ಉಡುಪಿಯಲ್ಲಿ ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ

Upayuktha
0



ಉಡುಪಿ: ಬಹುನಿರೀಕ್ಷಿತ ಭಕ್ತಿ ರಥಯಾತ್ರೆಗೆ ಅದ್ದೂರಿ ಚಾಲನೆ ಭಾನುವಾರ ದೊರೆತಿದೆ. ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಉಡುಪಿ ಜಿಲ್ಲೆ ಪಾಜಕಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ ಭಕ್ತಿ ರಥಯಾತ್ರೆಗೆ ರಥಯಾತ್ರೆಯು ಅಧ್ವರ್ಯುಗಳೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ರಥದಲ್ಲಿ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ರಾಮದೇವರ ಪಂಚಲೋಹದ ಮೂರ್ತಿಯನ್ನು ಕುಳ್ಳಿರಿಸಿ ಪವಿತ್ರ ಮಂತ್ರೋದಕದಿಂದ ಶುದ್ಧೀಕರಿಸಿ ಅಲಂಕಾರಾದಿಗಳನ್ನು ಮಾಡಿ ಮಂಗಳಾರತಿ ಬೆಳಗಿದ ಬಳಿಕ ಭಗವಾಧ್ವಜ ಕೇಸರಿ ಪತಾಕೆಯ ನಿಶಾನೆ ತೋರಿಸಿ ಚಾಲನೆ ನೀಡಿದರು.


ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು , ತ್ರೇತಾಯುಗದಲ್ಲಿ ಹನುಮನಾಗಿ ದ್ವಾಪರದಲ್ಲಿ ಭೀಮನಾಗಿ ಅವತರಿಸಿದ ವಾಯುದೇವರೇ ಕಲಿಯುಗದಲ್ಲಿ ಮಧ್ವರಾಗಿ ಉಡುಪಿಯಲ್ಲಿ ಅವತರಿಸಿ ತತ್ವವಾದವೆಂಬ ಸರಳ ಸುಲಭವೂ ಆದ ಭಕ್ತಿಸಿದ್ಧಾಂತ ಸುಧೆಯನ್ನು ನಮಗೆಲ್ಲ ಉಣಬಡಿಸಿ ತಮ್ಮ ತಪಸ್ಸಿಗೆ ಒಲಿದ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ  ನಮ್ಮೆಲ್ಲರನ್ನೂ ಧನ್ಯರಾಗಿಸಿದ್ದಾರೆ.  


ಭಗವಂತನ ಒಲುಮೆಗೆ ಪರಿಶುದ್ಧವಾದ ನಿಷ್ಕಲ್ಮಶ ಭಕ್ತಿಯೇ ಪರಮ ಸಾಧನ ಎಂದು ಸಾರಿ ಹೇಳಿದ ಮಧ್ವ ಗುರುಗಳು ನಾಡಿನೆಲ್ಲೆಡೆ ಈ ಸರಳ ಸಿದ್ಧಾಂತದ ಪ್ರಸಾರಕ್ಕಾಗಿ ಮಠಗಳನ್ನು ಸ್ಥಾಪಿಸಿ ತಾವೂ ದೇಶಾದ್ಯಂತ ಸಂಚರಿಸಿದರು . 


ಅಷ್ಡು ಮಾತ್ರವಲ್ಲದೇ ಹರಿದಾಸ ಸಾಹಿತ್ಯದ ಉಗಮಕ್ಕೂ ಕಾರಣರೆನಿಸಿ , ವ್ಯಾಸರಾಜರು ವಾದಿರಾಜರು ಜಯತೀರ್ಥರು ರಾಘವೇಂದ್ರ ತೀರ್ಥರು ಕನಕ‌ ಪುರಂದರದಾಸರು  ಜಗನ್ನಾಥದಾಸರು ಶ್ರೀಪಾದರಾಜರು , ಗೋಪಾಲದಾಸರು ವಿಜಯದಾಸರು ಮೊದಲಾದ ದಾಸವರೇಣ್ಯರ ಮೂಲಕ ಭಕ್ತಿ ಸಿದ್ಧಾಂತದ ಜ್ಞಾನಗಂಗೆ ಈ ನಾಡಿನಲ್ಲಿ ಸಮೃದ್ಧವಾಗಿ ಹರಿಯುವಂತೆ ಮಾಡಿ ಈ ನೆಲವನ್ನು ಪಾವನಗೊಳಿಸಿದರು.


ಭಕ್ತಿಯ ಮುದ್ರೆ ಇಲ್ಲದೇ ಯಾವ ಕೆಲಸಕ್ಕೂ ಮೌಲ್ಯ ಬರಲು ಸಾಧ್ಯವಿಲ್ಲ.‌ ಒಂದು ಕಡೆ ರದ್ದಿ ಕಾಗದದ ಮೂಟೆ ಇನ್ನೊಂದೆಡೆ ಎರಡೇ ಎರಡು ಕಾಗದದ ನೋಟಿದ್ದಾಗ ಬೆಲೆ ಇರುವುದು  ನೋಟಿಗೇ ವಿನಹ ರದ್ದಿ ಕಾಗದಕ್ಕಲ್ಲ ; ಕಾರಣ ನೋಟಿನಲ್ಲಿರುವ ರಾಷ್ಟ್ರಮುದ್ರೆ.‌ಆದೇ ರೀತಿ ನಾವೆಷ್ಟೇ ದೊಡ್ಡ ಕೆಲಸ ಮಾಡಿದರೂ ಭಗವರ್ಪಣಾ ಭಾವವೆಂಬ ಭಕ್ತಿಯ ಮುದ್ರೆ ಇಲ್ಲದ ಕಾರ್ಯ ಉಪಯೋಗ ಇಲ್ಲ .‌ ಆದ್ದರಿಂದ ಮಧ್ವಗುರುಗಳು ಕೊಟ್ಟ  ಇಂತಹ ಅರ್ಪಣಾ ಭಾವದ ಭಕ್ತಿಯ ಸಿದ್ಧಾಂತವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡುವ ಕಾರ್ಯವನ್ನು ನಿರಂತರ ಮಾಡಿದ್ದರು. 


ಅದನ್ನು ಯಥಾಮತಿ ಮುಂದುವರೆಸುವ ಪ್ರಯತ್ನ ಮಾಡ್ತಾ ಇದ್ದೇವೆ .  ಅಂದರ ಅಂಗವಾಗಿ ಪಾಜಕದಿಂದ ಪ್ರಾರಂಭಿಸಿ ಈ ಕರಾವಳಿ ಜಿಲ್ಲೆಗಳಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳು ಹಾಗೂ  ಇತರೆ ಧರ್ಮಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತ ಜನರಿಗೆ ಭಕ್ತಿ ಸಿದ್ಧಾಂತದ ಸಾರ ಸಂದೇಶಗಳನ್ನು ತಿಳಿಸುವ  ಉದ್ದೇಶದಿಂದ  ಇದನ್ನು ಹಮ್ಮಕೊಂಡಿದ್ದೇವೆ . ಸಮಸ್ತ ಆಸ್ತಿಕ ಜನತೆ ಇದರಲ್ಲಿ ಸಹಯೋಗ ಸಹಕಾರ ನೀಡಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ತಿಳಿಸಿದರು.


ಆರಂಭದಲ್ಲಿ ಶ್ರೀಗಳು ಮಧ್ವಾಚಾರ್ಯರ ಮನೆ ದೇವರಾದ ಶ್ರೀ ಅನಂತಪದ್ಮನಾಭ ದೇವರು ಮತ್ತು ಶ್ರೀ ವಾದಿರಾಜ ಪ್ರತಿಷ್ಠಿತ ಮಧ್ವಗುರುಗಳ ಗುರುಗಳಿಗೆ ಮಂಗಳಾರತಿ ಬೆಳಗಿ , ಗೋಗ್ರಾಸ ಸಮರ್ಪಿಸಿದರು.  ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ  ನಂದಳಿಕೆ ವಿಠಲ ಭಟ್ಟರು ಮಧ್ವರಾಜ ಭಟ್, ವಾದಿರಾಜ ಭಟ್, ಶ್ರೀಕರ ಭಟ್ವರ ಸಹಯೋಗದಲ್ಲಿ  ರಾಮತಾರಕ ಮಂತ್ರ ಹೋಮ ನೆರವೇರಿಸಿದರು. 


ನೂರಾರು ಭಕ್ತರು ಭಜಕರು ಆನಂದತೀರ್ಥ ವಿದ್ಯಾಲಯ ಹಾಸ್ಟೆಲ್ ಮತ್ತು ಗುರುಕುಲದ  ವಿದ್ಯಾರ್ಥಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಸೇರಿದ್ದರು . ರಥಯಾತ್ರೆಗೆ ವಿಶ್ವಹಿಂದು ಪರಿಷತ್ ಸಹಕಾರ ದೊರೆತಿದೆ.  


ಪ್ರಾಂತ ವಿಹಿಂಪ ಅಧ್ಯಕ್ಷ ಪ್ರೊ ಎಂ. ಬಿ ಪುರಾಣಿಕ್, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಠದ ದಿವಾನರಾದ ಎಂ‌ ರಘುರಾಚಾರ್ಯ ಸಿ ಇ ಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಪೆರಣಂಕಿಲ, ಪ್ರ ಕಾರ್ಯದರ್ಶಿ ನಿಟ್ಡೆ ಪ್ರಸನ್ನಾಚಾರ್ಯ, ಪರಶುರಾಮ ದೇವಳದ ಅರ್ಚಕ ವಿನಯ ಪ್ರಸಾದ್ ಭಟ್ ಕುಂಜಾರು ದುರ್ಗಾ ದೇವಳದ ಪರ್ಯಾಯ ಅರ್ಚಕ ರಾಘವೇಂದ್ರ ಭಟ್ , ಬೆಳ್ಳೆ ಗ್ರಾ ಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ ಕುರ್ಕಾಲು ಗ್ರಾ ಪಂ ಅಧ್ಯಕ್ಷ ಪ್ರಶಾಂತ್ ಪೂಜಾರಿ , ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿ ಹಿಂ ಪ ಅಧ್ಯಕ್ಷ ವಿಕಾಸ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವೀನ್ ಅಮೀನ್ , ಪರಶುರಾಮ ಭಜನಾ ಮಂಡಳಿಯ ಪ್ರಶಾಂತ್ ಶೆಟ್ಟಿ,  ಸುಂದರ ಶೆಟ್ಟಿ ಸದಾನಂದ ಶೆಣೈ, ಸುಭಾಶ್ಚಂದ್ರ ಶೆಟ್ಟಿ,  ಸುರೇಂದ್ರ ಶೆಟ್ಟಿ ಮಧ್ವರಾಜ ಭಟ್, ಪಟ್ಟಾಭಿರಾಮ ಆಚಾರ್ಯ,  ಪರಶುರಾಮ‌ ಭಟ್ ಮೊದಲಾದವರು ಉಪಸ್ಥಿತರಿದ್ದರು.


ಸಗ್ರಿ ಅನಂತ ಸಾಮಗ,  ವಿಷ್ಣುಮೂರ್ತಿ ಆಚಾರ್ಯ  ಪೆರಣಂಕಿಲ ಶ್ರೀಶ ನಾಯಕ್, ಗಿರಿ ಭಟ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಡಿ , ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ‌ ಸಂಯೋಜನೆಯಲ್ಲಿ ಸಹಕರಿಸಿದರು .



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top