ನೆನಪಿನಾಳದಿಂದ: ನಗೆಯ ಹಿಂದಿನ ಸತ್ಯ ಮರೆಯುವಂತಿಲ್ಲ

Upayuktha
0


ಹಾಸ್ಯವೆಂಬುದು ಸಂಸ್ಕೃತಿವಂತ ಸಮಾಜದ ಸ್ವ-ಟೀಕೆಗಳು, ವಸ್ತುಸ್ಥಿತಿ ಏನಿದೆಯೆಂಬ ಅರಿವಿನಲ್ಲಿ ಮನ ಹಗುರ ಮಾಡಿಕೊಳ್ಳುವುದರೊಂದಿಗೆ ಸಮಾಜದ ಓರೆಕೋರೆಗಳನ್ನು ತಿದ್ದಿ ಸರಿಪಡಿಸಿ ಕೊಳ್ಳಬೇಕೆಂಬ ಚಾಟೂಕ್ತಿಗಳಾಗಿಯೂ ಅವು ಕೆಲಸ ಮಾಡುತ್ತವೆ ಎಂದರೆ ತಪ್ಪೇನಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳು ಹಾಸ್ಯದ ಗುರಿಯಾಗಿರುತ್ತಾರೆ. ಈಗೀಗ ಇತರ ಕಾರ್ಯಕ್ಷೇತ್ರಗಳವರ ಬಗೆಗೂ ಜೋಕ್‌ಗಳು ಸೃಷ್ಟಿಯಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.


ಈಗ ಮೊಬೈಲ್ ಯುಗ. ಎದುರೆದುರು ಕಂಡವರೊಂದಿಗೆ ಮಾತನಾಡುವುದಕ್ಕಿಂತಲೂ ದೂರದಲ್ಲಿರುವ ಆತ್ಮೀಯರೊಂದಿಗೆ ಮೊಬೈಲ್ ಫೋನ್‌ ನಲ್ಲಿ ಸಂಭಾಷಿಸುವುದು ಆಪ್ಯಾಯಮಾನವಾಗಿ ಬಿಟ್ಟಿದೆ.


18ನೇ ಶತಮಾನದಲ್ಲಿ ತನ್ನ ಹೆಂಡತಿಗೆ ಕಿವಿ ಕೇಳುವಂತಾಗಬೇಕೆಂದು ಅಬ್ರಾಹಂ ಗ್ರಹಾಂಬೆಲ್ ಸಂಶೋಧನೆ ಮಾಡುತ್ತಿದ್ದಾಗ ಸೃಷ್ಟಿಯಾದ ಟೆಲಿಫೋನ್ ದೂರದ ಮಾತುಕತೆಗೆ ಒಂದು ಉತ್ತಮ ಸಾಧನವಾಗಬಲ್ಲದೆಂಬ ಖಚಿತ ನಿರೀಕ್ಷೆ ಆತ ಇಟ್ಟುಕೊಂಡಿದ್ದಂತೂ ನಿಜ ಇರಬಹುದು. ಆದರೆ, ಇತರೆಲ್ಲಾ ಆಧುನಿಕ ಸಲಕರಣೆಗಳನ್ನು ಮಾರಿ ಟೆಲಿಫೋನ್ ಮೊಬೈಲ್ ಆಗಿ ಮನುಷ್ಯ ಜೀವನವನ್ನು ಈಗಾಗಿರುವ ರೀತಿಯಲ್ಲಿ ಆವರಿಸಿಬಿಡಬಹುದೆಂಬ ಅಂದಾಜಂತೂ ಆತನಿಗಿದ್ದಿರಲಾರದು.


ಮೊಬೈಲ್ ಸೇವೆ ಮಾತ್ರವಲ್ಲ, ಜಗತ್ತನ್ನೇ ನಮ್ಮ ಮುಂದೆ ಬಿಚ್ಚಿಡುವ ಸಾಧನವಾಗಿದೆ. ಎಸ್‌.ಎಂಎಸ್ ಅಥವಾ ಕಿರು ಸಂದೇಶ ಸೇವೆಯಂತೂ ಅಪಾರ ಜನಪ್ರಿಯ, ಕರ್ನಾಟಕ ಪ್ರವಾಸದ ವೇಳೆ ನನ್ನ ಮೊಬೈಲ್‌ನಲ್ಲಿ ಬರುತ್ತಿದ್ದ ಎಸ್‌ಎಂಎಸ್ ರಾಜಕೀಯ ಜೋಕ್‌ಗಳು ನೂರಾರು; ಹಾಗೆಯೇ ಸ್ಥಳೀಯವಾಗಿ ಪ್ರದೇಶ ಸಂಸ್ಕೃತಿ ಭಾಷೆಗನುಗುಣವಾಗಿ ಕಿವಿಗೆ ಬೀಳುತ್ತಿದ್ದ ನಗಹನಿ ಕಥೆಗಳೂ ಕಮ್ಮಿಯೇನಲ್ಲ.


ಬೆಂಗಳೂರು ಮಹಾನಗರದ ರಸ್ತೆಗಳು ಹೇಗಿವೆಯೆಂದು ಗೊತ್ತಲ್ಲ. ಇನ್ನು ಕರ್ನಾಟಕದ ಗ್ರಾಮಾಂತರದ ಅನೇಕ ಕಡೆಗಳಲ್ಲಿ ದಾರಿಗಳದೂ ದುಸ್ಥಿತಿ ಕಣ್ಣೀರು ಬರಿಸುತ್ತದೆ. ರಸ್ತೆಯ ಮೂಲಕ ದೂರ ಪ್ರಯಾಣವೆಂಬುದು ಇತ್ತೀಚೆಗಂತೂ ಅಷ್ಟೊಂದು ಖುಶಿ ಕೊಡುವುದಲ್ಲ.


ಪ್ರಮುಖ ಊರುಗಳು ಬಂದಾಗ ಇಳಿದು ಭೇಟಿ ಸಂದರ್ಶನಗಳಾದ ವಿವರಗಳನ್ನು ಹಂಚಿಕೊಳ್ಳುವ ಪರಿಪಾಠವೂ ನಮ್ಮ ಚುನಾವಣಾ ಯಾನದ ವೇಳೆಯಲ್ಲಾಗುತ್ತಿತ್ತು. ಅದರ ನಡುವೆಯೇ ಕೀಟಲೆ ಹರಟೆ ನಡೆಯುತ್ತಿತ್ತು. ಉಳಿದಂತೆ ಸುಬ್ಬರಾಯರು ಊರಿನ ಮುಂದಿನ ಸೀಟಿನಲ್ಲಿ ಕುಳಿತು ನಿದ್ರಾವಶರಾಗಿಲ್ಲದ ವೇಳೆಯಲ್ಲಿ ತಮ್ಮ ಮೊಬೈಲ್ ಕರೆಯಲ್ಲಿ ಮಗ್ನರಾಗಿರುತ್ತಿದ್ದರು. ಹಾಗೆಯೇ ಶೇಷಣ್ಣ ಕಣ್ಣೆವೆಯಿಕ್ಕುತ್ತಿದೆ ಯೆಂದು ಅನಿಸಿದಾಕ್ಷಣ ತಲೆದಿಂಬನ್ನೋ, ಬ್ಯಾಗನ್ನೋ ತಲೆಗಾನಿಸಿಟ್ಟುಕೊಂಡು ಕ್ಷಣಾರ್ಧದಲ್ಲಿ ನಿದ್ರಾಂಗನೆಯ ಆಲಿಂಗನಕ್ಕೊಳಗಾಗುವ ಚಾಕಚಕ್ಯತೆ ಇರುವವರು.


ಪತ್ರಕರ್ತ ಬದುಕಿನ ಇವೆಲ್ಲಾ ಅನಿವಾರ್ಯ ಅನುಭವಗಳು ಬೋರಾದಾಗ "ನೋಡ್ರಿ, ನಿಮಗೇನಾದರೂ ಹೊಸ ಎಸ್ಎಂಎಸ್ ಬಂದಿದೆಯೇನ್ರಿ" ಎಂದು ಹಿರಿಯರಿಬ್ಬರೂ ಮತ್ತೆ ನನ್ನ ಕಥೆಗಳಿಗಾಗಿ ಕಾತರಿಸುತ್ತಿದ್ದರು. "ಇದು ನಿಮ್ಮ ಜೋಕಿರಬೇಕು" ಎಂದು ಕೆಲವೊಮ್ಮೆ ಕಾಲೆಳೆಯುತ್ತಿದ್ದುದೂ ಉಂಟು. ಆ ಬಳಿಕ ಗಹಗಹಿಸಿ ನಗುತ್ತಿದ್ದರು. ನಗುವಿನಲೆ ಕರಗಿದ ಬಳಿಕ ಮುಂದಿನ ಕೆಲಸಕ್ಕೆ ಮತ್ತೆ ಉತ್ಸಾಹಿಗಳಾಗುತ್ತಿದ್ದುದರ ಜೊತೆಗೆ ಸುಬ್ಬರಾಯರು "ಇನ್ನು ಹೀಗಿದ್ರೆಲ್ಲಾ ಅಗಲ್ಲಪ್ಪಾ, ಡೆಡ್‌ಲೈನ್ ಪ್ರಕಾರ ಕೆಲಸ ಮಾಡ್ಲೇಬೇಕು. ಎಷ್ಟೊಂದು ಕಡೆ ಹೋಗ್ಬೇಕು, ಎಷ್ಟು ಕ್ಷೇತ್ರ ಬಾಕಿ ಇದೆ” ಎಂದು ಶಿಸ್ತು ತರಲು ಹೊರಡುತ್ತಿದ್ದರು. ಶೇಷಣ್ಣ ತಕ್ಷಣವೇ 'ಸುಬ್ಬರಾಯರೇ ಮೊದಲು ನೀವು ಬೆಳಿಗ್ಗೆ ಬೇಗ ರೆಡಿಯಾಗಿ' ಎಂದು ರೇಗಿಸುತ್ತಿದ್ದರು.


ತಮಾಷೆಯೆಂದರೆ ನನ್ನಿಂದ ಹೇಳಿಸಿಕೊಂಡ ಜೋಕ್‌ಗಳು ಮರುದಿನದೊಳಗೆ ಅವರಿಗೆ ಮರೆತೇ ಹೋಗಿಬಿಡುತ್ತಿತ್ತು. ಅವಲ್ಲಿ ಕೆಲವು ಒಳ್ಳೆಯವನ್ನಾದರೂ ನೀವು ಬರೆದಿಡಬೇಕು ಎಂಬ ಅವರ ಸಲಹೆಯ ಮೇರೆಗೆ ಆಯ್ದು ಕೆಲವನ್ನು ಇಲ್ಲಿ ದಾಖಲಿಸುವ ಇರಾದೆ ನನ್ನದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top