ಉಡುಪಿ: ಶ್ರೀ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಹಾಗೂ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಳಗಳಲ್ಲಿ ಒಂದಾಗಿರುವ ಕಳೆದ ವರ್ಷವಷ್ಟೆ ಭಕ್ತರ ನೆರವಿನೊಂದಿಗೆ ಜೀರ್ಣೋದ್ಧಾರಗೊಂಡಿರುವ ಕೊಪ್ಪರಿಗೆ ಅಪ್ಪ ಹರಕೆಯ ಖ್ಯಾತಿಯ ಪ್ರಸಿದ್ಧ ದೇವಸ್ಥಾನ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಪೇಜಾವರ ಮಠ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವಮಹಾ ಮಂಡಲ ರಿ, ಇವುಗಳ ಆಶ್ರಯ ಹಾಗೂ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾನಿಲಯ, ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದು ಪರಿಷತ್ತು, ಬ್ರಾಹ್ಮಣ ಸಂಘಟನೆಗಳು ಹಾಗೂ ಇತರೆ ಅನೇಕ ಸಂಘಟನೆಗಳ ಸಹಯೋಗದಲ್ಲಿ ಭಕ್ತಿ ಸಿದ್ಧಾಂತೋತ್ಸವ- ಶ್ರೀ ರಾಮೋತ್ಸವ ಎಂಬ ಶೀರ್ಷಿಕೆಯಲ್ಲಿ ವೈಭವದ ಮಹೋತ್ಸವವು ಇದೇ ಬರುವ ಎಪ್ರಿಲ್ 9 ಸಾಯಂಕಾಲದಿಂದ 13 ನೇ ತಾರೀಖಿನ ವರೆಗೆ ನಡೆಯಲಿದೆ.
ಕೀರ್ತಿ ಶೇಷ ವಿಶ್ವೇಶತೀರ್ಥ ಶ್ರೀಪಾದರಿಂದ 64 ವರ್ಷಗಳ ಹಿಂದೆ ಸ್ಥಾಪಿತವಾದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಗುರುಕುಲ ಮಾದರಿಯಲ್ಲಿ 13 ವರ್ಷಗಳ ಶಾಸ್ತ್ರಾಧ್ಯಯನ ಪೊರೈಸಿದ ವಿದ್ಯಾರ್ಥಿಗಳ 44ನೇ ಘಟಿಕೋತ್ಸವ ಅಥವಾ ಶ್ರೀಮನ್ನ್ಯಾಯಸುಧಾ ಮಂಗಲೋತ್ಸವ, 30 ನೇ ಅಖಿಲ ಭಾರತ ಮಾಧ್ವ ತತ್ವ ಜ್ಞಾನ ಸಮ್ಮೇಳನ, ರಾಮೋತ್ಸವಗಳನ್ನು ಬಹಳ ವಿಶಾಲ ಆಯಾಮದಲ್ಲಿ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ ಅವರ ಮಾರ್ಗದರ್ಶನದಲ್ಲಿ ಸಂಯೋಜಿಸಲಾಗಿದೆ.
ಎಪ್ರಿಲ್ 10 ರಂದು ಶ್ರೀಮನ್ನ್ಯಾಯ ಸುಧಾಮಂಗಲೋತ್ಸವ, 11 ಮತ್ತು 12 ರಂದು ತತ್ವಜ್ಞಾನಸಮ್ಮೇಳನದಲ್ಲಿ ಸುಮಾರು 1800 ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸುತ್ತಿದ್ದು 25 ಬೇರೆ ಬೇರೆ ಶಾಸ್ತ್ರವಿಷಯಾಧಾರಿತ ವಿದ್ವತ್ ಗೋಷ್ಠಿಗಳು, ಮಹಿಳಾ ಗೋಷ್ಠಿ ಸಂಗೀತ ಗೋಷ್ಠಿ ಯುವ ಗೋಷ್ಠಿಗಳು ನಡೆಯಲಿವೆ. ಅಧ್ಯಾತ್ಮಿಕ ಪುಸ್ತಕ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನೂ ಸಂಯೋಜಿಸಲಾಗಿದೆ.
ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟಿನ ನೂರಾರು ಭಜನಾಮಂಡಳಿಗಳ 2500ಕ್ಕೂ ಅಧಿಕ ಮಾತೆಯರಿಂದ ಹರಿನಾಮ ಸಂಕೀರ್ತನೋತ್ಸವವೂ ಉತ್ಸವದ ಪ್ರಧಾನ ಭಾಗವಾಗಿದೆ.
ಎಪ್ರಿಲ್ 13 ರಂದು ಸಂಜೆ 3.30 ರಿಂದ 6 ರ ವರೆಗೆ ಸಂತ ಸಂಗಮ- ಬೃಹತ್ ಹಿಂದು ಸಮಾಜೋತ್ಸವ ನಡೆಯಲಿದ್ದು ನಾಡಿನ 20ಕ್ಕೂ ಮಠಾಧೀಶರು ಸಾಧು ಸಂತರು ಭಾಗವಹಿಸಿ ರಾಮೋತ್ಸವದ ಹಿನ್ನೆಲೆಯಲ್ಲಿ ಶ್ರೀರಾಮಾಯಣಾಧಾರಿತ ರಾಮನ ದಿವ್ಯ ಸಂದೇಶ ನೀಡಲಿರುವರು.
ಪತ್ರಿನಿತ್ಯ ಸಂಜೆ ಶ್ರೀಗಳ ದಿವ್ಯ ಸಾನ್ನಿಧ್ಯ, ವಿವಿಧ ಕ್ಚೇತ್ರಗಳ ಗಣ್ಯ ಮಹನೀಯರ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ. ಇದರಲ್ಲಿ ಅನೇಕ ಸಾಧಕರುಗಳಿಗೆ ಗೌರವ ಸಂಮಾನವಿದೆ. ಪ್ರತಿನಿತ್ಯ ಭಕ್ತರಿಗೆ ಅನ್ನಸಂತರ್ಪಣೆ, 13 ನೇ ತಾರೀಖಿನಂದು ಮಹಾ ಅನ್ನ ಸಂತರ್ಪಣೆ ಇರಲಿದೆ.
ಪ್ರತಿನಿತ್ಯ ಸಂಜೆ 7.30 ರಿಂದ ಪ್ರಸಿದ್ಧ ಕಲಾವಿದರುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಅಂತಾರಾಷ್ಟ್ರೀಯ ಖ್ಯಾತಿಯ ಶಿವಮಣಿ ಮತ್ತು ಬಳಗದವರಿಂದ ಲಯವಾದ್ಯ ಸಂಗೀತ, ಪ್ರಸಿದ್ಧ ಕಲಾವಿದ ಜಗದೀಶ ಪುತ್ತೂರು ಬಳಗದವರ ಭಕ್ತಿ ಸಂಗೀತ, ಪದ್ಮವಿಭೂಷಣ ನಿಯೋಜಿತ ಡಾ ಎಲ್ ಸುಬ್ರಹ್ಮಣ್ಯಂ ಮತ್ತಜ ಕವಿತಾ ಕೃಷ್ಣಮೂರ್ತಿಯವರಿಂದ ಶಾಸ್ರ್ಯ ಸಂಗೀತ ವಯಲಿನ್ ವಾದನ ನಡೆಯಲಿದೆ.
ನಾಲ್ಕು ದಿನಗಳ ಕಾಲ ಚತುರ್ವೇದ ರಾಮಾಯಣ ಮಹಾಭಾರತ, ಭಾಗವತ ಪಾರಾಯಣಗಳು, ಗಣಪತಿ ದೇವರಿಗೆ ಗಣಯಾಗ ಕೊಪ್ಪರಿಗೆ ಅಪ್ಪ ಸೇವೆ, ಸಮಾಜದಲ್ಲಿನಅಪಮೃತ್ಯು ಅಕಾಲ ಮೃತ್ಯು ಕಂಟಕಗಳ ನಿವಾರಣೆಗಾಗಿ ಪ್ರಾರ್ಥಿಸಿ ಮನ್ಯುಸೂಕ್ತ ಯಾಗ ಮಹಾಮೃತ್ಯುಂಜಯ ಯಾಗ, ಗೋವಂಶ ರಕ್ಷಣೆಗಾಗಿ ಇತ್ತೀಚೆಗೆ ಶ್ರೀಗಳ ಮಾರ್ಗದರ್ಶನದಂತೆ ನಡೆದ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಸಮರ್ಪಣಾಂಗ ಲಕ್ಷ ವಿಷ್ಣು ಸಹಸ್ರನಾಮಯಾಗ, ಗೋಸೂಕ್ತ ಯಾಗ, ಮಾರ್ಚ್ 15 ರಿಂದ 30 ರ ವರೆಗೆ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ರಾಮಭಕ್ತರಿಂದ ನಡೆಯುತ್ತಿರುವ ದಶಕೋಟಿ ರಾಮ ತಾರಕ ಮಂತ್ರ ಜಪಯಜ್ಞ ಸಮರ್ಪಣಾಂಗ ಬೃಹತ್ ರಾಮತಾರಕ ಮಂತ್ರ ಯಾಗಗಳು ನಡೆಯಲಿವೆ.
ವಸ್ತುಪದ್ರಸರ್ಶನ ಮತ್ತು ಮಾರಾಟಮೇಳಕ್ಕೂ ಅವಕಾಶ ಕಲ್ಪಿಸಲಾಗಿದೆ.
ಈ ಮಹೋತ್ಸವದ ಭಾಗವಾಗಿ ಮಾರ್ಚ್ 30 ರಿಂದ ಎಪ್ರಿಲ್ 9 ರ ವರೆಗೆ ಜಗದ್ಗುರು ಮಧ್ವಾಚಾರ್ಯರ ಜನ್ಮಸ್ಥಳ ಪಾಜಕ ಕ್ಷೇತ್ರದಿಂದ ಆರಂಭಿಸಿ ಉಡುಪಿ ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಭಕ್ತಿರಥಯಾತ್ರೆಯು ನಡೆಯಲಿದೆ. ಈ ಸಂಬಂಧ ಈಗಾಗಲೇ 30 ಕ್ಕೂ ಅಧಿಕ ಕಡೆಗಳಲ್ಲಿ ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ರಥಯಾತ್ರೆ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿವೆ. ದಶಕೋಟಿ ರಾಮತಾರಕ ಜಪಯಜ್ಞ ಕ್ಕೆ ಉಡುಪಿಯ ರಾಷ್ಟ್ರೀಯ ಸ್ವಯಂಸೇವಕ ತಂಡದ ಸಹಯೋಗ ದೊರೆತಿದೆ.
ಉಡುಪಿಯ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಬ್ರಾಹ್ಮಣ ಸಂಘಟನೆಗಳ ಸಹಯೋಗದಲ್ಲಿ ವಿಪ್ರರ ಮನೆಮನೆಗಳಲ್ಲಿ ಲಕ್ಷ ವಿಷ್ಣು ಸಹಸ್ರನಾಮಪಾರಾಯಣ ಹಾಗೂ ದಶಸಹಸ್ರ ಲಕ್ಷ್ಮೀ ಶೋಭಾನೆ ಗಾಯನ ಅಭಿಯಾನವೂ ನಡೆಯುತ್ತಿದ್ದು ಪೆರಣಂಕಿಲದಲ್ಲೂ ನೂರಾರು ಜನ ವಿಪ್ರರಿಂದ ಸಹಸ್ರ ನಾಮಪಾರಾಯಣ ಹಾಗೂ ಲಕ್ಷ್ಮೀಶೋಭಾನೆ ಸಾಮೂಹಿಕ ಗಾಯನ ನಡೆಯಲಿದೆ.
ಆಯುರ್ವೇದ ಹಾಗೂ ಅಲೋಪತಿ ವೈದ್ಯರುಗಳಿಂದ ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದೆ.
ಈ ವೈಭವದ ಮಹೋತ್ಸವಕ್ಕೆ ಜಿಲ್ಲೆಯ ಸಮಸ್ತ ನಾಗರಿಕರನ್ನು ಭಕ್ತಮಹನೀಯರನ್ನು, ಪತ್ರಿಕೆ ಮಾಧ್ಯಮ ಮಿತ್ರರನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ಎಲ್ಲರೂ ಬಂದು ಭಾಗವಹಿಸಿ, ಜ್ಞಾನ ಸತ್ರ, ಭಕ್ತಿ ಸತ್ರ ಅನ್ನ ಸತ್ರಗಳನ್ನು ಆಸ್ವಾದಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು.
ಎಪ್ರಿಲ್ 13 ರ ಸಂಜೆ ನಡೆಯುವ ಸಂತ ಸಂಗಮಹಿಂದು ಸಮಾವೇಶಕ್ಕೆ ಉ ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಲಾಗಿದ್ದು ಬರುವ ಸಂಭವ ಇದೆ. ಆ ಬಗ್ಗೆ ಖಚಿತ ಮಾಹಿತಿ ಬಂದಾಕ್ಷಣ ತಿಳಿಸ್ತೇವೆ.
ಮೂವರು ಸಮ್ಮೇಳನಾಧ್ಯಕ್ಷರು:
ನಾಲ್ಕು ದಿನಗಳ ಈ ಮಹೋತ್ಸವಕ್ಕೆ ಮೂವರು ಹಿರಿಯ ಸಾಧಕರನ್ನು ಸಮ್ಮೇಳನಾಧ್ಯಕ್ಷರಾಗಿ ಪೂಜ್ಯ ಶ್ರೀಗಳು ನಿಯೋಜಿಸಿದ್ಧಾರೆ. ಹಿರಿಯ ವಿದ್ವಾಂಸರೂ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಕ್ತನ ವಿದ್ಯಾರ್ಥಿಗಳೂ ಆಗಿರುವ ಪ್ರಸಿದ್ಧ ಕುಂಭಾಸಿ ವಿನಾಯಕ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರರೂ ಆಗಿರುವ ಧರ್ಮದರ್ಶಿ ಕೆ ಸೂರ್ಯನಾರಾಯಣ ಉಪಾಧ್ಯಾಯರು, ಚೆನ್ನೈನ ಪ್ರಸಿದ್ಧ ಹೋಟೆಲ್ ಉದ್ಯಮಿ, ಧರ್ಮಬೀರುಗಳೂ ಆಗಿರುವ ಕೆ ರಾಮ್ ಪ್ರಸಾದ್ ಭಟ್, ಹಾಗೂ ಮುಂಬಯಿಯ ಪ್ರಸಿದ್ಧ ಜ್ಯೋತಿಷ ವಿದ್ವಾಂಸರೂ, ಧಾರ್ಮಿಕ ಧುರೀಣರೂ, ಪೂರ್ಣಪ್ರಜ್ಞ ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳೂ ಆಗಿರುವ ವಿದ್ವಾನ್ ಪೆರಣಂಕಿಲ ಹರಿದಾಸ ಭಟ್ಟರು ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಭಕ್ತಿ ಸಿದ್ಧಾಂತೋತ್ಸವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ, ಜ್ಯೋತಿಷ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯರು, ಮಠದ ದಿವಾನರಾದ ಎಂ ರಘುರಾಮಾಚಾರ್ಯರು, ಸಿ ಇ ಒ ಸುಬ್ರಹ್ಮಣ್ಯ ಭಟ್, ಸಮತಿಯ ಪ್ರಮುಖ ಪದಾಧಿಕಾರಿಗಳಾದ ಸಗ್ರಿ ಅನಂತ ಸಾಮಗ, ಡಾ ಸಗ್ರಿ ಆನಂದತೀರ್ಥಾಚಾರ್ಯ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಕೆ ರಾಮಚಂದ್ರ ಉಪಾಧ್ಯಾಯ, ಪೆರಣಂಕಿಲ ಶ್ರೀಶ ನಾಯಕ್, ಪೆರಣಂಕಿಲ ದೇವಸ್ಥಾನದ ಮುಖ್ಯ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ