಿಕ್ಷಣ ವ್ಯವಸ್ಥೆಯ ಸೋಲೆನಿಸಿಕೊಳ್ಳದೇ ಎಂದು ಪ್ರಶ್ನಿಸಿದರು.
ಇಂದು ಅಮೇರಿಕಾದಂತಹ ದೇಶ ತನ್ನ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಬೇಡಿ ಎಂದು ಬಹಿರಂಗವಾಗಿ ಹೇಳುವಷ್ಟರ ಮಟ್ಟಿಗೆ ಮುಂದುವರೆಯುತ್ತಿದೆ. ಆದರೆ ಸ್ವಾಭಿಮಾನವಿಲ್ಲದ ಭಾರತದ ಕೆಲವರು ಆ ದೇಶಕ್ಕೆ ಹೋಗಿ ಅಲ್ಲಿನವರ ಚಾಕರಿ ಮಾಡುತ್ತಿದ್ದಾರೆ. ಇಂತಹ ದೇಶ ವಿರೋಧಿ ಧೋರಣೆ ಹೊರಬಂದ ತಕ್ಷಣ ಎಲ್ಲ ಭಾರತೀಯರೂ ಅಮೇರಿಕಾದಿಂದ ಹೊರಬರಲು ತೊಡಗಿದ್ದಿದ್ದರೆ ಇಡಿಯ ಜಗತ್ತಿಗೆ ಪಾಠವಾಗುತ್ತಿತ್ತು. ಇಂತಹ ದೇಶಪ್ರೇಮಿ ನಡೆಯನ್ನು ಇಸ್ರೇಲಿಗರನ್ನು ನೋಡಿ ಕಲಿಯಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತಾವನೆಗೈದು ಸ್ವಾಗತಿಸಿದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಮೂರು ವರ್ಷಗಳನ್ನು ಒಂದು ಸಂಸ್ಥೆಯಲ್ಲಿ ಕಳೆದು ಹೊರಹೋಗುವುದು ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಭಾವುಕ ವಿಚಾರ. ಆದರೆ ನಾವು ರೂಪಿಸಿದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದ್ದೇವೆ ಎಂಬುದು ಆಡಳಿತ ಮಂಡಳಿಗೆ ಹಾಗೂ ಉಪನ್ಯಾಸಕರಿಗೆ ಹೆಮ್ಮೆಯ ಸಂಗತಿ. ಸಂಸ್ಥೆಯಲ್ಲಿ ಕಲಿತ ವಿಷಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆಯೆಡೆಗೆ ಹೆಜ್ಜೆ ಹಾಕಬೇಕು ಎಂದು ಕರೆನೀಡಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳಾದ ಗುರುಪ್ರಸಾದ್, ಸಚಿನ್ ಹಾಗೂ ಶರಣ್ಯಾ ರೈ ಅನಿಸಿಕೆ ಹಂಚಿಕೊಂಡರು. ದ್ವಿತೀಯ ಪದವಿಯ ವಿದ್ಯಾರ್ಥಿಗಳಾದ ಆದಿತ್ಯಕೃಷ್ಣ, ಅಕ್ಷಿತಾ, ಸ್ವಾತಿ, ಅನ್ವಿತ್ ಹಾಗೂ ಪಲ್ಲವಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅರಸಿನ – ಕುಂಕುಮ, ಭಾರತದ ಧ್ವಜಸ್ಥಂಭದ ಮಾದರಿ, ಹೂ ನೀಡಿ ಆಶೀರ್ವದಿಸಲಾಯಿತು.
ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ. ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ