ಆದಿ ಪರಾಶಕ್ತಿಯ ವಿಶೇಷ ಆರಾಧನೆ - ಶ್ರೀಚಕ್ರ ಪೂಜೆ

Upayuktha
0



ಮ್ಮೆಲ್ಲರ ಬದುಕಿಗೆ ಸಮಸ್ತ ಐಶ್ವರ್ಯಾಭಿವೃದ್ಧಿಗಳನ್ನು ನೀಡಿ ಹರಸುವ ಆದಿ ಪರಾಶಕ್ತಿಯಾದ ಜಗದಂಬೆಯ  ವಿಶೇಷವಾದ ಆರಾಧನೆಯೇ ಶ್ರೀಚಕ್ರಪೂಜೆ.


ಶ್ರೀಚಕ್ರವೆಂದರೆ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಇದು. ಶ್ರೀ ಶಂಕರಾಚಾರ್ಯರು ಉಗ್ರಶಕ್ತಿಯ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಸರ್ಮಮಂಗಳೆಯ ಸಾತ್ವಿಕ ರೂಪ ಇದರಲ್ಲಿ ಉಗಮಿಸುವಂತೆ ಮಾಡಿದವರು. ಶ್ರೀಚಕ್ರದ ನವಾವರಣಗಳ ಒಂಭತ್ತು ತ್ರಿಕೋನಗಳ ನಡುವೆ ಬಿಂದುವಾಗಿ ದೇವಿಯು ನೆಲೆಸಿರುತ್ತಾಳೆ. ಶ್ರೀಚಕ್ರಪೂಜೆ ಎಂದರೆ ಮಾತೃಶಕ್ತಿಯ ಆರಾಧನೆ.


ಶ್ರೀಲಲಿತಾ ತ್ರಿಪುರಸುಂದರಿಯಾಗಿ ಶ್ರೀಚಕ್ರದಲ್ಲಿ ನೆಲೆಸಿರುವ ಜಗದಂಬೆಯು ಶ್ರೀಚಕ್ರದ ಕೇಂದ್ರ ಬಿಂದುವಿನಲ್ಲಿ ಶಿವಶಕ್ತಿ ಸ್ವರೂಪಿಣಿಯಾಗಿ ಪೂಜಿಸಲ್ಪಡುತ್ತಾಳೆ.


ಶ್ರೀಚಕ್ರ ನವಾವರಣ ಪೂಜೆಯಲ್ಲಿ ಶ್ರೀಚಕ್ರದ ರೇಖೆಗಳ ಮೂಲಕ ಶ್ರೀದೇವೀ ತ್ರಿಪುರಸುಂದರಿಯನ್ನು ಸಾಕ್ಷಾತ್ಕಾರಗೊಳಿಸಲಾಗುತ್ತದೆ. ಒಂಭತ್ತು ಆವರಣಗಳಿರುವ ಶ್ರೀಚಕ್ರದಲ್ಲಿ ನೆಲೆಸಿರುವ ನೂರಾಎಂಟು  ಶ್ರೀದೇವಿಯ ಸ್ವರೂಪವನ್ನು ಆರಾಧಿಸಿದರೆ ಸಕಲ ದೋಷ ನಿವಾರಣೆಯಾಗಿ , ಆಧ್ಯಾತ್ಮಿಕ ಹಾಗೂ ಭೌತಿಕ ಐಶ್ವರ್ಯಗಳು ದೊರಕುತ್ತವೆ ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ.


ಶ್ರೀಚಕ್ರ ಪೂಜೆಯ ಸಂದರ್ಭದಲ್ಲಿ ಶ್ರೀದೇವಿಯನ್ನು ವಿವಿಧ ಸ್ತೋತ್ರ, ಕೃತಿಗಳ ಮೂಲಕ ಸ್ತುತಿಸಲಾಗುತ್ತದೆ. ವಿಶೇಷ ಭಕ್ಷ್ಯಗಳ ನೈವೇದ್ಯಗಳನ್ನು ಸಮರ್ಪಿಸಿ, ಗಾನ,ನೃತ್ಯಗಳೇ ಮೊದಲಾದ ಅಷ್ಟಾವಧಾನ ಸೇವೆಗಳಿಂದ ಆರಾಧಿಸಲಾಗುತ್ತದೆ. ಇದರಲ್ಲಿ ವಿಶೇಷವಾಗಿ ಪೂಜೆಯ ಆರಂಭದಿಂದಲೇ ಶ್ರೀ ಮುತ್ತುಸ್ವಾಮಿ ದೀಕ್ಷಿತರ  ನವಾವವರಣ ಕೃತಿಗಳ ಆಲಾಪನೆಯೂ ನಡೆಯುತ್ತದೆ.


ಮುತ್ತುಸ್ವಾಮಿ ದೀಕ್ಷಿತರು ರಚಿಸಿದ 'ಕಮಲಾಂಬಾ..' ಎಂದು ಆರಂಭವಾಗುವ ನವಾವರಣ ಕೃತಿಗಳು ಸಂಗೀತ ಲೋಕದ ಅದ್ಬುತ ಸಂಪತ್ತು ಎಂದೇ ಕರೆಯಲಾಗುತ್ತಿದೆ. ವಿಶ್ವಜನನಿಯನ್ನು ತುಂಬಾ ಶ್ರದ್ಧಾಭಕ್ತಿಗಳಿಂದ ಆರಾಧಿಸುವ ಈ ಕೃತಿಗಳಲ್ಲಿ ಶ್ರೀವಿದ್ಯಾ, ಶ್ರೀಚಕ್ರ ಮತ್ತು ಶ್ರೀಚಕ್ರದ ಆವರಣಗಳ ಉಪಾಸನೆ ಹಾಗೂ ತಾಂತ್ರಿಕ ಆಚರಣೆಗಳ ಅಂಶಗಳು ವರ್ಣಿಸಲ್ಪಟ್ಟಿವೆ.


ಮೊದಲಿಗೆ ಜಗದಾದಿವಂದ್ಯನಾದ ಮಹಾ ಗಣಪತಿಯನ್ನು ಸ್ತುತಿಸಿ, ನಂತರ ಸುಬ್ರಹ್ಮಣ್ಯನ ಕೀರ್ತನೆಯನ್ನು ಆಲಾಪಿಸಿ, ತೋಡಿರಾಗದ ' ಕಮಲಾಂಬಾ..' ಎನ್ನುವ ಧ್ಯಾನ ಕೃತಿಯ ಆಲಾಪನೆಯ ನಂತರ ನವಾವರಣ ಕೃತಿಗಳನ್ನು ಆರಂಭಿಸಲಾಗುತ್ತದೆ.


ಮೊದಲನೇ ಆವರಣ ಭೂಪುರ ಹಾಗೂ ಚಕ್ರ.  ತ್ರೈಲೋಕ್ಯಮೋಹನ ಚಕ್ರವು ಮೂರು ಲೋಕಗಳನ್ನು ಮೋಡಿಮಾಡುತ್ತದೆ. 

' ಕಮಲಾಂಬಾ ರಕ್ಷತು..' ಎನ್ನುವ ಆನಂದಭೈರವಿ ರಾಗದ ಕೃತಿ ನವಾವರಣ ಕೃತಿಗಳಲ್ಲಿ ಮೊದಲನೆಯ ಸ್ತುತಿ.


ಎರಡನೇ ಆವರಣ ಷೋಡಶದಳ ಮತ್ತು ಚಕ್ರವು ಸರ್ವಸಪರಿಪೂರಕ. ಭಕ್ತರ ಅಭೀಷ್ಟಗಳನ್ನು ಪೂರೈಸುತ್ತದೆ. ' ಕಮಲಾಂಬಾ ಭಜರೇ..' ಎನ್ನುವ ಕಲ್ಯಾಣಿ ರಾಗದ ಕೃತಿ ದ್ವಿತೀಯ ಆವರಣ ಸ್ತುತಿ.


ಮೂರನೇ ಆವರಣ ಅಷ್ಟದಳ , ಚಕ್ರವು ಸರ್ವಸಂಕ್ಷೋಬನ ಚಕ್ರ. ಎಲ್ಲರನ್ನೂ ಪ್ರಚೋದಿಸುತ್ತದೆ. ಶಂಕರಾಭರಣ ರಾಗದ ' ಕಮಲಾಂಬಾ ರಕ್ಷಿತೋಹಂ..' ಎನ್ನುವ ಕೃತಿ ಮೂರನೇ ಆವರಣ ಕೃತಿ.


ನಾಲ್ಕನೇಯ ಆವರಣ ಚತುರ್ದಶರ, ಸರ್ವಸೌಭಾಗ್ಯದಾಯಕ ಚಕ್ರವು ಶ್ರೇಷ್ಠತೆಯನ್ನು ನೀಡುತ್ತದೆ. ಕಾಂಭೋಜಿ ರಾಗದ ' ಕಮಲಾಂಬಿಕಾಯೈ..ಕನಕಾಂಶುಕಾಯೈ...' ಎನ್ನುವ ಸ್ತುತಿಯನ್ನು ನಾಲ್ಕನೇ ಆವರಣ ಕೃತಿಯಾಗಿ ಹಾಡಲಾಗುತ್ತಿದೆ.


ಐದನೇ ಆವರಣ ಬಹಿರ್ದಶರ. ಸರ್ವವಾರ್ತಾಸಾಧಕ ಚಕ್ರವು ಸಾಧನೆಗಳಿಗೆ ಪೂರಕವಾಗಿದೆ. ' ಕಮಲಾಂಬಿಕಾಯಾಹ ಪರಂ ನಹಿ ರೇ ಚಿತ್ತ...' ಎನ್ನುವ ಭೈರವಿ ರಾಗದ ಕೃತಿಯು ಐದನೇ ಆವರಣ ಕೃತಿಯಾಗಿದೆ.


ಆರನೇ ಆವರಣವು ಅಂತರ್ದಶರ. ಸರ್ವರಕ್ಷಕರ ಚಕ್ರವು ಸಕಲರನ್ನೂ ಸಂರಕ್ಷಿಸುತ್ತದೆ. ಪುನ್ನಗವರಾಳಿ ರಾಗದ ' ಕಮಲಾಂಬಿಕಾಯ ಸ್ತವ ಭಕ್ತೋಹಂ....' ಎನ್ನುವ ಕೃತಿ ಆರನೇ ಆವರಣಕೃತಿ.


ಏಳನೇ ಆವರಣ ಅಸ್ತಕೋನ. ಸರ್ವರೋಗಹರ ಚಕ್ರವು ಸರ್ವರೋಗಗಳನ್ನು ನಿವಾರಿಸುತ್ತದೆ. ' ಶ್ರೀಕಮಲಾಂಬಿಕಾಯಾ ಭಕ್ತಿ ಕರೋಮೀ..' ಎನ್ನುವ ಸಹನಾ ರಾಗದ ಕೃತಿಯು ಏಳನೇ ಆವರಣ ಸ್ತುತಿ.


ಎಂಟನೇ ಆವರಣವು ತ್ರಿಕೋನ. ಸರ್ವಸಿದ್ಧಿಪ್ರದ ಚಕ್ರವು ಪರಿಪೂರ್ಣತೆಯನ್ನು ನೀಡುತ್ತದೆ. ಘಂಟಾ ರಾಗದ ' ಕಮಲಾಂಬಿಕೇ..' ಕೃತಿಯ ಎಂಟನೇ ಆವರಣ ಕೃತಿ.


ಒಂಭತ್ತನೇ ಆವರಣ ಬಿಂದು. ಸರ್ವೋನ್ನತವಾದ ಸರ್ವಾನಂದಮಯ ಚಕ್ರವು ಸರ್ವಾನಂದ ಸಿದ್ಧಿಯನ್ನು ನೀಡುತ್ತದೆ. ಆಹಿರಿ ರಾಗದ ' ಕಮಲಾಂಬ ಜಯತಿ....' ಎನ್ನುವ ದೀಕ್ಷಿತರ ಈ ಕೃತಿಯು ನವಾವರಣ ಕೃತಿಗಳಲ್ಲಿ ಕೊನೆಯ ಆವರಣ ಕೃತಿ. 

ಕೊನೆಯದಾಗಿ ಶ್ರೀರಾಗದ ಮಂಗಲ ಕೃತಿಯನ್ನು ಆಲಾಪಿಸಲಾಗುತ್ತದೆ.


ಶ್ರೀದೇವಿಯ ಆರಾಧನೆಯ ಅತ್ಯುನ್ನತ ರೂಪವಾದ ಶ್ರೀಚಕ್ರ ನವಾವರಣ ಪೂಜೆಯ ಮೂಲಕ ಶ್ರೀಲಲಿತಾ ತ್ರಿಪುರಸುಂದರಿಯನ್ನು ಆರಾಧಿಸುವುದರಿಂದ ಶ್ರೀಚಕ್ರದಲ್ಲಿ ಆವಾಹಿಸಿರುವ ಎಲ್ಲಾ ದೇವತೆಗಳ ಅನುಗ್ರಹವೂ ದೊರಕುತ್ತದೆ. ಭಕ್ತಾಭೀಷ್ಟಪ್ರದಾಯಿನಿಯಾಗಿ ಶ್ರೀಚಕ್ರ ರಾಜಸಿಂಹಾಸನದಲ್ಲಿ ವಿರಾಜಿತಳಾಗಿರುವ ಶ್ರೀಲಲಿತಾಂಬಿಕಾ ದೇವಿಯ ಕೃಪೆಯಿಂದ ಭಕ್ತರ ಬದುಕಿನ ಪುರುಷಾರ್ಥಗಳು ಈಡೇರಿ ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ.


- ಪ್ರಸನ್ನಾ ವಿ. ಚೆಕ್ಕೆಮನೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top