ಕರ್ನಾಟಕ ಮಂದಿರ ಮಹಾಸಂಘದಿಂದ ಸಕಲೇಶಪುರದಲ್ಲಿ ತಾಲೂಕು ಮಟ್ಟದ ಮಂದಿರ ಅಧಿವೇಶನ ಯಶಸ್ವಿ ಸಂಪನ್ನ
ಸಕಲೇಶಪುರ: ಇಲ್ಲಿನ ಓಂ ಮಂದಿರದಲ್ಲಿ ಸಕಲೇಶಪುರ ತಾಲ್ಲೂಕು ಮಟ್ಟದ ದೇವಸ್ಥಾನ ವಿಶ್ವಸ್ಥರ, ಅರ್ಚಕರ ಮತ್ತು ದೇವಸ್ಥಾನ ಕ್ಷೇತ್ರದಲ್ಲಿ ಹೋರಾಟ ಮಾಡುವವರಿಗಾಗಿ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಸಕಲೇಶಪುರ, ಚಿಕ್ಕಮಗಳೂರು, ಬೇಲೂರು ಸೇರಿದಂತೆ ಅನೇಕ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದರು. ದೇವಸ್ಥಾನಗಳ ಸಂಘಟನೆಗಾಗಿ ಈ ಅಧಿವೇಶನದ ಆಯೋಜನೆಯನ್ನು ಮಾಡಲಾಗಿತ್ತು. ದೀಪ ಪ್ರಜ್ವಲನೆ ಹಾಗೂ ವೇದಮಂತ್ರ ಪಥಾನದೊಂದಿಗೆ ಅಧಿವೇಶನದ ಶುಭಾರಂಭ ಮಾಡಲಾಯಿತು.
ನಮ್ಮ ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಚೈತನ್ಯದ ಸ್ರೋತ ಹಾಗೂ ಪ್ರೇರಣಾ ಸ್ಥಾನಗಳು:
ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರ ಮಾತ್ರವಲ್ಲ ಅವು ನಮಗೆ ಪ್ರೇರಣೆ ನೀಡುವ ಪ್ರೇರಣಾ ಕೇಂದ್ರ. ನಮ್ಮ ದೇವಸ್ಥಾನಗಳನ್ನು ಸರಕಾರವು ವಹಿಸಿಕೊಂಡು ಹಣವನ್ನು ಲೂಟಿ ಮಾಡುತ್ತಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ 21 ಕೋಟಿ 80 ಲಕ್ಷ ಅವ್ಯವಹಾರವಾಗಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ರಿಪೋರ್ಟ್ ನಲ್ಲಿ ಹೇಳಿದ್ದಾರೆ. ಅಲ್ಲಿಯ ಜಿಲ್ಲಾಧಿಕಾರಿಗಳ ಮನೆಯ ಫೋನ್ ಬಿಲ್ ಕಟ್ಟಲು ದೇವಸ್ಥಾನದ ಹಣವನ್ನು ಬಳಕೆ ಮಾಡಲಾಗಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಳೆದ ದೀಪಾವಳಿಯ ಸಂದರ್ಭದಲ್ಲಿ ಗಮನಕ್ಕೆ ಬಂದಿರುವುದನ್ನು ಪ್ರಸ್ತಾಪಿಸಿ ಸರಕಾರೀಕರಣದ ದುಷ್ಪರಿಣಾಮಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕರ್ನಾಟಕದ ಸಮನ್ವಯಕರಾದ ಚಂದ್ರ ಮೊಗವೀರ ವಿವರಿಸಿದರು ಹಾಗೂ ಇದರ ವಿರುದ್ಧ ಹೋರಾಡಲು ಕರೆ ನೀಡಿದರು.
ನಾವೆಲ್ಲಾ ಹಿಂದೂಗಳಲ್ಲಿ ಸಾಮರಸ್ಯತೆ ಮತ್ತು ಏಕತೆ ಇದ್ದರೆ ಎಂತಹ ಸಮಸ್ಯೆ ಬಂದರೂ ನಾವು ಎದುರಿಸಬಹುದು. ಪ್ರತಿ ಮನೆ ಮನೆಗೂ ಹೋಗಿ ಹಿಂದೂ ಧರ್ಮದ ಪ್ರಸಾರ ಮಾಡಿ ವಾರಕೊಮ್ಮೆಯಾದರೂ ದೇವಸ್ಥಾನಕ್ಕೆ ಬಂದು ಧರ್ಮಶಿಕ್ಷಣ ಪಡೆಯಲು ಪ್ರೇರಣೆ ನೀಡಬೇಕು` ಎಂದರು.
ಭಕ್ತಾದಿಗಳಲ್ಲಿ ಅರ್ಚಕರ ಮೇಲೆ ವಿಶ್ವಾಸ ಇರುವುದರಿಂದ ಅವರು ಭಕ್ತಾದಿಗಳಿಗೆ ಧರ್ಮಶಿಕ್ಷಣ ಕೊಟ್ಟು ಹಿಂದೂ ಧರ್ಮಕ್ಕೆ ಏನೇನು ಆಘಾತವಾಗುತ್ತಿದೆ, ವಿಡಂಬನೆಯಾಗುತ್ತಿದೆ, ವಿಗ್ರಹ ಬಂಜನೆಯಾಗುತ್ತಿದೆ ಇದರ ಅರಿವು ಮೂಡಿಸಬೇಕು. ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಅರ್ಚಕರು ಭಕ್ತಾದಿಗಳು ಮಾಡಿರುವ ತ್ಯಾಗ ಬಲಿದಾನಗಳ ಅರಿವು ಇಂದಿನ ಯುವಕ-ಯುವತಿಯರಿಗೆ ಮೂಡಿಸಬೇಕು. ಕೇವಲ ತೀರ್ಥ, ಪ್ರಸಾದಕ್ಕೆ ಅವರ ಕರ್ತವ್ಯ ಸೀಮಿತವಾಗಬಾರದು` ಎಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಸಕಲೇಶಪುರದ ವಿಶ್ವಸ್ಥರಾದ ಭಾಸ್ಕರ್ ನಾಯ್ಡು ಹೇಳಿದರು.
ಪ್ರತಿದಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವ ಸಂಸ್ಕಾರವಾಗಬೇಕು, ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಕ್ತಾದಿಗಳಿಗೆ ನಾಮಜಪ, ದೇವರ ಕಥೆಗಳನ್ನು ಹೇಳಿ ಅವರಿಗೆ ಪ್ರತಿನಿತ್ಯ ದೇವಸ್ಥಾನಕ್ಕೆ ಬರುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಕಲೇಶಪುರದ ಶ್ರೀ ಹೊಳೆ ಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ್ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರಶೇಖರ್ ಮಾತನಾಡಿ, ದೇವಸ್ಥಾನಗಳ ಮೂಲಕ ಧರ್ಮಶಿಕ್ಷಣ ನೀಡಿದಾಗ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ ಗಾಢವಾಗುವುದು ಮತ್ತು ಇದರಿಂದ ಭಕ್ತನು ಉತ್ತಮ ಧರ್ಮಾಚರಣಿಯಾಗಿ ಧರ್ಮರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಗೆ ಬದ್ಧನಾಗುತ್ತಾನೆ ದೇವಸ್ಥಾನಗಳಲ್ಲಿ ಧರ್ಮಾಚರಣೆಯ ಕುರಿತ ಗ್ರಂಥಗಳು ಉಪಲಬ್ಧವಾಗುವಂತೆ ಗ್ರಂಥಾಲಯಗಳನ್ನು ಮಾಡುವುದರಿಂದ ಭಕ್ತರಿಗೆ ಧರ್ಮದ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ. ಹಿಂದೂಗಳಲ್ಲಿ ಧರ್ಮಶಿಕ್ಷಣ ಇಲ್ಲದ ಕಾರಣ ಇಂದು ಅನೇಕರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿ ಮಂದಿರಗಳು ಜವಾಬ್ದಾರಿ ತೆಗೆದುಕೊಂಡು ಧರ್ಮಶಿಕ್ಷಣವನ್ನು ನೀಡಬೇಕು. ಧರ್ಮರಕ್ಷಣೆಗಾಗಿ ದೇವಸ್ಥಾನಗಳ ವಿಶ್ವಸ್ಥರು ಸಂಘಟಿತರಾಗಿ ಕಾರ್ಯ ಮಾಡಬೇಕಾಗಿದೆ` ಎಂದರು.
ಈ ಅಧಿವೇಶನದಲ್ಲಿ ದೇವಸ್ಥಾನಗಳಲ್ಲಿ ಸಾಪ್ತಾಹಿಕ ಧರ್ಮಶಿಕ್ಷಣ ವರ್ಗ ಪ್ರಾರಂಭಿಸಲು ನಿಶ್ಚಯಿಸಲಾಯಿತು. ಸುಮಾರು 20 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಇದರೊಂದಿಗೆ ಹಿಂದೂ ಸಮಾಜವನ್ನು ಸಂಘಟಿಸಲು ಸಾಮೂಹಿಕ ಆರತಿ ಉಪಕ್ರಮವನ್ನು ನಡೆಸಲು ದೇವಸ್ಥಾನಗಳ ವಿಶ್ವಸ್ಥರು ಸಿದ್ದರಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ