ಮೈಸೂರಿನ ಹೆಮ್ಮೆಯ 'ಮೈಸೂರು ಪಾಕ'ದಲ್ಲಿ, ವಿರೋಧಿ ರಾಷ್ಟ್ರ ಪಾಕ್ ಹೆಸರಿದೆ, ಅದನ್ನು ತೆಗೆಯಬೇಕು, ಹೆಸರಿನ 'ಶಬ್ಧಗಳ ನಕ್ಷೆಯಲ್ಲಿ ಪಾಕ್ ಇಲ್ಲದಂತೆ ಮಾಡಬೇಕು ಅಂತ ಭಾರಿ ಚರ್ಚೆಯೊಂದು ಜಾಲತಾಣದಲ್ಲಿ ನಡೆಯುತ್ತಿದೆ.
(ನಮ್ಮ ಗ್ರಹಚಾರ ನೋಡಿ, ಪರಮ ವಿರೋಧಿ ಪಾಕ್ನ್ನು "ನಮ್ಮ ಪಾಕಿಸ್ಥಾನ", "ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರ ಅಲ್ಲ" ಅನ್ನುವ ಜನನಾಯಕರು, ಪಕ್ಷಗಳು ಭಾರತದಲ್ಲುಂಟು! - ಇವರು ಒಳ್ಳೆಯ ಮೈಸೂರು ಪಾಕದಲ್ಲಿ ಕಲ್ಲು ಇದ್ದ ಹಾಗೆ!)
ರಾಜಸ್ಥಾನದ ಜೈಪುರದಲ್ಲಿ 'ಮೈಸೂರ್ ಶ್ರೀ' ಅಂತ 'ಮೈಸೂರ್ ಪಾಕಕ್ಕೆ' ಮರು ನಾಮಕರಣವೂ ನೆಡೆಯುತ್ತಿದೆಯಂತೆ!
ಕಡ್ಲೆ ಹಿಟ್ಟು ಹುರಿದು, ಮರಳು ಮರಳಾಗಿರುವ ತುಪ್ಪವನ್ನು ಸೇರಿಸಿ, ಸಕ್ಕರೆ ಬೆರಸಿ, ಪಾಕ(ಪಾಕ್)ವನ್ನು ಹದವಾಗಿಸಿ ತಟ್ಟೆಗೆ ಸುರಿಯುವಾಗ, "ಈ 'ಪಾಕ' ಬೇಡ, ಇದು ಸರಿಯಿಲ್ಲ" ಅಂದ್ರೆ ಹೇಗೆ!?
ಬೇಕಾದರೆ, ಹದಗೊಳಿಸಿದ ಪಾಕ(ಪಾಕ್)ವನ್ನು, ದುರ್ಬಲಗೊಳಿಸಿ, ಲಾಡು ರೀತಿ ಉಂಡೆ ಕಟ್ಟಬಹುದು!, ಆದರೆ, ಆಗ ಅದು ಮೈಸೂರ್ ಪಾಕದ ಅಸ್ಮಿತೆಯನ್ನು ಕಳೆದುಕೊಳ್ಳುತ್ತದೆ!
ಅಥವಾ, ಮೈಸೂರ್ ಪಾಕದ ಪಾಕ(ಪಾಕ್)ವನ್ನು ತೆಗೆದು, ಮಿತ್ರ ರಾಷ್ಟ್ರವಾದ 'ರಷ್ಯಾ' ವನ್ನೋ, ಇಸ್ರೇಲ್ನ್ನೋ ಸೇರಿಸುವುದೂ ಸರಿಯಾಗುವುದಿಲ್ಲ!
ಹಾಗಾಗಿ ಮೈಸೂರು ಪಾಕವೇ ಇರಲಿ.
ಅಷ್ಟಕ್ಕೂ, ಡೈಮಂಡ್ ಆಕೃತಿಯ ಸಿಹಿ ತಿಂಡಿಯಲ್ಲಿರುವುದು ಮೈಸೂರ್ ಪಾಕ್ ಅಲ್ಲ, ಮೈಸೂರ್ ಪಾಕ. ಸಮಸ್ಯೆಯೇ ಇಲ್ಲ.
***
ಆಡು ಮಾತಿನಲ್ಲಿ ಮೈಸೂರ್ ಪಾಕ 'ಮೈಸೂರ್ ಪಾಕ್' ಆಗಿದ್ದರೂ, ಆಗಲೂ ಮೈಸೂರು ಪಾಕ್ ಹೆಸರು ಹಾಗೇ ಇರಲಿ ಎನ್ನುವುದಕ್ಕೆ ಪುರಂದರ ದಾಸರು ಧರ್ಮದ ಆಯಾಮದಲ್ಲಿ ಸಮರ್ಥನೆ ಸೂಚಿಸಿ, ಅನು'ಮೋದಿ'ಸಿ, ಒಪ್ಪಿಗೆ ಕೊಟ್ಟಿದ್ದಾರೆ!!
ಅವರ ಒಂದು ಶ್ರೇಷ್ಟ ಕೃತಿ ಧರ್ಮವೇ ಜಯವೆಂಬ ದಿವ್ಯಮಂತ್ರ.... ಪದ್ಯದಲ್ಲಿ ಒಂದು ಸಾಲು ಹೀಗಿದೆ "ಮೋಸ ಮಾಡುವವನ ಹೇಸರು ಮಗನಿಗಿಡಬೇಕು" ಎಂದು. ಸದಾ ಮೋಸ ಮಾಡುವ ದೇಶ ಪಾಕ್. ತಾನು ಪೋಷಿಸಿದ ಉಗ್ರಗಾಮಿಗಳನ್ನು ಭಾರತಕ್ಕೆ ಕಳಿಸಿ, 26 ಜನ ಭಾರತೀಯರನ್ನು ಕೊಲ್ಲಿಸಿತು. 'ಧರ್ಮದ ಹೆಸರು ಕೇಳಿ' 26 ಜನ ಭಾರತಿಯರನ್ನು ಕೊಂದ ಮೋಸಗಾರ ದೇಶ ಪಾಕ್ನ್ನು, ಧರ್ಮದ ಕ್ಷಾತ್ರದಿಂದಲೇ ಭಾರತ ಎದುರಿಸಿದ ಕಾರ್ಯಾಚರಣೆಗೆ ಧರ್ಮದ ಸಂಕೇತವಾದ 'ಸಿಂದೂರ' ಹೆಸರನ್ನು ಇಡಲಾಯಿತು. "ಮೋಸ ಮಾಡುವವನ ಹೇಸರು ಮಗನಿಗಿಡಬೇಕು" ಎಂಬ ದಾಸವಾಣಿಯಂತೆ, ಈಗಾಗಲೆ 'ಮೈಸೂರ್ ಪಾಕ್'ನಲ್ಲಿರುವ 'ಪಾಕ್' ಹೆಸರನ್ನು, ದಾಸರ ಧರ್ಮ ವಾಣಿಯಂತೆ ಮುಂದುವರೆಸಿಕೊಂಡು ಹೋಗುವುದು ಧರ್ಮವೇ ಅಲ್ಲವಾ!? ಅದೇ ಪದ್ಯದಲ್ಲಿ ಪುರಂದರ ದಾಸರು ಹೇಳಿದ ಮರ್ಮವನರಿತು ಮಾಡಲಿಬೇಕು ತಂತ್ರ ಎಂಬ ವಾಣಿಗೆ ಸಿಂದೂರ, ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ. ಅದೇ ರೀತಿ, ಪದ್ಯದ ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು ಕುಂದೆಣಿಸುವವರ ಗೆಳೆತನ ಮಾಡಬೇಕು ಎಂಬ ವಾಣಿಗೆ ರಾಜತಾಂತ್ರಿಕ ಕಾರ್ಯತಂತ್ರದದ ಭಾಗವಾಗಿ ಜಾಗತಿಕ ಸಮುದಾಯಕ್ಕೆ ವಾಸ್ತವಾಂಶ ತಿಳಿಸಲು ಸರ್ವಪಕ್ಷ ನಿಯೋಗ ಕಳಿಸಿದ್ದು ಹೋಲಿಕೆಯಾಗುವುದಿಲ್ಲವೆ!?
ಆದುದರಿಂದ ಧರ್ಮವೇ ಜಯವೆಂಬ ದಿವ್ಯಮಂತ್ರದ ಪ್ರಕಾರವೂ ಮೈಸೂರ್ ಪಾಕ್ ನಲ್ಲಿ ಪಾಕ್ ಇರಲಿ. ಅಲ್ವಾ!!?
ಹಾಗಾಗಿ, 'ಮೈಸೂರ್ಪಾಕ'ದಲ್ಲಿನ 'ಪಾಕ' ಶಬ್ದವನ್ನು, ಭಾರತದ ಧರ್ಮ, ಕರ್ನಾಟಕದ ಅಸ್ಮಿತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವದಿಂದಲೂ, ಯತಾವತ್ ಉಳಿಸಿಕೊಳ್ಳುವುದೇ ಸಮಂಜಸ.
ಮೈಸೂರುಪಾಕಕ್ಕೆ ಜಯವಾಗಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ