ಅಘನಾಶಿನಿ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ

Upayuktha
0

 

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ  ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‌ವತಿಯಿಂದ ಸೋಮವಾರ ಕುವೆಂಪು ಸಭಾಂಗಣದಲ್ಲಿ ಅಘನಾಶಿನಿ ಸ್ಪೀಕ್ಸ್ - ರಿವರ್ ರಿದಮ್ಸ್ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಅಘನಾಶಿನಿ ಸಾಕ್ಷ್ಯಚಿತ್ರ ನಿರ್ದೇಶಕ ಅಶ್ವಿನಿ ಕುಮಾರ್ ಭಟ್ ಮಾತನಾಡಿ, ಸಾಕ್ಷ್ಯಚಿತ್ರ ರಚನೆಯ ಸೂಕ್ಷ್ಮಗಳನ್ನು ವಿವರಿಸಿದರು.  ಕಥೆ ಹೇಳುವ ಮಹತ್ವವನ್ನು ತಿಳಿಸಿದರು. "ಸಾಕ್ಷ್ಯಚಿತ್ರ ನಿರ್ಮಾಣ ಕೇವಲ ಕ್ಷಣಗಳನ್ನು ಸೆರೆಹಿಡಿಯುವುದೇ ಮುಖ್ಯ ಅಲ್ಲ,  ಚಿತ್ರಕಥೆ,  ಸಂಕಲನ ಮತ್ತು ಛಾಯಾಗ್ರಹಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ಸಮ್ಮಿಳಿತಗೊಂಡು ನೈಜ್ಯತೆಯ ಸಾಕ್ಷೀಕರಣವಾದಾಗ ಮನಸೆಳೆಯುವ ಸಾಕ್ಷ್ಯಚಿತ್ರ ಹೊರಹೊಮ್ಮಲು ಸಾಧ್ಯ ಎಂದರು.  


ಅಘನಾಶಿನಿ ಸಾಕ್ಷ್ಯಚಿತ್ರ ನಿರ್ಮಾಣ ನಂತರದ ಪ್ರಭಾವದ ಕುರಿತು ಮಾತನಾಡಿದ ಅವರು ಈ ಸಾಕ್ಷ್ಯಚಿತ್ರವು ನದಿಗಳನ್ನ ಅವುಗಳ ನೈಸರ್ಗಿಕ ಸ್ಥಿತಿಯಲ್ಲಿ ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿತು. "ಅಘನಾಶಿನಿ ಅಳಿವೆ ಪ್ರದೇಶವನ್ನು ರಾಮ್ಸಾರ್ ಸೈಟ್ ಎಂದು ಪ್ರಸ್ತಾಪಿಸುವಲ್ಲಿ ಈ ಸಾಕ್ಷ್ಯಚಿತ್ರವು ಪ್ರಮುಖ ಪಾತ್ರ ವಹಿಸಿತು ಎಂದರು.


ಸ್ಥಳೀಯ ನೇತ್ರಾವತಿ ನದಿಯನ್ನು ಸಂರಕ್ಷಿಸಲು ಹೇಗೆ ಕೊಡುಗೆ ನೀಡಬಹುದು ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ "ಜನಸಾಮಾನ್ಯರು ನದಿ ಸಂರಕ್ಷಣೆಯ ನೆಲೆಯಲ್ಲಿ ಛಾಯಾಗ್ರಹಣ, ವಿಡಿಯೋಗ್ರಫಿ, ಲೇಖನಗಳನ್ನು ಬರೆಯುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಬಹುದು ಎಂದು ಸಲಹೆ ನೀಡಿದರು.


ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಮತ್ತು ಡೆಪ್ಯೂಟಿ ಕಮಿಷನರ್ ರಾಜ್ಯ ಜಿಎಸ್‌ಟಿ, ಸಹನಾ ಬಾಳ್ಕಲ್ ಮಾತನಾಡಿ, ವೃತ್ತಿಯ ಜೊತೆಗೆ ಹವ್ಯಾಸಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿ ಹೇಳಿದರು. “ನೀವು ಅನುಸರಿಸುವ ಯಾವುದೇ ಕ್ಷೇತ್ರದಲ್ಲಿ, ನಿಮ್ಮ ಹವ್ಯಾಸವನ್ನು ಪೋಷಿಸಿದರೆ ಅದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ ಮತ್ತು ನೂತನ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.


ಎರಡೂವರೆ ವರ್ಷಗಳ ಕಾಲ ನಡೆದ ಅಘನಾಶಿನಿ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡಿದ ತಮ್ಮ ವೈಯಕ್ತಿಕ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ. “ಈ ಯೋಜನೆಯು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಸಮಯದಲ್ಲಿ ತನ್ನ ಒತ್ತಡ ನಿವಾರಕದ ರೀತಿಯಲ್ಲಿ ಕೆಲಸ ಮಾಡಿತ್ತು ಎಂದರು. 

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಪರಿಸರ ವ್ಯವಸ್ಥೆಯಲ್ಲಿ ಅಳಿವೆ ಪ್ರದೇಶಗಳು ವಹಿಸುವ ಮಹತ್ವದ ಪಾತ್ರವನ್ನು ತಿಳಿಸಿದರು. ನದಿಗಳು ಪ್ರತಿಯೊಂದು ಪ್ರದೇಶದ ಜೀವನಾಡಿಗಳಾಗಿವೆ. ನದಿಗಳಿಗೆ ತ್ಯಾಜ್ಯ  ಸೇರುವುದರಿಂದಾಗುವ ಆಗುವ ಪರಿಣಾಮವನ್ನು ಅರಿಯುವುದು ಅತ್ಯಗತ್ಯ. 


ಕಲುಷಿತವಾದ ನದಿಯನ್ನು ಶುದ್ಧೀಕರಿಸುವುದು ಸವಾಲಿನ ಕೆಲಸವಾದರೂ ಅದನ್ನು ಮಲಿನಪಡಿಸುವುದು ತುಂಬಾ ಸುಲಭ ಎಂದರು. ನದಿಗಳು ಹಲವಾರು ಪಕ್ಷಿ ಪ್ರಭೇದಗಳಿಗೆ ಆವಾಸಸ್ಥಾನಗಳಾಗಿವೆ, ಆದರೆ ಮಾಲಿನ್ಯವು ಈ ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.


ಸಂಸ್ಥೆಯ ಪರವಾಗಿ ಅಶ್ವಿನಿ ಕುಮಾರ್ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ ಗಾಳಿಮನೆ ವಿನಾಯಕ ಭಟ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ, ಸಹಪ್ರಾಧ್ಯಪಕರಾದ ಹರೀಶ್ ಟಿ.ಜಿ, ಹನಾ, ಶಂಕರ ಕಾಮತ್ ಇದ್ದರು.  


ಕಾರ್ಯಕ್ರಮದ ಮೊದಲಿಗೆ ಅಘನಾಶಿನಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಂತೃಪ್ತಿ ರಾವ್ ಕಾರ್ಯಕ್ರಮ ನಿರ್ವಹಿಸಿ, ಖುಷಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ದೀಪಕ್ ವಂದಿಸಿದರು.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top