ಮದವೂರ ಗಣಪನ ಮುದದಿಂದ ಜನರೆಲ್ಲ
ಎದೆಯಲಿ ನಿಲಿಸಿ ಕೊಂಡಾಡಿ ..
ತೆಂಕಣ ದಿಕ್ಕಲಿ ಶಂಕರ ಸುತನಿಹ
ಸಂಕಟ ನೀಗು ಭಗವಂತ..
ಮಣ್ಣಲಿ ಮೂಡುತ ಕಣ್ಣನು ತುಂಬಿದೆ
ಸಣ್ಣವನಲ್ಲ ಬೊಡ್ಡಜ್ಜ ..
ಅಪ್ಪವನರ್ಪಿಸೆ ತಪ್ಪದೆ ದೇವನು
ಒಪ್ಪದಿ ಸವಿದು ಸಂತೃಪ್ತ..
ಗಣಪತಿ ಕ್ಷೇತ್ರದಿ ಗುಣನಿಧಿ ಶಂಭುವು
ಗಣನೀಯ ಸ್ವಾಮಿ ಮೂಡಲ್ಲಿ..
ಮೂಡಪ್ಪ ಸೇವೆಯ ಬಾಡದ ನೆನಹಿವೆ
ಹಾಡಿನ ರೂಪ ಧರಿಸುತ್ತ..
ಜಾತ್ರೆಯ ಸಮಯದಿ ಯಾತ್ರೆಯ ಮಾಡಿರಿ
ರಾತ್ರಿಯ ಪೂಜೆ ವೈಭವ ..
ಗಣಪನು ಬಯಸುವ ಗುಣಗಣ ನಮ್ಮಲಿ
ಕಣಕಣದಲ್ಲು ಪರಮಾತ್ಮ..
ಕಲಶದ ಪೂಜೆಯನೊಲವಲಿ ಮೆಚ್ಚುವ
ಕಲೆತಿಹ ಜನರ ಹರಸುವ..
ಭಾವವ ತುಂಬುವ ಸೇವೆಯು ಶ್ರೇಷ್ಠವು
ದೇವಗೆ ಸಲುವ ಮೂಡಪ್ಪ..
- ಗುಣಾಜೆ ರಾಮಚಂದ್ರ ಭಟ್
ಛಂದಸ್ಸು: ಏಳೆ:
ಬೊಡ್ಡಜ್ಜ= ಮದವೂರು (ಮಧೂರು) ಇಲ್ಲಿ ನೆಲೆಸಿದ ಗಣಪತಿ ದೇವರನ್ನು ಮಕ್ಕಳು ಪ್ರೀತಿಯಿಂದ 'ಬೊಡ್ಡಜ್ಜ' ಎಂದು ಕರೆಯುತ್ತಾರೆ.
ಮೂಡಪ್ಪ ಸೇವೆ = ಹಲವಾರು ವರ್ಷಗಳಿಗೊಮ್ಮೆ ಇಲ್ಲಿಯ ಗಣಪತಿ ದೇವರ ಬಿಂಬದ ಸುತ್ತಲೂ ಕಬ್ಬಿನ ಬೇಲಿಯನ್ನು ಕಟ್ಟಿ ಅದರೊಳಗೆ 'ಅಪ್ಪ'ವನ್ನು ಮೂರ್ತಿಯ ಬಾಯಿಯ ವರೆಗೆ ತುಂಬಿ ಮರುದಿನ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸುತ್ತಾರೆ. ಕಡೆದ ಬೆಳ್ತಿಗೆ ಅಕ್ಕಿ, ಬೆಲ್ಲ, ಕಾಯಿಗಳ ಮಿಶ್ರಣವನ್ನು ಹಸುವಿನ ತುಪ್ಪದಲ್ಲಿ ಬೇಯಿಸಿದ ಪಾಕವೇ 'ಅಪ್ಪ'. ಮೂಡಪ್ಪ= ಅಪ್ಪವೆಂಬ ಭಕ್ಷ್ಯಗಳ ರಾಶಿಯನ್ನು ಭರ್ತಿ ಮಾಡು/ತುಂಬು / ಮುಚ್ಚು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ