ಮಾಧ್ವ ಸಮಾಜದ ಸಾಹಿತ್ಯ ಪ್ರಪಂಚದಲ್ಲಿ ಇಲ್ಲಿಯ ತನಕ ದುರ್ಗಾದೇವಿಯ ಉಪಾಸನೆಯ, ಸರಿಯಾದ ಉಪಾಸನೆಯ ಕುರಿತು ಪುಸ್ತಕಗಳು ಬಂದದ್ದು ಬಹಳ ಕಡಿಮೆ. ಸಪ್ತಶತಿಯ ಚಿಂತನೆಯ ಕುರಿತು ಅನಂತಕೃಷ್ಣ ಆಚಾರ್ಯರ "ದೇವಿ ಮಹಾತ್ಮ್ಯ" ಎಂಬ ಒಂದು ಬಂದಿತ್ತು. ಅದನ್ನು ಹೊರತುಪಡಿಸಿ ಇನ್ನಾವ ಪುಸ್ತಕವು ದುರ್ಗಾದೇವಿಯ ಉಪಾಸನೆಯ ಕುರಿತು ಈ ತನಕ ಬರಲಿಲ್ಲ.
14-03-2025 ಪುತ್ತಿಗೆ ಪರ್ಯಾಯ, ಶ್ರೀ ಕೃಷ್ಣಮುಖ್ಯಪ್ರಾಣರ ಸನ್ನಿಧಿಯಲ್ಲಿ ಸೇವಾಕರ್ತರಿಂದ 'ಶತಚಂಡಿಕಾಯಾಗ' ನಡೆದಿದ್ದು ಇದರ ನೆನಪಿಗಾಗಿ ಒಂದು ಪುಸ್ತಕ ಬಿಡುಗಡೆ ಆಗಿದೆ. ಈ ಪುಸ್ತಕದ ಹೆಸರು 'ದುರ್ಗಾದೇವಿಂ ಶರಣಮಹಂ ಪ್ರಪದ್ಯೇ'. ಈ ಪುಸ್ತಕದ ಲೇಖಕರು ಉಡುಪಿಯ ಶ್ರೀ 'ಓಂ ಪ್ರಕಾಶ್ ಭಟ್'ರು.
ಹೆಚ್ಚಿನವರಿಗೆ ದುರ್ಗೆ ಎಂದರೆ ಅದು ಪಾರ್ವತಿ ಮಾತ್ರ. ಆದರೆ ಈ ಗೊಂದಲವನ್ನು ನಮಗೆ ಪರಿಹರಿಸಿಕೊಟ್ಟದ್ದು ವಿಶ್ವಗುರು ಶ್ರೀ ಮನ್ ಮಧ್ವಾಚಾರ್ಯರು. ದುರ್ಗೆ ಎಂದರೆ ಪ್ರಕೃತಿಯ ತಮೋ ಗುಣದ ನಿಯಾಮಕಳಾಗಿರುವ ಮಹಾಲಕ್ಷ್ಮಿಯ ರೂಪ. ಈ ದುರ್ಗೆಯ ಸನ್ನಿಧಾನ ಪಾರ್ವತಿಯಲ್ಲಿರುವುದರಿಂದ ಪಾರ್ವತಿಗೂ ದುರ್ಗೆ ಎಂಬ ಹೆಸರು ಬಂದಿದೆ. ಆದರೆ ಮೂಲದಲ್ಲಿ ದುರ್ಗೆ ಎಂದರೆ ಅದು ಮಹಾಲಕ್ಷ್ಮಿಯೇ.
ದುರ್ಗಾತ್ ತಾರಯಸೇ ದುರ್ಗೇ ತತ್ ತ್ವಂ ದುರ್ಗಾ ಸ್ಮೃತಾ ಜನೈಃ.
ಗೀತೆಯಲ್ಲಿ ಬಂದ ಶ್ರೀ ತತ್ವ ಉಪಾಸನೆಯಿರಲಿ, ಶಾಕ್ತೋಪಾಸನೆ ಇರಲಿ, ಇವೆಲ್ಲವೂ ಸಾತ್ವಿಕರಿಗಲ್ಲ. ಸಾತ್ವಿಕರು ಭಗವಂತನ ಅಧೀನದಲ್ಲಿಯೇ ಎಲ್ಲರನ್ನು ಉಪಾಸನೆ ಮಾಡಬೇಕು. ಅದುವೇ ಶಾಸ್ತ್ರದ ಸಾರ ಎಂದು ಮೊದಲಬಾರಿಗೆ ಸಾತ್ವಿಕರನ್ನು ಸರಿದಾರಿಗೆ ತಂದದ್ದು ಮಧ್ವಾಚಾರ್ಯರು.
ಮಧ್ವಾಚಾರ್ಯರು ತಮ್ಮ ಸರ್ವಮೂಲದಲ್ಲಿ, ಗೀತಾಭಾಷ್ಯ, ತಾತ್ಪರ್ಯ ನಿರ್ಣಯ, ದ್ವಾದಶ ಸ್ತೋತ್ರದಲ್ಲಿ ಎಲ್ಲೆಡೆಯೂ ಈ ಸಂದೇಶವನ್ನು ನೀಡಿದ್ದಾರೆ. ಆದರೂ ಇಂದು ಜನರಿಗೆ ಗೊಂದಲ, ದುರ್ಗೆಯನ್ನು ಪೂಜಿಸುವುದು ಹೇಗೆ ಎಂದು. ಹಿಂದಿನಿಂದ ನಡೆದು ಬಂದ ಸಂಪ್ರದಾಯವೇ ಮುಖ್ಯವಾಯಿತು ಹೊರತು ಸತ್ಯವಲ್ಲ. ಮಾರ್ಕಂಡೇಯ ಪುರಾಣದಲ್ಲಿ ಬರುವ ಸಪ್ತಶತಿಯನ್ನು ಗಮನಿಸಿದಾಗಲೂ ದೇವಿಯೇ ಸರ್ವೋತ್ತಮಳು ಎಂದು ಕಾಣುತ್ತದೆ. ಹಾಗಂತ ನಾವು ಸಪ್ತಶತಿಯನ್ನು ಬಿಡುವ ಅವಶ್ಯಕತೆ ಇಲ್ಲ. ಮಧ್ವಾಚಾರ್ಯರು ತಂತ್ರಸಾರೋಕ್ತವಾಗಿ ಹಾಕಿ ಕೊಟ್ಟ ಮಾರ್ಗದಲ್ಲಿಯೇ ಅದನ್ನು ನೋಡುವುದು ಸರಿಯಾದ ಕ್ರಮ. ಆದರೆ ಇಂದು ಬರೀಯ ತಂತ್ರಕ್ಕೆ ಜೋತು ಬಿದ್ದು ಸಿದ್ಧಾಂತವನ್ನು ಮರೆತಿದ್ದೇವೆ. ಇದು ಸರಿಯಾದ ಕ್ರಮವಲ್ಲ.
ಕೊನೆಯ ಪಕ್ಷ ಜನಸಾಮಾನ್ಯರ ತಲೆಯಲ್ಲಿರುವ ಗೊಂದಲವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಶ್ರೀ ಓಂ ಪ್ರಕಾಶ್ ಭಟ್ಟರು ಈ ಕೃತಿಯನ್ನು ಹೊರಗೆ ತಂದಿದ್ದಾರೆ. ಇದು ಅವರ ಮೊದಲ ಪ್ರಯತ್ನ ಮತ್ತು ನಾನು ನೋಡಿರುವಲ್ಲಿ ದುರ್ಗಾದೇವಿಯ ಕುರಿತು ಮಾಧ್ವ ಸಮಾಜದಲ್ಲಿ ಬರುತ್ತಿರುವ ಮೊದಲ ಕೃತಿಯೂ ಹೌದು.
ಈ ಕೃತಿಯ ವಿಶೇಷಗಳೇನೆಂದರೆ...
1. ದುರ್ಗಾ ದೇವಿ ಯಾರು, ಅವಳ ಸರಿಯಾದ ಉಪಾಸನೆಯನ್ನು ಮಧ್ವಾಚಾರ್ಯರು ಶಾಸ್ತ್ರದಲ್ಲಿರುವುದನ್ನು ಹೇಗೆ ತಿಳಿಸಿಕೊಟ್ಟಿದ್ದಾರೆ?
2. ನರಸಿಂಹ ಸಹಿತ ದುರ್ಗೆಯನ್ನು ಏಕೆ ಚಿಂತಿಸಬೇಕು?
3. ದುರ್ಗಾದೇವಿಯು ತಮೋಗುಣದ ನಿಯಾಮಕಳು, ಇದು ಹೇಗೆ?
4. ದೈತ್ಯರಿಗೆ ದುಃಖಪ್ರದಳು, ಈ ದೈತ್ಯರು ಎಲ್ಲಿದ್ದಾರೆ?5. ಮಧುಕೈಟಭರು, ಮಹಿಷ ಇವರೆಲ್ಲ ಹೊರಗಿನ ದೈತ್ಯರು, ನಮ್ಮೊಳಗಿನ ಶತ್ರುಗಳು ಮತ್ತು ದೈತ್ಯರ ನಾಶ ದುರ್ಗಾದೇವಿಯಿಂದ ಹೇಗೆ?ಇದರ ವಿಶೇಷವಾದ ಅಂಶವೂ ಸಿಗುತ್ತದೆ.
6. ಇನ್ನು ದುರ್ಗೆಯನ್ನು ಸಪ್ತವಿಧದಲ್ಲಿ ಹೇಗೆ ಆರಾಧಿಸುವ ಬಗೆ, ಅಸದುಪಾಸನೆ ಸಲ್ಲದು, ಎಂದು ಮಧ್ವಾಚಾರ್ಯರು ಗೀತಾತಾತ್ಪರ್ಯದಲ್ಲಿ (೧೨-೨) ಏನನ್ನು ತಿಳಿಸಿದ್ದಾರೆ ಅದರ ಸಾರಂಶವನ್ನೇ ಇಲ್ಲಿ ತೋರಿಸಿದ್ದಾರೆ.
7. ಮುಖ್ಯವಾಗಿ ನಾವು ಯಾವುದೇ ದೇವಿ ಉಪಾಸನೆಯನ್ನು ಮಾಡುವಾಗ, ಅಥವಾ ಉದಾಹರಣೆಗೆ ಚಂಡಿಕಾಯಾಗವನ್ನೇ ತೆಗೆದುಕೊಂಡಾಗ ಬಹುಪಾಲು ಮಾರ್ಕಂಡೇಯ ಪುರಾಣದ ಭಾಗಗಳೇ ಉಪಯೋಗಿಸುವುದು. ಅಲ್ಲಿ ಅನುಸಂಧಾನ ಹೇಗಿರಬೇಕು? ಸಿದ್ಧಾಂತ ನಿಷ್ಠೆ, ಮಧ್ವರು ತೋರಿದ ದಾರಿ, ಅಸದುಪಾಸನೆ ಇರದೇ ನಮ್ಮ ಅನುಸಂಧಾನ ಹೇಗಿರಬೇಕು ಎಂಬುದನ್ನು ಚೆನ್ನಾಗಿ ವಿವರಿಸಿದ್ದಾರೆ.
8. ವಿಶೇಷವಾಗಿ ತುಳುನಾಡಿಗೂ ದೇವಿಯ ಆರಾಧನೆಗೂ ಇರುವ ನಂಟನ್ನು ಚೆನ್ನಾಗಿ ಬಿಡಿಸಿದ್ದಾರೆ. ಇದು ಒಂದು ಒಳ್ಳೆಯ ಪ್ರಯತ್ನ.
9. ಇನ್ನು ಪ್ರತಿ ಶುಕ್ರವಾರವೂ ರೂಪ್ಯಪೀಠದೊಡೆಯನಿಗೆ ಸ್ತ್ರೀರೂಪದ ಅಲಂಕಾರದ ಮಹತ್ವವನ್ನು ಸೆರೆ ಹಿಡಿದಿದ್ದಾರೆ.
10. ಇಷ್ಟೆಲ್ಲ ಆದ ನಂತರ ಉಳಿದದ್ದು ಏನು? ಆಂತರಿಕ ಬಾಹ್ಯ ಶತ್ರುಗಳ ದೈತ್ಯರ ನಾಶ ಯಾವುದಕ್ಕೆ? ಶಾಂತಿಗಾಗಿ ಅಂತಹ ಶಾಂತಿಯನ್ನು ದುರ್ಗಾ ದೇವಿಯಿಂದ ಹೇಗೆ ಪಡೆಯುವುದು. ಎಂಬ ಮಾಹಿತಿಯಿಂದ ಈ ಪುಟ್ಟ ಕೃತಿಯನ್ನು ಕೊನೆಗೊಳ್ಳಿಸಿದ್ದಾರೆ.
ಇದೊಂದು ವಿಭಿನ್ನ ಉತ್ತಮ ಪ್ರಯತ್ನ, ಜನಸಾಮಾನ್ಯರನ್ನು ತಲೆಯಲ್ಲಿ ಇಟ್ಟುಕೊಂಡು ಮೊದಲು ಅಲ್ಲಿಂದಲೇ ಗೊಂದಲ ಪರಿಹಾರವಾಗಲಿ ಎಂಬ ಉದ್ದೇಶದಿಂದ ಮೂಡಿಬಂದ ಪುಟ್ಟ ಕೃತಿಯಿದು.. ಮುಂದೆ ಇದನ್ನು ಇನ್ನಷ್ಟು ವಿಸ್ತರಿಸಲಿ ಎಂದು ಆಶಿಸೋಣ.
ಎಲ್ಲರಿಗೂ ಉಪಯುಕ್ತವಾಗುವ ಪುಸ್ತಕ, ಇಂತಹ ಪುಸ್ತಕ ನಮ್ಮ ಸಂಗ್ರಹದಲ್ಲಿ ಇರಬೇಕಾದದ್ದು, ಉಪಾಸನೆಗೆ ತರಬೇಕಾದದ್ದು, ನೀವು ತರಿಸಿಕೊಳ್ಳಿ, ನಿಮ್ಮವರಿಗೂ ನೀಡಿ.
ಶತಚಂಡಿಕಾಯಾಗದ ನಂತರ ದುರ್ಗಾದೇವಿಯ ಅಂತರ್ಯಾಮಿಯಾದ ಭಗವಂತನಿಗೆ ಸಮರ್ಪಿಸಿದ ಬಳಿಕ ಆಸಕ್ತರಿಗೆ ದೊರೆಯಲಿದೆ.
ಪುಸ್ತಕದ ಬೆಲೆ: 50 ರೂ.
ಪ್ರತಿಗಳಿಗೆ ಸಂಪರ್ಕಿಸಿ: +91 99640 25922 (ಓಂ ಪ್ರಕಾಶ್ ಭಟ್)
- ಪ್ರೀತಿ ತೀರ್ಥ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ