ಮೇಲುಸ್ತುವಾರಿ ಮತ್ತು ವೃತ್ತಿಪರತೆಯ ಕೊರತೆ

Upayuktha
0





ಆ ಮನೆಯ ಮಾಲೀಕರು ತಾವು ಊರಿಗೆ ಹೋಗುವಾಗ ಮನೆಯ ಸುತ್ತಲಿನ ಗಾರ್ಡನ್‌ ನ ಎಲ್ಲ ಗಿಡಗಳಿಗೆ ನೀರು ಹಾಕಲು ತಮ್ಮ ಮನೆಯ ಕೆಲಸದ ಹೆಣ್ಣು ಮಗಳಿಗೆ ಹೇಳಿ ಹೋಗಿದ್ದರು. ಮರಳಿ ಬಂದು ನೋಡಿದಾಗ ಬಹಳಷ್ಟು ಗಿಡಗಳ ಎಲೆಗಳು ಮುದುರಿ ಹೋಗಿದ್ದರೆ ಮತ್ತೆ ಕೆಲ ಗಿಡಗಳು ಒಣಗಿ ಹೋಗಿದ್ದವು.

ಈ ಕುರಿತು ಕೆಲಸದಾಕೆಯನ್ನು ವಿಚಾರಿಸಿದಾಗ ಎರಡು ದಿನಕ್ಕೊಮ್ಮೆ ತಾನು ನೀರು ಹಾಕಿದ್ದೇನೆ ಆದರೂ ಹೇಗೆ ಒಣಗಿ ಹೋಗಿವೆ ಎಂದು ತನಗೆ ತಿಳಿಯದು ಎಂದು ನೆಲ ಮುಟ್ಟಿ ನೋಡಿ ಹೇಳಿದಳು. ಮಾಲೀಕರು ಮನೆಯಲ್ಲಿ ಇದ್ದ ತಮ್ಮ ಮಗನಿಗೆ ಈ ಕುರಿತು ಪ್ರಶ್ನಿಸಿದಾಗ ಒಂದೆರಡು ಬಾರಿ ಆಕೆ ನೀರು ಬಿಟ್ಟದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದ. 

 ಹಾಗಾದರೆ ಗಿಡಗಳು ಒಣಗಿದ್ದು ಹೇಗೆ?   ಮೇಲಿನ ಪ್ರಶ್ನೆಗೆ ನನಗೆ ತನ್ನ ಗುರುವಿನ ಆಜ್ಞೆಯಂತೆ ಕುದುರೆಗೆ ನೀರು ತೋರಿಸಿದ ಶಿಷ್ಯನ ನೆನಪಾಗುತ್ತದೆ. ನೀರು ತೋರಿಸಿಕೊಂಡು ಬಾ ಎಂದರೆ ನೀರು ಕುಡಿಸಿಕೊಂಡು ಬಾ ಎಂದರ್ಥ ಎಂದು ಅರಿಯದ ಶಿಷ್ಯ ನೀರನ್ನು ತೋರಿಸಿದ. ಆ ಶಿಷ್ಯ ಮತ್ತು ಕೆಲಸದಾಕೆ ಇಬ್ಬರೂ ಒಂದೇ ಅಲ್ಲವೇ? ಹೇಳಿಯೂ ಮಾಡಿ ಮುಗಿಸದ ಕೆಲಸ, ಮಾಡಿದರೂ ಉಪಯೋಗವಾಗದ ಕಾರ್ಯದಿಂದ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆ ಕಾಡುವ ಸಮಯದಲ್ಲಿ ಮೂಡಿದ ಚಿಂತನೆಯ ಫಲ ಈ ಲೇಖನ.

ಭಾರತ ದೇಶದಲ್ಲಿ ಬೆನ್ನು ಹತ್ತಿ ಕೆಲಸ ಮಾಡಿಸಿಕೊಂಡರೆ ಮಾತ್ರ ಕೆಲಸ ಸಾಧ್ಯವಾಗುತ್ತದೆ.  ಮನೆ ಕಟ್ಟುವ ಮೇಸ್ತ್ರಿ ಒಂದು ತಿಂಗಳಲ್ಲಿ ಕೆಲಸ ಮಾಡಿ ಕೊಡುತ್ತೇನೆ ಎಂದು ಹೇಳಿದರೆ ಅದು ಮತ್ತೊಂದು ತಿಂಗಳು ಮುಂದೆ ಹೋಗಿರುತ್ತದೆ. ಮನೆಯ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಈಗಲೇ ಬಂದೆ ಎಂದು ಹೇಳುವ ವ್ಯಕ್ತಿ ಬರಲು ನಾಲ್ಕೈದು ದಿನಗಳೆ ತಗುಲಬಹುದು. ಅಂಗಡಿಯಲ್ಲಿ ರಿಪೇರಿಗೆ ಎಂದು ಕೊಟ್ಟ ಮಿಕ್ಸಿ ಹಲವು ದಿನಗಳು ಕಾದರೂ ಬರದೇ ಹೋಗಿ ಹೊಸ ಮಿಕ್ಸಿ ತರುವ ಪ್ರಸಂಗ ಬಂದೊದಗುತ್ತದೆ. 

ಮನೆ ಕೆಲಸಕ್ಕೆ ಬರುವ ಜನರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಅವರ ಹಿಂದೆ ನಿಂತು ಮೇಲುಸ್ತುವಾರಿ ಮಾಡಲು ನೋಡಿ!  ಪ್ರತಿಯೊಂದನ್ನು ಹೇಳಿ ಕೆಲಸ ಮಾಡಿಸಿಕೊಳ್ಳುತಾರೆ, ಅವರ ಮನೆ ಕೆಲಸ ಯಾರು ಮಾಡಬೇಕು ಎಂದು ಎರಡೇ ದಿನಗಳಲ್ಲಿ ಕೆಲಸ ಬಿಟ್ಟು ಓಡುತ್ತಾರೆ. ಹಾಗೆಂದು ತಾವೇನಾದರೂ ಸರಿಯಾಗಿ ಮಾಡುತ್ತಾರೆ ಎಂದಿರಾ? ಉಹೂ! ಅದೂ ಇಲ್ಲ.

ಅತಿ ಹೆಚ್ಚು ದಿನಗೂಲಿ ಸಂಬಳ ಪಡೆಯುವ ಹೊಲಗಳಲ್ಲಿ ಮಾತ್ರ ಮಾಲೀಕರು ಕೆಲಸದಾರರ ಕತ್ತಿನ ಮೇಲೆ ನಿಂತು ಕೆಲಸ ಮಾಡಿಸಿಕೊಳ್ಳಲು ಕಾರಣ.... ಅವರ ಹಣ ಮತ್ತು ದರ್ಪ. ಇಲ್ಲಿಯೂ ಕೂಡ ಕೆಲಸಗಾರರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಲು ಅವರಿಗೆ ಕೆಲಸದ ಅಭದ್ರತೆ ಕಾಡುವುದರಿಂದಲೇ ಹೊರತು ಮತ್ತಿನ್ನಾವ ಕಾರಣವೂ ಇಲ್ಲ.  ಇನ್ನು ಕೆಲವೆಡೆ ಕೆಲಸ ಖಂಡಿತವಾಗಿಯೂ ಆಗುತ್ತದೆ. ಇಲ್ಲವೆಂದಲ್ಲ ಆದರೆ ಕಣ್ಕಟ್ಟಿನಂತೆ.. ಎಂದೂ ಬಳಸದ ಕೋಣೆಯನ್ನು ಸ್ವಚ್ಛ ಮಾಡಲು ಕೆಲಸದಾಕೆಗೆ ಹೇಳಿದರೆ ಆಕೆ ಮಾಡಿದ್ದೇನೆ ಬೇಕಿದ್ದರೆ ನೋಡಿರಿ ಎಂದು ಆರಾಮಾಗಿ ಹೇಳಲು ಕಾರಣ ನಾವು ಆಕೆಯನ್ನು ನಂಬಿ ಆ ಕೆಲಸದ ಮೇಲುಸ್ತುವಾರಿ ಮಾಡುವುದಿಲ್ಲ ಎಂಬ ಭರವಸೆಯಿಂದ. ಫೋನ್ ರಿಪೇರಿ ಮಾಡುವ ವ್ಯಕ್ತಿ ತನ್ನ ಬಳಿ ರಿಪೇರಿಗೆ ಬಂದಿರುವ ಮತ್ತೊಂದು ಫೋನಿನ ಬ್ಯಾಟರಿಯನ್ನು ನಮ್ಮ ಮೊಬೈಲಿಗೆ ಹಾಕಿ ಫೋನನ್ನು ತೋರಿಸಿದರೆ ನಿಜವೋ ಸುಳ್ಳು ತಪ್ಪು ಸರಿಯೋ ಎಂದು ಗೊತ್ತಿಲ್ಲದ ಅಯೋಮಯ ಸ್ಥಿತಿ ನಮ್ಮದಾಗಿರುತ್ತದೆ.
 
ನಿಮ್ಮ ಬಟ್ಟೆಗಳನ್ನು ಹೊಲಿಯುವ ಟೇಲರ್ ಅಂತೂ ಇವರೆಲ್ಲರನ್ನು ಮೀರಿಸಿದವ... ಹೇಳಿದ ಸಮಯಕ್ಕೆ ಕೊಟ್ಟವರು ಯಾರೂ ಇಲ್ಲ ಎಂಬ ಹೆಗ್ಗಳಿಕೆ ಆತನದ್ದು. ಇದೇನು ಎಂದು ಎಲ್ಲರನ್ನೂ ಹೀಗಳೆಯುತ್ತಿದ್ದೇನೆ ಎಂದು ಭಾವಿಸಬೇಡಿ ಎಲ್ಲರೂ ಹೀಗೆಯೇ ಇರುವುದಿಲ್ಲವಾದರೂ ಪ್ರಪಂಚದ ಬಹುತೇಕ ಕೆಲಸ ಕಾರ್ಯಗಳು ಮೇಲುಸ್ತುವಾರಿ ಇಲ್ಲದೆ ಹೋದರೆ ಹೀಗೆಯೇ ನಡೆಯುತ್ತವೆ. ನಮ್ಮಲ್ಲಿ ನಾವು ಕೆಲಸ ಕಾರ್ಯಗಳನ್ನು ಮಾಡಿಕೊಡಲು ತೆರಬೇಕಾದ ಒಂದು ಬೆಲೆ ಇದೆ. ಆ ಬೆಲೆಯೇ ನಮ್ಮ ಮೇಲುಸ್ತುವಾರಿ.

ಇತ್ತೀಚಿಗೆ ನನ್ನ ಮಗ ವಾಹನವನ್ನು ಗ್ಯಾರೇಜ್ ನಲ್ಲಿ ಬಿಟ್ಟರೆ ಮೆಕ್ಯಾನಿಕ್ ಹೇಳಿದ ಮಾತನ್ನು ಹೇಳಬೇಕು. ಆತ ಹೇಳಿದ್ದನ್ನೆಲ್ಲ ಮುಂದೆ ನಿಂತು ಮಾಡಿಸಬೇಕು. ನಂತರ ಆತ ಕೆಲಸ ಮಾಡಿರದಿದ್ದರೂ ಆತ ಹೇಳಿದ್ದಕ್ಕೆಲ್ಲ ಹೌದು ಎಂದು ತಲೆಯಾಡಿಸಿ ಅವನು ಹೇಳಿದಷ್ಟು ಹಣ ತೆತ್ತು ವಾಹನವನ್ನು ಬಿಡಿಸಿಕೊಂಡು ಬರಬೇಕು. ಬದಲಾಗಿ ಅಧಿಕೃತ ಸರ್ವಿಸ್ ಸೆಂಟರ್ ಗಳಲ್ಲಿ ರಿಪೇರಿ ಮಾಡಿಸಿಕೊಂಡು ಬರುವುದು ಒಳ್ಳೆಯದು ಎಂದು ಹೇಳಿದ.

ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಇಂತಹ ಲಕ್ಷಗಟ್ಟಲೆ ವ್ಯವಹಾರಗಳು ನಡೆಯುತ್ತವೆ. ಈ ರೀತಿಯ ವ್ಯವಹಾರಗಳು ನಡೆಯಲು ನಾವು ತೆರಬೇಕಾದದ್ದು ನಮ್ಮ ಮೇಲುಸ್ತುವಾರಿಯ ಬೆಲೆಯನ್ನು ಮತ್ತು ಸಮಯವನ್ನು.  ಈಗ ಹೇಳಿ ನಮ್ಮ ರಾಷ್ಟ್ರೀಯ ಮೂಲಭೂತ ಮೌಲ್ಯಗಳ ಗತಿ ಏನು ಎಂದು? ದೇಶದ ಮಾನ ಬಿಡಿ.. ನಮ್ಮ ಆರ್ಥಿಕ ಮೌಲ್ಯಗಳ ಗತಿ ಏನು ಎಂದು?  ಭಾರತೀಯರಲ್ಲಿ ಆರ್ಥಿಕ ಬಡತನವಿದೆ. ಮೋಸ ಮಾಡುತ್ತಾರೆ ಎಂದು ಸಾಕಷ್ಟು ಜನ ಹೇಳುತ್ತಾರೆ. ಆದರೆ ಮೌಲ್ಯಗಳಿಂದ ಸಂಪದ್ಭರಿತವಾದ ನಮ್ಮ ದೇಶದಲ್ಲಿ ಮೌಲ್ಯಗಳನ್ನು ಮಣಿಸುವ ಶಕ್ತಿ ಬಡತನಕ್ಕೆ ಇದೆಯೇ? ಎಂದು ಕೇಳಿದರೆ ಹೌದು! ಎಂದು ಮೌನವಾಗಿ ಒಪ್ಪಿಕೊಳ್ಳಬೇಕಾಗಿದೆ. ಇದು ನಮ್ಮ ಸಾಂಸ್ಕೃತಿಕ ಆಧ ಪತನಕ್ಕೂ ಕಾರಣವಾಗುತ್ತದೆ ಎಂದರೆ ತಪ್ಪಿಲ್ಲ.

ಆದರೆ ಇದೇ ಭವ್ಯ ಭಾರತ ದೇಶದ ಈಶಾನ್ಯ ಭಾಗದಲ್ಲಿ ಹೀಗೂ ಕಾಣುತ್ತೇವೆ. ರಸ್ತೆ ಬದಿಯಲ್ಲಿರುವ ಎಷ್ಟೋ ಅಂಗಡಿಗಳಲ್ಲಿ ಹಣ್ಣುಗಳು,ತರಕಾರಿಗಳು,ಹೂಗಳ ವ್ಯಾಪಾರ ಜೋರಾಗಿ ನಡೆಯುತ್ತಿರುತ್ತದೆ. ಪ್ರತಿಯೊಂದು ವಸ್ತುವಿನ ಮುಂದೆಯೂ ಅದರ ದರ ಬರೆದು ಇಡಲಾಗಿರುತ್ತದೆ. ಯಾವೊಬ್ಬ ಅಂಗಡಿಯ ಮುಂದೆಯೂ ಅಂಗಡಿಕಾರ ಇಲ್ಲದೆ ಹೋದರೂ ವ್ಯಾಪಾರ ವಹಿವಾಟು ನಡೆಯುತ್ತದೆ. ಜನ ತಮಗೆ ಬೇಕಾದ ವಸ್ತುಗಳನ್ನು ಆರಿಸಿ ತೆಗೆದುಕೊಂಡು ಅಲ್ಲಿ ನಮೂದಿಸಲ್ಪಟ್ಟಿರುವ ಹಣವನ್ನು ಅಲ್ಲಿಯೇ ಇಟ್ಟಿರುವ ಹಣದ ಡಬ್ಬಿಗೆ ಹಾಕುತ್ತಾರೆ. ಯಾವುದೇ ಕಣ್ಗಾವಲಿನ ಕ್ಯಾಮೆರಾಗಳಿಲ್ಲ, ವ್ಯಾಪಾರಿಯ ಅಣ್ಣ ತಮ್ಮ, ಅಕ್ಕ ತಂಗಿ, ಸೋದರ ಸಂಬಂಧಿಗಳಿಲ್ಲ...ಆದರೂ ಕೇವಲ ನಂಬಿಕೆಯ ಬಲದಲ್ಲಿ ಇಂತಹ ವ್ಯಾಪಾರ ವ್ಯವಹಾರಗಳು ನಡೆಯುತ್ತವೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ನಮ್ಮ ಭಾರತದ ಈಶಾನ್ಯ ಭಾಗದ ರಾಜ್ಯಗಳು.

ನಮ್ಮದೇ ಸಂಸ್ಕೃತಿಯ ಭಾಗವಾಗಿರುವ ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ನಂಬಿಕೆಯ ಆಧಾರದಿಂದ ವ್ಯಾಪಾರ ವ್ಯವಹಾರಗಳು ನಡೆಯುತ್ತವೆ ಎಂದಾದರೆ ನಮ್ಮಲ್ಲಿ ಏಕಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಅಲ್ಲವೇ?  ನಾವು ಭಾರತೀಯರು ಅತ್ಯಂತ ಹೆಮ್ಮೆಯಿಂದ ಹೇಳುತ್ತೇವೆ ಜೀವ ಹೋದರೂ ಕೊಟ್ಟ ಮಾತಿಗೆ ತಪ್ಪಲಾರೆನು ಎಂದು. ಆದರೆ ಹಾಗೆ ನಡೆದುಕೊಳ್ಳುತ್ತೇವೆಯೇ ಎಂಬುದು ಪ್ರಶ್ನಾರ್ಹ? ರಾಮನ ಮಾತೃ ಭೂಮಿಯಲ್ಲಿ ನಾವು ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ ಎಂದರೆ ಹೌದು ಎಂದು ತಲೆತಗ್ಗಿಸುವ ಪರಿಸ್ಥಿತಿ ನಮ್ಮದಾಗಿದೆ.

ನಮ್ಮ ಭಾರತೀಯ ಬಿಪಿಓ ಗಳ ಕಥೆ ಕೂಡ ಹೀಗೆಯೇ ಇದೆ. ಓರ್ವ ವ್ಯವಹಾರ ತಜ್ಞರ ಪ್ರಕಾರ ಪ್ರತಿ 10 ಬ್ರಿಟಿಷ್ ನೌಕರರಿಗೆ ಪರ್ಯಾಯವಾಗಿ 13 1/2 ನೌಕರರನ್ನು ಭಾರತದಲ್ಲಿ ನಾವು ತೆಗೆದುಕೊಳ್ಳಬೇಕಾಗುತ್ತದೆ. ಕಾರಣ ಭಾರತೀಯರ ಅನುತ್ಪಾದಕತೆ. ಆತನ ಪ್ರಕಾರ ಭಾರತೀಯ ನೌಕರ ಅತಿ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಾನೆ. ನಿರ್ವಹಣಾ ಕಲೆಯನ್ನು ಅರಿತಿದ್ದಾನೆ ಮತ್ತು ಅತಿ ಹೆಚ್ಚು ಗ್ರಾಹಕರನ್ನು ಸಂತೃಪ್ತಿ ಪಡಿಸುತ್ತಾನೆ ನಿಜ, ಆದರೆ ಅದೇ ಶ್ರದ್ಧೆಯನ್ನು ತಮ್ಮ ಕೆಲಸದಲ್ಲಿ ಮುಂದುವರಿಸುವುದಿಲ್ಲ. ಭಾರತೀಯರಲ್ಲಿರುವ ವೃತ್ತಿಪರತೆಯ ಕೊರತೆಯ ಕಾರಣದ ಪರಿಣಾಮವಾಗಿ ನಾವು ಹೆಚ್ಚು ಹೆಚ್ಚು ನೌಕರರನ್ನು ತುಂಬಿಕೊಳ್ಳಬೇಕಾಗುತ್ತದೆ ಮತ್ತು ತರಬೇತಿ ನೀಡಬೇಕಾಗುತ್ತದೆ ಎಂದು ಅವರು ದೂರುತ್ತಾರೆ.

ಇಲ್ಲಿ ಹಣಕಾಸಿನ ಪ್ರಶ್ನೆ ಉದ್ಭವಿಸುವುದಿಲ್ಲ. ಹೇಳಿದ್ದನ್ನು ಮಾಡಬೇಕು ಎಂಬ ಕತ್ತಿನ ಮೇಲೆ ಕುಳಿತು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಉದ್ದವಿಸಲು ಕಾರಣೀಭೂತರು ಯಾರು? ಎಂಬ ಪ್ರಶ್ನೆಯನ್ನು ನಾವು ಎಸೆದಾಗ ಅದು ತಿರುಗುಬಾಣದಂತೆ ಮತ್ತೆ ನಮ್ಮನ್ನೇ ಆವರಿಸಿ ಉತ್ತರವನ್ನು ನೀಡುತ್ತದೆ.  ಒಬ್ಬ ರೈತ ತನ್ನ ಹೊಲದಲ್ಲಿ ಬೆಳೆದು ನಿಂತ ಬೆಳೆಯನ್ನು ಕೊಯ್ಯಲು ಮೊದಲು ತನ್ನ ಮಗನಿಗೆ ಹೇಳಿ ಆತ ಮಾಡದೆ ಹೋದಾಗ ತನ್ನ ಕೆಲಸದಾತನಿಗೆ ಹೇಳುತ್ತಾನೆ. ಆ ಕೆಲಸದಾತನು ಮಾಡದೆ ಹೋದಾಗ ಖುದ್ದು ತಾನೇ ಮಾಡಲು ತಯಾರಾದಾಗ ಅಲ್ಲಿ ಗೂಡು ಕಟ್ಟಿಕೊಂಡು ಮರಿಗಳನ್ನು ಸಾಕುತ್ತಿದ್ದ ತಾಯಿ ಪಕ್ಷಿ ಇದೀಗ ಬೇರೊಂದು ಕಡೆ ವಲಸೆ ಹೋಗುತ್ತದೆ ಎಂಬ ಕತೆಯನ್ನು ನಾವೀಗಾಗಲೇ ಕೇಳಿದ್ದೇವೆ. 

ಒಟ್ಟಿನಲ್ಲಿ ಯಾವುದೇ ಕೆಲಸಗಳು ಮೇಲುಸ್ತುವಾರಿ ಇಲ್ಲದೆ ನಡೆಯುವುದಿಲ್ಲ. ಕೊನೆಯ ಪಕ್ಷ ನಮ್ಮ ನಮ್ಮ ಕೆಲಸಗಳನ್ನು ನಾವು ಸರಿಯಾಗಿ ಮಾಡಿ ಮುಗಿಸೋಣ ಏನಂತೀರಾ ಸ್ನೇಹಿತರೇ?

 -ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ, ಗದಗ್

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top