ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ ಮತ್ತು ಶರಧಿ ಮಹಿಳಾ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ರಂಗಕರ್ಮಿ ಚೇತನ್ ಸಿ ರಾಯನಹಳ್ಳಿಯವರು ಕನ್ನಡ ನಾಡು-ನುಡಿಗಳ ಬಗ್ಗೆ, ಕನ್ನಡಿಗರ ಕೊಡುಗೆಯ ಬಗ್ಗೆ, ಜೊತೆಗೆ ಕನ್ನಡನಾಡಿನ ಅಚ್ಚರಿಯ ಸಂಗತಿಗಳು, ಕನ್ನಡಿಗರ ಔದಾರ್ಯ, ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ, ಹೋರಾಟ, ಇತಿಹಾಸಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಸಿದರು. "ಕನ್ನಡವನ್ನು ಉಳಿಸಿ-ಬೆಳೆಸಿ ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡವನ್ನು ಸರಿಯಾಗಿ ಬಳಸಿ, ರಾಜ್ಯೋತ್ಸವ ಪ್ರತಿನಿತ್ಯವೂ ಮನದಲ್ಲಿ, ಮನೆಯಲ್ಲಿ, ಮಾತಲ್ಲಿ ಇರಲಿ, ಕನ್ನಡ ನಿತ್ಯ ಉತ್ಸವವಾಗಲಿ" ಎಂದರು.
ಇದೇ ಸಮಯದಲ್ಲಿ ಚೇತನ್ ಸಿ ರಾಯನಹಳ್ಳಿ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸಾರ್ಜೆಂಟ್ ಶ್ಯಾಮ್ ಸುಂದರ್ ಎಫ್.ಡಿ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಡಾವಣೆಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾರ್ವಜನಿಕರು ಮತ್ತು ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಬಡಾವಣೆಯ ಶುಚಿತ್ವವನ್ನು ಕಾಪಾಡುವ ಪೌರಕಾರ್ಮಿಕರಿಗೆ ಹಾಗೂ ಅವರ ಮುಖ್ಯಸ್ಥ ಪೆಂಚಾಲಯ್ಯರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಹೆಚ್. ಮಹೇಶ್ ರವರು ವಹಿಸಿದ್ದರು. ಮುಂದಿನ ದಿನಗಳಲ್ಲಿ ಗೋಪಾಲಗೌಡ ಬಡಾವಣೆಯ ಬ್ಲಾಕ್ ನಲ್ಲಿರುವವರೆಲ್ಲರೂ ಒಟ್ಟಿಗೆ ಸೇರಿ ರಾಜ್ಯೋತ್ಸವ ಆಚರಿಸುವೆವು ಎಂದರು. ಜೊತೆಗೆ ಬಡಾವಣೆಯ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿದರು. ಪೃಥ್ವಿಗೌಡ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ರಾಮಚಂದ್ರ, ಶ್ರೀನಿವಾಸಮೂರ್ತಿ, ಮೋಹನ್ ಮೂರ್ತಿ, ಮಾರ್ಟಿಸ್, ಮಂಜುನಾಥ್ ಮತ್ತು ಸಂಘದ ಸದಸ್ಯರು ಹಾಗೂ ಶರಧಿ ಮಹಿಳಾ ಸಂಘದ ಅಧ್ಯಕ್ಷೆ ಸುಗಂಧರಾಣಿ. ಹೆಚ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ