ಉಡುಪಿ: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ, ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಹಾಗೂ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ಶ್ರೀ ಮಠದ ವಿದ್ವಾಂಸರಾದ ಶ್ರೀ ಗೋಪಾಲಾಚಾರ್ಯ ಅವರ ಮಾರ್ಗದರ್ಶನದಲ್ಲಿ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ದಾಸ ಶ್ರೇಷ್ಠರಾದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ (ಜ.29) 'ಸಹಸ್ರ ಕಂಠ ಗಾಯನ' ನಾದೋತ್ಸವ ನಡೆಯಲಿದೆ.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ಯಾಹ್ನ ಗಂಟೆ 2.30ರಿಂದ ಈ ಕಾರ್ಯಕ್ರಮ ನಡೆಯಲಿದೆ. ಪೂಜ್ಯ ಪರ್ಯಾಯ ಶ್ರೀಪಾದರು ಉದ್ಘಾಟನೆ ನೆರವೇರಿಸಲಿದ್ದಾರೆ. 3 ಗಂಟೆಗೆ 'ಸಹಸ್ರ ಕಂಠ ಗಾಯನ' ನಾದೋತ್ಸವ ಪ್ರಾರಂಭವಾಗಲಿದೆ. ನಾಡಿನ ಹೆಸರಾಂತ ಸಂಗೀತ ವಿದ್ವಾಂಸರು ಹಾಗೂ ಆಕಾಶವಾಣಿ ಕಲಾವಿದರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪುರಂದರ ದಾಸರ ಕೃತಿಗಳ ನಡುವೆ ಪುರಂದರದಾಸರು, ಮಧ್ವಾಚಾರ್ಯರು, ಭರತನಾಟ್ಯ, ಕುಣಿತ ಭಜನೆ ಇತ್ಯಾದಿ ವೈಶಿಷ್ಟ್ಯ ಪೂರ್ಣ ಪ್ರದರ್ಶನಗಳು ನಡೆಯಲಿವೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳನ್ನೊಳಗೊಂಡಂತೆ ಸುಮಾರು 100 ಭಜನಾ ಮಂಡಳಿಗಳಿಂದ 1,000ಕ್ಕೂ ಮಿಕ್ಕಿ ಭಜಕರು ಪಾಲ್ಗೊಳ್ಳಲಿದ್ದಾರೆ.
ಸಂಜೆ ಗಂಟೆ 5.00ಕ್ಕೆ: ರಥಬೀದಿಯಲ್ಲಿ 'ದಾಸ ಶ್ರೇಷ್ಠ ಶ್ರೀ ಪುರಂದರ ದಾಸ'ರ ಮೂರ್ತಿಯ ಮೆರವಣಿಗೆ ನಡೆಯಲಿದೆ. ರಾಜಾಂಗಣದಿಂದ ಹೊರಟು ರಥಬೀದಿಯ ಸುತ್ತ ನಡೆಯಲಿರುವ ಮೆರವಣಿಗೆಯಲ್ಲಿ ಸಮಸ್ತ ಭಜಕರು ಪಾಲ್ಗೊಳ್ಳಲಿದ್ದಾರೆ.
ಸಂಜೆ ಗಂಟೆ 5.30ಕ್ಕೆ ಪೂಜ್ಯ ಪರ್ಯಾಯ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಠದ ಪ್ರಮುಖರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಪದಾಧಿಕಾರಿಗಳು, ಭಜನಾ ಮಂಡಳಿಗಳ ಪ್ರಮುಖರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ