ಬೆಂಗಳೂರು: ‘ಅನಾರೋಗ್ಯದಿಂದ ಬಳಲುವವರ ಕ್ಷೇಮದ ಹೊಣೆ ಹೊತ್ತಿರುವವರು ಆರೋಗ್ಯ ವಿಜ್ಞಾನ ಕ್ಷೇತ್ರದ ವೃತ್ತಿಪರರು. ಅದರಿಂದ ಸಹಾನುಭೂತಿ, ಸಂವಹನ ಕೌಶಲ್ಯ, ನಿಖರ ಚಿಂತನೆ ಹಾಗೂ ಪರಿಸ್ಥಿತಿಗನುಗುಣವಾಗಿ ಹೊಂದಿಕೊಳ್ಳುವ ಸ್ವಭಾವ ಮತ್ತು ನಿರಂತರ ಕಲಿಕೆಯ ಬಗೆಗಿನ ಕುಂದದ ಉತ್ಸಾಹ ಅವರಲ್ಲಿ ಹಾಸುಹೊಕ್ಕಾಗಿರಬೇಕು. ಆಗ ಮಾತ್ರ ರೋಗಿಗಳ ಸಮಗ್ರ ಸುರಕ್ಷತೆ ಸಾಧ್ಯ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಎಸ್. ರಿಯಾಜ್ ಬಾಷಾ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಔಷಧ ವಿಜ್ಞಾನ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
‘ಅನಾರೋಗ್ಯದಿಂದ ಬಳಲುತ್ತಿರುವವರ ಅಗತ್ಯಗಳನ್ನು, ಆದ್ಯತೆಗಳನ್ನು, ಅವರು ಗೌರವಿಸುತ್ತಿರುವ ಜೀವನ ಮೌಲ್ಯಗಳನ್ನು ಸಂಪೂರ್ಣ ಮನವರಿಕೆ ಮಾಡಿಕೊಂಡು ಅವರ ಸಹಮತದಿಂದಲೇ ಮುಂದಡಿಯಿಡುವುದರಲ್ಲಿ ನಿಜವಾದ ಅರ್ಥದ ಹಿರಿಮೆ ಅಡಗಿದೆ’ ಎಂದು ಕಿವಿಮಾತು ಹೇಳಿದರು.
ಒಟ್ಟಾರೆ 60 ವಿದ್ಯಾರ್ಥಿಗಳು ಔಷಧ ವಿಜ್ಞಾನದಲ್ಲಿ ಸ್ನಾತಕ ಪದವಿಗಳನ್ನು ಗಳಿಸಿದರು. ಅವರಲ್ಲಿ ಸಂಸ್ಥೆಯ ಖಾನ್ಸಾ ¥s಼Áತಿಮ ಹಾಗೂ ಜಲಜ ಹೆಚ್.ಎಂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಕ್ಷಮತೆಗಾಗಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅವರು ಮಾತನಾಡಿ, ‘ನೀವು ಕಲಿತಿರುವ ಜ್ಞಾನವನ್ನು ಸುತ್ತಲಿನ ವೃತ್ತಿಪರರೊಡನೆ ಹಂಚಿಕೊಳ್ಳಿ. ಅಲ್ಲದೇ ಅನಾರೋಗ್ಯದಿಂದ ಬಳಲುವವರಿಗೂ ಸಮಸ್ಯೆ ಹಾಗೂ ಸಮಸ್ಯೆಯ ಪರಿಹಾರದ ಸ್ವರೂಪವನ್ನು ಮನಮುಟ್ಟುವಂತೆ ಹೇಳಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ’ ಎಂದು ಕರೆ ನೀಡಿದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಬೆಂಗಳೂರು ಘಟಕದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ನಿಟ್ಟೆ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವಿ. ಕುಸುಮ್ ದೇವಿ, ಶಿಕ್ಷಕ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ