ಜಗತ್ತಿನ ಅತ್ಯಂತ ದೊಡ್ಡ ಹಬ್ಬ ಇತ್ತೀಚೆಗಷ್ಟೆ ಪ್ರಯಾಗ್ರಾಜ್ನಲ್ಲಿ ನಡೆಯಿತು. ಅದೇ ಮಹಾಕುಂಭಮೇಳ. ಈ ಕುಂಭಮೇಳ ವಿಶೇಷ ಯಾಕೆಂದರೆ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ಆಗುತ್ತದೆ. ಈಗ ನಡೆದದ್ದು 144 ವರ್ಷಗಳು ಸಂದಿವೆ. ಅದಕ್ಕೆ ಇದನ್ನು ಮಹಾಕುಂಭಮೇಳ ಅಂತ ಕರೆದಿದ್ದಾರೆ. ಕುಂಭಮೇಳ ಭಾರತದ 4 ನಗರಗಳಲ್ಲಿ ನಡೆಯುತ್ತದೆ. ಆ ನಾಲ್ಕು ನಗರಗಳು ಪ್ರಯಾಗ, ಹರಿದ್ವಾರ, ನಾಸಿಕ್ ಮತ್ತು ಉಜ್ಜಯನಿ.
ಕುಂಭ ಎಂದರೆ ಮಡಕೆ ಅಂತ. ಆಧ್ಯಾತ್ಮದಲ್ಲಿ ದಾರ್ಶನಿಕರು ಮಣ್ಣು, ಕುಂಬಾರ, ಮಡಕೆಯ ಕಲ್ಪನೆಯನ್ನು ಕೊಟ್ಟಿದ್ದಾರೆ. ಇದಕ್ಕೆ ಕಾರಣ, ಮಡಕೆ ತಯಾರಿಸಲು ಮಣ್ಣು, ನೀರು, ಗಾಳಿ, ಬೆಂಕಿ ಮತ್ತು ಭೂಮಿಯ ಮೇಲೆ ಆಗುವುದರಿಂದ ಪಂಚಭೂತಗಳ ತತ್ವ ಅಡಗಿದೆ. ಅದಕ್ಕೆ ಮಡಕೆಯನ್ನು ತೆಗೆದುಕೊಂಡು ವಿವರಿಸಿದ್ದಾರೆ.
ಕುಂಭಮೇಳಕ್ಕೆ ಹೋಗುವುದು ಯಾಕೆ ಅಂದರೆ, ಮೊದಲನೆಯದು ಹಿಂದೂ ಧರ್ಮದ ಸಿದ್ಧಾಂತವನ್ನು ಅರಿತುಕೊಳ್ಳುವುದಕ್ಕೆ, ಎರಡನೆಯದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಪೌರಾಣಿಕ ಹಿನ್ನಲೆ
ನಮಗೆ ಕಥೆಗಳ ಮೂಲಕ ತಿಳಿದಿದೆ, ರಾಕ್ಷಸರು ಮತ್ತು ದೇವತೆಗಳು ಸಮುದ್ರ ಮಂಥನ ಮಾಡಿದರು. ಆ ಸಮುದ್ರ ಮಂಥನ 12 ದಿನಗಳು ನಡೆದವು. ಅವರ ಒಂದು ದಿನ ನಮಗೆ 1 ವರ್ಷ ಹಾಗಾಗಿ 12 ವರ್ಷಗಳಿಗೊಮ್ಮೆ ಕುಂಭಮೇಳ ಆಗುತ್ತದೆ.
ಆ ಸಮುದ್ರ ಮಂಥನದಲ್ಲಿ ಮೊದಲಿಗೆ ವಿಷ ಬಂತು, ಅದನ್ನು ಮಹಾದೇವ ಕುಡಿದು ನಂಜುಂಡೇಶ್ವರ ನಾದ. ಆನಂತರ ಧನ್ವಂತರಿ ಬಂದ, ಲಕ್ಷ್ಮೀ ಬಂದಳು, ಕೊನೆಯಲ್ಲಿ ಅಮೃತಕುಂಭ ಬಂತು. ಆ ಅಮೃತಪಾನ ಮಾಡಿದರೆ ಸಾವು ಬರಲ್ಲ ಅಂತ ದೇವತೆಗಳಿಗೆ ಮತ್ತು ರಾಕ್ಷಸರಿಗೆ ಇಬ್ಬರಿಗೂ ತಿಳಿದಿತ್ತು. ಇದರಿಂದ ಇಬ್ಬರಲ್ಲೂ ಕಿತ್ತಾಟ ಆಯಿತು. ಆಗ 4 ಹನಿ ಅಮೃತ ಭಾರತ ದೇಶದ 4 ಜಾಗಗಳಲ್ಲಿ ಬಿತ್ತು, ಅದೇ ಪ್ರಯಾಗ, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿ.
ಈ ಕುಂಭಮೇಳ ನಡೆಯುವುದಕ್ಕೆ ಸ್ಪಷ್ಟವಾದ ಗಣಿತ ಇದೆ. ಗುರು ಗ್ರಹ ವೃಷಭರಾಶಿಗೆ ಬಂದಾಗ ಪ್ರಯಾಗದಲ್ಲಿ ಕುಂಭಮೇಳ ನಡೆಯುತ್ತದೆ. ಗುರುಗ್ರಹ ಕರ್ಕಾಟಕ ರಾಶಿಗೆ ಬಂದಾಗ ನಾಸಿಕ್ನಲ್ಲಿ, ಮೇಷರಾಶಿ ಪ್ರವೇಶಿಸಿದಾಗ ಉಜ್ಜಯನಿಯಲ್ಲಿ ಕುಂಭಮೇಳ ನಡೆಯುತ್ತದೆ. ಕೇತು ಗ್ರಹ ಕುಂಭರಾಶಿಗೆ ಪ್ರವೇಶಿಸಿದಾಗ ಹರಿದ್ವಾರದಲ್ಲಿ ಕುಂಭಮೇಳ ನೆಡಯುತ್ತದೆ.
ಈ ಲೆಕ್ಕಾಚಾರ ಎಷ್ಟು ಸ್ವಾರಸ್ಯಕರವಾಗಿದೆ. ಅಂದರೆ, ಗುರುಗ್ರಹ ಎಲ್ಲ ರಾಶಿಗಳನ್ನು ಸಂಚಾರ ಮಾಡುವುದಕ್ಕೆ 12 ವರ್ಷಗಳು ಬೇಕಾಗುತ್ತದೆ. ಹಾಗಾಗಿ, 12 ವರ್ಷಕ್ಕೊಮ್ಮೆ ಪೂರ್ಣಕುಂಭದ ಪರಿಕಲ್ಪನೆಯನ್ನು ಕೊಡಲಾಗಿದೆ. ಪ್ರಯಾಗದಲ್ಲಿ ಮಾತ್ರ ಮಹಾಕುಂಭ ನಡೆಯುತ್ತದೆ. ಈ ವರ್ಷದ ಮಹಾಕುಂಭದ ವಿಶೇಷತೆ ಏನೆಂದರೆ? ಸೌರವ್ಯೂಹದಲ್ಲಿ ಎಲ್ಲ ಗ್ರಹಗಳು ನೇರವಾಗಿ ಒಂದೇ ಸಾಲಿನಲ್ಲಿ ಬಂದು ನಿಂತಿತ್ತು. ಈ ರೀತಿ ಆಗುವುದು 144 ವರ್ಷಗಳಿಗೊಮ್ಮೆ ಮಾತ್ರ.
ಮಹಾಕುಂಭದ ಯಶಸ್ಸಿಗೆ ಕಾರಣ:
ಉತ್ತರಪ್ರದೇಶದ ಸರ್ಕಾರ 10,000 ಹೆಕ್ಟೇರ್ ಪ್ರದೇಶದಲ್ಲಿ ಈ ಕುಂಭಮೇಳವನ್ನು ಆಯೋಜಿಸಿತ್ತು. 92 ರಸ್ತೆಗಳಿಗೆ ಹೊಸ ರೂಪ, 17 ರಸ್ತೆಗಳ ಸೌಂದರ್ಯವೃದ್ಧಿ, ತ್ರಿವೇಣಿ ಸಂಗಮದಲ್ಲಿ 30 ಸೇತುವೆಯ ನಿರ್ಮಾಣ, 69,000 ದೀಪಗಳು, 1800 ಹೆಕ್ಟೇರ್ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ, 45 ದಿನಗಳಲ್ಲಿ 13,000 ವಿಶೇಷ ರೈಲುಗಳು, ಏಕಕಾಲಕ್ಕೆ 200 ಜನರಿಗೆ ಚಿಕಿತ್ಸೆ ನೀಡಲು ‘ಭೀಷ್ಮಕ್ಯೂಬಾ’ ಎಂಬ ಸಂಚಾರಿ ಆಸ್ಪತ್ರೆ, 2000ಕ್ಕಿಂತಲೂ ಹೆಚ್ಚು AI camera ಗಳನ್ನು ಅಳವಡಿಸಿದ್ದರು. ಎಲ್ಲ ರೀತಿಯ ಏರ್ಪಾಟು ಆಗಿದ್ದ ಕಾರಣ ಕುಂಭಮೇಳ ಯಶಸ್ವಿಯಾಯಿತು.
ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಪ್ರಶಿಕ್ಷಣ:
ಕುಂಭಮೇಳದಲ್ಲಿ ಇದ್ದ ಪೋಲಿಸರಿಗೆ, ರಕ್ಷಣಾ ಸಿಬ್ಬಂದಿಗಳಿಗೆ ಎಂಥಹ ಪ್ರಶಿಕ್ಷಣ ಕೊಟ್ಟಿದ್ದರು ಅಂದರೆ, ಅವರೆಲ್ಲರೂ ತಾಳ್ಮೆಯಿಂದ, ಕೋಪಿಸಿಕೊಳ್ಳದೆ ಜನರಿಗೆ ಎಲ್ಲಾ ರೀತಿಯ ಸಹಾಯ ಮಾಡಬೇಕೆಂದು ನಿರ್ದೇಶಿಸಿದ್ದರು. ನಾನು ಇದನ್ನು ಕಣ್ಣಾರೆ ಅನುಭವಿಸಿದ್ದೇನೆ. ನಮ್ಮ ಪ್ರಯಾಣ ಪ್ರಯಾಗರಾಜಕ್ಕೆ 22.02.2025 ರಿಂದ 23.02.2025 ರವರೆಗೆ ಭೇಟಿ ಇತ್ತಾಗ, ಯಾರೇ ಯಾವುದೇ ಮಾಹಿತಿ ಕೇಳಿದರೂ ಅತ್ಯಂತ ಪ್ರಸನ್ನಚಿತ್ತರಾಗಿ ಇದರ್ ಜಾಯಿಯೇ, ಉದರ್ ಜಾವೋ ಅಂತ ಉತ್ತರ ಕೊಡುತ್ತಿದ್ದರೇ ಹೊರತು ಒಬ್ಬರ ಜೊತೆಯೂ ಸಿಟ್ಟು ಮಾಡಿ, ಮುಖ ಸಿಂಡರಿಸಿ ಮಾತಾಡಿದ್ದು ನಾನು ನೋಡಲೇ ಇಲ್ಲ.
ಷಾಹಿಸ್ನಾನ - ಪವಿತ್ರಸ್ನಾನ:
‘ಷಾಹಿ’ ಪದದ ಅರ್ಥ ರಾಜವೈಭವ ಅಂತ. ಇದು ಪರ್ಷಿಯನ್ ಪದ. ಇದು ಏಕೆ ಪರ್ಷಿಯನ್ ಪದ ಬಳಕೆ ಆಗಿದೆ? ಬಹುಶಃ ಮುಸಲ್ಮಾನರ ಆಳ್ವಿಕೆಯ ಕಾರಣದಿಂದ ಹೀಗೆ ಬಂದಿರಬಹುದು. ಇದೇ ನಿಜವಾದ ವೈಭವ ಅಂತ ನಮ್ಮ ಹಿಂದೂಗಳು ಸಾರಿ ಹೇಳಿರಬಹುದು. ಈ ಬಾರಿ ಐದು ದಿನ ಷಾಹಿಸ್ನಾನ ಇತ್ತು. 13.01.2025, 14.01.2025, 29.01.2025, 05.02.2025 ಮತ್ತು 26.02.2025 ಈ ಷಾಹಿಸ್ನಾನದ ದಿನ ಎಲ್ಲಾ ನಾಗಸಾಧುಗಳು ಮತ್ತು ಅಘೋರಿಗಳ ಮುಖಂಡರು (ಜುರುಸ್) ಮೆರವಣಿಗೆ ಹೊರಟು ತ್ರಿವೇಣಿ ಸಂಗಮದಲ್ಲಿ ಧುಮುಕುತ್ತಾರೆ. ಆನಂತರ ಉಳಿದ ಎಲ್ಲಾ ಜನ ಸ್ನಾನ ಮಾಡುತ್ತಾರೆ.
ಹಿಂದೂಗಳ ಶ್ರದ್ಧಾ ಭಾವನೆ:
ನಾನು ನೋಡಿದ ಹಾಗೆ, ಪ್ರಯಾಗರಾಜಕ್ಕೆ ಬಂದAತಹ ಜನರಲ್ಲಿ ಅಗಾಧವಾದ ಶ್ರದ್ಧೆ, ಭಕ್ತಿಯನ್ನು ನಾನು ಕಂಡೆ. ಎಲ್ಲಾ ರೀತಿಯ ಜನ ಅಲ್ಲಿಗೆ ಬಂದಿದ್ದರು. ನಮ್ಮ ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ, ಒಗಟ್ಟಿಲ್ಲ ಎಂಬ ಟೊಳ್ಳು ವಾದವನ್ನು ಮಾಡುವವರು ಈ ಕುಂಭಮೇಳಕ್ಕೆ ಬರಬೇಕಿತ್ತು. ಅಲ್ಲಿಗೆ ಎಲ್ಲ ರೀತಿಯ, ಎಲ್ಲ ಪಂಗಡಗಳ ಜನ ಆಗಮಿಸಿದ್ದರು. ಎಲ್ಲ ಶ್ರೇಣಿಯ ಜನ ಅತ್ಯಂತ ಶ್ರೀಮಂತರು, ಬಡವರು, ಮಧ್ಯಮ ವರ್ಗದವರು ಎಲ್ಲರೂ ಆಗಮಿಸಿದ್ದರು. ಅವರೆಲ್ಲರ ಗುರಿ ಒಂದೇ ಆಗಿತ್ತು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕು ಅಂತ. ಅಲ್ಲಿನ ಶ್ರದ್ಧೆ, ಒಗ್ಗಟ್ಟು ಇವುಗಳನ್ನು ನೋಡಿ ಹೃದಯ ತುಂಬಿ ಬಂತು. ಇದರಿಂದ ನಮ್ಮ ದೇಶದ ಹಿಂದೂ ಬಾಂಧವರಿಗೆ ಅಮಿತವಾದ ಧೈರ್ಯ, ಸ್ಪೂರ್ತಿ ಬಂದಿದೆ.
ವಿಶ್ವರೂಪ ದರ್ಶನ:
ಭಗವದ್ಗೀತೆಯ 11ನೇ ಅಧ್ಯಾಯದಲ್ಲಿ ಕೃಷ್ಣ ತನ್ನ ವಿಶ್ವರೂಪದ ದರ್ಶನವನ್ನು ತೋರಿಸುತ್ತಾನೆ. ಆಗ ಅರ್ಜುನನಿಗೆ ಅನೇಕ ಮುಖಗಳು, ಕಣ್ಣುಗಳನ್ನು ನೋಡಿದ ಅರ್ಜುನ ಕೇಳುತ್ತಾನೆ. ಎಲ್ಲಾ ಜೀವಿಗಳನ್ನು ವಿಶೇಷವಾಗಿ ಸೇರಿದ ನಿನ್ನ ಶರೀರದಲ್ಲಿ ನೋಡುತ್ತಿದ್ದೇನೆ. ನಿನ್ನ ಅನಂತರೂಪದಲ್ಲಿ ಎಲ್ಲಾ ಕಡೆಗಳಲ್ಲೂ ಅನೇಕ ತೋಳುಗಳನ್ನು, ಹೊಟ್ಟೆಗಳನ್ನು, ಮುಖಗಳನ್ನು, ಕಣ್ಣುಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ. ಕುಂಭಮೇಳಕ್ಕೆ ಹೋದ ಎಲ್ಲರಿಗೂ ಇದೇ ರೀತಿ ಅನುಭವವಾಗಿದೆ. ಎಲ್ಲಿ ನೋಡಿದರೂ ಜನ, ಆ ಪರಮಾತ್ಮನ ಅನಂತರೂಪಗಳನ್ನು ಎಲ್ಲ ಕಡೆ ನೋಡುತ್ತಿದ್ದೆವು.
ಅಯೋಧ್ಯೆಯಲ್ಲಿಯೂ ಕೂಡಾ ಇದೇ ರೀತಿಯ ಜನರ ಹಿಂಡನ್ನು ನೋಡಿದೆವು. ಅಯೋಧ್ಯೆಯಿಂದ ರಾಮ ಕಾಡಿಗೆ ಹೋಗಬೇಕಾದರೆ ಹೇಗೆ ಜನ ಅವನ ಹಿಂದೆ ಹೋಗಿದ್ದರೋ ಹಾಗೆ ಪ್ರಯಾಗ್ರಾಜ್ನಲ್ಲಿ ಸ್ನಾನ ಮಾಡಿ ಜನ ಬಾಲರಾಮನನ್ನು ನೋಡಲು ಮುಗಿಬಿದ್ದು ಬಂದಿದ್ದರು ಅನ್ನಿಸುತ್ತಿತ್ತು. ಒಟ್ಟಿನಲ್ಲಿ ಅದ್ಭುತವಾದ ಅನುಭವ ನಮಗೆ ಮಹಾಕುಂಭಮೇಳ ಕೊಟ್ಟಿತು.
|| ಸರ್ವೇ ಜನಾಃ ಸುಖಿನೋ ಭವಂತು ||
- ಡಾ. ಗೀತಾ ರಮೇಶ್, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ