ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವೇ ನಮ್ಮ ಗುರಿ; ಕ್ಯಾ. ಚೌಟ

Upayuktha
0

ಸುರತ್ಕಲ್, ಮೂಲ್ಕಿ ರೈಲ್ವೆ ನಿಲ್ದಾಣಗಳ ಅಭಿವೃದ್ದಿ ಕಾಮಗಾರಿಗಳಿಗೆ ಸಂಸದ ಕ್ಯಾ. ಚೌಟ ಶಿಲಾನ್ಯಾಸ



ಮಂಗಳೂರು: ಕೊಂಕಣ ರೈಲ್ವೆ ನಿಗಮವನ್ನುಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಭಾರತೀಯ ರೈಲ್ವೇ ಜೊತೆ ವಿಲೀನಗೊಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ರೈಲ್ವೆ ಸಚಿವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಈ ವಿಲೀನವು ನಡೆದರೆ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.


ಸುರತ್ಕಲ್ ಮತ್ತು ಮೂಲ್ಕಿ ರೈಲ್ವೆ ಸ್ಟೇಷನ್‌ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸವನ್ನುಇಂದು ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಹಾಗೂ ಡಾ. ವೈ ಭರತ್ ಶೆಟ್ಟಿ ಅವರೊಂದಿಗೆ ನೆರವೇರಿಸಿ ಸಂಸದರು ಮಾತನಾಡಿದರು.


ಕೊಂಕಣ ರೈಲ್ವೆ ನಮ್ಮವರೇ ಆದ ದಿ. ಜಾರ್ಜ್ ಫೆರ್ನಾಂಡಿಸ್ ಅವರ ದೂರದೃಷ್ಟಿಯ ಕಲ್ಪನೆಯ ಬಹುದೊಡ್ಡ ಯೋಜನೆ. ಆದರೆ ಆರ್ಥಿಕ ಸವಾಲುಗಳಿಂದಾಗಿ ಇದರ ಅಭಿವೃದ್ದಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕರಾವಳಿ ಕರ್ನಾಟಕದ ರೈಲ್ವೇ ಅಭಿವೃದ್ದಿ ದೃಷ್ಟಿಯಿಂದ ನೋಡುವುದಾದರೆ ನಮಗಿರುವ ದೊಡ್ಡ ಸವಾಲೆಂದರೆ ನಾವು 'ಹಾಸನ ಮಂಗಳೂರು ರೈಲು ಅಭಿವೃದ್ಧಿ ನಿಗಮ (HMRDC)' ಹಾಗೂ 'ಕೊಂಕಣ ರೈಲ್ವೆ ನಿಗಮ'ದ ನಡುವೆ ಸಿಲುಕಿಗೊಂಡಿರುವುದು.  ಹೀಗಾಗಿ ಈ ಆಡಳಿತಾತ್ಮಕ ತೊಂದರೆ ನಿವಾರಿಸಲು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇ ಜೊತೆ ವಿಲೀನಗೊಳಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. 


ಇದಕ್ಕಾಗಿ ಕರಾವಳಿ ಕರ್ನಾಟಕದ ಮೂರು ಜಿಲ್ಲೆಯ ಸಂಸದರು ಜೊತೆ ರಾಜ್ಯದ ಎಲ್ಲಾ ಸಂಸದರು ರೈಲು ಸಚಿವರ ಜೊತೆ ಈ ಬೇಡಿಕೆಯನ್ನು ಇರಿಸಿದ್ದೇವೆ.  ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕೊಂಕಣ ರೈಲ್ವೇ ವಿಲೀನಕ್ಕಾಗಿ ನಮ್ಮ ಕಡೆಯಿಂದ ನಿರಂತರವಾಗಿ  ಪ್ರಯತ್ನಗಳು ನಡೆಯುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರ ತನ್ನ ಷೇರುಗಳನ್ನು ಬಿಟ್ಟುಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಈ ವಿಲೀನಕ್ಕೆ  ಸಹಕರಿಸಬೇಕು. ಈ ಬಗ್ಗೆ ಈಗಾಗಲೇ ಸಿಎಂಗೂ ಪತ್ರವನ್ನು ಬರೆದಿದ್ದೇನೆ ಎಂದು ಹೇಳಿದ್ದಾರೆ.


ಸುರತ್ಕಲ್ ಮತ್ತು ಮೂಲ್ಕಿ ಈ ಭಾಗದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಇವುಗಳನ್ನು ಅಭಿವೃದ್ದಿಪಡಿಸಬೇಕು ಎನ್ನುವುದು ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು.ಈ ನಿಲ್ದಾಣಗಳ ಮೂಲ ಸೌಕರ್ಯ ಅಭಿವೃದ್ದಿಯಾದರೆ ಕೇವಲ ಸುರತ್ಕಲ್, ಮೂಲ್ಕಿ ಜನರಿಗೆ ಮಾತ್ರವಲ್ಲ ಉಡುಪಿ ಭಾಗದಿಂದ ಬರುವರಿಗೂ ಅನುಕೂಲವಾಗಲಿದೆ. 


ಈ ಎರಡು ಸ್ಟೇಷನ್ ಗಳನ್ನು ಸುಮಾರು 3 ಕೋ.ರೂ ವೆಚ್ಚದಲ್ಲಿ ಇದೀಗ ಅಭಿವೃದ್ದಿಪಡಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಜನರ ಬೇಡಿಕೆ ಈಡೇರಿಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಸಂಸದರು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.


ಎರಡು ನಿಲ್ದಾಣಗಳ ಅಭಿವೃದ್ಧಿ

ಸುರತ್ಕಲ್ ರೈಲು ನಿಲ್ದಾಣದಲ್ಲಿ 47.52 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ ಹಾಗೂ 1.02 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಮೇಲ್ಛಾವಣಿ ನಿರ್ಮಾಣದ ಕಾರ್ಯ ನಡೆಯಲಿದೆ. ಇನ್ನು ಕಿಲ್ಪಾಡಿ ಗ್ರಾಂ.ಪಂ ವ್ಯಾಪ್ತಿಗೆ ಬರುವ ಮೂಲ್ಕಿ ನಿಲ್ದಾಣದಲ್ಲಿ ಹಲವು ರೈಲುಗಳು ನಿಲುಗಡೆಯಾಗುತ್ತಿದ್ದು, ಪ್ರಮುಖ ಜಂಕ್ಷನ್ ಆಗಿರುವ ಈ ನಿಲ್ದಾಣದಲ್ಲಿ 38.58 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್  ಅಭಿವೃದ್ಧಿ ಹಾಗೂ 1.04 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಮೇಲ್ಫಾವಣಿ ನಿರ್ಮಾಣ ಕಾಮಗಾರಿ ನಡೆಯಲಿದೆ.


ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ನಯನಾ ಕೋಟ್ಯಾನ್, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ಸರಿತಾ ಶಶಿಧರ್, ಲಕ್ಷ್ಮೀ ಶೇಖರ  ದೇವಾಡಿಗ, ಸುಮಿತ್ರ ಕರಿಯ ಪ್ರಾದೇಶಿಕ ರೈಲ್ವೇ ಮ್ಯಾನೇಜರ್ (ಕೊಂಕಣ ರೈಲ್ವೇಸ್, ಕಾರವಾರ) ಆಶಾ ಶೆಟ್ಟಿ, ಉಪ ಮುಖ್ಯ ಎಂಜಿನಿಯರ್ (ಕಾರವಾರ) ವಿಜಯ ಕುಮಾರ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ ಭಟ್, ಹಿರಿಯ ಎಂಜಿನಿಯರ್ (ಉಡುಪಿ) ಗೋಪಾಲಕೃಷ್ಣನ್,ಪಿಆರ್‌ಓ ಸುಧಾ ಕೃಷ್ಣಮೂರ್ತಿ ಮತ್ತಿತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top