ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಮಾತ್ರವಲ್ಲದೆ ವಯಸ್ಕ ಮಕ್ಕಳು ಕೂಡ ಪರಿಹಾರಕ್ಕೆ ಅರ್ಹರಾಗಿ ರುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಯಸ್ಕರೆಂಬ ಕಾರಣ ನೀಡಿ ಮೃತರ ಮಕ್ಕಳಿಗೆ ಪರಿಹಾರ ನೀಡುವುದಕ್ಕೆ ನಿರಾಕರಿಸಿದ್ದ ನ್ಯಾಯಾಧಿಕರಣದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಎಂ. ಜೋಷಿ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ರಸ್ತೆ ಅಪಘಾತದಲ್ಲಿ ಕುಟುಂಬದ ಸದಸ್ಯರನ್ನು ಕಳೆದು ಕೊಂಡ ಪರಿಣಾಮ ಇಡೀ ಕುಟುಂಬ ತೊಂದರೆಗೆ ಸಿಲುಕುವುದು. ಆದ್ದರಿಂದ ಎಲ್ಲ ವಾರಸುದಾರರು ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರತ್ತಾರೆ. ವಿವಾಹಿತ ಹೆಣ್ಣು ಮಕ್ಕಳೂ ಕೂಡ ಮೋಟಾರು ವಾಹನ ಕಾಯ್ದೆಯಡಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ ಪುತ್ರರು ಪರಿಹಾರಕ್ಕೆ ಅರ್ಹರು ಎಂದುಆದೇಶಿಸಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಭಾಷ್ ಎಂಬವರ ಪತ್ನಿ ಮತ್ತು ಇಬ್ಬರು ವಯಸ್ಕ ಪುತ್ರರು ತಲಾ 52 ಸಾವಿರ ರೂ. ಪರಿಹಾರ ಪಡೆಯುವುದಕ್ಕೆ ಅರ್ಹರು ಎಂದು ಪೀಠ ಹೇಳಿದೆ. 2019ರ ಏಪ್ರಿಲ್ 7ರಂದು ಕಲಬುರಗಿಯ ಸುಭಾಷ್ ಎಂಬವರು ಮೊಮ್ಮಗ ನೊಂದಿಗೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗುವಾಗ ಬೈಕ್ ಮತ್ತು ಕಾರು ಅಪಘಾತಗೊಂಡಿತ್ತು. ಘಟನೆಯಲ್ಲಿ ಸುಭಾಷ್ ಮೃತಪಟ್ಟಿ ದ್ದರು. ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ, ಮೃತರ ಪತ್ನಿಗೆ 10.30 ಲಕ್ಷ ರೂ. ಪರಿಹಾರ ನೀಡಿತ್ತು. ಇಬ್ಬರೂ ಪುತ್ರರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇಬ್ಬರೂ ಅರ್ಥಿಕವಾಗಿ ಸ್ವತಂತ್ರರಾಗಿದ್ದಾರೆ, ಅವರನ್ನು ಅವಲಂಬಿತರು ಎಂದು ಪರಿಗಣಿಸುವುದಿಲ್ಲ ಎಂದು ನ್ಯಾಯಾಧಿಕರಣ ತಿಳಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತರ ಮಾಸಿಕ ಆದಾಯ 15 ಸಾವಿರ ರೂ.ಗಳಿತ್ತು. ನ್ಯಾಯಾಧೀಕರಣ ಮೃತರ ಆದಾಯವನ್ನು ಪರಿಗಣಿಸಿ ಪರಿಹಾರಕ್ಕೆ ಆದೇಶ ನೀಡಬೇಕು. ಪುತ್ರರಿಗೂ ಪರಿಹಾರ ನೀಡಬೇಕು ಎಂದು ವಾದ ಮಂಡಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ