ಲೇಖಾ ಲೋಕ-37: ಹೊಸಗನ್ನಡದ ಪ್ರಥಮ ಸಾಹಿತಿ ಕೆರೂರು ವಾಸುದೇವಾಚಾರ್ಯರು

Upayuktha
0


ಕ್ರಿ.ಶ.1870 ರಿಂದ ಕ್ರಿ.ಶ.1920 ಹೊಸಗನ್ನಡ ಸಾಹಿತ್ಯದ ಮೊದಲ ಹಂತ ಎಂದು ಗುರುತಿಸಿದಾಗ, ಈ ಕಾಲಾವಧಿಯಲ್ಲಿ ಅದ್ಭುತ ಸಾಹಿತಿಗಳಾದ ಶ್ರೀ ಕೆರೂರು ವಾಸುದೇವಾಚಾರ್ಯರು, ಮಾಡಿದ ಕಾರ್ಯಗಳು ಅನೇಕ. ಇವರ ಕಾಲಾವಧಿಯಲ್ಲಿ (1866-1921 )ಬಹಳಷ್ಟು ಕಥೆ, ಕಾದಂಬರಿ, ನಾಟಕಗಳು ಶ್ರದ್ಧೆಯಿಂದ ಇವರಿಂದ ರಚಿಸಲ್ಪಟ್ಟವು. ಸಂಸ್ಕೃತ, ಕನ್ನಡ ಭಾಷೆಯಲ್ಲಿ ತಮ್ಮ ಅನುಪಮ ಪ್ರತಿಭೆ ವ್ಯಕ್ತಮಾಡಿ, ಒಂದು ಐತಿಹಾಸಿಕ ದಾಖಲೆಯನ್ನೇ ಮಾಡಿ ತೋರಿಸಿದರು.


ಶ್ರೀನಿವಾಸಾಚಾಯ೯ರ ಪುತ್ರನಾಗಿ, ಕೆರೂರು ವಾಸುದೇವಾಚಾರ್ಯರು ಬಾಗಲಕೋಟೆಯಲ್ಲಿ ತಾ॥15-10-1866 ರಂದು ಜನಿಸಿದರು. ಇವರ ಪೂವ೯ಜರು ಬಾದಾಮಿ ತಾಲ್ಲೂಕಿನ ಕೆರೂರುನಲ್ಲಿ ವಾಸವಾಗಿದ್ದರು. ಬಾದಾಮಿಯಲ್ಲಿ ಇವರು ಪ್ರಾಥಮಿಕ ಶಿಕ್ಷಣ ಪೂರೈಸಿ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಬೆಳಗಾವಿಯಲ್ಲಿ ಪೂರೈಸಿದರು. ಪುಣೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. 1899 ರಲ್ಲಿ ಕಾನೂನು ಪರೀಕ್ಷೆ ಪಾಸು ಮಾಡಿ, ವಕೀಲ ವೃತ್ತಿಯನ್ನು ಕೈಗೊಂಡರು. ಇವರು ಪತ್ರಿಕೋದ್ಯಮ, ಮತ್ತು ಸಾಹಿತ್ಯದ ಕಡೆಗೆ ಹೆಚ್ಚಾಗಿ ಒಲವು ತೋರಿಸಿದ್ದರು. 1915 ರ ಹೊತ್ತಿಗೆ ಅಧ್ಭುತ ಸಾಹಿತಿಯಾಗಿ, ಪ್ರಸಿದ್ಧಿ ಪಡೆದರು.


ನಳದಮಯಂತಿ ನಾಟಕ ಬರೆದು ಪ್ರದಶಿ೯ಸಿದರು. ಸ್ವತಂತ್ರವಾದ ಸಾಮಾಜಿಕ ಕಾದಂಬರಿ "ಇಂದಿರಾ" ಬರೆದು ಪ್ರಕಟಿಸಿದರು. ತಮ್ಮ ಜೀವಿತ ಕಾಲಾವಧಿಯಲ್ಲಿ ಸಾಹಿತ್ಯದ ಸೃಷ್ಟಿಗೆ ತೊಡಗಿ, ಅನೇಕ ಉತ್ಕೃಷ್ಟ  ಕೃತಿಗಳು ಇವರಿಂದ ರಚಿಸಲ್ಪಟ್ಟವು. ಸದಾ ಓದುವಂತಹ ಕಾದಂಬರಿಗಳಾದ ಇಂದಿರೆ, ಯದು ಮಹಾರಾಜ, ಭ್ರಾತೃಘಾತಕನಾದ ಔರಂಗಜೇಬ, ವಾಲ್ಮೀಕಿ ವಿಜಯ, ಯಮನ ಸೈರಂದ್ರಿ ಪ್ರಕಟವಾಗಿ ಬಿಡುಗಡೆಗೊಂಡವು. ಇಂದಿರೆ ಕಾದಂಬರಿ ಕನ್ನಡದಲ್ಲಿ ಪ್ರಪ್ರಥಮ ಸಾಮಾಜಿಕ ಕಾದಂಬರಿಗಳಲ್ಲಿ ಒಂದು ಎಂದು ಹೇಳಿ ಗುರುತಿಸಿದರು. ಈ ಕಾದಂಬರಿಯಲ್ಲಿ ಸ್ತ್ರೀ ಶಿಕ್ಷಣ, ಬಾಲ್ಯ ವಿವಾಹ, ವಿಧವಾ ವಿವಾಹ, ಆಧುನಿಕ ಶಿಕ್ಷಣ ಪದ್ಧತಿ ಮಂತಾದ ವೈಚಾರಿಕ ಸಂಗತಿಗಳು ನವೀನ ರೀತಿಯಲ್ಲಿ ಸಂವೇದನಾಶೀಲತೆ ಪಡೆದುಕೊಂಡು, ಹೊಸವಿಚಾರಗಳನ್ನು ತೆರೆದುಕೊಂಡವು. ಪ್ರೇಮ ವಿವಾಹದ ಪ್ರೋತ್ಸಾಹ, ವಿಧವಾ ವಿವಾಹಕ್ಕೂ ಲೇಖಕರು ಆಸ್ಪದ ನೀಡಿದ್ದುದು ವಿಶೇಷ.

ತಾವು ಬರೆದಿರುವ ಕಾದಂಬರಿಯ ಪಾತ್ರದಲ್ಲಿ, ಶಾಸ್ತ್ರ ಸಮ್ಮತವಿರಲಿ, ಇಲ್ಲದೇಯಿರಲಿ, ಪುನರ್ ವಿವಾಹ ಹಿತಕರ ಎಂದು ಕೆರೂರು ವಾಸುದೇವಾಚಾರ್ಯರು ಹೇಳಿದರು. ಹಾಸ್ಯವನ್ನು ಸಹ ಬರೆದು, ಕೆಲವು ಕಥೆಗಳ ಆಕಷ೯ಣೆ ಹೆಚ್ಚಿಸಿ, ಓದುಗರಿಗೆ ರಸದೌತಣ ನೀಡಿದ ಮಹನೀಯರು. ಕನ್ನಡದ ಆರಂಭದ ಸಣ್ಣ ಕಥೆಗಾರರಲ್ಲಿ ಪ್ರಮುಖರಾಗಿದ್ದ ಸಾಹಿತಿ. ಪ್ರೇಮವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು, ಇವರ ಕಥಾ ಸಂಕಲನಗಳು. ನಾಟಕಗಳಲ್ಲಿ, ನಳದಮಯಂತಿ, ವಸಂತಯಾಮಿನಿ, ಸ್ವಪ್ನ ಚಮತ್ಕಾರ, ಸುರತನಗರದ ಶ್ರೇಷ್ಠಿ, ಪತಿವಶೀಕರಣ ಪ್ರಮುಖವಾದವು.


ಧಾರವಾಡದಲ್ಲಿ ಇವರು "ಸಚಿತ್ರ ಭಾರತ" ಮಾಸಪತ್ರಿಕೆಯ ಸಂಪಾದಕ ವೃತ್ತಿ ಮಾಡಿದರು. ನಂತರ ಸ್ವತಂತ್ರವಾಗಿ "ಶುಭೋದಯ" ಪತ್ರಿಕೆಯನ್ನು ನಡೆಸಿದರು. ಬರವಣಿಗೆಯ ಮಹತ್ವವನ್ನು ಪತ್ರಿಕೆಯ ಮೂಲಕ  ಲೇಖಕರಿಗೆ ತಿಳಿಸಿದರು. ಅಂದಿನ ಸಮಯದಲ್ಲಿ, ಮರಾಠಿ, ಉರ್ದು ಭಾಷೆಗಳ ಆಡಳಿತ ಸರಕಾರವಿದ್ದುದರಿಂದ ಕನ್ನಡ ಭಾಷೆ ತಾತ್ಸಾರಕ್ಕೆ ನಲುಗುತ್ತಿತ್ತು. ಈ ರೀತಿ ಕಂಡು ಇವರು ತೀವ್ರವಾಗಿ ಕಾಳಜಿ ವಹಿಸಿ, ಕನ್ನಡ ಭಾಷೆಗೆ ಒತ್ತು ನೀಡಿದರು.


ಕನ್ನಡ ನಾಡಿಗೆ ಮಹತ್ವದ ನಾಟಕಗಳು, ಕಾದಂಬರಿಗಳು, ಸಣ್ಣ ಕಥೆಗಳನ್ನು ನೀಡಿ, ಮಹತ್ವದ ಲೇಖಕರಾಗಿ ಪ್ರಸಿದ್ಧರಾದರು. ಐದು ಕಾದಂಬರಿಗಳು, 6 ನಾಟಕಗಳು, 4 ಕಥಾ ಸಂಕಲನಗಳು, ಇವರಿಂದ ರಚಿಸಲ್ಪಟ್ಟವು. ಮೂರು ನಾಟಕಗಳು  ಆಂಗ್ಲ ಭಾಷೆಯ ಅನುವಾದ ನಾಟಕಗಳು.


ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಮೋಘ ಮತ್ತು ಇವರು ಸಾಹಿತ್ಯ ಚರಿತ್ರೆಯಲ್ಲಿ ಸದಾ ಸ್ಮರಿಸುವ ವ್ಯಕ್ತಿಯಾಗಿ, ನಾಡಿಗೆ ಅನನ್ಯರಾದ ಮಹಾನ್ ಬರಹಗಾರರು. ಕೇವಲ 55 ವರ್ಷ ಬದುಕಿ, ನಾಡಿಗೆ ಶ್ರೇಷ್ಠ ಕೃತಿಗಳನ್ನು ನೀಡಿ 21-1-1921 ರಂದು ಇಹಲೋಕ ತ್ಯಜಿಸಿದರು. 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top