ಅ.ಭಾ.ಸಾ.ಪ ಬೆಳ್ತಂಗಡಿ: ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ
ಗುರುವಾಯನಕೆರೆ: ಧರ್ಮಕ್ಕೆ ಗ್ಲಾನಿಯಾದಾಗ ಭಗವಂತನು ತನ್ನನ್ನು ತಾನು ಸೃಷ್ಟಿಮಾಡಿಕೊಳ್ಳುವನು. ಸಾಧುಗಳ ರಕ್ಷಣೆ ಮತ್ತು ದುಷ್ಟರ ವಿನಾಶಕ್ಕಾಗಿ ಯುಗಯುಗದಲ್ಲಿ ಅವತರಿಸುವನು. ದುಷ್ಟರಿಗೆ ಅವರ ದುಷ್ಟತನಕ್ಕೆ ತಕ್ಕ ಶಿಕ್ಷೆ ನೀಡುವುದು, ಪರಿವರ್ತನೆಯಾಗದೇ ಹೋದರೆ ಸಂಹಾರ ಮಾಡುವ ಮುಖಾಂತರ ಅವರಿಗೂ ಮುಕ್ತಿಯನ್ನು ಕರುಣಿಸುವುದು ಅವತಾರದ ಉದ್ದೇಶ ವಿನಾ ಹಿಂಸೆಯಲ್ಲ ಎಂದು ಪ್ರೊ. ಗಣಪತಿ ಭಟ್ ಕುಳಮರ್ವ ಹೇಳಿದರು.
ಅವರು ಅಖಿಲ ಭಾರತ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿಯು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಆಯೋಜಿಸಿದ್ದ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯಲ್ಲಿ ಏ.6ರಂದು ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದ ಉಪನ್ಯಾಸ ನೀಡಿದರು.
ವೈದ್ಯರು ಶಸ್ತ್ರಕ್ರಿಯೆ ಮಾಡಿದರೆ ಅದು ಹಿಂಸೆಯೆನಿಸದು. ಯೋಧ ಭಯೋತ್ಪಾದಕರನ್ನು ಕೊಂದರೆ ಅದು ಹಿಂಸೆಯಲ್ಲ, ಅದು ಅವನ ಕರ್ತವ್ಯ. ಅವನಿಗೆ ಪಾಪಲೇಪವಿಲ್ಲ. ಅಂತೆಯೇ ಅರ್ಜುನ ಮನದ ಸಂಶಯವನ್ನು ಬಿಟ್ಟು ತನ್ನ ಕರ್ತವ್ಯವಾದ ದುಷ್ಟಸಂಹಾರವನ್ನು ಮಾಡಲು ಕೃಷ್ಣನು ಪ್ರೇರೇಪಿಸುತ್ತಾನೆ. ಭಗವಂತನಿಗೂ ತನಗೂ ಭೇದವೆಣಿಸದೆ ಇದು ಅವನದೇ ಕೆಲಸ ನನ್ನದಲ್ಲ ಎಂಬ ನಿಸ್ಪೃಹತೆಯಿಂದ ನಿನ್ನ ಕ್ಷಾತ್ರಧರ್ಮವನ್ನು ಮಾಡೆಂದು ಪ್ರೇರಣೆ ಕೊಡುತ್ತಾನೆ. ಈ ಮಧ್ಯೆ ಚಾತುರ್ವರ್ಣವನ್ನು ತಾನೇ ಸೃಷ್ಟಿಸಲು ಕಾರಣವನ್ನು ವಿವರಿಸಿ ಉತ್ತಮ ರೀತಿಯಲ್ಲಿ ವಿಶ್ಲೇಷಣೆಯನ್ನು ನೀಡುತ್ತಾನೆ. ಕರ್ಮಾಕರ್ಮಗಳ ಮಹತ್ವದ ಸಂಗತಿಯನ್ನು ಅದು ಪರಮಾತ್ಮನಿಗೆ ಹೇಗೆ ಅಂಟುವುದಿಲ್ಲ ಎಂಬುದನ್ನು ತಿಳಿಸುವನು ಎಂದು ಅವರು ನುಡಿದರು.
ಜ್ಞಾನಿಗೆ ಕರ್ಮಬಂಧವಿಲ್ಲ ಎಂದು ತಿಳಿಸಿ ಜ್ಞಾನವನ್ನು ಗಳಿಸುವ ತದ್ವಿದ್ಧಿ ಪ್ರಣಿಪಾತೇನ ಉಪದೇಕ್ಷ್ಯಂತಿತೇ ಎಂಬ ವಾಕ್ಯವನ್ನು ವಿಶದವಾಗಿ ಅವರು ತಿಳಿಸಿದರು.
ಬಗೆ ಬಗೆಯ ಯಜ್ಞಗಳ ವಿವಾರ ತಿಳಿಸಿ ಜ್ಞಾನದ ಸ್ತುತಿ ಮಾಡಿ ಅದರ ಹೆಚ್ಚುಗಾರಿಕೆಯನ್ನು ಕುರಿತು ಚರ್ಚಿಸಿ ಅಸದೃಶ ಜ್ಞಾನ ಸಂಪತ್ತನ್ನು ಶ್ರದ್ಧೆಯೊಂದೇ ದಾರಿ ಹೊರತು ಕಿರಿದಾರಿಗಳಿಲ್ಲ, ಆದುದರಿಂದ ಶ್ರದ್ಧೆಯಿಂದ ಸಂಪಾದಿಸಿದ ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡಿ ಕಂಡು ಸಂಶಯವನ್ನು ಪರಿಹಾರ ಮಾಡಿ ಕರ್ತವ್ಯವನ್ನು ಮಾಡು, ಯಾಕೆಂದರೆ ಸಂಶಯಾತ್ಮಾ ವಿನಶ್ಯತಿ ಎಂದು ಹೇಳಿ ಎಲೈ ಭಾರತನೇ ನಿನ್ನ ಮನದ ಸಂಶಯವನ್ನು ಜ್ಞಾನದ ಬಲದಿಂದ ನಿವಾರಿಸಿ ಯುದ್ಧಕ್ಕೆ ಮೇಲೇಳು ಎಂದು ಕರೆಕೊಟ್ಟ ಬಗೆಯನ್ನು ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ CA ನಿರೀಕ್ಷಾ ಎನ್. ಇವರು ಮಾತನಾಡಿ, ಇಂದಿನ ಯುವ ಪೀಳಿಗೆಗೆ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಮನದಟ್ಟು ಮಾಡುವ ಸರಿಯಾದ ಗುರು ಬೇಕಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿದ ಈ ಕಾರ್ಯಕ್ರಮವು ಅತ್ಯಂತ ಪ್ರೇರಣಾದಾಯಕ ಮಾತ್ರವಲ್ಲ ಅನುಕರಣೀಯ ಎಂದು ನುಡಿದು ಶುಭ ಹಾರೈಸಿದರು.
ಅವರಿಗೆ ಶ್ರೀಮತಿ ವಾಣಿ ಶ್ಯಾನುಭಾಗ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರಿಗೆ ಶಿವಪ್ರಸಾದ್ ಸುರ್ಯ ಇವರು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಿದರು. ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಅಕ್ಷತಾ ಅಡೂರು ಇವರು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಸಂತಿ ಕುಳಮರ್ವ ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ನಾಲ್ಕನೆಯ ಅಧ್ಯಾಯದ ಪ್ರಯೋಜನ ಪಡೆದುಕೊಂಡರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ C.A. ನಿರೀಕ್ಷಾ ಎನ್. ಇವರಿಗೆ ಶ್ರೀಮತಿ ಸುಭಾಷಿಣಿ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಪ್ರೊ. ಗಣಪತಿ ಭಟ್ ಕುಳಮರ್ವ ಇವರನ್ನು ಪ್ರಕಾಶ್ ನಾರಾಯಣ ಇವರು ತಾಂಬೂಲ ನೀಡಿ ಗೌರವಿಸಿದರು.
ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಗೈದರು.
ಕು. ಮೈಥಿಲಿ ಇವರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ